ಕಲ್ಲಡ್ಕದಲ್ಲಿ ಬಿಜೆಪಿ ಪುಢಾರಿ ಮತ್ತು ಎಎಸ್ಐ ನಡುವೆ ಹೊಡೆದಾಟ ; ಎಫ್ಐಆರ್ ದಾಖಲು

14-05-21 03:09 pm       Mangalore Correspondent   ಕ್ರೈಂ

ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ ಅಂಗಡಿ ಮುಚ್ಚಿಸುತ್ತಿದ್ದ ಪೊಲೀಸ್ ಎಎಸ್ಐ ಮತ್ತು ಬಿಜೆಪಿ ಮುಖಂಡನೊಬ್ಬ ಪರಸ್ಪರ ಹೊಡೆದಾಡಿಕೊಂಡಿದ್ದಾರೆ

ಬಂಟ್ವಾಳ, ಮೇ 14: ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ ಅಂಗಡಿ ಮುಚ್ಚಿಸುತ್ತಿದ್ದ ಪೊಲೀಸ್ ಎಎಸ್ಐ ಮತ್ತು ಬಿಜೆಪಿ ಮುಖಂಡನೊಬ್ಬ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಇಬ್ಬರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.

ಕಲ್ಲಡ್ಕ ಪೇಟೆಯಲ್ಲಿ ಬೆಳಗ್ಗೆ 9 ಗಂಟೆಗೆ ತೆರೆದಿದ್ದ ದಿನಸಿ ಅಂಗಡಿಗಳನ್ನು ಮುಚ್ಚುವಂತೆ ಪೊಲೀಸರು ಹೇಳುತ್ತಾ, ಲಾಠಿ ಬೀಸುತ್ತಾ ಸೇರಿದ್ದ ಜನರನ್ನು ಗದರಿಕೊಂಡು ಹೋಗುತ್ತಿದ್ದರು. ಈ ವೇಳೆ, ಗೋಳ್ತಮಜಲು ನಿವಾಸಿ ಬಂಟ್ವಾಳ ತಾಪಂ ಸದಸ್ಯ. ಬಿಜೆಪಿ ಮುಖಂಡ ಮಹಾಬಲ ಆಳ್ವ ಎಂಬವರು ಪೇಟೆಗೆ ಬಂದಿದ್ದು, ಪೊಲೀಸರು ಲಾಠಿ ಬೀಸಿದ್ದು ಅವರ ಮೇಲೂ ತಾಗಿತ್ತು.

ಈ ವಿಚಾರದಲ್ಲಿ ಮಹಾಬಲ ಆಳ್ವ ಮತ್ತು ಪೊಲೀಸ್ ಸಿಬಂದಿ ಕುಂಞ ಎಂಬವರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳೀಯ ಅಂಗಡಿ ವ್ಯಾಪಾರಿಗಳು ಕೂಡ ಮಹಾಬಲ ಆಳ್ವ ಜೊತೆ ಸೇರಿದ್ದು ಪೊಲೀಸರ ವಿರುದ್ಧ ಏರಿ ಹೋಗಿದ್ದಾರೆ. ಈ ವೇಳೆ, ಮಹಾಬಲ ಆಳ್ವ ಮತ್ತು ಎಎಸ್ಐ ಪರಸ್ಪರ ತಳ್ಳಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದ್ದು, ಇಬ್ಬರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.

Bjp member and police sub-inspector assault each other over timings issue in closing shops at Kalladka in Mangalore. FIR has been filed against both and an investigation is in process.