ಬ್ರೇಕಿಂಗ್ ನ್ಯೂಸ್
25-06-24 10:59 pm Mangalore Correspondent ಕರಾವಳಿ
ಮಂಗಳೂರು, ಜೂನ್ 25: ಸಂವಿಧಾನವನ್ನು ಬುಡಮೇಲು ಮಾಡಿದ್ದು ಕಾಂಗ್ರೆಸಿಗರು. ತುರ್ತು ಪರಿಸ್ಥಿತಿಯಲ್ಲಿ ಇವರು ಮಾಡಿಟ್ಟ ಕರ್ಮ ಒಂದೇ ಸಾಕು, ಇವರ ಜನ್ಮ ಜಾಲಾಡುವುದಕ್ಕೆ. ನಾವು ಅಂಬೇಡ್ಕರ್ ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದೇವೆ. ಇಂದಿರಾ ಗಾಂಧಿ ಪ್ರಣೀತ ಸಂವಿಧಾನಕ್ಕೆ ಅಲ್ಲ. ಅಂಬೇಡ್ಕರ್ ಸಂವಿಧಾನ ರಚನೆಯ ಕರಡು ರೂಪದಲ್ಲಿಯೇ ಸೆಕ್ಯುಲರ್ ಶಬ್ದ ಬೇಕಿಲ್ಲ ಎಂದಿದ್ದರು. ಬಲವಂತದಿಂದ ಸಂವಿಧಾನಕ್ಕೆ ಸೆಕ್ಯುಲರ್ ಶಬ್ದವನ್ನು ತುರುಕಿದ್ದು, ಜನರ ಅಧಿಕಾರವನ್ನೇ ಕಿತ್ತುಕೊಂಡಿದ್ದು ಇಂದಿರಾ ಗಾಧಿ.. ಹೀಗೆಂದು ವಿಶ್ಲೇಷಣೆ ಮಾಡಿದ್ದಾರೆ, ಮೈಸೂರಿನ ಮಾಜಿ ಸಂಸದ ಪ್ರತಾಪಸಿಂಹ.
ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ ವತಿಯಿಂದ ‘ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರತಾಪಸಿಂಹ ನಿರರ್ಗಳ ಭಾಷಣ ಮಾಡಿದ್ದಾರೆ. ಅಂಬೇಡ್ಕರ್ ತಮ್ಮ ಮೂಲ ಸಂವಿಧಾನವನ್ನು ರಾಮಾಯಣ, ಉಪನಿಷತ್ತು, ಪುರಾಣಗಳಿಂದ ಪ್ರೇರಣೆ ಪಡೆದು ಬರೆದಿದ್ದಾಗಿ ಉಲ್ಲೇಖಿಸಿದ್ದರು. ಆದರೆ, ಸಂವಿಧಾನದ ಪೀಠಿಕೆಯನ್ನೇ ಬದಲಿಸಿದ್ದು ಇಂದಿರಾ ಗಾಂಧಿ. ತುರ್ತು ಪರಿಸ್ಥಿತಿ ಹೇರುವ ಸಂದರ್ಭದಲ್ಲಿ ಇಡೀ ಸಂವಿಧಾನದ ಆಶಯಗಳನ್ನೇ ಅಳಿಸಿ ಹಾಕಿದ್ದರು. ಚುನಾವಣೆ ಅಕ್ರಮಕ್ಕೆ ಮುನ್ನುಡಿ ಬರೆದಿದ್ದು ಕೂಡ ಇಂದಿರಾ ಗಾಂಧಿಯೇ..


1971ರಲ್ಲಿ ರಾಯ್ ಬರೇಲಿಯಿಂದ ಚುನಾವಣಾ ಅಕ್ರಮ ನಡೆಸಿ ಆಯ್ಕೆಯಾಗಿದ್ದಾರೆಂದು ಅವರನ್ನು ಅಲಹಾಬಾದ್ ಹೈಕೋರ್ಟ್ ಅನರ್ಹ ಮಾಡಿತ್ತು. ಅಷ್ಟೇ ಅಲ್ಲ, ಆರು ವರ್ಷಗಳ ಚುನಾವಣಾಣಾ ಸ್ಪರ್ಧೆಯಿಂದಲೇ ನಿಷೇಧಿಸಿತ್ತು. 1975ರ ಜೂನ್ 12ರಂದು ಇಂದಿರಾ ಆಯ್ಕೆ ಅಸಿಂಧು ಎಂದು ತೀರ್ಪು ಬಂದಿದ್ದರೆ, ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಹೋಗಿದ್ದರು. ಸುಪ್ರೀಂ ಕೋರ್ಟಿನಲ್ಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತಾದರೂ ಈ ಬಗ್ಗೆ ನಿರ್ಧರಿಸಲು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿತ್ತು. ಜೊತೆಗೆ, ಇಂದಿರಾ ಗಾಂಧಿ ಪ್ರಧಾನಿ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಅವಕಾಶ ನೀಡಲಿಲ್ಲ. ಕೋರ್ಟ್ ಜೂನ್ 24ರಂದು ತೀರ್ಪು ನೀಡಿದ್ದರೆ, ಮರುದಿನವೇ ತುರ್ತು ಕ್ಯಾಬಿನೆಟ್ ಮೀಟಿಂಗ್ ಕರೆದು 25ರಂದು ಮಧ್ಯರಾತ್ರಿ ಎಮರ್ಜೆನ್ಸಿ ಘೋಷಣೆ ಮಾಡಿದ್ದರು. ಅದೇ ಸಮಯದಲ್ಲಿ ದೆಹಲಿಯಲ್ಲಿ ಜಯಪ್ರಕಾಶ ನಾರಾಯಣ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಪ್ರತಿಭಟನೆಗೆ ಇಳಿದಿದ್ದರು. ಇದರಿಂದ ಆತಂಕಗೊಂಡ ಇಂದಿರಾ ಅವರು ಸರ್ವಾಧಿಕಾರದ ಪರಾಕಾಷ್ಠೆಯನ್ನು ಪ್ರದರ್ಶನ ಮಾಡಿದರು. ಸರಕಾರದ ಯಾವುದೇ ಅಧಿಕಾರಿ, ಪ್ರಿನ್ಸಿಪಾಲ್ ಸೆಕ್ರಟರಿಗೂ ತಿಳಿಯದ ರೀತಿ ದೇಶಾದ್ಯಂತ ಎಮರ್ಜೆನ್ಸಿ ಹೇರಿಕೆ ಮಾಡಿದ್ದರು.

ಸಾಲು ಸಾಲಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅಧಿಕಾರಕ್ಕಾಗಿ ಏನು ಮಾಡಲೂ ಹೇಸಲ್ಲ ಎಂದು ತೋರಿಸಿದ್ದರು. ಆಗಸ್ಟ್ 11ಕ್ಕೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬರೋ ಮೊದಲೇ ನ್ಯಾಯಾಂಗದ ಸ್ವಾತಂತ್ರ್ಯವನ್ನೇ ಹರಣ ಮಾಡಿದರು. ಪ್ರಧಾನಿ, ಸಚಿವರು ಸೇರಿದಂತೆ ಜನಪ್ರತಿನಿಧಿಗಳ ನಿರ್ಣಯದ ಬಗ್ಗೆ ಕೋರ್ಟಿನಲ್ಲಿ ಪ್ರಶ್ನೆ ಮಾಡುವಂತಿಲ್ಲ ಎಂದು ಸಂವಿಧಾನಕ್ಕೆ ತಿದ್ದುಪಡಿ ತಂದರು. ಸಾಮಾನ್ಯವಾಗಿ ಒಂದು ಬಿಲ್ ತರಬೇಕಾದರೆ, ತಿದ್ದುಪಡಿ ಮಾಡುವುದಿದ್ದರೆ ಕನಿಷ್ಠ ಒಂದೆರಡು ತಿಂಗಳ ಪ್ರಕ್ರಿಯೆ ಇರುತ್ತದೆ. ಆದರೆ, ಇದ್ಯಾವುದನ್ನೂ ಮಾಡದೆಯೇ ಎಲ್ಲ ಪ್ರಕ್ರಿಯೆಯನ್ನೂ ಒಂದೇ ದಿನದಲ್ಲಿ ಮಾಡಿಸಿದ್ದು ಇಂದಿರಾ ಗಾಂಧಿ. 39ನೇ ತಿದ್ದುಪಡಿ ಪ್ರಕಾರ, ಪ್ರಧಾನಿ, ರಾಷ್ಟ್ರಪತಿ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಮಾಡುವ ಹಕ್ಕನ್ನೇ ಕಸಿದು ಬಿಟ್ಟಿದ್ದರು. ಜಗತ್ತಿನ ಇತಿಹಾಸದಲ್ಲಿ ಇಷ್ಟು ಬೇಗ ಕಾನೂನು ಅಳಿಸಿ ಹಾಕಿದ ತಿದ್ದುಪಡಿ ಬೇರೆಲ್ಲೂ ಆಗಿಯೇ ಇಲ್ಲ. ಇವೆಲ್ಲವನ್ನೂ ಆಗಸ್ಟ್ 8ರ ಒಳಗಡೆ ರಾಜ್ಯಸಭೆಯಲ್ಲಿ ಮತ್ತು ಸಂವಿಧಾನದ ಆಶಯಕ್ಕೆ ತಿದ್ದುಪಡಿ ತರಬೇಕಿದ್ದರೆ ಮೂರನೇ ಒಂದರಷ್ಟು ರಾಜ್ಯಗಳ ಅಸೆಂಬ್ಲಿಯಲ್ಲೂ ಪಾಸ್ ಮಾಡಬೇಕಿತ್ತು. ಅದನ್ನೂ ಮಾಡಿಸಿದ್ದರು. ಯಾರಾದ್ರೂ ನಾಪತ್ತೆ ಆಗಿದ್ದರೆ, ಅದರ ಬಗ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕುವುದಕ್ಕೂ ನಿಷೇಧ ಮಾಡಲಾಗಿತ್ತು. ಪತ್ರಿಕೆಯಲ್ಲಿ ಸುದ್ದಿ ಬರುತ್ತೆ ಅಂತ ಪ್ರೆಸ್ ಆಕ್ಟ್ ಅನ್ನೂ ತೆಗೆದು ಹಾಕಲಾಗಿತ್ತು. ಇದರ ವಿರುದ್ಧ ಬರೆದಿದ್ದಕ್ಕೆ 350ರಷ್ಟು ಪತ್ರಕರ್ತರನ್ನು ಬಂಧಿಸಲಾಗಿತ್ತು. ದೇಶಾದ್ಯಂತ ಲಕ್ಷಕ್ಕೂ ಹೆಚ್ಚು ಜನ ಜೈಲು ಸೇರಿದ್ದರು. ಇದನ್ನೆಲ್ಲ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಿದಾಗ, ಅದೂ ಇಂದಿರಾ ಎದುರು ಸರೆಂಡರ್ ಆಗಿತ್ತು. ಅಂದು ಇವೆಲ್ಲ ಸಿಂಧುವೆಂದು ತೀರ್ಪು ನೀಡಿದವರಲ್ಲಿ ಈಗಿನ ಸಿಜೆಐ ಆಗಿರುವ ಚಂದ್ರಚೂಡ್ ಅವರ ತಂದೆಯೂ ಒಬ್ಬರಾಗಿದ್ದರು.
1940ರಲ್ಲಿ ಅಂಬೇಡ್ಕರ್ ಸಂವಿಧಾನದ ಕರಡು ರೂಪಿಸುತ್ತಿದ್ದಾಗ, ಕೆಟಿ ಷಾ ಎನ್ನುವವರು ಮತ್ತೆ ಮತ್ತೆ ಸೆಕ್ಯುಲರ್ ಶಬ್ದ ಸೇರಿಸುವಂತೆ ಪ್ರಸ್ತಾಪ ಮಾಡಿದ್ದರು. ಆದರೆ, ಭಾರತವೇ ಸೆಕ್ಯುಲರ್, ಇಲ್ಲಿನ ಜನರೇ ಸೆಕ್ಯುಲರ್. ಪ್ರಾಣಿ, ಪಕ್ಷಿಗಳನ್ನೂ ಸಮಾನವಾಗಿ ನೋಡುವ ಸಂಸ್ಕೃತಿ ಹಿಂದುಗಳದ್ದು. ಹಿಂದುಗಳು ಯಾವುದೇ ಧರ್ಮವನ್ನು, ನಾಗರಿಕತೆಯನ್ನು ನಾಶ ಪಡಿಸಿದ್ದು, ಆಕ್ರಮಣ ಮಾಡಿದ್ದು ಇಲ್ಲ. ಬೇರೆ ಗುಣಧರ್ಮದವರನ್ನೂ ಸಮಾನವಾಗಿ ನೋಡುವ ದೃಷ್ಟಿಯಿದ್ದವರು. ಹಾಗಿದ್ದ ಮೇಲೆ ಜಾತ್ಯತೀತ ಎನ್ನುವ ಪದಕ್ಕೆ ಇಲ್ಲಿ ಅರ್ಥ ಇರೋದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ತುರ್ತು ಸ್ಥಿತಿಯ ಸಂದರ್ಭದಲ್ಲೇ ಸಂವಿಧಾನಕ್ಕೆ ಸೆಕ್ಯುಲರ್ ಶಬ್ದವನ್ನೂ ಇಂದಿರಾ ಸೇರಿಸಿಬಿಟ್ಟಿದ್ದರು. ಮೊನ್ನೆ ಲೋಕಸಭೆ ಚುನಾವಣೆಯಲ್ಲಿ ಮೋದಿಗೆ 400 ಸೀಟು ಬಂದರೆ ಸಂವಿಧಾನ ಬದಲಿಸುತ್ತಾರೆಂದು ಖರ್ಗೆಯವರು ಇಡೀ ದೇಶದಲ್ಲಿ ಹೇಳುತ್ತಾ ತಿರುಗಿದರು. ನಿಜಕ್ಕಾದರೆ ಸಂವಿಧಾನ ರಕ್ಷಣೆ ಮಾಡಿದ್ದೇ ಮೋದಿ, ಹಾಳುಗೆಡವಿದ್ದೇ ಕಾಂಗ್ರೆಸಿಗರು ಅನ್ನುವುದನ್ನು ನಾವು ಇಂದಿನ ಯುವ ಜನಾಂಗಕ್ಕೆ ಹೇಳಬೇಕಿದೆ.
ಇಂದಿರಾ ಗಾಂಧಿ ಮತ್ತು ನೆಹರೂ ತಮಗೇ ಭಾರತ ರತ್ನವನ್ನು ಕೊಟ್ಟುಕೊಂಡಿದ್ದರೆ, ಸಂವಿಧಾನ ಬರೆದ ಮಹಾನ್ ನಾಯಕನಿಗೆ ರತ್ನ ಬಿಡಿ ಯಾವೊಂದು ಗೌರವವನ್ನೂ ಕೊಡಲಿಲ್ಲ. ಅವರು ಹುಟ್ಟಿದ ಜಾಗ, ಸಾವನ್ನಪ್ಪಿದ ಸ್ಥಳ, ಬೌದ್ಧಧರ್ಮ ಸ್ವೀಕರಿಸಿದ ಜಾಗ, ಶಾಲೆ ಕಲಿತ ಜಾಗ ಹೀಗೆ ಐದು ಸ್ಥಳಗಳನ್ನು ಪಂಚ ತೀರ್ಥಕ್ಷೇತ್ರಗಳಾಗಿಸಿದ್ದು ಮೋದಿ ಸರಕಾರ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡುವುದಕ್ಕೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವೇ ಬರಬೇಕಾಯಿತು. ಸಂಸತ್ತಿನಲ್ಲಿ ಅಂಬೇಡ್ಕರ್ ಫೋಟೋ ಹಾಕಿದ್ದು, ಅವರ ಜನ್ಮದಿನಕ್ಕೆ ರಜೆ ಕೊಡಿಸಿದ್ದೂ ಬಿಜೆಪಿಯೇ. ಅಷ್ಟರ ವರೆಗೂ ಅಂಬೇಡ್ಕರ್ ಮೇಲೆ ಕಾಂಗ್ರೆಸ್ ಸೇಡು ತೀರಿಸಿತ್ತು. ಹಿರಿಯ ಪತ್ರಕರ್ತ ಎ. ಸೂರ್ಯಪ್ರಕಾಶ್ ತುರ್ತು ಸ್ಥಿತಿಯ ಘಟನೆಗಳನ್ನು ಪುಸ್ತಕ ಮಾಡಿದ್ದು ನೀವೆಲ್ಲ ಓದಿಕೊಳ್ಳಬೇಕು. ಸಂವಿಧಾನಕ್ಕೆ ಈವರೆಗೆ ಅತಿ ಹೆಚ್ಚು ತಿದ್ದುಪಡಿ ತಂದವರೇ ಗಾಂಧಿ ಕುಟುಂಬ. ಅದರಲ್ಲಿ 32 ಬಾರಿ ಇಂದಿರಾ ಗಾಂಧಿ ಒಬ್ಬರೇ ಮಾಡಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಈವರೆಗೆ 106 ತಿದ್ದುಪಡಿಗಳಾಗಿದ್ದರೆ, ಆ ಪೈಕಿ ಗಾಂಧಿ ಕುಟುಂಬದ ಪಾಲು 75 ಎಂದು ಲೆಕ್ಕ ಹೇಳಿದರು ಪ್ರತಾಪಸಿಂಹ.
ದೇಶದ ಸ್ವಾತಂತ್ರ್ಯಕ್ಕಾಗಿ ಅದೆಷ್ಟೋ ಜನ ಬಲಿದಾನ ಮಾಡಿದ್ದರು. ಜೈಲು ಸೇರಿ ಪ್ರಾಣಾರ್ಪಣೆ ಮಾಡಿದ್ದರು. ಎರಡನೇ ಬಾರಿಗೆ ಸ್ವಾತಂತ್ರ್ಯಕ್ಕಾಗಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜನರು ಜೈಲು ಸೇರಿದ್ದರು. ಈ ಪೈಕಿ 4026 ಮಂದಿ ಆರೆಸ್ಸೆಸ್ ನವರಾದರೆ, ತುರ್ತು ಸ್ಥಿತಿ ವಿರುದ್ಧ ಒಬ್ಬನೇ ಒಬ್ಬ ಕಾಂಗ್ರೆಸಿಗ ಜೈಲಿಗೆ ಹೋಗಿಲ್ಲ. ಕೆಲವು ಚಿಲ್ಲರೆಯಷ್ಟು ಡಿಎಂಕೆ, ಕಮ್ಯುನಿಸ್ಟ್ ಮಂದಿ ಜೈಲು ಸೇರಿದ್ದರು. ಭಾರತದಲ್ಲಿ ಹಿಂದುಗಳು ಮೆಜಾರಿಟಿ ಇರೋ ವರೆಗೂ ಪ್ರಜಾಪ್ರಭುತ್ವ ಇರತ್ತೆ. ಯಾವಾಗ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತೋ ಡೆಮಾಕ್ರಸಿ ಉಳಿಯಲ್ಲ. ಯಾವುದೇ ಮುಸ್ಲಿಂ ಅಥವಾ ಕ್ರೈಸ್ತರ ರಾಷ್ಟ್ರಗಳಲ್ಲಿ ನೈಜ ಡೆಮಾಕ್ರಸಿ ಇಲ್ಲ. 27 ಮುಸ್ಲಿಂ ರಾಷ್ಟ್ರಗಳಿದ್ದರೂ, ಎಲ್ಲರೂ ಸಮಾನರು ಎನ್ನುವ ಪ್ರಜಾಪ್ರಭುತ್ವ ಇರೋದು ಕಾಣೋದಿಲ್ಲ. ಅಮೆರಿಕದಲ್ಲಿ ಡೆಮಾಕ್ರಸಿ ಇದ್ದರೂ ಬೈಬಲ್ ಹಿಡಿದೇ ಪ್ರಮಾಣ ಪಡೀಬೇಕು. ಹಿಂದುಗಳು ಬಹುಸಂಖ್ಯಾತರಿದ್ದರೂ, ಭಾರತದಲ್ಲಿ ಅಂತಹ ಸ್ಥಿತಿ ಇಲ್ಲ ಎಂದು ಹೇಳಿದರು ಪ್ರತಾಪಸಿಂಹ.
ಕಾರ್ಯಕ್ರಮದಲ್ಲಿ ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಮಹಾಬಲ ಕೊಟ್ಟಾರಿ ಇದ್ದರು. ತುರ್ತು ಸ್ಥಿತಿಯಲ್ಲಿ ಜೈಲು ಸೇರಿದ್ದವರ ಕುಟುಂಬಸ್ಥರನ್ನು, ಜೈಲು ಪಾಲಾಗಿದ್ದ ಹಿರಿಯರನ್ನು ಪ್ರತಾಪಸಿಂಹ ಗೌರವಿಸಿದರು.
Ambedkar has faith in the constitution, not Indira's constitution slams Mysuru former MP Prathap simha in Mangalore
27-05-26 06:26 pm
HK News Staffer
ನಾಗಲಕ್ಷ್ಮಿಗೆ ಸುತ್ತಿಕೊಂಡ ಮತ್ತೊಂದು ವಿವಾದ ; ಉಡುಪ...
27-05-26 04:58 pm
ಡಿಕೆಗೆ ಪಟ್ಟ ; ಬಹುತೇಕ ಸಚಿವರಿಗೆ ಕೊಕ್- ಹೊಸಬರಿಗೆ...
27-05-26 01:41 pm
ರಾಜ್ಯ ರಾಜಕೀಯದಲ್ಲಿ ಭಾರೀ ಕ್ಲೈಮ್ಯಾಕ್ಸ್ ; ಸಿಎಂ ಸಿ...
26-05-26 11:03 pm
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
27-05-26 12:29 pm
HK News Desk
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
27-05-26 08:34 pm
HK News Staffer
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm
ಇಸ್ರೇಲ್ನಿಂದ ರಜೆ ಮೇಲೆ ಊರಿಗೆ ಬಂದವನ ದುರಂತ ಅಂತ್ಯ...
26-05-26 02:43 pm