ಪತ್ನಿಗೆ ನೇಣು ಬಿಗಿದು ವಿಡಿಯೋ ಕಾಲ್‌ನಲ್ಲಿ ಅತ್ತೆ-ಮಾವನಿಗೆ ಮಗಳು ಜೀವಕ್ಕಾಗಿ ಒದ್ದಾಡುತ್ತಿದ್ದ ದೃಶ್ಯ ತೋರಿಸಿದ ರಾಕ್ಷಸ ಪತಿ ; ಬಾಗಲಕೋಟೆಯಲ್ಲಿ ಬೆಚ್ಚಿಬೀಳಿಸಿದ ಕ್ರೌರ್ಯ

28-07-26 08:11 pm       HK News Staffer   ಕ್ರೈಂ

ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆ 23 ವರ್ಷದ ಪತ್ನಿಯನ್ನು ಅಮಾನುಷವಾಗಿ ಹತ್ಯೆಗೈದು, ಆಕೆ ಜೀವಕ್ಕಾಗಿ ಒದ್ದಾಡುತ್ತಿದ್ದ ದೃಶ್ಯವನ್ನು ಅತ್ತೆ-ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿ ಪತಿ ಪ್ರವೀಣ್ ಜಿಗಲೂರುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಾಗಲಕೋಟೆ , ಜುಲೈ 28: ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆ 23 ವರ್ಷದ ಪತ್ನಿಯನ್ನು ಅಮಾನುಷವಾಗಿ ಹತ್ಯೆಗೈದು, ಆಕೆ ಜೀವಕ್ಕಾಗಿ ಒದ್ದಾಡುತ್ತಿದ್ದ ದೃಶ್ಯವನ್ನು ಅತ್ತೆ-ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿ ಪತಿ ಪ್ರವೀಣ್ ಜಿಗಲೂರುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮೃತ ಮಹಿಳೆಯನ್ನು ಭಾಗ್ಯಶ್ರೀ ಜಿಗಲೂರು (23) ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ, ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ಹೊಂದಿದ್ದ ಪ್ರವೀಣ್, ಮೊದಲು ಮರದ ತುಂಡು ಅಥವಾ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಮನೆಯಲ್ಲಿ ಆಕೆಗೆ ನೇಣು ಬಿಗಿದಿರುವ ಶಂಕೆ ವ್ಯಕ್ತವಾಗಿದೆ.

ಇಷ್ಟಕ್ಕೇ ನಿಲ್ಲದೆ, ಪ್ರಾಣಕ್ಕಾಗಿ ಒದ್ದಾಡುತ್ತಿದ್ದ ಪತ್ನಿಯ ದೃಶ್ಯವನ್ನು ತನ್ನ ಅತ್ತೆ-ಮಾವನಿಗೆ ವಿಡಿಯೋ ಕಾಲ್ ಮೂಲಕ ತೋರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಘಟನೆಯ ವಿಡಿಯೋವನ್ನು ಸಹ ಆತ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ವಿಡಿಯೋದಲ್ಲಿ ನೇಣಿನ ಕುಣಿಕೆಯ ಹಿಂದಿನ ಗೋಡೆಯ ಮೇಲೆ ಮದುವೆ ವೇಳೆ ಬರೆದಿದ್ದ ದಂಪತಿಯ ಹೆಸರುಗಳು ಕೂಡ ಕಾಣಿಸಿಕೊಂಡಿವೆ.

ದಂಪತಿಗೆ ಸುಮಾರು ಆರು ವರ್ಷಗಳ ಹಿಂದೆ ವಿವಾಹವಾಗಿತ್ತು. ಕಳೆದ ಎರಡು ವರ್ಷಗಳಿಂದ ಪತ್ನಿಯ ಅನೈತಿಕ ಸಂಬಂಧದ ಅನುಮಾನ ವಿಚಾರವಾಗಿ ಇಬ್ಬರ ನಡುವೆ ಆಗಾಗ ಕಲಹ ನಡೆಯುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕಲಹದ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳ ಹಿಂದೆ ಭಾಗ್ಯಶ್ರೀ ತನ್ನ ತವರು ಮಹಾಲಿಂಗಪುರಕ್ಕೆ ತೆರಳಿದ್ದರು.

ಜುಲೈ 27ರಂದು "ಇನ್ನು ಮುಂದೆ ಚೆನ್ನಾಗಿ ಕೂಡಿ ಬಾಳೋಣ" ಎಂದು ಮನವೊಲಿಸಿ ಪ್ರವೀಣ್ ಪತ್ನಿಯನ್ನು ಮತ್ತೆ ಗಲಗಲಿಯ ಮನೆಗೆ ಕರೆತಂದಿದ್ದ. ಆದರೆ ಅದೇ ದಿನ ಸಂಜೆ ಈ ಭೀಕರ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೀಳಗಿ ಪೊಲೀಸರು ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿ ಸಿದ್ದಾರ್ಥ್ ಗೋಯಲ್, ಮೃತಳ ದೇಹದ ಮೇಲೆ ಹಲ್ಲೆಯ ಗುರುತುಗಳು ಕಂಡುಬಂದಿವೆ ಎಂದು ತಿಳಿಸಿದ್ದಾರೆ. ಹಲ್ಲೆಯ ಬಳಿಕ ನೇಣು ಬಿಗಿದಿರುವ ಸಾಧ್ಯತೆಯೂ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಭಾಗ್ಯಶ್ರೀಗೆ ಮಹಾಲಿಂಗಪುರದ ವ್ಯಕ್ತಿಯೊಬ್ಬರೊಂದಿಗೆ ಸಂಪರ್ಕವಿದ್ದಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಆರೋಪಿಯ ಮೊಬೈಲ್‌ನಲ್ಲಿ ಕೆಲವು ಖಾಸಗಿ ವಿಡಿಯೋಗಳು ಪತ್ತೆಯಾಗಿದ್ದು, ಅವುಗಳನ್ನು ಆತ ತನ್ನ ಸ್ನೇಹಿತರಿಗೆ ಹಂಚಿಕೊಂಡಿರುವ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ. ಅಲ್ಲದೆ, ಘಟನೆ ನಡೆದ ವೇಳೆ ಮನೆಯಲ್ಲಿ ದಂಪತಿ ಮಾತ್ರ ಇದ್ದರು. ಸ್ಥಳದಲ್ಲಿ ಬಿಯರ್ ಬಾಟಲಿಗಳು ಪತ್ತೆಯಾಗಿದ್ದು, ಆರೋಪಿ ಮದ್ಯ ಸೇವಿಸಿದ್ದಾನೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಯ ನಿಖರ ಕಾರಣ, ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.