Five Tigers Die Male Mahadeshwara Forest: ಮಲೆಮಹದೇಶ್ವರ ಅರಣ್ಯದಲ್ಲಿ ಐದು ಹುಲಿಗಳ ಸಾವು ; ಹಸುವಿನ ಮಾಂಸದಲ್ಲಿ ವಿಷ ಇರಿಸಿದ್ದೇ ಸಾವಿಗೆ ಕಾರಣ, ಮರಣೋತ್ತರ ಪರೀಕ್ಷೆಯಲ್ಲಿ ದೃಢ, ಆರು ದನಗಾಹಿಗಳು ವಶಕ್ಕೆ, ಸ್ಥಳದಲ್ಲಿ ಬೀಡುಬಿಟ್ಟ ಅರಣ್ಯಾಧಿಕಾರಿಗಳು

27-06-25 02:46 pm       HK News Desk   ಕರ್ನಾಟಕ

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ವನ್ಯಧಾಮದ ಕಾಡಿನಲ್ಲಿ ನಾಲ್ಕು ಮರಿಗಳು ಸೇರಿ ಐದು ಹುಲಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿ ನೇತೃತ್ವದ ತಂಡದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಡಾಗ್ ಸ್ಕ್ವಾಡ್ ಸೇರಿದಂತೆ ವಿವಿಧ ತನಿಖಾ ತಂಡದ ಸದಸ್ಯರು ಆಗಮಿಸಿದ್ದು, ಆಸುಪಾಸಿನ ಕೊಪ್ಪ, ಗಾಜನೂರು ಹಾಗೂ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು, ಜೂನ್ 27 : ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ವನ್ಯಧಾಮದ ಕಾಡಿನಲ್ಲಿ ನಾಲ್ಕು ಮರಿಗಳು ಸೇರಿ ಐದು ಹುಲಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿ ನೇತೃತ್ವದ ತಂಡದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಡಾಗ್ ಸ್ಕ್ವಾಡ್ ಸೇರಿದಂತೆ ವಿವಿಧ ತನಿಖಾ ತಂಡದ ಸದಸ್ಯರು ಆಗಮಿಸಿದ್ದು, ಆಸುಪಾಸಿನ ಕೊಪ್ಪ, ಗಾಜನೂರು ಹಾಗೂ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಇದೇ ವೇಳೆ, ಹುಲಿಗಳ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ವಿಷ ಹಾಕಿದ್ದ ಹಸುವಿನ ಮಾಂಸವನ್ನು ತಿಂದು ಹುಲಿಗಳು ಸಾವನ್ನಪ್ಪಿದ್ದಾಗಿ ಮಾಹಿತಿ ಲಭಿಸಿದೆ. ಮೃತಪಟ್ಟ ತಾಯಿ ಹುಲಿಗೆ ಎಂಟು ವರ್ಷ ಹಾಗೂ ನಾಲ್ಕು ಮರಿಗಳಿಗೆ ತಲಾ ಹತ್ತು ತಿಂಗಳು ಎಂಬುದನ್ನು ತನಿಖೆಯ ವೇಳೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ವಿಷ ಉಂಡಿದ್ದ ಹಸು ಅಥವಾ ಹಸುವಿನ ಮಾಂಸವನ್ನು ತಿಂದು ಹುಲಿಗಳು ಸಾವನ್ನಪ್ಪಿರುವುದು ಪರೀಕ್ಷಾ ವರದಿಯಲ್ಲಿ ಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದಲ್ಲದೆ, ಹುಲಿಗಳ ಅಂಗಾಂಗಗಳನ್ನು ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ರವಾನಿಸಲಾಗಿದೆ.

ಆಸುಪಾಸಿನ ಕಾಡಂಚಿನ ಗ್ರಾಮಗಳ ವ್ಯಾಪ್ತಿಯ ದನಗಾಹಿಗಳನ್ನು ಅರಣ್ಯ ಇಲಾಖೆಯ ಪೊಲೀಸರು ವಶಕ್ಕೆ ಪಡೆದಿದ್ದು, 26 ಮಂದಿಯನ್ನು ಪಟ್ಟಿ ಮಾಡಿಕೊಂಡಿದ್ದಾರೆ. ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪರಿಸರದ ನಿವಾಸಿಗಳು ದನದ ಮಾಂಸಕ್ಕೆ ವಿಷ ಹಾಕಿ, ಹುಲಿಗಳಿಗಾಗಿ ಇಟ್ಟಿದ್ದರೇ ಎನ್ನುವ ಅನುಮಾನಗಳಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಹುಲಿಗಳ ಸಾವಿನ ಪ್ರಕರಣ ಸಂಬಂಧಿಸಿ ವಿಶೇಷ ತಂಡದಿಂದ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದು, ಕಾಡಿನಲ್ಲಿ ಹುಲಿಗಳು ಸಾವನ್ನಪ್ಪಿರುವುದನ್ನು ಸರಕಾರ ಗಂಭೀರ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರದ ಮೂಲಕ ಲಿಖಿತ ಸೂಚನೆ ನೀಡಿದ್ದಾರೆ.

ಬಿಳಿಗಿರಿ ರಂಗನಾಥ ಸ್ವಾಮಿ ದೇವಲಾಯದ ವ್ಯಾಪ್ತಿಯ ಮೀಣ್ಯಂ ಅರಣ್ಯ ವಲಯ ಹುಲಿಗಳ ಸುರಕ್ಷಿತ ತಾಣವೂ ಹೌದು. ಆದರೆ ಇಂಥ ಹುಲಿಗಳ ರಕ್ಷಿತಾರಣ್ಯದಲ್ಲೇ ಐದು ಹುಲಿಗಳು ಒಂದೇ ದಿನ ಸಾವನ್ನಪ್ಪಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಒಂದೇ ದಿನ ಐದು ಹುಲಿ ಮೃತಪಟ್ಟಿರುವುದು ಅತ್ಯಂತ ಅಪರೂಪದ ಘಟನೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಈ ಹಿಂದೆ 2018ರಲ್ಲಿ ಬಂಡೀಪುರ ಹುಲಿ ರಕ್ಷಿತಾರಣ್ಯದ ಅಂಚಿನಲ್ಲಿ ಎರಡು ಹುಲಿಗಳು ಸಾವನ್ನಪ್ಪಿದ್ದವು. 2019ರಲ್ಲಿ ನಾಗರಹೊಳೆ ಕಾಡಂಚಿನಲ್ಲಿ ಕಾಡು ಹಂದಿಯನ್ನು ಕೊಲ್ಲಲು ಇಡಲಾಗಿದ್ದ ವಿಷಕ್ಕೆ ಹುಲಿ ಬಲಿಯಾಗಿತ್ತು. 2021ರಲ್ಲಿ ಉಡುಪಿ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ವಿಷ ತಿಂದು ಒಂದು ಹುಲಿ ಸಾವು ಕಂಡಿತ್ತು. 2022ರಲ್ಲಿ ತಮಿಳುನಾಡು ಮಧುಮಲೈ ಅರಣ್ಯ ವ್ಯಾಪ್ತಿಯಲ್ಲಿ ವಿಷಕ್ಕೆ ಎರಡು ಹುಲಿಗಳು ಬಲಿಯಾಗಿದ್ದವು.

ಈಗಿನ ಪ್ರಕರಣದಲ್ಲಿ ಅರಣ್ಯ ಇಲಾಖೆ ಸಿಬಂದಿಯ ನಿರ್ಲಕ್ಷ್ಯ ಮತ್ತು ಬೇಟೆಗಾರರ ಸಂಚು ಕೂಡ ಇದ್ದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೆ, ಸ್ಥಳೀಯವಾಗಿ ಹುಲಿಗಳ ಕಾಟ ಜೋರಾಗಿದ್ದರಿಂದ ಯಾರೋ ಮಾಂಸದಲ್ಲಿ ವಿಷ ಇರಿಸಿ ಹುಲಿ ಬರುವ ಜಾಗದಲ್ಲಿ ಇರಿಸಿದ್ದ ಅನುಮಾನವೂ ಇದೆ. ಮರಣೋತ್ತರ ಪರೀಕ್ಷೆಯಲ್ಲಿ ವಿಷದ ಮಾಂಸ ತಿಂದಿರುವುದು ಪತ್ತೆಯಾಗಿದ್ದರಿಂದ ಸ್ಥಳೀಯರ ಮೇಲೆ ಅನುಮಾನ ಹೆಚ್ಚಿದೆ. ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಗುರುವಾರ ಐದು ಹುಲಿಗಳು 50 ಮೀಟರ್ ಆಸುಪಾಸಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿತ್ತು. ‌

In a tragic incident that has shocked wildlife conservationists and authorities alike, five tigers—including four cubs—were found dead in the Male Mahadeshwara Hills Wildlife Sanctuary located in Chamarajanagar district. A preliminary post-mortem report has confirmed that the tigers died after consuming poisoned beef.