ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ ಬೇಷರತ್ ಕ್ಷಮಾಪಣೆ ಸಲ್ಲಿಸಿದ ವಕೀಲ, ಕ್ರಿಮಿನಲ್ ಪ್ರಕರಣ ಹಿಂಪಡೆದು ಒಂದು ಸಾವಿರ ಹಣ್ಣಿನ ಗಿಡಗಳ ನೆಟ್ಟು ಪೋಷಿಸಲು ಆದೇಶ !

06-09-26 06:11 pm       HK News Staffer   ಕ್ರೈಂ

ನ್ಯಾಯಾಧೀಶರು ಯಾವುದೇ ಭಯ ಅಥವಾ ಒತ್ತಡವಿಲ್ಲದೇ ಮುಕ್ತವಾಗಿ ಕಾರ್ಯ ನಿರ್ವಹಿಸಲು ಪೂರಕ ವಾತಾವರಣ ಕಲ್ಪಿಸುವುದು ಮತ್ತು ನ್ಯಾಯಾಂಗದ ಘನತೆ ಎತ್ತಿಹಿಡಿಯುವುದು ಎಲ್ಲ ವಕೀಲರ ಕರ್ತವ್ಯ ಎಂದಿರುವ ರಾಜ್ಯ ಹೈಕೋರ್ಟ್, ಕೆಳ ಹಂತದ ನ್ಯಾಯಾಲಯದ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ವಕೀಲರೊಬ್ಬರ ಬೇಷರತ್ ಕ್ಷಮಾಪಣೆಯನ್ನು ಪುರಸ್ಕರಿಸಿ ತಮ್ಮ ತಪ್ಪು ತಿದ್ದಿಕೊಳ್ಳಲು 1,000 ಹಣ್ಣಿನ ಗಿಡ ನೆಟ್ಟು ಪೋಷಿಸುವಂತೆ ನಿರ್ದೇಶನ ನೀಡಿದೆ.

ಬೆಂಗಳೂರು, ‌ಸೆ.6: ನ್ಯಾಯಾಧೀಶರು ಯಾವುದೇ ಭಯ ಅಥವಾ ಒತ್ತಡವಿಲ್ಲದೇ ಮುಕ್ತವಾಗಿ ಕಾರ್ಯ ನಿರ್ವಹಿಸಲು ಪೂರಕ ವಾತಾವರಣ ಕಲ್ಪಿಸುವುದು ಮತ್ತು ನ್ಯಾಯಾಂಗದ ಘನತೆ ಎತ್ತಿಹಿಡಿಯುವುದು ಎಲ್ಲ ವಕೀಲರ ಕರ್ತವ್ಯ ಎಂದಿರುವ ರಾಜ್ಯ ಹೈಕೋರ್ಟ್, ಕೆಳ ಹಂತದ ನ್ಯಾಯಾಲಯದ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ವಕೀಲರೊಬ್ಬರ ಬೇಷರತ್ ಕ್ಷಮಾಪಣೆಯನ್ನು ಪುರಸ್ಕರಿಸಿ ತಮ್ಮ ತಪ್ಪು ತಿದ್ದಿಕೊಳ್ಳಲು 1,000 ಹಣ್ಣಿನ ಗಿಡ ನೆಟ್ಟು ಪೋಷಿಸುವಂತೆ ನಿರ್ದೇಶನ ನೀಡಿದೆ.

ವಕೀಲ ರಂಗಸ್ವಾಮಿ ಎಂಬವರು ತನ್ನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿ ಕೇಸು ಹಿಂಪಡೆದಿದ್ದಲ್ಲದೆ ಒಂದು ಸಾವಿರ ರೂ.ಗಳ ದಂಡ ವಿಧಿಸಿ ಮತ್ತು ಹಣ್ಣಿನ ಗಿಡಗಳ ನೆಡುವಂತೆ ಸೂಚಿಸಿ ಹೈಕೋರ್ಟ್ ಆದೇಶಿಸಿದೆ. ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿದ್ದ ವಕೀಲ ಎಸ್.ರಂಗಸ್ವಾಮಿ ಹೈಕೋರ್ಟಿಗೆ ಸಲ್ಲಿಸಿದ್ದ ಬೇಷರತ್ ಕ್ಷಮಾಪಣಾ ಪ್ರಮಾಣ ಪತ್ರವನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರಿದ್ದ ಪೀಠ ಮೇಲಿನಂತೆ ಆದೇಶ ನೀಡಿದೆ. 

ವಕೀಲ ರಂಗಸ್ವಾಮಿ ಅವರು ಭವಿಷ್ಯದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ನಡವಳಿಕೆಯನ್ನು ತಿದ್ದಿಕೊಳ್ಳುತ್ತಾರೆ ಎಂಬ ಭರವಸೆಯೊಂದಿಗೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಪೀಠ ಹೇಳಿದೆ. 

ನ್ಯಾಯಾಂಗ ನಿಂದನೆ ಪ್ರಕ್ರಿಯೆ ಹಿಂಪಡೆದಿದ್ದರೂ, ವಕೀಲರ ತಪ್ಪಿನ ಕುರಿತು ಹೈಕೋರ್ಟ್  ಗಂಭೀರ ಅಂಶಗಳನ್ನು ದಾಖಲಿಸಿದೆ. ಶಿಕ್ಷೆಯಲ್ಲಿ ನೀಡಿದ ವಿನಾಯಿತಿ ಎಂದರೆ ಆರೋಪದಿಂದ ಸಂಪೂರ್ಣ ಮುಕ್ತಿ ಎಂದರ್ಥವಲ್ಲ ಎಂದು ಪೀಠ ಹೇಳಿದ್ದು ಪ್ರಕರಣ ವರ್ಗಾವಣೆ ಕೋರಿದ್ದ ಅರ್ಜಿದಾರರಿಗೆ ವಿಧಿಸಲಾಗಿದ್ದ 1 ಲಕ್ಷ ರೂ.ಗಳ ದಂಡವನ್ನು ಹಾಗೆಯೇ ಉಳಿಸಿದೆ. 

ಕೊಪ್ಪಳ ಜಿಲ್ಲೆಯ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಕೊಲೆ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ಈ ವೇಳೆ, ಪ್ರಕರಣದ ವಿಚಾರಣೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಆರೋಪಿಗಳ ಪರ ವಕೀಲ ರಂಗಸ್ವಾಮಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ, ವಕೀಲ ರಂಗಸ್ವಾಮಿ ನ್ಯಾಯಾಧೀಶರಿಗೆ ಬೆದರಿಕೆ ಹಾಕಿ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ವಿಚಾರ ತಿಳಿದು ಕೋರ್ಟ್ ಗಂಭೀರ ಪರಿಗಣಿಸಿತ್ತು. ಅರ್ಜಿ ವಜಾಗೊಳಿಸಿದ್ದ ಕೋರ್ಟ್, ಈ ತಪ್ಪಿಗಾಗಿ ಅರ್ಜಿದಾರ ವಕೀಲ ರಂಗಸ್ವಾಮಿಗೆ 1 ಲಕ್ಷ ರೂ. ದಂಡ ವಿಧಿಸಿತ್ತಲ್ಲದೆ, ಕ್ರಿಮಿನಲ್ ನ್ಯಾಯಾಂಗ ನಿಂದನೆ, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್​ನಿಂದ ಶಿಸ್ತು ಕ್ರಮ ಹಾಗೂ ಬಿಎನ್ಎಸ್ ಕಾಯ್ದೆಯಡಿ ಕ್ರಿಮಿನಲ್ ದೂರು ದಾಖಲಿಸಲು 2026 ರ ಎಪ್ರಿಲ್ 16ರಂದು ಆದೇಶ ಮಾಡಿತ್ತು. 

ಹೈಕೋರ್ಟ್‌ನ ಕಠಿಣ ನಿಲುವಿನ ನಂತರ ವಕೀಲ ರಂಗಸ್ವಾಮಿ ಅವರು ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಟ್ಟು, ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚನೆಯ ಅಫಿಡವಿಟ್ ಸಲ್ಲಿಸಿದ್ದರು. ಅವರ ಪರವಾಗಿ ಹಿರಿಯ ವಕೀಲರು ಹಾಜರಾಗಿ ವಕೀಲರ ಭವಿಷ್ಯವನ್ನು ಗಮನದಲ್ಲಿಟ್ಟು ಸೌಮ್ಯ ದೃಷ್ಟಿಕೋನ ತಳೆಯುವಂತೆ ಕೇಳಿಕೊಂಡಿದ್ದರು.

ಇದೀಗ ವಕೀಲರ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ, ಬಾರ್ ಕೌನ್ಸಿಲ್ ಕ್ರಮ ಹಾಗೂ ಕ್ರಿಮಿನಲ್ ದೂರು ದಾಖಲಿಸುವ ಆದೇಶಗಳನ್ನು ಹಿಂಪಡೆಯಲಾಗಿದೆ. ಬದಲಾಗಿ, ವಕೀಲ ರಂಗಸ್ವಾಮಿ ಅವರು ಸರ್ಕಾರಿ ಭೂಮಿ ಅಥವಾ ಶಾಲೆ/ಕಾಲೇಜುಗಳ ಆವರಣದಲ್ಲಿ 1,000 ಹಣ್ಣು ನೀಡುವ ಸಸಿಗಳನ್ನು ನೆಟ್ಟು, ಅವುಗಳಿಗೆ ನೀರು-ಗೊಬ್ಬರ ಹಾಕಿ ಪೋಷಿಸಬೇಕು ಎಂದು ಆದೇಶಿಸಿದೆ. ಇದರೊಂದಿಗೆ ಬಳ್ಳಾರಿಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (DLSA) 1,000 ರೂ. ಸಾಂಕೇತಿಕ ದಂಡ ಪಾವತಿಸಲು ಸೂಚಿಸಿದೆ. ಇದಲ್ಲದೆ, ಗಿಡ ನೆಟ್ಟಿರುವ ಕುರಿತು ಅಕ್ಟೋಬರ್ 31, 2026 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಗಡುವು ನೀಡಲಾಗಿದೆ.