ಬ್ರೇಕಿಂಗ್ ನ್ಯೂಸ್
16-08-23 07:17 pm Mangalore Correspondent ಸಿನಿಮಾ
ಮಂಗಳೂರು, ಆಗಸ್ಟ್ 16: ತುಳುನಾಡಿನ ಹಳ್ಳಿಗಳಲ್ಲಿ ಆಳವಾಗಿ ಬೇರುಬಿಟ್ಟಿದ್ದ ಜಾತಿ ವ್ಯವಸ್ಥೆ, ಗುತ್ತಿನಮನೆಯ ದೌಲತ್ತು, ಮನೆಯೊಡೆಯನ ಸ್ವೇಚ್ಛಾಚಾರ, ಕೆಸರೇ ಆಗಿದ್ದರೂ ಆ ಮನೆಯಲ್ಲೇ ಬಿದ್ದಿರುತ್ತಿದ್ದ ಕೆಲಸದಾಳು, ತನ್ನನ್ನು ಅಂಗಳದಲ್ಲೇ ಇರಿಸಿದರೂ ಮಾಲೀಕನ ಬಗ್ಗೆ ಅಚಲ ನಂಬಿಕೆ, ತಪ್ಪಿದರೂ ಕೇಡು ಬಗೆಯದ ಶ್ರಮಜೀವಿಯ ಪ್ರಾಮಾಣಿಕತೆ.. ಹೀಗೆ ‘ಕೊರಮ್ಮ’’ ಎನ್ನುವ ತುಳು ಚಿತ್ರ ಸಾಮಾನ್ಯ ನೋಡುಗರಿಗೆ ಬರೀ ಬೋರ್ ಸಬ್ಜೆಕ್ಟ್ ಅನಿಸಿದರೂ, ಅಲ್ಲಿ ಕಟ್ಟಿಕೊಟ್ಟ ಪಾತ್ರಗಳು, ಅವು ಸೂಸುವ ಭಾವಗಳು, ಚಿತ್ರದ ಒಟ್ಟರ್ಥವನ್ನು ಬೇರೆ ಚಿತ್ರಗಳಿಗಿಂತ ಭಿನ್ನವಾಗಿ ನಿಲ್ಲಿಸುತ್ತದೆ.
ಸಾಮಾನ್ಯವಾಗಿ ತುಳು ಚಿತ್ರಗಳೆಂದರೆ ಅದೇ ಕಾಮೆಡಿ, ಪುಗ್ಸಟ್ಟೆ ಕತೆಯ ಹಿಂದೆ ಓಡುವ ಪಾತ್ರಗಳಷ್ಟೇ ಇರುತ್ತವೆ. ಆದರೆ, ಮಲಯಾಳಂ ಚಿತ್ರಗಳ ರೀತಿ ಇಲ್ಲಿನ ಪಾತ್ರಗಳೇ ಮಾತಾಡುತ್ತವೆ. ಗಟ್ಟಿ ಕತೆಯಿಲ್ಲದಿದ್ದರೂ ಆ ಕಾಲದ ಚಿತ್ರಣವನ್ನು ಗಟ್ಟಿದನಿಯಲ್ಲಿ ಕೊರಮ್ಮ ತೋರಿಸಿದೆ. ಹಳೆಕಾಲದ ಮನೆ, ಮನೆಯಾಳು ಒಡೆಯನ ಮೇಲಿರಿಸುವ ನಂಬಿಕೆ ಹಾಗೂ ಅವರ ನಡುವಿನ ಜಾತಿ ಮೀರಿದ ಬಾಂಧವ್ಯದ ಚಿತ್ರಣವನ್ನು ಕೊರಮ್ಮ ಚಿತ್ರ ಯಶಸ್ವಿಯಾಗಿ ಕಟ್ಟಿಕೊಡುತ್ತದೆ. ತುಳುನಾಡಿನಲ್ಲಿ ಅಂದರೆ, ಕಾಸರಗೋಡು ಜಿಲ್ಲೆಯ ಬಂದಡ್ಕದಿಂದ ಹಿಡಿದು ಉಡುಪಿ, ಕುಂದಾಪುರದ ವರೆಗೂ ಈ ರೀತಿಯ ಚಿತ್ರಣ ಪ್ರತಿ ಊರುಗಳಲ್ಲಿ ಸಿಗುವಂಥದ್ದು. ಮನೆಯಲ್ಲಿ ಪತ್ನಿ ಇದ್ದರೂ, ಆಕೆಯ ಬಗ್ಗೆ ತಾತ್ಸಾರ ಭಾವನೆ. ಪಕ್ಕದ ಮನೆಯಲ್ಲೋ, ಮನೆಯಾಳಾಗಿ ಬರುವ ಕೆಳವರ್ಗದ ಹೆಂಗಳೆಯರಲ್ಲೋ ಕಾಮದ ತೀಟೆ ತೀರಿಸುವುದು. ಈ ಚಿತ್ರದಲ್ಲಿ ಆಳಿನ ಜೊತೆಗೆ ಬೋಂಟೆಗೆ ಹೋಗುವ ನೆಪದಲ್ಲಿ ಮತ್ತೊಬ್ಬಳ ತೆಕ್ಕೆಯಲ್ಲಿ ರಾತ್ರಿ ಕಳೆಯುವ ಮನೆಮಾಲೀಕ. ಪತ್ನಿಗೆ ಗಂಡನ ಹಕೀಕತ್ತು ತಿಳಿದಿದ್ದರೂ, ಧ್ವನಿ ಎತ್ತಲಾಗದೆ ಗೊಣಗುತ್ತಾ ಎಲ್ಲವನ್ನೂ ನುಂಗಿಕೊಂಡು ಅಡಿಯಾಳಿನಂತೆ ಇದ್ದುಬಿಡುವುದು. ಸಮಾಜದ ಎದುರಲ್ಲಿ ಮಾತ್ರ ಗೈರತ್ತು ತೋರಿಸುತ್ತ ಕೆಳವರ್ಗದ ಮನೆಯಾಳನ್ನು ಅಂಗಳದಲ್ಲೇ ಇರಿಸುವ ಪದ್ಧತಿ. ಇವೆಲ್ಲ ಸಹಜ ಚಿತ್ರಣವೆಂದು ಕಂಡರೂ ಹಳೆಕಾಲದ ನೈಜತೆಯನ್ನು ತೋರಿಸಿದ್ದರಿಂದ ಚಿತ್ರವು ಡಾಕ್ಯುಮೆಂಟರಿ ರೀತಿ ಕಾಣುತ್ತದೆ.
ಚಿತ್ರದಲ್ಲಿ ಎದ್ದು ಕಂಡ ಪಾತ್ರಗಳೆಂದರೆ, ಕೊರಮ್ಮ, ಆತನ ಪತ್ನಿ ಕೊರಪೋಳು ಮತ್ತು ಮನೆ ಮಾಲೀಕನ ಪತ್ನಿಯದ್ದು. ಕೊರಮ್ಮ ಪಾತ್ರಧಾರಿ ಮೋಹನ್ ಶೇಣಿ ಕೆಲವು ಕಡೆಗಳಲ್ಲಿ ಪರಕಾಯ ಪ್ರವೇಶ ಮಾಡಿದ ರೀತಿ ಅದ್ಭುತವಾಗಿ ನಟಿಸಿದ್ದಾರೆ. ಮನೆಯೊಡೆಯ ಸತ್ತಿದ್ದಾನೆ ಅನ್ನುವುದನ್ನು ನಂಬಲಾಗದೆ, ಮನೆಯವರು ಹೇಳಿದರೂ ಅರಗಿಸಿಕೊಳ್ಳಲಾಗದೆ ಮನೆಯಿಂದ ಮನೆಗೆ ವಿಷಯ ತಿಳಿಸಲು ಓಡುವುದು, ಕಡೆಗೆ ತನಗೆ ಮುಖ ತೋರಿಸಲೂ ಬಿಡದೆ ಮನೆ ಮಾಲೀಕನ ಹೆಣ ಸುಡುವುದು, ಕೊನೆಗೆ ತನ್ನನ್ನು ಮನೆ ಮಗ ಕೆಲಸ ಮಾಡಲಾಗದವ ಎಂದು ಜರೆದಿದ್ದನ್ನು ಕೇಳಿ ಮಾನಸಿಕವಾಗಿ ನೊಂದುಕೊಂಡು ಅತಿರೇಕದಿಂದ ವರ್ತಿಸುವುದು, ಶ್ರಮಜೀವಿಯ ಪ್ರಾಮಾಣಿಕತೆಗೆ ಪೆಟ್ಟು ಬಿದ್ದಾಗ ವರ್ತಿಸುವ ಸಹಜ ಚಿತ್ರಣ ಮಾರ್ಮಿಕವಾಗಿ ಕಾಣುತ್ತದೆ. ಅಲ್ಲಿ ಆತನಿಗೆ ತಿರುಗಿ ಬೀಳಲಂತೂ ಆಗುವುದಿಲ್ಲ. ತಾನೊಬ್ಬ ನಿಷ್ಠಾವಂತ ಸೇವಕ ಅನ್ನುವುದನ್ನು ತೋರಿಸಲು ಶಕ್ತಿ ಮೀರಿ ಕಟ್ಟಿಗೆ ಒಡೆಯುವ ಕೆಲಸ ಮಾಡಲು ಹೋಗಿ ಅಲ್ಲಿಯೇ ನೆಲಕ್ಕೆ ಉರುಳುತ್ತಾನೆ. ದೈತ್ಯ ದೇಹ ಎದೆ ಬಡಿದುಕೊಂಡು ನೆಲಕ್ಕೆ ಬಿದ್ದು ಪ್ರಾಣ ಬಿಡುವುದನ್ನು ನೋಡಿದರೆ ಆತನ ಚಿತ್ರಣವೇ ಮಾರ್ಮಿಕ ಅನಿಸುತ್ತದೆ.
ಆನಂತರ, ಮನೆಯಾಕೆ (ರೂಪಶ್ರೀ ವರ್ಕಾಡಿ) ಆಳಿನ ಮೇಲೆ ಕೈಮಾಡಿದ ಮಗನಿಗೆ ಕಪಾಳಕ್ಕೆ ಬಾರಿಸಿ ಬುದ್ಧಿ ಹೇಳುವುದು, ಮನೆಯಾಳು ಕೊರಮ್ಮ ಎಷ್ಟು ನಿಷ್ಠಾವಂತ ಮತ್ತು ಒಡೆಯನನ್ನು ಎಷ್ಟು ಬಾರಿ ಸಾವಿನಿಂದ ರಕ್ಷಿಸಿದ್ದಾನೆಂದು ತಿಳಿ ಹೇಳುವುದು ಅಲ್ಲಿ ಕೇವಲ ಕಾರ್ಮಿಕನ ಶೋಷಣೆಯದ್ದು ಮಾತ್ರವಲ್ಲ, ಮೇಲ್ವರ್ಗದ ಮನೆಯೊಡತಿ, ಕೆಳವರ್ಗದ ನಿಷ್ಠಾವಂತ ಸೇವಕನ ಬಗ್ಗೆ ಮಮಕಾರ ಇಟ್ಟುಕೊಂಡಿದ್ದನ್ನು ತಿಳಿಸುತ್ತದೆ. ಆ ಸಂದರ್ಭದಲ್ಲಿ ಕೊರಮ್ಮನನ್ನು ಆತ ಒಡೆದ ಕಟ್ಟಿಗೆಯಿಂದಲೇ ಮಣ್ಣು ಮಾಡುತ್ತಾರೋ ಅನ್ನುವಂತೆ ತೋರುತ್ತದೆ. ಆದರೆ ಮನೆಮಾಲೀಕನ ಸಮಾಧಿ ಪಕ್ಕದಲ್ಲೇ ಹೂಳುವುದನ್ನು ತೋರಿಸಿ ಕೆಳವರ್ಗದ ಪದ್ಧತಿಯನ್ನು ಚಿತ್ರದಲ್ಲಿ ಸಹಜದ ರೀತಿ ಕಾಣಿಸಿದ್ದಾರೆ.
ಕೊರಮ್ಮ ಸತ್ತಾಗ ಬೊಬ್ಬೆ ಹಾಕುತ್ತಾ ಓಡಿಕೊಂಡು ಬರುವ ಪತ್ನಿ ಕೊರಪೋಳು(ಬಿಂದು ರಕ್ಸಿದಿ) ಪಾತ್ರವೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಿದೆ. ಕೊನೆಯಲ್ಲಿ ಮನೆಯಾಕೆ, ಕೊರಮ್ಮನ ಬಗ್ಗೆ ಹೇಳುವಾಗ ನಾವು ಕಷ್ಟ ಬಂದಾಗ ಅವರ ಜಾತಿ ನೋಡುವುದಿಲ್ಲ. ಮಗು ಎದೆಹಾಲು ಇಲ್ಲದೆ ಸಾಯುತ್ತೆ ಅನ್ನುವಾಗ ಕೀಳು ಜಾತಿಯವಳದ್ದೂ ಎದೆಹಾಲನ್ನು ಕುಡಿಸುತ್ತೇವೆ. ಗಂಡನಿಗೆ ಆರೋಗ್ಯ ಕೆಟ್ಟಾಗ ಅದೇ ಕೊರಮ್ಮ ತನ್ನ ಪ್ರಾಣ ಪಣಕ್ಕಿಟ್ಟು ಕಾಡಿನಿಂದ ಬೇರುಗಳನ್ನು ತರುವ ಚಿತ್ರಣ, ಸಮಾಜದಲ್ಲಿ ಮಾತ್ರ ಗಾಂಭೀರ್ಯ ಇದ್ದರೆ ಸಾಕು. ಮನೆಯೊಳಗೆ ಬೇಡ. ಆಳಿಗೂ ಗೌರವ ಇದೆ, ಆತನಿಗೂ ಅನ್ನ ಕೊಟ್ಟು ಸಾಕಿದ್ದೇನೆ, ಆತನೂ ನಮ್ಮ ಮನೆಯ ಸದಸ್ಯ ಎನ್ನುವ ಮಾತು ಜಾತಿ ವ್ಯವಸ್ಥೆ, ಮೇಲು ಕೀಳಿನ ಸಮಾಜದಲ್ಲಿ ಬಾಂಧವ್ಯದ ಹೊಳಹನ್ನು ನೀಡುತ್ತದೆ.
ಕಮರ್ಶಿಯಲ್ ಚಿತ್ರದ ರೀತಿ ನೋಡಿದರೆ, ಏನೂ ಇಲ್ಲ ಅನ್ನುವ ಭಾವ ಬಂದರೂ ಹಳೆಕಾಲದ ಹಳ್ಳಿಯ ಚಿತ್ರಣ ಕಟ್ಟಿಕೊಡುವಲ್ಲಿ ಕೊರಮ್ಮ ಯಶಸ್ವಿಯಾಗಿದೆ. ಹೀಗಾಗಿ ಚಿತ್ರ ಎಷ್ಟು ಕಾಸು ಮಾಡೀತು ಅನ್ನುವುದಕ್ಕಿಂತಲೂ ಶಿವಧ್ವಜ್ ಶೆಟ್ಟಿ ಸೃಷ್ಟಿಸಿದ ಪಾತ್ರಗಳಂತೂ ಇಲ್ಲಿ ಮಾತಾಡುತ್ತವೆ. ಮುಜುಗರ ಸೃಷ್ಟಿಸುವ ಮನೆಯೊಡೆಯ ಇನ್ನೊಬ್ಬಳ ತೆಕ್ಕೆಯಲ್ಲಿ ಜಾರುವ ದೃಶ್ಯ ಮತ್ತು ಮದುವೆಯದ್ದು ಸಹಜ ಚಿತ್ರಣವೇ ಆಗಿದ್ದರೂ ಬೋರ್ ಹೊಡೆಸುವುದನ್ನು ತಪ್ಪಿಸಿ ಅಲ್ಲೊಂದು ಗಟ್ಟಿ ಕತೆಯನ್ನು ಕೊಡುತ್ತಿದ್ದರೆ ಚಿತ್ರ ಇನ್ನಷ್ಟು ಸ್ಫುಟವಾಗಿ ಬರುತ್ತಿತ್ತು ಅನ್ನುವ ಭಾವವೂ ನೋಡುಗನಲ್ಲಿ ಬರುತ್ತದೆ. ಒಟ್ನಲ್ಲಿ ನಲ್ವತ್ತೈವತ್ತು ವರ್ಷಗಳ ಹಿಂದಿನ ನಾಡಿನ ಸಹಜ ಚಿತ್ರಣವನ್ನು ತಿಳಿಯಬೇಕಿದ್ದರೆ, ತುಳುವರು ಕೊರಮ್ಮ ಚಿತ್ರವನ್ನೊಮ್ಮೆ ನೋಡಬೇಕು. ಮಲಯಾಳಂ ಭಾಷೆಯಲ್ಲಿ ಮಾತ್ರ ಬರಬಲ್ಲ ಇಂತಹ ಕಲಾತ್ಮಕ ಚಿತ್ರಗಳಿಗೆ ತುಳುವಿನಲ್ಲೂ ನೋಡುಗರು ಸೃಷ್ಟಿಯಾಗಬೇಕು.
‘Koramma’ Tulu film written and directed by Shivadhwaj Shetty who has been serving in Kannada and Tulu film industry as actor, director and producer for the last 25 years. Koramma works for village head Manjayya Heggade as his right hand man and believes that he will not have an identity if he leaves the job. The son of Manjayya Heggade dislikes Koramma. Koramma does not plan to get married unless the son of Manjayya Heggade does not get married. The conditions the relationship between the employer and the worker changes is the story of the film.
14-06-25 11:05 pm
Bangalore Correspondent
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
ಕಾರವಾರ ಜಿಲ್ಲಾ ಆಸ್ಪತ್ರೆಗೆ ನುಗ್ಗಿದ್ದ ಚರಂಡಿ ನೀರು...
12-06-25 11:07 pm
14-06-25 12:00 pm
HK News Desk
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
ಇರಾನ್ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ; ಅಣ್ವಸ್ತ್ರ...
13-06-25 02:14 pm
15-06-25 03:20 pm
Mangalore Correspondent
Mangalore Rain, Compound Wall Collapsed Video...
15-06-25 12:12 pm
Rahiman Murder, Senior Advocate Balan, Mangal...
14-06-25 10:21 pm
Mangalore Heavy Rain, Traffic, Pumpwell: ಒಂದೇ...
14-06-25 09:00 pm
Bangalore RCB Stampede, Veerappa Moily: ಕಾಲ್ತ...
14-06-25 02:49 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm