Puttur, crime, Mangalore: ಕುಡಿತದ ಚಟಕ್ಕೆ ಬಿದ್ದಿದ್ದ ಯುವಕ ಅನುಮಾನಾಸ್ಪದ ಸಾವು ; ತಾಯಿ ಸೇರಿ ಮೂವರು ಪೊಲೀಸರ ವಶಕ್ಕೆ 

10-05-24 10:16 pm       Mangalore Correspondent   ಕರಾವಳಿ

ಕುಡಿತದ ಚಟಕ್ಕೆ ಬಿದ್ದಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು ಪೊಲೀಸರು ತಾಯಿ ಮೇಲೆಯೇ ಶಂಕೆ ವ್ಯಕ್ತಪಡಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. 

ಪುತ್ತೂರು, ಮೇ.10: ಕುಡಿತದ ಚಟಕ್ಕೆ ಬಿದ್ದಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು ಪೊಲೀಸರು ತಾಯಿ ಮೇಲೆಯೇ ಶಂಕೆ ವ್ಯಕ್ತಪಡಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. 

ಬೆಟ್ಟಂಪಾಡಿಯ ಪಾರೆ ಎಂಬಲ್ಲಿ ಘಟನೆ ನಡೆದಿದ್ದು ಚೇತನ್ (33) ಸಾವನ್ನಪ್ಪಿದ ಯುವಕ. ಚೇತನ್ ನೇಣು ಬಿಗಿದು ಸಾವನ್ನಪ್ಪಿರುವ ಬಗ್ಗೆ ಮೃತನ ತಾಯಿ ಪುತ್ತೂರು ಪೊಲೀಸರಿಗೆ ತಿಳಿಸಿದ್ದರು. ಘಟನೆಗೆ ಸಂಬಂಧಿಸಿ ಮೃತದೇಹ ನೋಡಿ ಅನುಮಾನಗೊಂಡ ಪೋಲೀಸರು, ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿದ್ದಾರೆ. ಮೃತನ ತಾಯಿ ಉಮಾವತಿ ಸೇರಿದಂತೆ ಮೂವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ (ಮೇ 9) ರಾತ್ರಿ ಕುಡಿದು ಮನೆಗೆ ಬಂದಿದ್ದ ಚೇತನ್, ತಾಯಿ ಜೊತೆ ಜಗಳವಾಡಿ ಮನೆ ಪಕ್ಕದ ಯೂಸುಫ್ ಎನ್ನುವವರ ಮನೆ ಬಾಗಿಲು ಬಡಿದಿದ್ದ. ಈ ಕುರಿತು ಯೂಸುಫ್, ಚೇತನ್ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಬಳಿಕ ಯೂಸುಫ್ ಮನೆಗೆ ಬಂದ ಚೇತನ್ ತಾಯಿ, ನಾಯಿಯನ್ನು ಕಟ್ಟುವ ಸಂಕೋಲೆಯನ್ನು ತಂದು ಚೇತನ್ ಸೊಂಟಕ್ಕೆ ಹಾಕಿ ಯೂಸುಫ್ ಸೇರಿದಂತೆ ಸ್ಥಳೀಯ ನಿವಾಸಿಗಳು ಮನೆಗೆ ಎಳೆದೊಯ್ದಿದ್ದರು. 

ಯುವಕನನ್ನು ಎಳೆಯುತ್ತಿದ್ದ ಸಮಯದಲ್ಲಿ ಕುತ್ತಿಗೆಗೆ ಸುತ್ತಿಕೊಂಡಿದ್ದ ಸಂಕೋಲೆ ಬಿಗಿದು ಚೇತನ್ ಸಾವನ್ನಪ್ಪಿರುವ ಶಂಕೆ ಎದುರಾಗಿದೆ. ಶವ ಪರೀಕ್ಷೆಗಾಗಿ ಮೃತದೇಹವನ್ನು ಮಂಗಳೂರಿಗೆ ತರಲಾಗಿತ್ತು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puttur 33 year old dead under suspicious circumstances, three including mother taken to police custody