ಬೆಂಗಳೂರು ಗ್ಯಾರೇಜ್‌ ನಲ್ಲಿ ಅಗ್ನಿ ಅವಘಡ ; ಜಾಗ್ವಾರ್, ರೇಂಜ್ ರೋವರ್ ಸೇರಿ 25ಕ್ಕೂ ಅಧಿಕ ಕಾರುಗಳು ಸುಟ್ಟು ಭಸ್ಮ

27-07-26 07:35 pm       HK News Staffer   ಕ್ರೈಂ

ಅಗ್ನಿ ಅವಘಡದಲ್ಲಿ ಐಷಾರಾಮಿ ಕಾರುಗಳ ಸಹಿತ 20ಕ್ಕೂ ಅಧಿಕ ವಾಹನಗಳು ಆಹುತಿಯಾದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಥಣಿಸಂದ್ರ ಮುಖ್ಯ ರಸ್ತೆಯ ಭಾರತೀಯ ಸಿಟಿ ಬಳಿಯಿರುವ ಗ್ಯಾರೇಜ್‌ವೊಂದರಲ್ಲಿ ಸೋಮವಾರ ಬೆಳಗಿನಜಾವ 4 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ.

ಬೆಂಗಳೂರು, ಜುಲೈ 27: ಅಗ್ನಿ ಅವಘಡದಲ್ಲಿ ಐಷಾರಾಮಿ ಕಾರುಗಳ ಸಹಿತ 20ಕ್ಕೂ ಅಧಿಕ ವಾಹನಗಳು ಆಹುತಿಯಾದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಥಣಿಸಂದ್ರ ಮುಖ್ಯ ರಸ್ತೆಯ ಭಾರತೀಯ ಸಿಟಿ ಬಳಿಯಿರುವ ಗ್ಯಾರೇಜ್‌ವೊಂದರಲ್ಲಿ ಸೋಮವಾರ ಬೆಳಗಿನಜಾವ 4 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ.

ಪರಿಣಾಮ ರಿಪೇರಿಗಾಗಿ ಗ್ಯಾರೇಜ್‌ಗೆ ತಂದಿದ್ದ ಐಷಾರಾಮಿ ಜಾಗ್ವಾರ್, ರೇಂಜ್ ರೋವರ್ ಸಹಿತ 20ಕ್ಕೂ ಅಧಿಕ ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಗ್ಯಾರೇಜ್ ಪಕ್ಕದ ಶೆಡ್‌ಗೂ ಬೆಂಕಿ ತಗುಲಿದ್ದು ಅಲ್ಲಿ ನಿಲ್ಲಿಸಲಾಗಿದ್ದ ಸುಮಾರು 8 ಆಟೋಗಳು ಸಹ ಅಗ್ನಿಗಾಹುತಿಯಾಗಿವೆ. ಅಲ್ಲದೇ ಕಾರು ಗ್ಯಾರೇಜ್ ಸಮೀಪದ ಫ್ಯಾಕ್ಟರಿಗೂ ಬೆಂಕಿ ತಗುಲಿದ್ದರಿಂದ 2 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳು, 4 ಲಕ್ಷ ರೂ. ಯಂತ್ರಕ್ಕೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂದು ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇನ್ನು ಭಾನುವಾರ ಹಳೆ ಚಂದಾಪುರದ ವಿಶಾಲ ಖಾಸಗಿ ಬಸ್ ತಂಗುವ ಯಾರ್ಡ್​ನಲ್ಲಿ  ಬೆಂಕಿ ಅವಘಡ ಸಂಭವಿಸಿ ನಾಲ್ಕು ಖಾಸಗಿ ಬಸ್​ಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿತ್ತು.

ಬಳ್ಳಾರಿಗೆ ತೆರಳಬೇಕಿದ್ದ ಬಸ್​ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಹಿಂಬದಿಯಿಂದ ಎರಡನೇ ಸೀಟಿನ ಬಳಿ ಹೊಗೆ ಬರುತ್ತಿದ್ದುದನ್ನು ದಾರಿಹೋಕರು ಬಂದು ತಿಳಿಸಿದ್ದರು. ತಕ್ಷಣವೇ ನೀರು ತಂದು ಸುರಿದರೂ ಬೆಂಕಿ ತಹಬಂದಿಗೆ ಬಂದಿರಲಿಲ್ಲ. ಕ್ಷಣಾರ್ಧದಲ್ಲಿ ಬೆಂಕಿ ಬಸ್ ಆವರಿಸಿ ಸುಟ್ಟುಹೋಯಿತು. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಅವರು ಬರುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಇತರೆ ಮೂರೂ ಬಸ್​ಗಳಿಗೆ ಬೆಂಕಿ ತಗುಲಿ, ಆ ಬಸ್​ಗಳು ಸಹ ಭಸ್ಮಗೊಂಡಿವು ಎಂದು ಚಾಲಕ ಮಂಜುನಾಥ್ ಮಾಹಿತಿ ನೀಡಿದ್ದರು.

ಈ ಬಸ್ ತಂಗುದಾಣದಲ್ಲಿ 200-300 ಕ್ಕೂ ಹೆಚ್ಚು ಬಸ್ ನಿಲುಗಡೆ ಆಗುತ್ತವೆ. ಟೂರಿಸ್ಟ್ ಹಾಗೂ ಲಾಂಗ್ ಟ್ರಿಪ್ ಬಸ್​ಗಳು ನಾಲ್ಕೈದು ತಿಂಗಳುಗಳ ಕಾಲ ನಿಲ್ಲುತ್ತವೆ. ಚಂದಾಪುರ ರೆಡ್ಡಿಯವರಿಗೆ ಸೇರಿದ ಯಾರ್ಡ್ ಆದರೂ ಮಹಾರಾಷ್ಟ್ರದವರು ಈ ಜಾಗದ ಉಸ್ತುವಾರಿ ವಹಿಸಿದ್ದಾರೆ ಎನ್ನುವ ಮಾಹಿತಿ ಇದೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕದಳ ಹಾಗೂ ಪೊಲೀಸರಿಗೆ ಕರೆ ಮಾಡಿದೆವು. ಆದರೆ ರಸ್ತೆ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಇಲ್ಲಿಗೆ ಬರುವಷ್ಟರಲ್ಲಿ ನಾಲ್ಕೂ ಬಸ್​ಗಳು ಸುಟ್ಟಿವೆ ಎಂದು ಚಂದಾಪುರ ಸ್ಥಳೀಯ ಮುಖಂಡ ತಿಳಿಸಿದ್ದರು.