Mangalore Election, Mullai Muhilan Dc: ದ.ಕ. ಜಿಲ್ಲೆಯಲ್ಲಿ ಎ.24ರಿಂದಲೇ ನಿಷೇಧಾಜ್ಞೆ ಜಾರಿ ; ಒಟ್ಟು 18.18 ಲಕ್ಷ ಮತದಾರರು, 171 ಸೂಕ್ಷ್ಮ ಮತಗಟ್ಟೆ, 72 ಮಾದರಿ ಮತಗಟ್ಟೆ, 938 ಕಡೆ ವೆಬ್ ಕಾಸ್ಟಿಂಗ್, ಎರಡು ದಿನ ಮದ್ಯ ನಿಷೇಧ 

23-04-24 10:28 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಈ ಬಾರಿ ಜಿಲ್ಲೆಯಲ್ಲಿ 1,876 ಮತಗಟ್ಟೆಗಳಿದ್ದು, 524 ಸರ್ವಿಸ್ ವೋಟರ್ ಗಳು ಸೇರಿದಂತೆ ಒಟ್ಟು 18,18,127 ಮಂದಿ ಮತದಾರರಿದ್ದಾರೆ.

ಮಂಗಳೂರು, ಏ.23: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಈ ಬಾರಿ ಜಿಲ್ಲೆಯಲ್ಲಿ 1,876 ಮತಗಟ್ಟೆಗಳಿದ್ದು, 524 ಸರ್ವಿಸ್ ವೋಟರ್ ಗಳು ಸೇರಿದಂತೆ ಒಟ್ಟು 18,18,127 ಮಂದಿ ಮತದಾರರಿದ್ದಾರೆ. 2,251 ಪ್ರಿಸೈಡಿಂಗ್ ಅಧಿಕಾರಿಗಳು, 2,251 ಎಪಿಆರ್‌ಓಗಳು, 4,502 ಪಿಓಗಳು, 2,251 ಗ್ರೂಪ್ ಡಿ ನೌಕರರು ಸೇರಿದಂತೆ ಒಟ್ಟಾರೆ 11,255 ಅಧಿಕಾರಿ, ಸಿಬ್ಬಂದಿಗಳು ಕಾರ್ಯ‌ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ. ‌

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 40 ಸಖಿ, ವಿಕಲಚೇತನರೇ ನಿರ್ವಹಿಸುವ 8, ವಿಷಯಾಧಾರಿತ 8, ಯುವ ಮತದಾರರ 8 ಹಾಗೂ ಪಾರಂಪರಿಕತೆ ಬಿಂಬಿಸುವ 8 ಬೂತ್ ಗಳು ಸೇರಿದಂತೆ ಒಟ್ಟಾರೆ 72 ಮಾದರಿ ಮತಗಟ್ಟೆಗಳನ್ನು ಈ ಬಾರಿ ನಿರ್ಮಿಸಲಾಗಿದೆ. ವಿಕಲಚೇತನರೇ ನಿರ್ವಹಿಸುವ ಮತಗಟ್ಟೆಗಳಿಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ. 1,876 ಮತಗಟ್ಟೆಗಳ ಪೈಕಿ 1,005 ಬೂತ್ ಗಳು ನಿರ್ದಿಷ್ಟ ಪ್ರದೇಶದಲ್ಲಿವೆ, 938 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ, 50 ಲೊಕೇಶನ್ ಗಳಲ್ಲಿ 132 ಪೋಲಿಂಗ್ ಸ್ಟೇಷನ್ ಬರಲಿದ್ದು, 200 ಮೈಕ್ರೋ ಒಬ್ಸರ್ವರ್ ಗಳನ್ನು ನೇಮಕ ಮಾಡಲಾಗಿದೆ. ಒಟ್ಟು 171 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. 

72 ಗಂಟೆಗಳ ಅವಧಿಯಲ್ಲಿ ಮಾದರಿ ನೀತಿ ಸಂಹಿತೆಗಾಗಿ 24 ವಿಡಿಯೋ ಸರ್ವೆಲೆನ್ಸ್ ತಂಡ, 72 ಫ್ಲೈಯಿಂಗ್ ಸ್ಕ್ವಾಡ್, 69 ಸ್ಟ್ಯಾಟಿಸ್ಟಿಕ್ಸ್ ಸರ್ವೆಲೆನ್ಸ್ ತಂಡ,  186 ಸೆಕ್ಟರ್ ಅಧಿಕಾರಿಗಳು, 8 ವಿಡಿಯೋ ವಿವಿಂಗ್ ಟೀಮ್, 8 ಮಾದರಿ ನೀತಿ ಸಂಹಿತೆ ತಂಡ, 8 ವೆಚ್ಚ ನಿರ್ವಹಣಾ ತಂಡ ಹಾಗೂ 8 ಸಹಾಯಕ ಖರ್ಚು ವೆಚ್ಚಗಳ ವೀಕ್ಷಕರನ್ನು ನಿಯೋಜಿಸಲಾಗಿದೆ.

209-ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿಯು ಕಾಲೇಜಿನಲ್ಲಿ, 201- ಮೂಡುಬಿದರೆಗೆ ಮಹಾವೀರ ಪ್ರಥಮ ದರ್ಜೆ ಕಾಲೇಜಿನಲ್ಲಿ, 202 ಮಂಗಳೂರು ನಗರ ಉತ್ತರಕ್ಕೆ ಸೇಂಟ್ ಅಲೋಷಿಯಸ್ ಪಿಯು ಕಾಲೇಜು ಕಟ್ಟಡ, 203- ಮಂಗಳೂರು ದಕ್ಷಿಣಕ್ಕೆ ಊರ್ವಾ ಲಾಲ್ ಭಾಗ್ ನ ಕೆನರಾ ಹೈಸ್ಕೂಲ್ ಹಾಗೂ ಹೈಯರ್ ಪ್ರೈಮರಿ ಸ್ಕೂಲ್,  204-ಮಂಗಳೂರಿಗೆ ಸಂಬಂಧಿಸಿದಂತೆ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಮಾನವೀಯ ಅಧ್ಯಯನ ಶಾಸ್ತ್ರದ ವಿಭಾಗದಲ್ಲಿ,  205 ಬಂಟ್ವಾಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮದನಕಾಪುನಲ್ಲಿರುವ
ಇನ್ ಫಾಂಟ್  ಜೀಸಸ್ ಇಂಗ್ಲಿಷ್ ಮತ್ತು ಕನ್ನಡ ಮೀಡಿಯಂ ಶಾಲೆಯಲ್ಲಿ,‌ 206- ಪುತ್ತೂರಿಗೆ ಸಂಬಂಧಿಸಿದಂತೆ ತೆಂಕಿಲದಲ್ಲಿರುವ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಹಾಗೂ 207 ಸುಳ್ಯಗೆ ಸಂಬಂಧಿಸಿದಂತೆ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಮಾಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದವರು ಹೇಳಿದರು.

ಅಂಚೆ ಮತದಾನಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 1,406 ನೌಕರರ ಪೈಕಿ 1,052 ಮಂದಿ ಇದುವರೆಗೆ ಮತ ಚಲಾಯಿಸಿದ್ದಾರೆ. ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು ತಮ್ಮ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡರೆ ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್ ಮೂಲಕ ಲೋಕಸಭಾ ಕ್ಷೇತ್ರದ ಯಾವುದೇ ಮತಗಟ್ಟೆಯಲ್ಲಿ ಮತಯಂತ್ರದ ಮೂಲಕ ಮತ ಚಲಾಯಿಸಲು ಚುನಾವಣಾ ನಿಯಮಗಳ ಪ್ರಕಾರ ಅವಕಾಶವಿದೆ. ಈ ವರ್ಗದಲ್ಲಿ ಚುನಾವಣಾ ಕಾರ್ಯನಿರತ ಸಿಬ್ಬಂದಿ, ಪೊಲೀಸರು, ಸೆಕ್ಟರ್ ಅಧಿಕಾರಿಗಳು, ವಿಡಿಯೋ ಗ್ರಾಫರ್ಗಳು, ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ಅವಕಾಶ ನೀಡಿದೆ. ಅವರು ಮತಗಟ್ಟೆಯಲ್ಲಿ ಅಥವಾ ಲೋಕಸಭಾ ಕ್ಷೇತ್ರದ ಯಾವುದೇ ಮತಗಟ್ಟೆಯಲ್ಲಿ ಮತಚಲಾಯಿಸಬಹುದಾಗಿದೆ. ಒಟ್ಟಾರೆ 9,900 ಮಂದಿಗೆ ಇಡಿಸಿಯನ್ನು ವಿತರಿಸಲಾಗಿದೆ.

ಮನೆ ಮನೆ ಮತದಾನದಲ್ಲಿ 85 ವರ್ಷ ಮೇಲ್ಪಟ್ಟ 6,053 ಮತದಾರರ ಪೈಕಿ 5,878 ಮಂದಿ ಮತಚಲಾಯಿಸಿದ್ದರೆ, 1,975 ವಿಕಲಚೇತನ ಮತದಾರರ ಪೈಕಿ 1,929 ಮಂದಿ ಮತ ಚಲಾಯಿಸಿರುತ್ತಾರೆ. ಎವಿಇಎಸ್ ವರ್ಗದಲ್ಲಿ 15 ಇಲಾಖೆಗಳ ಅಗತ್ಯ ಸೇವೆಗಳು ಎಂದು ಗುರುತಿಸಲಾಗಿದ್ದು, ಆಯಾ ಇಲಾಖೆಗಳ ಅಧಿಕಾರಿಗಳು ಮತ ಚಲಾಯಿಸಲು ಪ್ರತಿ ಜಿಲ್ಲೆಯಲ್ಲಿ ಪೊಸ್ಟಲ್ ವೋಟಿಂಗ್ ಸೆಂಟರ್ ಗಳನ್ನು ಸ್ಥಾಪಿಸಲಾಗಿದೆ. ಈ ರೀತಿಯ ಒಟ್ಟು 182 ಮಂದಿ ಮತದಾರರ ಪೈಕಿ 100 ಮಂದಿ ಮತ ಚಲಾಯಿಸಿರುತ್ತಾರೆ.

ಮತದಾರರು ಎಪಿಕ್ ಕಾರ್ಡ್ ತೋರಿಸಿ ಮತದಾನ ಮಾಡಬಹುದು. ಎಪಿಕ್ ಕಾರ್ಡ್ ಹೊರತುಪಡಿಸಿ ಕೇಂದ್ರ ಚುನಾವಣಾ ಆಯೋಗವು ನಿಗದಿಪಡಿಸಿರುವ ಆಧಾರ್ ಕಾರ್ಡ್, ಎಂಜಿ ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ ಬುಕ್, ಅಂಚೆ ವಿಮೆ, ಚಾಲನಾ ಪರವಾನಿಗೆ, ಪಾನ್ ಕಾರ್ಡ್, ಆರ್ ಜಿ ಐ ನೀಡಿರುವ ಸ್ಮಾರ್ಟ್ ಕಾರ್ಡ್, ಪಾಸ್ಪೋರ್ಟ್, ಪಿಂಚಣಿ ದಾಖಲಾತಿ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವಾ ಗುರುತಿನ ಚೀಟಿ, ಎಂಪಿ, ಎಂ ಎಲ್ ಎ, ಎಂಎಲ್ಸಿ ಅವರಿಗೆ ವಿತರಿಸಲಾಗಿರುವ ಅಧಿಕೃತ ಗುರುತಿನ ಚೀಟಿಗಳು, ಯುನಿಕ್ ಡಿಸಬೆಲಿಟಿ ಐಡಿ ಕಾರ್ಡ್ ತೋರಿಸಿ ಮತ ಚಲಾಯಿಸಬಹುದು. 

ಮತಗಟ್ಟೆಯ 200 ನೂರು ಮೀಟರ್ ಪ್ರದೇಶದ ಒಳಗೆ ಅಭ್ಯರ್ಥಿಗಳ ಚುನಾವಣಾ ಬೂತ್ ಸ್ಥಾಪಿಸಲು ಅವಕಾಶವಿರುವುದಿಲ್ಲ. ಚುನಾವಣೆ ಸಂಬಂಧಿತ ಪ್ರಚಾರ ಅಥವಾ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಮತದಾನ ದಿನದಂದು ಮತಗಟ್ಟೆಯೊಳಗೆ ಮೊಬೈಲ್ ಫೋನ್ ಗಳನ್ನು ಚುನಾವಣಾ ಕರ್ತವ್ಯ ಅಧಿಕಾರಿ ಹೊರತುಪಡಿಸಿ ಉಳಿದವರು ಕೊಂಡೊಯ್ಯುವಂತಿಲ್ಲ. ಅಲ್ಲದೆ ಮತದಾರರಿಗೆ ಮತಗಟ್ಟೆಗಳಲ್ಲಿಯೇ ಮೊಬೈಲ್ ಫೋನ್ ಇರಿಸಲು ಮೊಬೈಲ್ ಫೋನ್ ಡೆಪಾಸಿಟರ್ ಸೆಂಟರ್ ಗಳನ್ನು ತೆರೆಯಲು ಕ್ರಮ ವಹಿಸಲಾಗುವುದು, ಮತಗಟ್ಟೆಯ 100 ಮೀಟರ್ ಪ್ರದೇಶದೊಳಗೆ ಯಾವುದೇ ಚುನಾವಣಾ ಪ್ರಚಾರದ ಪೋಸ್ಟರ್, ಬ್ಯಾನರ್ ಇರುವಂತಿಲ್ಲ, ಅಂತರಾಜ್ಯ ಗಡಿ ಪ್ರದೇಶಗಳಲ್ಲಿ ಎಫ್ ಎಸ್ ಟಿ ತಂಡಗಳಿಂದ ಮತ್ತು ಚೆಕ್ ಪೋಸ್ಟ್ ಗಳಲ್ಲಿ ಎಸ್ ಎಸ್ ಟಿ ತಂಡಗಳಿಂದ ಭದ್ರತಾ ಮತ್ತು ಚುನಾವಣಾ ಅಕ್ರಮ ಚಟುವಟಿಕೆ ದೃಷ್ಟಿಯಿಂದ ಹೆಚ್ಚಿನ ಕಣ್ಗಾವಲು ಕೈಗೊಳ್ಳಲಾಗಿದೆ. ಇವಿಎಂ ಮತ್ತು ವಿವಿಪ್ಯಾಟ್ ಸಾಗಾಣಿಕ ವಾಹನಗಳಿಗೆ ಭದ್ರತಾ ಹಿತದೃಷ್ಟಿಯಿಂದ ಜಿಪಿಎಸ್ ಅಳವಡಿಸಲಾಗಿದೆ ಎಂದು ಹೇಳಿದರು.

ಮತದಾನದ ದಿನದಂದು ಏ. 26ರಂದು ವೇತನ ಸಹಿತ ರಜೆಯನ್ನು ಸರ್ಕಾರ ಘೋಷಿಸಿದ್ದು, ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ, ನೌಕರರು ಮತದಾನ ಮಾಡಬಹುದಾಗಿದೆ. ಏ. 24ರ ಸಂಜೆ 6 ಏಪ್ರಿಲ್ 26ರ ಮಧ್ಯರಾತ್ರಿ ವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ  ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂದಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. 

ಚುನಾವಣೆ ಬಳಿಕ ಡಿ ಮಾಸ್ಟರಿಂಗ್ ಪೂರ್ಣಗೊಂಡ ನಂತರ ಡಿ ಮಾಸ್ಟರಿಂಗ್ ಕೇಂದ್ರಗಳಿಂದ ಇವಿಎಂ, ವಿವಿ ಪ್ಯಾಟ್ ಮತ್ತು ದಾಖಲೆಗಳನ್ನು ಮತ ಎಣಿಕೆ ಕೇಂದ್ರವಾದ ಸುರತ್ಕಲ್ ನ ಎನ್ಐಟಿಕೆಯಲ್ಲಿ ದಾಸ್ತಾನು ಇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಗೋಷ್ಠಿಯಲ್ಲಿದ್ದರು.

The Mangalore administration has completed preparations for polling for Lok Sabha elections to be held on April 26. Deputy Commissioner Mullai Muhilan has provided an update on the district's preparations for the upcoming Lok Sabha election.A total of nine candidates will contest in the forthcoming election across 1876 polling stations spread across 8 constituencies.