ಬ್ರೇಕಿಂಗ್ ನ್ಯೂಸ್
20-01-25 06:00 pm Mangalore Correspondent ಕರಾವಳಿ
ಮಂಗಳೂರು, ಜ.20: ತುಳು, ಕೊಂಕಣಿ, ಬ್ಯಾರಿ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾಡಳಿತಗಳ ವತಿಯಿಂದ ಮಂಗಳೂರಿನಲ್ಲಿ ಜ.17ರಂದು ಬಹು ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಕರಾವಳಿಯ ಸಾಂಸ್ಕೃತಿಕ ವೈವಿಧ್ಯ, ವಿಭಿನ್ನ ಭಾಷಾ ಸಂಗಮದ ಹಿನ್ನೆಲೆಯ ಕಲಾವಿದರು, ಜನಪದರು, ಸಮಾಜ ಪ್ರೇಮಿಗಳನ್ನು ಒಟ್ಟು ಸೇರಿಸುವ ಕಾರ್ಯಕ್ರಮವಾಗಿತ್ತು. ಮೊದಲ ಬಾರಿಗೆ ಆಯೋಜಿಸಿದ್ದ ಸಂಸ್ಕೃತಿ ಉತ್ಸವದ ಉದ್ಘಾಟನೆಗೆ ಸಮಾಜವಾದಿ ಹಿನ್ನೆಲೆಯ ಸಿಎಂ ಸಿದ್ದರಾಮಯ್ಯ ಅವರನ್ನೇ ಕರೆಸಬೇಕು ಎನ್ನುವುದು ಮುಖ್ಯ ಅಜೆಂಡಾ ಆಗಿತ್ತು.
ಸಿಎಂ ಸಿದ್ದರಾಮಯ್ಯ ಅವರಿಗೆ ಬರಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಎರಡು ಬಾರಿ ಬಹು ಸಂಸ್ಕೃತಿ ಉತ್ಸವ ಮುಂದೂಡಿಕೆಯೂ ಆಗಿತ್ತು. ಕೊನೆಗೆ, ಜ.17ರಂದು ಸಿದ್ದರಾಮಯ್ಯ ಬರುವಿಕೆ ಖಚಿತವಾದ ಬಳಿಕವೇ ಉತ್ಸವ ಆಯೋಜನೆಗೊಂಡಿತ್ತು. ಮೂರು ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, 150ಕ್ಕೂ ಹೆಚ್ಚು ಕಲಾವಿದರು, ಸಮಾಜವಾದಿ ಹಿನ್ನೆಲೆಯ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಸಂಘಟನೆಯ ಹಿರಿಯರು, ಕ್ರೈಸ್ತ, ಬ್ಯಾರಿ ಸಮುದಾಯದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮೂರು ಜಿಲ್ಲೆಗಳ ಕಲಾವಿದರು, ಹೊನ್ನಾವರದಿಂದ ಸಿದ್ಧಿ ಜನಾಂಗದ ಕಲಾವಿದರು ಕೂಡ ಸೇರಿದ್ದರು. ಜ.17ರ ಎರಡು ದಿನ ಹಿಂದಿನ ವರೆಗೂ ಬಹು ಸಂಸ್ಕೃತಿ ಉತ್ಸವ ಬಿಟ್ಟರೆ ಬೇರೆ ಯಾವುದೇ ಕಾರ್ಯಕ್ರಮ ಜೋಡಣೆ ಆಗಿರಲಿಲ್ಲ. ಇದೇ ಉತ್ಸವಕ್ಕೆ ಸಿದ್ದರಾಮಯ್ಯ ಬರುವುದು ಖಾತ್ರಿಯೂ ಆಗಿತ್ತು. ಇದರ ನಡುವೆಯೇ ಮೇರಿಹಿಲ್ ನಲ್ಲಿ ಶಿಲಾನ್ಯಾಸ ಕಾರ್ಯಕ್ರಮವನ್ನು ಯುಟಿ ಖಾದರ್ ಸೋದರ, ಯುಟಿ ಇಫ್ತಿಕಾರ್ ಜಿಲ್ಲಾಧಿಕಾರಿಗೆ ಹೇಳಿ ಜೋಡಿಸಿದ್ದರು.
ಆದರೆ ಕೊನೆಕ್ಷಣದಲ್ಲಿ ಸಿದ್ದರಾಮಯ್ಯ ಮಂಗಳೂರಿಗೆ ಬಂದರೂ, ಬಹು ಸಂಸ್ಕೃತಿ ಉತ್ಸವದಲ್ಲಿ ಅವರನ್ನು ಪಾಲ್ಗೊಳ್ಳದಂತೆ ತಡೆಯಲಾಗಿದೆ. ಮಂಗಳೂರಿನ ಮೇರಿಹಿಲ್ ನಲ್ಲಿ ರಾಜೀವ ಗಾಂಧಿ ವಿವಿಯ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸಗೈದು ಮಧ್ಯಾಹ್ನ 1.30ಕ್ಕೆ ನೇರವಾಗಿ ಪುರಭವನದಲ್ಲಿ ನಡೆಯುವ ಸಂಸ್ಕೃತಿ ಉತ್ಸವಕ್ಕೆ ತೆರಳುವುದೆಂದು ನಿಗದಿಯಾಗಿತ್ತು. ಅಲ್ಲಿಂದ ಪುರಭವನಕ್ಕೆಂದು ಹೊರಟಿದ್ದರೂ, ಅವರನ್ನು ದಾರಿ ತಪ್ಪಿಸಿ ಎಂಎಲ್ಸಿ ಐವಾನ್ ಡಿಸೋಜ ಅವರ ಮನೆಗೆ ಕರೆದೊಯ್ಯಲಾಗಿತ್ತು. ಮುಖ್ಯಮಂತ್ರಿ ಜೊತೆಗಿದ್ದ ಪೊಲೀಸರು, ಎಸ್ಕಾರ್ಟ್ ವಾಹನದವರೂ ಪುರಭವನಕ್ಕೆ ಹೋಗುವುದೆಂದೇ ಹೊರಟಿದ್ದರು. ಅದರಂತೆ, ಪುರಭವನದಲ್ಲಿ ಪೊಲೀಸರು ದಾರಿಯಲ್ಲಿ ಸೇರಿದ್ದ ಜನರನ್ನು ತೆರವು ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದುದನ್ನೂ ತಡೆದು ಸಭಾ ಕಾರ್ಯಕ್ರಮಕ್ಕೆ ಏರ್ಪಾಡು ಮಾಡಿದ್ದರು. ಆದರೆ ಐವಾನ್ ಡಿಸೋಜ ಮನೆಗೆ ತೆರಳಿದ್ದ ಸಿಎಂ ಮತ್ತು ಇತರ ಗಣ್ಯರಿಗೆ ಡಿನ್ನರ್ ವ್ಯವಸ್ಥೆ ಮಾಡಿದ್ದರಿಂದ ಮಧ್ಯಾಹ್ನ 2 ಗಂಟೆಗೆ ಅಲ್ಲಿಗೆ ಹೋದವರು ಸಂಜೆ ನಾಲ್ಕಾದರೂ ಅಲ್ಲಿಂದ ಹೊರಟಿರಲಿಲ್ಲ.
ಸಿಎಂ ಸಿದ್ದರಾಮಯ್ಯ ಮಂಗಳೂರಿಗೆ ಬರುವುದು ಬಹು ಸಂಸ್ಕೃತಿ ಉತ್ಸವದ ಉದ್ಘಾಟನೆಗೆಂದು ಪ್ರವಾಸ ಪಟ್ಟಿಯಲ್ಲಿ ನಿಗದಿಯಾಗಿದ್ದರೂ, ಇಲ್ಲಿ ಮಾತ್ರ ಐವಾನ್ ಡಿಸೋಜ ಮನೆಯಲ್ಲಿ ಊಟ ಮಾಡಿ ತೆರಳಿದಂತಾಗಿದೆ. ಮುಖ್ಯಮಂತ್ರಿ ಬರುವಿಕೆಗಾಗಿ ಪುರಭವನದಲ್ಲಿ ಕಾದು ಕುಳಿತಿದ್ದ ಅಕಾಡೆಮಿ ಮುಖ್ಯಸ್ಥರು, ಉಡುಪಿ ಜಿಲ್ಲಾಧಿಕಾರಿ, ಎಸ್ಪಿಗಳು, ಇನ್ನಿತರ ಅಧಿಕಾರಿಗಳು ಸಿದ್ದರಾಮಯ್ಯ ಅರ್ಧದಲ್ಲೇ ಐವಾನ್ ಮನೆಗೆ ಹೋಗಿದ್ದರಿಂದ ತೀವ್ರ ನಿರಾಶೆಗೊಂಡಿದ್ದರು. ಈ ಬಗ್ಗೆ ಅಕಾಡೆಮಿ ಮುಖ್ಯಸ್ಥರಲ್ಲಿ ಮಾಹಿತಿ ಕೇಳಿದಾಗ, ನಮಗೆ ಮುನ್ನಾ ದಿನವೇ ಅನುಮಾನ ಬಂದಿತ್ತು. ಸಿಎಂ ಬರುವುದನ್ನು ಇಬ್ಬರು ನಾಯಕರು ಸೇರಿ ತಪ್ಪಿಸುತ್ತಿದ್ದಾರೆ ಎಂಬ ವಾಸನೆ ಬಂದಿತ್ತು ಎಂದು ಹೇಳಿದ್ದಾರೆ. ಐವಾನ್ ಡಿಸೋಜ ಮತ್ತು ಸ್ಪೀಕರ್ ಯುಟಿ ಖಾದರ್ ಅವರು, ಅಕಾಡೆಮಿ ಪ್ರಮುಖರಿಗೆ ಫೋನಾಯಿಸಿ ನಿಮ್ಮ ಕಾರ್ಯಕ್ರಮದಲ್ಲಿ ಜನ ಇಲ್ವಂತೆ, ಸಿಎಂ ಯಾಕೆ ಬರೋದು ಎನ್ನುವ ರೀತಿ ಮಾತನಾಡಿದ್ದರಂತೆ. ಅಂದರೆ, ಸಂಸ್ಕೃತಿ ಉತ್ಸವಕ್ಕೆ ಸಿಎಂ ಹೋಗುವುದೇ ಬೇಡ ಎಂದು ಇವರು ಮೊದಲೇ ನಿರ್ಧರಿಸಿದ್ದರೇ ಎನ್ನುವ ಪ್ರಶ್ನಾರ್ಥಕ ಮಾತು ಕೇಳಿಬಂದಿದೆ.
ಸಿಎಂ ಯಾಕೆ ಹೋಗಿಲ್ಲವೆಂದು ಡೀಸಿಗೆ ಕೇಳಿ
ಈ ಬಗ್ಗೆ ಎಂಎಲ್ಸಿ ಐವಾನ್ ಡಿಸೋಜ ಅವರನ್ನು ಪ್ರಶ್ನೆ ಮಾಡಿದಾಗ, ಅದನ್ನು ನೀವು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಕೇಳಬೇಕು. ಅದು ಜಿಲ್ಲಾಡಳಿತದಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮ. ಅಲ್ಲಿಗೆ ಸಿಎಂ ಹೋಗಬೇಕಿತ್ತು. ಯಾಕೆ ಹೋಗಿಲ್ಲ ಎಂದು ನಮ್ಮನ್ನು ಕೇಳಿದರೆ ಹೇಗೆ ಎಂದು ಪ್ರಶ್ನಿಸಿದರು. ನೀವೇ ತಪ್ಪಿಸಿದ್ದಂತೆ ಎಂದು ಕೇಳಿದ್ದಕ್ಕೆ, ನನ್ನ ಮನೆಯಲ್ಲಿ ಊಟ ಎಂದು ಮೊದಲೇ ನಿಗದಿಯಾಗಿತ್ತು. ಅದರಂತೆ ಮನೆಗೆ ಬಂದಿದ್ದಾರೆ. ನಮಗೇನೂ ಗೊತ್ತಿಲ್ಲ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.
ಅಕಾಡೆಮಿ ಅಧ್ಯಕ್ಷರೊಬ್ಬರಿಗೆ ಅದೇ ದಿನ ಬೆಳಗ್ಗೆ 8.30ಕ್ಕೆ ಫೋನ್ ಮಾಡಿದ್ದ ಸಿಎಂ ಆಪ್ತರೂ ಆಗಿರುವ ಐವಾನ್ ಡಿಸೋಜ, ಪುರಭವನದಲ್ಲಿ ಯಾರೂ ಜನ ಇಲ್ವಂತೆ, ಸಿಎಂ ಬಂದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಧ್ಯಕ್ಷರು, ಕಾರ್ಯಕ್ರಮ ಆರಂಭ ಆಗೋದು ಹತ್ತು ಗಂಟೆಗೆ, ಈಗ ಜನ ಇಲ್ಲ ಎಂದರೆ ಹೇಗೆ. ಮಧ್ಯಾಹ್ನ ಒಂದೂವರೆ ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಎರಡು ಸಾವಿರಕ್ಕೂ ಹೆಚ್ಚು ಜನ ಬಂದಿದ್ದಾರೆ. ಒಂದೂವರೆ ಸಾವಿರ ಜನರ ಊಟ ಸಾಕಾಗದೆ ಮತ್ತೆ 750 ಮಂದಿಗೆ ಊಟ ತರಿಸಲಾಗಿತ್ತು. ಆದರೆ ಅಲ್ಲಿ ಜನ ಇಲ್ಲ ಎಂದು ಹೇಳಿ ಮಂಗಳೂರಿನ ಇಬ್ಬರು ನಾಯಕರು ಸೇರಿ ಮುಖ್ಯಮಂತ್ರಿಯನ್ನೇ ದಾರಿ ತಪ್ಪಿಸಿದ್ದಾರೆ ಎನ್ನುವುದು ಕಾಂಗ್ರೆಸಿಗರದ್ದೇ ಮಾತು.
ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ವಕ್ತಾರ ದಿನೇಶ್ ಕುಂಪಲ ಎಂಬವರು ತನ್ನದೇ ಹೆಸರಲ್ಲಿ ವಾಟ್ಸಪ್ ಗ್ರೂಪ್ಗಳಲ್ಲಿ ಬರೆದು ಹಾಕಿದ್ದು, ಬಹು ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಜನ ಇಲ್ಲವೆಂದು ನಮ್ಮದೇ ನಾಯಕರು ಮುಖ್ಯಮಂತ್ರಿ ಹೋಗುವುದು ಬೇಡವೆಂದು ನಿರ್ಧರಿಸಿದರು ಎನ್ನುವ ರೀತಿ ಸ್ಪಷ್ಟನೆ ನೀಡಿದ್ದಾರೆ. ಬಹು ಸಂಸ್ಕೃತಿ ಉತ್ಸವದಲ್ಲಿ ಸಿಎಂ ಪಾಲ್ಗೊಂಡಿದ್ದರೆ, ಅದರಿಂದ ಸಿದ್ದರಾಮಯ್ಯ ಅವರ ಘನಸ್ಥಿಕೆ ಹೆಚ್ಚುತ್ತಿತ್ತೇ ವಿನಾ ಕುಸಿತ ಆಗುತ್ತಿರಲಿಲ್ಲ. ಹಿರಿಯ ಕಲಾವಿದರು, ಸಮಾಜವಾದಿಗಳು ಮುಖ್ಯಮಂತ್ರಿಯನ್ನು ಹತ್ತಿರದಿಂದ ನೋಡಿ ಆಧರಿಸುತ್ತಿದ್ದರು. ಪಕ್ಷದ ಕಾರ್ಯಕ್ರಮಗಳಲ್ಲಿಯೇ ಅದೆಷ್ಟೋ ಬಾರಿ ಖಾಲಿ ಕುರ್ಚಿಗಳಿಗೆ ಮುಖ್ಯಮಂತ್ರಿ, ಸಚಿವರು ಭಾಷಣ ಮಾಡಿದ್ದಿದೆ. ಅಂಥದ್ದರಲ್ಲಿ ಪ್ರಬುದ್ಧರು, ಸಮಾನ ಮನಸ್ಕರು ಸೇರಿದ್ದ ಕಾರ್ಯಕ್ರಮದಲ್ಲಿ ಜನ ಇಲ್ಲವೆಂದು ಸಿಎಂ ಕಚೇರಿ ಮತ್ತು ಆಪ್ತರಿಗೆ ಸುಳ್ಳು ಹೇಳಿ ಮುಖ್ಯಮಂತ್ರಿ ಬಂದಿದ್ದರೂ, ಅವರನ್ನು ಕೊನೆಕ್ಷಣದಲ್ಲಿ ದಾರಿತಪ್ಪಿಸಿದ್ದು ಮಾತ್ರ ಅಕ್ಷಮ್ಯ.
Mangalore CM Siddaramaiah unable to inaugurate Bahu Samskruthi Utsava due to dinner party at Ivan dsouza house. Chief Minister Siddaramaiah was supposed to inaugurate the Bahu Samskruthi Utsava being organised by six language and cultural academies at town hall.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 02:58 pm
Mangalore Correspondent
Mangalore Suhas Shetty Murder, Instagram, Pol...
02-05-25 10:47 pm
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm