ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ ; ಕೂಡಲೇ ಕಣಿವೆ ತೊರೆದು ಹೋಗಿ, ಇಲ್ಲದಿದ್ದರೆ ಪರಿಣಾಮ ಎದುರಿಸಿ ಎಂದು ಎಚ್ಚರಿಕೆ, ಪ್ರಧಾನಿ ಪ್ಯಾಕೇಜ್ ನಲ್ಲಿ ಬಂದಿದ್ದವರಿಗೆ ಆತಂಕ, ರಜೆ ಮೇಲೆ ತೆರಳಿದ ಸರ್ಕಾರಿ ನೌಕರರು !

11-08-26 04:32 pm       HK News Staffer   ದೇಶ - ವಿದೇಶ

ಕಾಶ್ಮೀರ ಕಣಿವೆಯಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರಿಗೆ ಉಗ್ರ ಸಂಘಟನೆಯೊಂದರಿಂದ ಆನ್‌ಲೈನ್‌ನಲ್ಲಿ ಬೆದರಿಕೆ ಸಂದೇಶಗಳು ಬಂದಿದ್ದು ಕೂಡಲೇ ಕಣಿವೆ ತೊರೆಯುವಂತೆ ಸೂಚಿಸಲಾಗಿದೆ. ಇದರ ಕುರಿತು ಸಮಗ್ರ ತನಿಖೆ ನಡೆಸುವಂತೆ ಕಾಶ್ಮೀರಿ ಪಂಡಿತರ ಸಂಘಟನೆಯಾದ 'ಪನೂನ್ ಕಾಶ್ಮೀರ' ಆಗ್ರಹಿಸಿದೆ.

ನವದೆಹಲಿ, ಆ.11: ಕಾಶ್ಮೀರ ಕಣಿವೆಯಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರಿಗೆ ಉಗ್ರ ಸಂಘಟನೆಯೊಂದರಿಂದ ಆನ್‌ಲೈನ್‌ನಲ್ಲಿ ಬೆದರಿಕೆ ಸಂದೇಶಗಳು ಬಂದಿದ್ದು ಕೂಡಲೇ ಕಣಿವೆ ತೊರೆಯುವಂತೆ ಸೂಚಿಸಲಾಗಿದೆ. ಇದರ ಕುರಿತು ಸಮಗ್ರ ತನಿಖೆ ನಡೆಸುವಂತೆ ಕಾಶ್ಮೀರಿ ಪಂಡಿತರ ಸಂಘಟನೆಯಾದ 'ಪನೂನ್ ಕಾಶ್ಮೀರ' ಆಗ್ರಹಿಸಿದೆ.

'ಯುನೈಟೆಡ್ ಲಿಬರೇಶನ್ ಕೌನ್ಸಿಲ್' ಹೆಸರಿನಲ್ಲಿ ಆಗಸ್ಟ್ 7ರಂದು ಹೊರಡಿಸಲಾದ ಪತ್ರದಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ ನಿರ್ದಿಷ್ಟ ವ್ಯಕ್ತಿಗಳ ಹೆಸರುಗಳು ಹಾಗೂ ಅವರ ಮೊಬೈಲ್ ಸಂಖ್ಯೆಗಳನ್ನು ಬಹಿರಂಗಪಡಿಸಲಾಗಿದೆ. ಮುಸ್ಲಿಂ ಬಾಹುಳ್ಯ ಇರುವ ಕಾಶ್ಮೀರಿ ಕಣಿವೆ ಪ್ರದೇಶವನ್ನು ಕೂಡಲೇ ತೊರೆದು ಹೋಗಿ, ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಬೆದರಿಕೆ ಹಾಕಲಾಗಿದ್ದು ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನ ಮಂತ್ರಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಲವು ಪಂಡಿತ್ ಸಮುದಾಯದ ಸರ್ಕಾರಿ ನೌಕರರು ಭಯದಿಂದ ರಜೆ ಮೇಲೆ ತೆರಳಿದ್ದಾರೆ ಹಾಗೂ ಕಣಿವೆಯಿಂದ ತಾತ್ಕಾಲಿಕವಾಗಿ ಹೊರ ಬಂದಿದ್ದಾರೆ.

ಪಂಡಿತ ಸಮುದಾಯವನ್ನು ಪ್ರತಿನಿಧಿಸುವ ಪನೂನ್ ಕಾಶ್ಮೀರ ಸಂಘಟನೆಯ ಸಂಚಾಲಕ ಅಗ್ನಿಶೇಖರ್ ಅವರು, ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಮನೋಜ್ ಸಿನ್ಹಾ ಅವರು ತಕ್ಷಣವೇ ಪೋಲಿಸ್ ಮತ್ತು ಭದ್ರತಾ ಸಂಸ್ಥೆಗಳಿಗೆ ಈ ಕುರಿತು ಸಮಗ್ರ ತನಿಖೆ ನಡೆಸಲು ಮತ್ತು ಸಂತ್ರಸ್ತರಿಗೆ ಭದ್ರತೆ ಒದಗಿಸಲು ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.

ಮನೋವೈಜ್ಞಾನಿಕ ದಾಳಿಯೇ, ನೈಜ ಬೆದರಿಕೆಯೇ? 

ಅಗ್ನಿಶೇಖರ್ ಅವರ ಪ್ರಕಾರ, "ಈ ಬೆದರಿಕೆಯು ಸಾಮಾನ್ಯ ಎಚ್ಚರಿಕೆಯಷ್ಟೇ ಅಲ್ಲದೆ, ವ್ಯಕ್ತಿಗಳ ಹೆಸರು, ಅವರ ಕುಟುಂಬ, ಕೆಲಸ ಮಾಡುವ ಸ್ಥಳ ಮತ್ತು ದೂರವಾಣಿ ಸಂಖ್ಯೆಗಳನ್ನು ಒಳಗೊಂಡಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ. ಭಯೋತ್ಪಾದಕರು ನಿಜವಾಗಿಯೂ ಈ ಮಾಹಿತಿಯನ್ನು ಹೊಂದಿದ್ದಾರೆಯೇ ಅಥವಾ ಇದು ಜನರ ಮನಸ್ಸಿನಲ್ಲಿ ಭಯ ಹುಟ್ಟಿಸುವ 'ಸೈಕಾಲಜಿಕಲ್ ವಾರ್‌ಫೇರ್' (ಮನೋವೈಜ್ಞಾನಿಕ ಯುದ್ಧ) ತಂತ್ರವೇ ಎಂಬುದನ್ನು ಭದ್ರತಾ ಸಂಸ್ಥೆಗಳು ತನಿಖೆ ಮಾಡಬೇಕಿದೆ" ಎಂದು ಹೇಳಿದ್ದಾರೆ.

ಕಳೆದ 20 ದಿನಗಳಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ಒಬ್ಬ ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ಹೊರ ರಾಜ್ಯದ ಕಾರ್ಮಿಕರನ್ನು ಹತ್ಯೆ ಮಾಡಿದ್ದರು. ಈ ಘಟನೆಗಳ ಬೆನ್ನಲ್ಲೇ ಹೊಸ ಬೆದರಿಕೆ ಪತ್ರ ಬಂದಿರುವುದು ಕಣಿವೆಯಲ್ಲಿ ಆತಂಕವನ್ನು ಹೆಚ್ಚಿಸಿದೆ. ಮತ್ತೊಂದೆಡೆ, ನಿಷೇಧಿತ 'ಜಮಾತ್-ಎ-ಇಸ್ಲಾಮಿ' (JeI) ಸಂಘಟನೆಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಉತ್ತರ ಕಾಶ್ಮೀರದ ಸೊಪೋರ್‌ನ 26 ಸ್ಥಳಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು UAPA ಕಾಯ್ದೆಯಡಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿ, ಪ್ರಮುಖ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.