Dinesh Gundu Rao, Ullal, Mangalore: ರಾಜ್ಯಕ್ಕೆ ಕೇಂದ್ರದಿಂದ ಘೋರ ಅನ್ಯಾಯ ; 26 ಬಿಜೆಪಿ ಸಂಸದರು ಅಸಮರ್ಥರು, ನಿಷ್ಪ್ರಯೋಜಕರು, ನೋಟಾ ಅಭಿಯಾನ ನಮಗೆ ಸಂಬಂಧ ಇಲ್ಲ, ಅದು ಅವರ ವೈಯಕ್ತಿಕ ; ದಿನೇಶ್ ಗುಂಡೂರಾವ್

23-04-24 12:06 pm       Mangalore Correspondent   ಕರಾವಳಿ

ಕರ್ನಾಟಕಕ್ಕೆ ಕೇಂದ್ರದಿಂದ ವಿಶೇಷ ಅಥವಾ ಸಾಮಾನ್ಯ ಕಾರ್ಯಕ್ರಮನೂ ಬಂದಿಲ್ಲ, ಬರಗಾಲ ಪರಿಹಾರದ ವಿಚಾರದಲ್ಲಂತೂ ನಮಗೆ ಸರ್ವೋಚ್ಚ ನ್ಯಾಯಾಲಯದಿಂದ ನ್ಯಾಯ ಪಡೆಯುವ ಅನಿವಾರ್ಯತೆ ಎದುರಾಗಿದ್ದು, ರಾಜ್ಯದ 26 ಬಿಜೆಪಿ ಸಂಸದರು ಅಸಮರ್ಥರು ನಿಷ್ಪ್ರಯೋಜಕರಾಗಿದ್ದಾರೆ. ಜಿಲ್ಲೆಯ ನೋಟಾ ಅಭಿಯಾನವು ನಮಗೆ ಸಂಬಂಧಪಟ್ಟ ವಿಚಾರವಲ್ಲ, ಅದು ಅವರವರ ವೈಯಕ್ತಿಕ ವಿಚಾರವೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಉಳ್ಳಾಲ, ಎ.23: ಕರ್ನಾಟಕಕ್ಕೆ ಕೇಂದ್ರದಿಂದ ವಿಶೇಷ ಅಥವಾ ಸಾಮಾನ್ಯ ಕಾರ್ಯಕ್ರಮನೂ ಬಂದಿಲ್ಲ, ಬರಗಾಲ ಪರಿಹಾರದ ವಿಚಾರದಲ್ಲಂತೂ ನಮಗೆ ಸರ್ವೋಚ್ಚ ನ್ಯಾಯಾಲಯದಿಂದ ನ್ಯಾಯ ಪಡೆಯುವ ಅನಿವಾರ್ಯತೆ ಎದುರಾಗಿದ್ದು, ರಾಜ್ಯದ 26 ಬಿಜೆಪಿ ಸಂಸದರು ಅಸಮರ್ಥರು ನಿಷ್ಪ್ರಯೋಜಕರಾಗಿದ್ದಾರೆ. ಜಿಲ್ಲೆಯ ನೋಟಾ ಅಭಿಯಾನವು ನಮಗೆ ಸಂಬಂಧಪಟ್ಟ ವಿಚಾರವಲ್ಲ, ಅದು ಅವರವರ ವೈಯಕ್ತಿಕ ವಿಚಾರವೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಅವರು ದಕ್ಷಿಣದ ಅಜ್ಮೀರ್ ಖ್ಯಾತಿಯ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡೀ ದೇಶದಲ್ಲೇ ವಾತಾವರಣ ಬದಲಾಗಿದೆ. ಹತ್ತು ವರ್ಷ ಕೇಂದ್ರದ ಮೋದಿ ಸರಕಾರದ ಆಡಳಿತದಿಂದ ಸಾಮಾನ್ಯ ಜನರ ಬದುಕಲ್ಲಿ ಬದಲಾವಣೆ ಆಗಿಲ್ಲ, ಜನರು ಅಚ್ಚೇ ದಿನವನ್ನ ಕಂಡಿಲ್ಲ. ಕೇಂದ್ರಕ್ಕೆ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಅಯ್ಕೆಯಾದರೂ ರಾಜ್ಯಕ್ಕೆ ಅವರಿಂದ ನ್ಯಾಯ ಕೊಡಿಸೋಕೆ ಆಗಿಲ್ಲ. ಕರ್ನಾಟಕಕ್ಕೆ ನ್ಯಾಯ ಕೊಡಿಸಲು ನಾವು ಹಿಂದಿನ ರಾಜ್ಯ ಬಿಜೆಪಿ ಸರಕಾರ ಇರುವಾಗಲೇ ಹೋರಾಟ ನಡೆಸುತ್ತಾ ಬಂದಿದ್ದೇವೆ. ರಾಜ್ಯದಲ್ಲಿ ಈ ಬಾರಿ ನಿರೀಕ್ಷೆ ಮೀರಿ ಕಾಂಗ್ರೆಸ್ ಪರ ಫಲಿತಾಂಶ ಬರಲಿದೆ. ನನ್ನ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸಿಗೆ ಇಪ್ಪತ್ತರ ಮೇಲೆ ಸ್ಥಾನ ಸಿಗಲಿದೆ. 

ದಕ್ಷಿಣ ಕನ್ನಡದ ಕಾಂಗ್ರೆಸ್ ಸಂಸದ ಅಭ್ಯರ್ಥಿ ಉತ್ತಮರಿದ್ದಾರೆ. ಮಂಗಳೂರು, ಉಡುಪಿ- ಚಿಕ್ಕಮಂಗಳೂರು, ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಬೆಂಗಳೂರು ನಗರದ ಮೂರು ಸ್ಥಾನಗಳಲ್ಲಿ ಕನಿಷ್ಟ ಎರಡರಲ್ಲಾದರೂ ನಾವು ಗೆದ್ದೇ ಗೆಲ್ಲುತ್ತೇವೆ. ಕೇಂದ್ರ ಸರಕಾರದ ಸುಳ್ಳಿನ ಅಬ್ಬರ, ಹಿಂದು ಮುಸ್ಲಿಂ ಅಂತ ದೇಶ ಒಡೆಯುವ ಕೆಲಸ ನೋಡಿ ಜನರಿಗೆ ಸಾಕಾಗಿದೆ. ಚೊಂಬನ್ನ ಸ್ವಲ್ಪ ಮಟ್ಟಿಗೆ ತುಂಬಿಸೋ ಕೆಲಸ ಸರ್ವೋಚ್ಚ ನ್ಯಾಯಾಲಯ ಮಾಡಿದೆ. ನಮ್ಮನ್ನ ಪಿಕ್ ಪಾಕೆಟ್ ಅಂತ ಹೇಳುವ ನೈತಿಕತೆ ಇದೆಯೇ ಬಿಜೆಪಿಗೆ. ಕರ್ನಾಟಕ ಕೇಂದ್ರಕ್ಕೆ ಅತೀ ಹೆಚ್ಚು ತೆರಿಗೆ ನೀಡುವ ರಾಜ್ಯ,ಇಲ್ಲಿ ಅತೀ ಹೆಚ್ಚು ಬಂಡವಾಳ ಹೂಡಿಕೆಯಾಗುತ್ತಿದ್ದು ಅಭಿವೃದ್ಧಿಯೂ ಸಾಕಷ್ಟು ಆಗುತ್ತಿದೆ. ಕಳೆದ ಹತ್ತು ವರುಷಗಳಿಂದ ದೇಶದ ಸಾಲದ ಬೆಳವಣಿಗೆ ನೂರು ಶೇಕಡ ದಾಟಿದೆ. ದೊಡ್ಡ ದೊಡ್ಡ ಶ್ರೀಮಂತರ ಸುಮಾರು 14 ಲಕ್ಷ ಕೋಟಿ ಸಾಲವನ್ನ ಕೇಂದ್ರವು ಮನ್ನ ಮಾಡಿದೆ.ನಾವು ಸಾಮಾನ್ಯ ಜನರ ಭದ್ರತೆಗೋಸ್ಕರ ಗ್ಯಾರಂಟಿ ಯೋಜನೆಗಳನ್ನ ಕೊಟ್ಟಿದ್ದೇವೆ ಅದರಲ್ಲಿ ತಪ್ಪೇನು..? ಹೆಣದ ಮೇಲೆ ರಾಜಕಾರಣ ಮಾಡುವ ಬಿಜೆಪಿ ಧೋರಣೆ ಜನರಿಗೆ ಸಾಕಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನೋಟ ಅಭಿಯಾನಕ್ಕೂ ನಮಗೂ ಸಂಬಂಧ ಇಲ್ಲ.ಯಾರೋ ವೈಯಕ್ತಿಕವಾಗಿ ಅಭಿಯಾನ ನಡೆಸುತ್ತಿದ್ದಾರೆ.ಅದು ಅವರಿಗೆ ಬಿಟ್ಟಿರೋ ವಿಚಾರ ನಾನು ಅದಕ್ಕೇನೂ ಕಮೆಂಟ್ ಮಾಡಲು ಹೋಗಲ್ಲ ಎಂದರು. ಉಳ್ಳಾಲ ದರ್ಗಾ ಅಧ್ಯಕ್ಷರಾದ ಹಾಜಿ ಬಿ.ಜಿ.ಹನೀಫ್ , ಉಪಾಧ್ಯಕ್ಷರಾದ ಅಶ್ರಫ್ ಅಹ್ಮದ್ ರೈಟ್ ವೇ ,ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್,ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ,ಉಳ್ಳಾಲ ಕಾಂಗ್ರೆಸ್ ಚುನಾವಣಾ ಸಮಿತಿ ಕಾರ್ಯಾಧ್ಯಕ್ಷರಾದ ಇಫ್ತಿಕಾರ್ ಆಲಿ ಫರೀದ್ ಮೊದಲಾದವರು ಉಪಸ್ಥಿತರಿದ್ದರು.

Injustice to Karnataka by Modi Government says Dinesh Gundu Rao at Ullal in Mangalore. Before visiting the Kukke temple he made his visit to the Ullal Darga mosque.