ಒಮಾನ್‌ನಲ್ಲಿ ಕೆಲಸದ ವೇಳೆ ದುರಂತ; ವಾಹನದ ಅಡಿಗೆ ಸಿಲುಕಿ ಮೂಡುಬಿದಿರೆ ಯುವಕ ಸಾವು, 10 ತಿಂಗಳ ಕಂದಮ್ಮ ತಂದೆಯಿಲ್ಲದೆ ಅನಾಥ

29-07-26 05:27 pm       HK News Staffer   ಕ್ರೈಂ

ಮಸ್ಕತ್‌ನ ಒಮಾನ್‌ನಲ್ಲಿ ನಡೆದ ವಾಹನ ಅಪಘಾತದಲ್ಲಿ ಸಾಣೂರು ಮೂಲಬೆಟ್ಟುಗುತ್ತು ಸುಭಾಸ್ ಬಲಿಪ ಅವರ ಪುತ್ರ ರಾಜವರ್ಮ ಜೈನ್ (33) ಮೃತಪಟ್ಟಿದ್ದಾರೆ.

ಮೂಡುಬಿದಿರೆ, ಜುಲೈ 29: ಮಸ್ಕತ್‌ನ ಒಮಾನ್‌ನಲ್ಲಿ ನಡೆದ ವಾಹನ ಅಪಘಾತದಲ್ಲಿ ಸಾಣೂರು ಮೂಲಬೆಟ್ಟುಗುತ್ತು ಸುಭಾಸ್ ಬಲಿಪ ಅವರ ಪುತ್ರ ರಾಜವರ್ಮ ಜೈನ್ (33) ಮೃತಪಟ್ಟಿದ್ದಾರೆ. 

ರಾಜವರ್ಮ ಒಮಾನ್‌ನಲ್ಲಿ ಖಾಸಗಿ ವಾಹನ ಕಂಪನಿ ಉದ್ಯೋಗಿಯಾಗಿದ್ದರು. ಉದ್ಯೋಗದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ಇನ್ನೊಂದು ವಾಹನದ ಚಾಲಕ ಗಾಡಿಯನ್ನ ಹಿಂದೆ ತೆಗೆಯುವಾಗ ರಾಜವರ್ಮಗೆ ಡಿಕ್ಕಿ ಹೊಡೆದ ಪರಿಣಾಮ ಅವರು ವಾಹನದ ಅಡಿಗೆ ಸಿಲುಕಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ಎರಡು ವರ್ಷದ ಹಿಂದೆ ಮೂಡುಬಿದಿರೆ ಸಮೀಪದ ಅಳಿಯೂರಿನ ಆದಿರಾಜ್ ಜೈನ್ ಎಂಬುವರ ಪುತ್ರಿ ಜತೆ ಅವರ ವಿವಾಹವಾಗಿದ್ದು ದಂಪತಿಗೆ ಹತ್ತು ತಿಂಗಳ ಹೆಣ್ಣು ಮಗು ಇದೆ. ಮೃತ ದೇಹವನ್ನು ಗುರುವಾರ ವಿಮಾನದ ಮೂಲಕ ಹುಟ್ಟೂರಿಗೆ ತರಲಾಗುವುದು ಎಂದು ಮಾಹಿತಿ ಲಭಿಸಿದೆ ಎನ್ನಲಾಗಿದೆ.