Dharmasthala, Dk Shivakumar, Pralhad Joshi: ಧರ್ಮಸ್ಥಳ ಷಡ್ಯಂತ್ರ ಡಿಸಿಎಂಗೆ ಗೊತ್ತಾಗಿದ್ದು ಮುಖ್ಯಮಂತ್ರಿಗೆ ಗೊತ್ತಾಗಲಿಲ್ಲವೇ..? ಮಸಿ ಬಳಿಯಲು ಸರ್ಕಾರದ್ದೇ ಸಾಥ್ ಇದೆಯೇ ? 

16-08-25 03:34 pm       HK News Desk   ದೇಶ - ವಿದೇಶ

ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದು, ಆತುರದಲ್ಲಿ ಎಸ್ಐಟಿ ರಚಿಸಿದ್ದರ ಹಿಂದೆ ರಾಜ್ಯ ಸರ್ಕಾರದ್ದೇ ಷಡ್ಯಂತ್ರ ಇದೆಯೇ? ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಪ್ರಲ್ಹಾದ ಜೋಶಿ ಕುಟುಕಿದ್ದಾರೆ.

ನವದೆಹಲಿ, ಆ.16: ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದು, ಆತುರದಲ್ಲಿ ಎಸ್ಐಟಿ ರಚಿಸಿದ್ದರ ಹಿಂದೆ ರಾಜ್ಯ ಸರ್ಕಾರದ್ದೇ ಷಡ್ಯಂತ್ರ ಇದೆಯೇ? ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಪ್ರಲ್ಹಾದ ಜೋಶಿ ಕುಟುಕಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ, ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಇರುವುದು ಡಿಸಿಎಂಗೆ ಗೊತ್ತಿದೆ ಅಂದಮೇಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಾಗದೇ ಹೋಯಿತೇ? ಎಂದು ಪ್ರಶ್ನಿಸಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಅನಾಮಿಕನ ಆರೋಪದ ಬಗ್ಗೆ ರಾಜ್ಯ ಸರ್ಕಾರ, ಆತುರದಲ್ಲಿ ಎಸ್ಐಟಿ ರಚಿಸುವ ಅವಶ್ಯಕತೆ ಏನಿತ್ತು? ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನಿಖೆಗೆ ಒತ್ತಡ ಹೆಚ್ಚಿದ್ದರಿಂದ ರಾಜ್ಯ ಸರ್ಕಾರ SIT ತನಿಖೆಗೆ ಆದೇಶಿಸಿತ್ತು. ಆದರೆ‌, ಆತುರದಲ್ಲಿ ಇಂಥ ನಿರ್ಧಾರ ತೆಗೆದುಕೊಂಡು ಧರ್ಮಸ್ಥಳಕ್ಕೆ ಕಪ್ಪು ‌ಮಸಿ ಬಳಿಯುವ ಯತ್ನಕ್ಕೆ ಸರ್ಕಾರವೂ ಸಾಥ್ ನೀಡಿದೆಯೇ? ಇದರಲ್ಲಿ ಸರ್ಕಾರದ್ದೇ ಷಡ್ಯಂತ್ರ ಏನಾದರೂ ಇದೆಯೇ? ಎಂದು ಜೋಷಿ ಪ್ರಶ್ನೆ ಮಾಡಿದ್ದಾರೆ. 

ಡಿಸಿಎಂ ಡಿಕೆ ಶಿವಕುಮಾರ್ ಧರ್ಮಸ್ಥಳ ವಿಚಾರ ಅಧಿವೇಶನದಲ್ಲಿ ಚರ್ಚೆಯಾದಾಗ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ. ಒಳ್ಳೇ ಯೋಜನೆ, ತಂತ್ರಗಾರಿಕೆ ಹೆಣೆದು ಕಪ್ಪು ಚುಕ್ಕೆ ತರಲು ನೋಡುತ್ತಿದ್ದಾರೆ. ಆದರೆ, ಯಾರು? ಏನು? ಅಂತ ಮಾತನಾಡಲು ಹೋಗುವುದಿಲ್ಲ. ತೇಜೋವಧೆ ಮೂಲಕ ನೂರಾರು ವರ್ಷಗಳ ಪರಂಪರೆ ಹಾಳು ಮಾಡಲು ಹೊರಟಿದ್ದಾರೆ ಎಂದಿದ್ದರು. ಡಿಸಿಎಂಗೆ ಗೊತ್ತಿರುವ ಈ ವಿಚಾರ ಸಿಎಂಗೆ ಗೊತ್ತಾಗಿರಲಿಲ್ಲವೇ? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್​ ಹೇಳುವಂತೆ ಷಡ್ಯಂತ್ರ ನಡೆಯುತ್ತಿದೆ ಎಂಬ ವಿಚಾರ ಗೊತ್ತಾದ ಮೇಲೂ ಸಿಎಂ ಸಿದ್ದರಾಮಯ್ಯ ಅವರು ತನಿಖೆಗೆ SIT ರಚಿಸಿದ್ದೇಕೆ? ಇಷ್ಟೆಲ್ಲಾ ಹೈಡ್ರಾಮಾ ಮಾಡುವ ಪ್ರಸಂಗವಾದರೂ ಏನಿತ್ತು? ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.

Union Minister for Consumer Affairs and Public Distribution Pralhad Joshi has lashed out at the Karnataka government, raising sharp questions in response to Deputy Chief Minister D.K. Shivakumar’s recent statement regarding a “conspiracy” against Dharmasthala.