Brijesh Chowta Mangalore; ದೇಶದಲ್ಲಿ ಭಯಮುಕ್ತ ವಾತಾವರಣ, ಸೇನೆಯ ಸಾಮರ್ಥ್ಯ ಹೆಚ್ಚಳ ಮೋದಿ ಸರ್ಕಾರದ ಹೆಗ್ಗಳಿಕೆ ; ಕ್ಯಾಪ್ಟನ್‌ ಬೃಜೇಶ್‌ ಚೌಟ 

26-03-24 08:45 pm       Mangalore Correspondent   ಕರಾವಳಿ

2014ರ ನಂತರ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಭಯಮುಕ್ತ ವಾತಾವರಣವನ್ನು ನಿರ್ಮಾಣ ಮಾಡಿರುವುದು ಮೋದಿ ಸರ್ಕಾರದ ಆಡಳಿತದ ಹೆಗ್ಗಳಿಕೆಯಾಗಿದೆ.

ಮಂಗಳೂರು, ಮಾ.26: 2014ರ ನಂತರ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಭಯಮುಕ್ತ ವಾತಾವರಣವನ್ನು ನಿರ್ಮಾಣ ಮಾಡಿರುವುದು ಮೋದಿ ಸರ್ಕಾರದ ಆಡಳಿತದ ಹೆಗ್ಗಳಿಕೆಯಾಗಿದೆ. ಇಂತಹ ಆಡಳಿತ ಅವರಿಂದ ಮಾತ್ರ ಸಾಧ್ಯ ಎಂದು  ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.‌ಬ್ರಿಜೇಶ್ ಚೌಟ ಹೇಳಿದರು. 

ಬಂಟ್ವಾಳ ತಾಲೂಕಿನಲ್ಲಿ ಮತ ಯಾಚನೆಗೆ ಪ್ರವಾಸ ಕೈಗೊಂಡ ಸಂದರ್ಭ ಕಾರ್ಯಕರ್ತರು ಹಾಗೂ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರುವ ಮೊದಲು ದೇಶದ್ರೋಹಿಗಳ ಅಟ್ಟಹಾಸ ಎಲ್ಲೆ ಮೀರಿತ್ತು. ದೇಶದಲ್ಲಿ ಭಯದ ವಾತಾವರಣ ನೆಲೆಸಿತ್ತು. 2014ರ ನಂತರ ಮೊದಲ ಬಾರಿಗೆ ಬದಲಾವಣೆಯ ಅಲೆ ಸೈನ್ಯ ವ್ಯವಸ್ಥೆಯಲ್ಲಿ ಕಾಣಿಸಿಕೊಂಡಿತ್ತು.  ಆಧುನಿಕ ಆಯುಧಗಳು, ಸೈನಿಕರಿಗೆ ದೊರೆತ ಸುರಕ್ಷಾ ಸಾಮಗ್ರಿಗಳು, ಉನ್ನತ ಗುಣಮಟ್ಟದ ಯುದ್ಧ ಸಾಮಗ್ರಿಗಳಿಂದ ನಮ್ಮ ದೇಶದ ಸೈನ್ಯ ವ್ಯವಸ್ಥೆಯು ಈಗ ಅತ್ಯಂತ ಸುರಕ್ಷಿತ ಹಾಗೂ ಸಮರ್ಥವಾಗಿದೆ ಎಂದರು. 

ಉಗ್ರರ ದಾಳಿ, ಬಾಂಬ್‌ ಬ್ಲಾಸ್ಟ್‌ ನಂತಹ ದೇಶ ವಿರೋಧಿ ಕೃತ್ಯಗಳು ದೇಶದಲ್ಲಿ ಸಂಪೂರ್ಣವಾಗಿ ನಿಂತಿವೆ. ಇದಕ್ಕೆಲ್ಲ ಕಾರಣ, ಗಟ್ಟಿಯಾದ ಆಡಳಿತ, ಸುಭದ್ರ ಸರ್ಕಾರವಾಗಿದೆ. ನಮ್ಮ ದೇಶಕ್ಕೆ ಶತ್ರುಗಳಿಲ್ಲ ಅಂತ ಅಲ್ಲ.  ದೇಶದ ಹೊರಗೂ, ಒಳಗೂ ಶತ್ರುಗಳಿದ್ದಾರೆ. ಅಂಥವರನ್ನು ಹದ್ದುಬಸ್ತಿನಲ್ಲಿಡಲು ಮೋದಿಯಂತಹ ಸಮರ್ಥ ನಾಯಕತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ  ಎಂದರು.

ಪ್ರಸ್ತುತ 2024ರ ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲ ಬಿಜೆಪಿಯನ್ನು ಸಂಪೂರ್ಣವಾಗಿ ಬೆಂಬಲಿಸುವ ಮೂಲಕ, ಸಮರ್ಥ ನಾಯಕತ್ವದ ಮೋದಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ. ನಮ್ಮ ದೇಶವನ್ನು ಮತ್ತಷ್ಟು ಸಮೃದ್ಧಗೊಳಿಸೋಣ ಎಂದು ಎಲ್ಲರ ಸಹಕಾರವನ್ನು ಕೋರಿದರು.

ನಾನು ಸೈನ್ಯದಲ್ಲಿ ಕೆಲಸ ಮಾಡಿದವನು. ಅಲ್ಲಿನ ಕಠಿಣ ಪರಿಸ್ಥಿತಿಗಳು ನನಗೆ ಗೊತ್ತು. ಒಂದು ಬಾಂಬ್‌ ಬ್ಲಾಸ್ಟ್‌ ಆದ ನಂತರದ ಪರಿಸ್ಥಿತಿಗಳು ನಮಗೆಲ್ಲ ತಿಳಿದಿರುತ್ತವೆ. ಆದರೆ, ಬ್ಲಾಸ್ಟ್‌ ಆಗದೇ ಇರುವಂತೆ ನೋಡಿಕೊಳ್ಳುವುದಕ್ಕೆ ಬೇಕಾದ ಆಡಳಿತ ವ್ಯವಸ್ಥೆ, ಸುರಕ್ಷಾ ವ್ಯವಸ್ಥೆ ಹಾಗೂ ಇಂಟಲಿಜೆನ್ಸ್‌ ವ್ಯವಸ್ಥೆಗಳನ್ನು ಸಮರ್ಥವಾಗಿಟ್ಟು ದೇಶ ಮುನ್ನಡೆಸುವುದು  ಸಮರ್ಥ ಆಡಳಿತ ನಡೆಸುವವರಿಗೆ  ಮಾತ್ರ ಗೊತ್ತು ಎಂದರು.‌

ಮಂಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ  ಕ್ಯಾ. ಬ್ರಿಜೇಶ್ ಚೌಟ ಅವರು ಬಂಟ್ವಾಳ ಮಂಡಲದ ಪ್ರವಾಸವನ್ನು ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವರ ದರ್ಶನ ಪಡೆದು ಪ್ರಾರಂಭಿಸಿದರು. ಬಳಿಕ  ಕಾವಳಪಡ್ನೂರು ಮಹಾಶಕ್ತಿಕೇಂದ್ರ, ನಾವೂರು ಮಹಾ ಶಕ್ತಿಕೇಂದ್ರ, ನರಿಕೊಂಬು ಮಹಾಶಕ್ತಿ ಕೇಂದ್ರದಲ್ಲಿ  ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

After 2014, the Modi government has created a peace, order and fear-free atmosphere in the country. Such governance is possible only through them," said Bjp's Dakshina Kannada Lok Sabha candidate K Sudhakaran Brijesh Chowta said.