ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನೆಪದಲ್ಲಿ ಕೋಟೆ ತುದಿಗೆ ಕರೆದೊಯ್ದು ಕೆಳಕ್ಕೆ ದೂಡಿ ಹತ್ಯೆ ; ರಿಯಲ್ ಎಸ್ಟೇಟ್ ಉದ್ಯಮಿ ಸಾವಿನ ಪ್ರಕರಣಕ್ಕೆ ಮಹತ್ತರ ತಿರುವು, ಮದುವೆಗೆ 17 ಕೋಟಿ ಅರಮನೆ ಬುಕ್ ಮಾಡಿದ್ದ ಕುಟುಂಬ !

24-06-26 09:28 pm       HK News Desk   ಕ್ರೈಂ

ಇಲ್ಲಿನ ಲೋಹಗಢ ಕೋಟೆಯಲ್ಲಿ ಫೋಟೊ ಶೂಟ್ ಸಂದರ್ಭದಲ್ಲಿ ಕಾಲು ಜಾರಿ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್(26) ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಭಯಾನಕ ತಿರುವು ಪಡೆದಿದ್ದು ಆತನನ್ನು ಮದುವೆಯಾಗಲಿದ್ದ ಭಾವಿ ಪತ್ನಿಯೇ ವಿಲನ್ ಆಗಿದ್ದಾಳೆ.

ಪುಣೆ, ಜೂನ್ 24: ಇಲ್ಲಿನ ಲೋಹಗಢ ಕೋಟೆಯಲ್ಲಿ ಫೋಟೊ ಶೂಟ್ ಸಂದರ್ಭದಲ್ಲಿ ಕಾಲು ಜಾರಿ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್(26) ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಭಯಾನಕ ತಿರುವು ಪಡೆದಿದ್ದು ಆತನನ್ನು ಮದುವೆಯಾಗಲಿದ್ದ ಭಾವಿ ಪತ್ನಿಯೇ ವಿಲನ್ ಆಗಿದ್ದಾಳೆ. 

ಫೋಟೊ ತೆಗೆಯುವಾಗ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಕೇತನ್ ಮೃತಪಟ್ಟಿದ್ದರು ಎಂದು ಭಾವಿಸಲಾಗಿದ್ದ ಪ್ರಕರಣದಲ್ಲಿ ಈಗ ಆತನ ಭಾವಿ ಪತ್ನಿಯನ್ನೇ ಪೊಲೀಸರು ಬಂಧಿಸಿದ್ದಾರೆ. ಅಗರ್ವಾಲ್ ಜತೆ ನಿಶ್ಚಿತಾರ್ಥವಾಗಿದ್ದ ಯುವತಿಯೇ ತನ್ನ ಪ್ರಿಯಕರನ ಜತೆ ಸೇರಿ ಸಿನಿಮೀಯ ರೀತಿಯಲ್ಲಿ 400 ಅಡಿ ಆಳದ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಇಡೀ ಪ್ರಕರಣವು ಎರಡೂ ಕುಟುಂಬಗಳನ್ನು ಹಾಗೂ ತನಿಖಾಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಕೇತನ್ ವಿಶಾಲ್ ಅಗರ್ವಾಲ್ ಅವರ ಪತ್ನಿಯಾಗಬೇಕಿದ್ದ ಸಿಯಾ ಗೋಯಲ್ (20) ಮತ್ತು ಆಕೆಯ ಪ್ರಿಯಕರ ಚೇತನ್ ಬಾಬುಲಾಲ್ ಚೌಧರಿ (22) ಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಸಿಯಾ ಗೋಯಲ್ ಮತ್ತು ಕೇತನ್ ಅಗರ್ವಾಲ್ ಇಬ್ಬರಿಗೂ ಪೋಷಕರು ನಿಶ್ಚಿತಾರ್ಥ ನೆರವೇರಿಸಿ ಈ ವರ್ಷದ ನವೆಂಬರ್‌ನಲ್ಲಿ ಅದ್ದೂರಿ ಮದುವೆ ಮಾಡಲು ನಿಶ್ಚಯಿಸಿದ್ದರು. ಆದರೆ ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ತನ್ನ ಭಾವಿ ಪತಿಯನ್ನು ಮುಗಿಸಲು ಯೋಜನೆ ರೂಪಿಸಿದ್ದಳು. ಸಿಯಾ ತನ್ನ ಜನ್ಮದಿನದ ನೆಪ ಮಾಡಿ ಜೂನ್ 18ರಂದು ಅಗರ್ವಾಲ್ ನನ್ನು ಲೋಹಗಢ ಕೋಟೆಗೆ ಟ್ರೆಕ್ಕಿಂಗ್‌ಗೆ ಕರೆತಂದಿದ್ದಳು. ಪೂರ್ವ ಯೋಜನೆಯಂತೆ ಪ್ರಿಯಕರ ಚೇತನನ್ನೂ ಆಕೆ ಅಲ್ಲಿಗೆ ಕರೆಸಿಕೊಂಡಿದ್ದಳು. ಕೋಟೆಯ ತುದಿಯಲ್ಲಿ ಕೇತನ್ ಫೋಟೊ ತೆಗೆಯುತ್ತಿದ್ದ ವೇಳೆ ಇಬ್ಬರೂ ಆತನನ್ನು ಪ್ರಪಾತಕ್ಕೆ ತಳ್ಳಿದ್ದರು. ಆರಂಭದಲ್ಲಿ ಫೋಟೊಗೆ ಪೋಸ್ ನೀಡುವಾಗ ಅಗರ್ವಾಲ್ ಕಾಲು ಜಾರಿ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು.‌

ಬಳಿಕ ರಕ್ಷಣಾ ತಂಡವು ಮೃತದೇಹವನ್ನು ಹೊರತೆಗೆದಿತ್ತು. ಆದರೆ, ಲೋನಾವಾಲಾ ಗ್ರಾಮಾಂತರ ಪೊಲೀಸರು ತನಿಖೆ ವೇಳೆ ಹಲವು ಅನುಮಾನಾಸ್ಪದ ಸಂಗತಿಗಳನ್ನು ಪತ್ತೆಹಚ್ಚಿದರು. ಮೊಬೈಲ್ ಡೇಟಾ, ಕರೆ ದಾಖಲೆಗಳು ಮತ್ತು ಸ್ಥಳದಲ್ಲಿದ್ದ ಜನರ ಹೇಳಿಕೆಗಳು ಸಂಶಯವನ್ನು ಹುಟ್ಟುಹಾಕಿದ್ದವು. ತಕ್ಷಣವೇ ಪೊಲೀಸರು ಸಿಯಾ ಮತ್ತು ಆಕೆಯ ಪ್ರೇಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಇಬ್ಬರೂ ಆರೋಪಿಗಳು ಕೇತನ್ ಅಗರ್ವಾಲ್ ಕೊಲೆಗೆ ಸಂಚು ರೂಪಿಸಿದ್ದನ್ನು ಒಪ್ಪಿಕೊಂಡಿದ್ದಾರೆ. 

ಕೇತನ್ ಅಗರ್ವಾಲ್ ಲೋಹಗಢ ಕೋಟೆಯಲ್ಲಿ ಜೂನ್ 18ರಂದು ಕೊಲೆಗೀಡಾಗುವ ಮುನ್ನ ಅದೇ ಸ್ಥಳದಲ್ಲಿ ನಾಲ್ಕು ದಿನ ಮೊದಲು ಅಂದರೆ ಜೂನ್ 14ರಂದು ಕೊಲೆಗೆ ಯತ್ನ ನಡೆದಿತ್ತು. ಆದರೆ, ಕೂದಳೆಲೆ ಅಂತರದಲ್ಲಿ ಬದುಕುಳಿದಿದ್ದರು. ಜೂನ್ 14ರಂದು ಇದೇ ಕೋಟೆಯ ತುದಿಯಲ್ಲಿ ಕೇತನ್ ಅಗರ್ವಾಲ್ ನನ್ನು ಸಿಯಾ ತಳ್ಳಿದ್ದಳು. ಆದರೆ, ಅಲ್ಲಿನ ಮರವೊಂದು ಆತನನ್ನು ತಡೆಹಿಡಿದಿದ್ದರಿಂದ ಅಪಾಯದಿಂದ ಪಾರಾಗಿದ್ದ. ಆ ಸಮಯದಲ್ಲಿ ಸಿಯಾ, ಕೋಟೆಯ ತುದಿಯಲ್ಲಿ ಹಾವು ಇದ್ದದ್ದು ತನ್ನ ಗಮನಕ್ಕೆ ಬಂದಿತ್ತು. ಹಾವಿನ ಕಡಿತದಿಂದ ಕೇತನ್ ನನ್ನು ರಕ್ಷಿಸುವ ಉದ್ದೇಶದಿಂದ ತಳ್ಳಿದ್ದಾಗಿ ಸುಳ್ಳಿನ ಕಥೆ ಹೇಳಿ ನಂಬಿಸಿದ್ದಳು ಎಂದು ಅಗರ್ವಾಲ್ ಕುಟುಂಬಸ್ಥರು ಆರೋಪಿಸಿದ್ದಾರೆ. 

17 ಕೋಟಿಯ ಅರಮನೆ ಬುಕ್ಕಿಂಗ್ ! 

ಕೇತನ್ ಮಹಾರಾಷ್ಟ್ರದ ಪುಣೆ ಸಮೀಪದ ಪಿಂಪ್ರಿ-ಚಿಂಚವಾಡದ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಅವರ ಪುತ್ರ. ಸಿಯಾ ಮತ್ತು ಕೇತನ್ ವಿವಾಹವು ನವೆಂಬರ್ ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆಯಬೇಕಿತ್ತು. ಕುಟುಂಬಸ್ಥರು ಜೈಪುರದಲ್ಲಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ಅರಮನೆಯನ್ನು ಬುಕ್ ಮಾಡಿದ್ದರು. ಅತಿಥಿಗಳನ್ನು ಕರೆತರಲು ಎರಡು ಖಾಸಗಿ ವಿಮಾನಗಳ ವ್ಯವಸ್ಥೆಯನ್ನೂ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.