ನನ್ನ ಅಕ್ಕಿ, ತರಕಾರಿ ನಾನೇ ಬೆಳೆಯುತ್ತೇನೆ, ನೀವೂ ಬೆಳೆಯಿರಿ, ಆರೋಗ್ಯವಾಗಿರಿ ; ರೈತಪೀಠ ಪ್ರಶಸ್ತಿ ಪುರಸ್ಕೃತ ಬಿ.ಕೆ. ದೇವರಾಯ, ಸಂಜೀವಿನಿ ಗೋಧಾಮದಲ್ಲಿ ಕಾರ್ಯಕ್ರಮ

22-02-26 06:55 pm       Mangalore Correspondent   ಕರಾವಳಿ

“ನಾನು ಐದು ಎಕರೆ ಜಾಗದಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ಬೇಕಾಗುವ ಅಕ್ಕಿಯನ್ನು ಮತ್ತು ತರಕಾರಿಯನ್ನು ನಾನೇ ಬೆಳೆಯುತ್ತೇನೆ. ಯಾವುದೇ ರಾಸಾಯನಿಕ ಬಳಸುವುದಿಲ್ಲ.

ಕಾರ್ಕಳ, ಫೆ.21: “ನಾನು ಐದು ಎಕರೆ ಜಾಗದಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ಬೇಕಾಗುವ ಅಕ್ಕಿಯನ್ನು ಮತ್ತು ತರಕಾರಿಯನ್ನು ನಾನೇ ಬೆಳೆಯುತ್ತೇನೆ. ಯಾವುದೇ ರಾಸಾಯನಿಕ ಬಳಸುವುದಿಲ್ಲ. ಹಾಗಾಗಿ 81 ವಯಸ್ಸಿನಲ್ಲೂ ನಾನು ಕೆಲಸ ಮಾಡುವ ಶಕ್ತಿ ಹೊಂದಿದ್ದೇನೆ. ನಿಮಗೆ ಸ್ವಲ್ಪ ಜಾಗ ಇದ್ದರೂ ಭತ್ತ ಬೆಳೆಸಿ ನಿಮ್ಮ ಅಕ್ಕಿ ನೀವೇ ಮಾಡಿ ಊಟ ಮಾಡಿ, ಆರೋಗ್ಯವಾಗಿ ಇರುತ್ತೀರಿ. ನಾವು ಹಿಂದೂಗಳಾಗಿ ನಮ್ಮ ಹಿಂದಿನ ಸಂಸ್ಕೃತಿ, ಸಂಪ್ರದಾಯ ಉಳಿಸಿಕೊಂಡು ಬೆಳೆಸಿಕೊಳ್ಳಬೇಕು ಎಂಬ ವಿನಂತಿ ನನ್ನದು” ಎಂದು ಭತ್ತ ತಳಿ ಸಂರಕ್ಷಕ ಬಿ.ಕೆ. ದೇವರಾಯ ಮಿತ್ತಬಾಗಿಲು ಹೇಳಿದ್ದಾರೆ.

ಎಸ್ ಕೆ ಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥರಾದ ಡಾ. ರಾಮಕೃಷ್ಣ ಆಚಾರ್ ಸ್ಥಾಪಿಸಿರುವ ರೈತಪೀಠ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಹೆಬ್ರಿ ತಾಲೂಕಿನ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ಪಿಯುಸಿ ಓದಿದ ಬಳಿಕ ಕೃಷಿಗೆ ಇಳಿದೆ. ಆ ಕಾಲದಲ್ಲಿ ಇಪ್ಪತ್ತು ಎಕರೆ ಕೃಷಿ ಮಾಡುತ್ತಿದ್ದೆ. ಏಳು ಜೋಡಿ ಎತ್ತು ಕಟ್ಟುತ್ತಿದ್ದೆ. ಈಗ ಐದು ಎಕರೆ ಇದೆ. 70-80 ತಳಿ ಭತ್ತ ಬೆಳೆಯುತ್ತೇನೆ. ನಾನು ಯಾವುದೇ ಪ್ರಶಸ್ತಿಗೆ ಅರ್ಜಿ ಹಾಕುವುದಿಲ್ಲ, ನನ್ನ ಹುಡುಕಿಕೊಂಡು ಬಂದು ನನಗೆ ಪ್ರಶಸ್ತಿ ಕೊಟ್ಟಿದ್ದಾರೆ. ಇದು ನನಗೆ ಬಂದ ಪ್ರಶಸ್ತಿ ಅಲ್ಲ, ಭತ್ತದ ಕೃಷಿಗೆ ಬಂದ ಪ್ರಶಸ್ತಿ” ಎಂದು ಹೇಳಿದರು. 

ಪ್ರಶಸ್ತಿ ಸ್ಥಾಪಕ ಎಸ್ ಕೆ ಎಫ್ ಸಂಸ್ಥೆಯ ಮುಖ್ಯಸ್ಥರಾದ ಡಾ.ರಾಮಕೃಷ್ಣ ಆಚಾರ್ ಮಾತನಾಡಿ, “ಥಾಯ್ ಲ್ಯಾಂಡ್ ನಲ್ಲಿ ರೈತ ಬೆಂಜ್ ಕಾರಿನಲ್ಲಿ ಬರುತ್ತಾನೆ. ಪಂಜಾಬ್ ನಲ್ಲಿ ಕೃಷಿ ಮಾಡುವುದೇ ಸಾಧ್ಯವಿಲ್ಲ. ನಮ್ಮ ದೇಶದ ಶೇಕಡಾ 50 ರಾಜ್ಯಗಳಲ್ಲಿ ಮುಂದಿನ ಹತ್ತು ವರ್ಷದಲ್ಲಿ ಕೃಷಿ ಮಾಡಲು ಸಾಧ್ಯವಿಲ್ಲ. ಬೆಳೆದರೂ ಆಹಾರ ವಿಷಪೂರಿತ ಆಗುವ ಸಾಧ್ಯತೆ ಇದೆ ಎಂದು ಪರಿಣತರು ಹೇಳುತ್ತಾರೆ. ಹಾಗಾಗಿ ಯುವ ಪೀಳಿಗೆಗೆ ಕೃಷಿಯಲ್ಲೂ ಲಾಭ ಇದೆ ಎಂದು ತೋರಿಸಿಕೊಡಲು ಸಂಜೀವಿನಿ ಗೋಧಾಮ ಸ್ಥಾಪಿಸಿದ್ದೇನೆ. ರೈತನಿಗೆ ಗೌರವ ಸಲ್ಲಿಸುವ ಸಲುವಾಗಿ ರೈತಪೀಠ ಪ್ರಶಸ್ತಿ ಹುಟ್ಟು ಹಾಕಿದ್ದೇವೆ. ಮುಂದಿನ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೈತ ಪೀಠ ಪ್ರಶಸ್ತಿ ಪ್ರದಾನ ಮಾಡುವ ಉದ್ದೇಶ ಇದೆ” ಎಂದು ಹೇಳಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ್ ಆಳ್ವ ಮಾತನಾಡಿ, “ರಾಮಕೃಷ್ಣ ಆಚಾರ್ ಅವರು ಕೃಷಿಯನ್ನು ಲಾಭದಾಯಕವಾಗಿ ಮಾಡಬಹುದು ಎಂಬುದನ್ನು ತೋರಿಸುವುದರ ಜೊತೆಗೆ ಮಕ್ಕಳಿಗೆ ಕೃಷಿ ಅರಿವು ಮೂಡಿಸುವ ಆದರ್ಶ ಪ್ರಾಯ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.

ಮಹಾರಾಷ್ಟ್ರ ಕೊಲ್ಹಾಪುರ ಸಿದ್ಧಗಿರಿ (ಕಾನೇರಿ) ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಬೆಳಗಾವಿ ನಿಡಸೋಸಿ ದುರದುಂಡೀಶ್ವರ ಸಿದ್ದ ಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾಜಸೇವಕ ಉದಯ್ ಶೆಟ್ಟಿ ಮುನಿಯಾಲು, ಸವಿತಾ ರಾಮಕೃಷ್ಣ ಆಚಾರ್, ಪ್ರಜ್ವಲ್ ಆಚಾರ್ ಇದ್ದರು.