13 ವರ್ಷಗಳ ಬಳಿಕ ಮನೆ ಸೇರಿದ ಯುವಕ ; ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕದಿಂದ ನೊಂದು ಮನೆ ಬಿಟ್ಟಿದ್ದ, ಬೆಂಗಳೂರಿನಲ್ಲಿ ಪತ್ತೆಹಚ್ಚಿ ಕರೆತಂದ ಉಡುಪಿ ಪೊಲೀಸರು 

09-10-25 01:59 pm       Udupi Correspondent   ಕರಾವಳಿ

13 ವರ್ಷಗಳ ಹಿಂದೆ ಪಿಯುಸಿ ಕಲಿಯುತ್ತಿದ್ದಾಗ ಕಾಣೆಯಾಗಿದ್ದ ಯುವಕನನ್ನು ಉಡುಪಿ ಪೊಲೀಸರು ಹುಡುಕಾಡಿ ಬೆಂಗಳೂರಿನಲ್ಲಿ ಪತ್ತೆ ಮಾಡಿದ್ದು ಯುವಕನನ್ನು ಮತ್ತೆ ಮನೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. 

ಉಡುಪಿ, ಅ.9 : 13 ವರ್ಷಗಳ ಹಿಂದೆ ಪಿಯುಸಿ ಕಲಿಯುತ್ತಿದ್ದಾಗ ಕಾಣೆಯಾಗಿದ್ದ ಯುವಕನನ್ನು ಉಡುಪಿ ಪೊಲೀಸರು ಹುಡುಕಾಡಿ ಬೆಂಗಳೂರಿನಲ್ಲಿ ಪತ್ತೆ ಮಾಡಿದ್ದು ಯುವಕನನ್ನು ಮತ್ತೆ ಮನೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. 

ಕಾರ್ಕಳ ತಾಲೂಕಿನ ಮುಂಡ್ಕೂರು ಬಳಿಯ ನಿವಾಸಿ ಪ್ರಭಾಕರ ಪ್ರಭು ಎಂಬವರ ಮಗ ಅನಂತಕೃಷ್ಣ ಪ್ರಭು(16) 13 ವರ್ಷಗಳ ಬಳಿಕ ಮರಳಿ ಗೂಡು ಸೇರಿದ ಯುವಕ. 2012 ಡಿಸೆಂಬರ್ 6ರಂದು ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಗ ಮನೆಯಿಂದ ದೇವಸ್ಥಾನಕ್ಕೆಂದು ಹೋಗಿ ಬರುವುದಾಗಿ ಹೇಳಿ ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದ. ಈ ಬಗ್ಗೆ ಅವರ ತಂದೆ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಮನೆಯವರಿಗೆ ಹೆದರಿ ಮತ್ತು ಮುಖ ತೋರಿಸಲಾಗದೆ ಮನೆಯಿಂದ ತಪ್ಪಿಸಿಕೊಂಡಿದ್ದ. ಯಾವುದೇ ಸುಳಿವು ಲಭಿಸದ ಕಾರಣ ಪೊಲೀಸರು ಹುಡುಕಾಟ ಕೈಬಿಟ್ಟಿದ್ದರು. ವಿಶೇಷ ತನಿಖಾ ತಂಡ ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗಿತ್ತು. ಇತ್ತೀಚೆಗೆ ಯುವಕ ಬೆಂಗಳೂರಿನಲ್ಲಿ ವಾಸವಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ, ಅನಂತಕೃಷ್ಣ (29) ನನ್ನು ಭೇಟಿ ಮಾಡಿದ್ದರು. ಅಲ್ಲಿಂದ ಉಡುಪಿಗೆ ಕರೆತಂದು ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ. 13 ವರ್ಷಗಳಿಂದ ಪತ್ತೆಯಾಗದೇ ಇರುವ ಹಳೆ ಪ್ರಕರಣವನ್ನು ಉಡುಪಿ ಎಸ್ಪಿ ಹರಿರಾಮ್ ಶಂಕರ್ ಸೂಚನೆಯಂತೆ, ಡಿವೈಎಸ್‌ಪಿ  ಪ್ರಭು ಡಿ.ಟಿ,  ಬ್ರಹ್ಮಾವರ ಎಸ್‌ಐ ಸುದರ್ಶನ್ ದೊಡ್ಮನಿ, ಉಡುಪಿ ನಗರ ಎಸ್‌ಐ ಈರಣ್ಣ ಶಿರಗುಂಪಿ,  ಹೆಡ್ ಕಾನ್ಸ್‌ಟೇಬಲ್ ಗಳಾದ ಇಮ್ರಾನ್, ಚೇತನ್, ಸಂತೋಷ್ ದೇವಾಡಿಗ ಮತ್ತು ಮಲ್ಲಯ್ಯ ಹಿರೇಮಠ ಅವರನ್ನೊಳಗೊಂಡ ತಂಡ ಭೇದಿಸಲು ಯಶಸ್ವಿಯಾಗಿದೆ. 

ಪತ್ತೆಯಾಗದ ಹಳೆ ಪ್ರಕರಣಗಳನ್ನು ಕೆದಕಿ, ಕೇಸ್ ಪತ್ತೆ ಮಾಡುವ ಬಗ್ಗೆ ಎಸ್ಪಿ ಹರಿರಾಮ್ ಟಾಸ್ಕ್ ನೀಡಿದ್ದಾರೆ.

A young man who went missing 13 years ago while studying in PUC has finally been reunited with his family, thanks to the efforts of the Udupi police who traced him in Bengaluru.