Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾಟೆ ; ತನಿಖಾಧಿಕಾರಿಯೇ ಸ್ಥಳಕ್ಕೆ ಹೋಗಿಲ್ಲ , ವರದಿ ಟ್ರಾನ್ಸ್‌ಲೇಟ್‌ ಮಾಡಿದ್ದನ್ನ ಬಿಟ್ಟು ಮತ್ತೇನು ಮಾಡಿದ್ದೀರಿ, ಮರು ತನಿಖೆ ಆದೇಶ ಕಾಯ್ದಿರಿಸಿದ ಸುಪ್ರೀಂ

22-07-26 06:00 pm       HK News Staffer   ಕರ್ನಾಟಕ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ, ಸುಪ್ರೀಂ ಕೋರ್ಟ್ ಮರು ತನಿಖೆಯ ಅಗತ್ಯವನ್ನು ಒಪ್ಪಿಕೊಂಡಿದ್ದು, ಯಾವ ಮಾದರಿಯ ತನಿಖೆ ನಡೆಸಬೇಕು ಎಂಬ ಕುರಿತು ಅಂತಿಮ ಆದೇಶವನ್ನು ಕಾಯ್ದಿರಿಸಿದೆ.

ನವದೆಹಲಿ, , ಜು.22: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ, ಸುಪ್ರೀಂ ಕೋರ್ಟ್ ಮರು ತನಿಖೆಯ ಅಗತ್ಯವನ್ನು ಒಪ್ಪಿಕೊಂಡಿದ್ದು, ಯಾವ ಮಾದರಿಯ ತನಿಖೆ ನಡೆಸಬೇಕು ಎಂಬ ಕುರಿತು ಅಂತಿಮ ಆದೇಶವನ್ನು ಕಾಯ್ದಿರಿಸಿದೆ.

ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ ನಡೆಸಿತು. ವಿಚಾರಣೆ ವೇಳೆ ಸಿಬಿಐ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ತನಿಖಾಧಿಕಾರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡದಿರುವುದನ್ನು ಪ್ರಶ್ನಿಸಿ ಸಿಬಿಐ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.

"14 ವರ್ಷ ಕಳೆದರೂ ಸಮರ್ಪಕ ತನಿಖೆಯಾಗಿಲ್ಲ. ಸಾಕ್ಷ್ಯಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅಂತಿಮ ಆದೇಶದ ಬಳಿಕ ಮಧ್ಯಂತರ ವರದಿಯನ್ನೂ ಕೇಳುತ್ತೇವೆ. ಎಸ್‌ಐಟಿ ರಚನೆಯ ಬಗ್ಗೆ ನಾವು ನಿರ್ಧಾರ ಕೈಗೊಳ್ಳುತ್ತೇವೆ," ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.

ಪ್ರಕರಣದ ಮರು ತನಿಖೆಯನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸುವಂತೆ ಸೌಜನ್ಯ ಅವರ ತಾಯಿ ಮನವಿ ಸಲ್ಲಿಸಿದ್ದು, ಮತ್ತೊಂದೆಡೆ ಎಸ್‌ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

ವಿಚಾರಣೆ ವೇಳೆ, ರಾಜ್ಯ ಸರ್ಕಾರ ಎಸ್‌ಐಟಿ ರಚನೆಗೆ ಸಮ್ಮತಿ ಸೂಚಿಸಿರುವುದನ್ನು ದಾಖಲಿಸಿಕೊಂಡ ನ್ಯಾಯಪೀಠ, ಅಂತಿಮವಾಗಿ ಯಾವ ತನಿಖಾ ಸಂಸ್ಥೆ ಅಥವಾ ಯಾವ ಮಾದರಿಯ ತನಿಖೆ ನಡೆಯಬೇಕು ಎಂಬುದನ್ನು ಆದೇಶದಲ್ಲಿ ಸ್ಪಷ್ಟಪಡಿಸಲಾಗುವುದು ಎಂದು ತಿಳಿಸಿದೆ.

ಸಿಬಿಐ ವಿರುದ್ಧ ಕಿಡಿಕಾರಿದ ಸುಪ್ರೀಂ;

ವಿಚಾರಣೆ ವೇಳೆ ಸಿಬಿಐ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್, "14 ವರ್ಷಗಳಿಂದ ಸಮರ್ಪಕ ತನಿಖೆ ನಡೆದಿಲ್ಲ. ಸಿಐಡಿ ವರದಿಯನ್ನು ಕೇವಲ ಭಾಷಾಂತರ ಮಾಡಲಾಗಿದೆ. ತನಿಖಾಧಿಕಾರಿಯೇ ಘಟನಾ ಸ್ಥಳಕ್ಕೆ ಹೋಗಿಲ್ಲ. ಕೆಳ ನ್ಯಾಯಾಲಯದಲ್ಲಿ ಇನ್ನೂ ಕೆಲವರ ವಿರುದ್ಧ ತನಿಖೆ ನಡೆಸಬೇಕು ಎಂದು ಇದೇ ಸಿಬಿಐ ಹೇಳಿತ್ತು. ಈಗ ಸಿಬ್ಬಂದಿ ಹಾಗೂ ಹಣಕಾಸಿನ ಕೊರತೆಯನ್ನು ನೆಪವಾಗಿ ಹೇಳುವುದು ಸಮಂಜಸವಲ್ಲ," ಎಂದು ಕಿಡಿಕಾರಿತು.

ಈ ಮೂಲಕ, ದೇಶದ ಗಮನ ಸೆಳೆದಿರುವ ಸೌಜನ್ಯ ಪ್ರಕರಣದಲ್ಲಿ ಮರು ತನಿಖೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದ್ದು, ಅಂತಿಮ ಆದೇಶದ ಮೇಲೆ ಮುಂದಿನ ತನಿಖೆಯ ದಿಕ್ಕು ನಿರ್ಧಾರವಾಗಲಿದೆ.