Mangalore, SIT, Sridhar: ಶಿಬಾಜೆ ಶ್ರೀಧರ ಮುಗೇರ ಕೊಲೆ ಪ್ರಕರಣ ; ಸಿಐಡಿ ಬಿ ರಿಪೋರ್ಟ್ ಹಿನ್ನೆಲೆ, ಮರು ತನಿಖೆಗೆ ಕೋರಿದ್ದ ಕುಟುಂಬಸ್ಥರು, ಐಜಿಪಿ ಲಾಬೂರಾಮ್ ನೇತೃತ್ವದಲ್ಲಿ ಎಸ್ಐಟಿ ರಚಿಸಿ ಆದೇಶ

20-02-26 06:05 pm       Mangalore Correspondent   ಕರಾವಳಿ

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಎಸಿ ಕುರಿಯನ್ ಎಂಬವರ ಅಡಿಕೆ ತೋಟದಲ್ಲಿ ಮೇಲ್ವಿಚಾರಕನಾಗಿದ್ದ ಶ್ರೀಧರ ಮುಗೇರ ಕೊಲೆ ಪ್ರಕರಣದಲ್ಲಿ ಮರು ತನಿಖೆಗಾಗಿ ಹೈಕೋರ್ಟ್ ಸೂಚನೆಯಂತೆ ರಾಜ್ಯ ಸರಕಾರ ಐಜಿಪಿ ಲಾಬೂರಾಮ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಮಾಡಿದೆ.

ಮಂಗಳೂರು, ಫೆ.20: ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಎಸಿ ಕುರಿಯನ್ ಎಂಬವರ ಅಡಿಕೆ ತೋಟದಲ್ಲಿ ಮೇಲ್ವಿಚಾರಕನಾಗಿದ್ದ ಶ್ರೀಧರ ಮುಗೇರ ಕೊಲೆ ಪ್ರಕರಣದಲ್ಲಿ ಮರು ತನಿಖೆಗಾಗಿ ಹೈಕೋರ್ಟ್ ಸೂಚನೆಯಂತೆ ರಾಜ್ಯ ಸರಕಾರ ಐಜಿಪಿ ಲಾಬೂರಾಮ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಮಾಡಿದೆ.

2022ರ ಡಿಸೆಂಬರ್ 18ರಂದು ಶ್ರೀಧರ್ ಮುಗೇರ ಅವರ ಶವ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತನಿಖೆ ನಡೆಸಿದ ಧರ್ಮಸ್ಥಳ ಠಾಣೆ ಪೊಲೀಸರು 2023ರ ಜನವರಿಯಲ್ಲಿ ತಿಮ್ಮಪ್ಪ ಪೂಜಾರಿ, ಆನಂದ ಗೌಡ, ಲಕ್ಷ್ಮಣ ಪೂಜಾರಿ ಮತ್ತು ಮಹೇಶ್ ಪೂಜಾರಿ ಆರೋಪಿಗಳೆಂದು ಬಂಧಿಸಿದ್ದರು. ಆನಂತರ, ಪ್ರಕರಣದ ತನಿಖೆಯನ್ನು ಸಾಮಾಜಿಕ ಕಾರ್ಯಕರ್ತರ ಒತ್ತಡದ ಮೇರೆಗೆ ಸಿಐಡಿಗೆ ವರ್ಗಾಯಿಸಲಾಗಿತ್ತು.

ಶ್ರೀಧರ ಮುಗೇರ ಶವ ಹಲ್ಲೆಗೀಡಾಗಿ ಬೆತ್ತಲೆಯಾಗಿ ಬಿದ್ದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರೋಪಿಗಳು ಇವರನ್ನು ಕೊಲೆಗೈದು ಶವವನ್ನು 300 ಮೀಟರ್ ದೂರದಲ್ಲಿ ಬಿಸಾಕಿದ್ದಾಗಿ ಆರೋಪಗಳಿದ್ದವು. ಆದರೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಸಾಕ್ಷ್ಯಾಧಾರಗಳಿಲ್ಲವೆಂದು ಬಿ ರಿಪೋರ್ಟ್ ಸಲ್ಲಿಸಿದ್ದು ಕುಟುಂಬಸ್ಥರನ್ನು ಕೆರಳಿಸಿತ್ತು. ಹೀಗಾಗಿ ಮರು ತನಿಖೆಗಾಗಿ ವಿಶೇಷ ತನಿಖಾ ತಂಡ ನೇಮಿಸಬೇಕೆಂದು ಹೈಕೋರ್ಟಿಗೆ ಕುಟುಂಬ ಮನವಿ ಮಾಡಿತ್ತು. ಇದಲ್ಲದೆ, ಕೊಲೆಯಾದ ಬಗ್ಗೆ ಬಲವಾದ ಅನುಮಾನಗಳನ್ನು ವ್ಯಕ್ತಪಡಿಸಿತ್ತು. ಇದರಂತೆ, ಹೈಕೋರ್ಟ್ ಎಸ್ಐಟಿ ರಚಿಸುವಂತೆ 2025ರ ಸೆಪ್ಟಂಬರ್ ನಲ್ಲಿ ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು.

ಹೈಕೋರ್ಟ್ ಸೂಚನೆಯಂತೆ ಇದೀ ರಾಜ್ಯ ಡಿಜಿಪಿ ಡಾ.ಎಂ.ಎ. ಸಲೀಂ ಅವರು ಐಜಿಪಿ ಲಾಬೂರಾಮ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದಾರೆ. ಇದರಲ್ಲಿ ಹಾಲಿ ಉಡುಪಿ ಎಸ್ಪಿ ಆಗಿರುವ ಹರಿರಾಮ್ ಶಂಕರ್ ಮತ್ತು ಬೆಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿಯಾಗಿರುವ ಎಂ.ಆರ್ ಹರೀಶ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ.