Sandhya Pavithra Nagaraj Fraud; ಸೌಜನ್ಯಾ ಹೆಸರಿನಲ್ಲಿ ಹೆಲ್ಪ್ ಲೈನ್ ತೆರೆದು ಮೋಸ ; ಅಸಹಾಯಕರಿಗೆ ನೆರವಿನ ನೆಪದಲ್ಲಿ ಬೆಳ್ತಂಗಡಿ ವ್ಯಕ್ತಿಗೆ ವಂಚನೆ, ಕತರ್ನಾಕ್ ಕಂತ್ರಿ ಪವಿತ್ರಾ ನಾಗರಾಜ್ ವಿರುದ್ಧ ಕೇಸು 

21-06-25 08:58 pm       Mangaluru Correspondent   ಕ್ರೈಂ

ಧರ್ಮಸ್ಥಳದ ಸೌಜನ್ಯಾ ಹೆಸರಿನಲ್ಲಿ ಹೆಲ್ಪ್ ಲೈನ್ ತೆರೆದು ಅಸಹಾಯಕರಿಗೆ ನೆರವು ನೀಡುವ ನೆಪದಲ್ಲಿ ಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿರುವ ಆರೋಪದಲ್ಲಿ ಬೆಂಗಳೂರಿನ ಸಂಧ್ಯಾ ಅಲಿಯಾಸ್ ಪವಿತ್ರ ನಾಗರಾಜ್ ವಿರುದ್ಧ ಪುಂಜಾಲಕಟ್ಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರು, ಜೂನ್ 21: ಧರ್ಮಸ್ಥಳದ ಸೌಜನ್ಯಾ ಹೆಸರಿನಲ್ಲಿ ಹೆಲ್ಪ್ ಲೈನ್ ತೆರೆದು ಅಸಹಾಯಕರಿಗೆ ನೆರವು ನೀಡುವ ನೆಪದಲ್ಲಿ ಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿರುವ ಆರೋಪದಲ್ಲಿ ಬೆಂಗಳೂರಿನ ಸಂಧ್ಯಾ ಅಲಿಯಾಸ್ ಪವಿತ್ರ ನಾಗರಾಜ್ ವಿರುದ್ಧ ಪುಂಜಾಲಕಟ್ಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್​ ಬಳಿಯ ಮಾಲಾಡಿ ನಿವಾಸಿ ಕೆ.ರಾಜೇಶ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ರಾಜೇಶ್ ವೃತ್ತಿಯಲ್ಲಿ ಗಾಯಕರಾಗಿದ್ದು, ಅರವಿಂದ್ ವಿವೇಕ್​ ಎಂಬ ಫೇಸ್​ಬುಕ್​ ಪೇಜ್​​ನಲ್ಲಿ ಲೈವ್ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ರಾಜೇಶ್​ ಅವರಿಗೆ ಪವಿತ್ರಾ ನಾಗರಾಜ್ 2024ರಲ್ಲಿ ಫೇಸ್​ಬುಕ್​ ಮೂಲಕ ಪರಿಚಯವಾಗಿದ್ದಳು. ಸೌಜನ್ಯಾ ಹೆಲ್ಪ್​​ಲೈನ್​ ಹೆಸರಿನಲ್ಲಿ ವಂಚನೆಗೊಳಗಾದವರಿಗೆ ನೆರವು ನೆರವಾಗುತ್ತಿದ್ದೇನೆ. ಅಮಾಯಕರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಬಗೆಹರಿಸಿದ್ದೇನೆ ಎಂದು ಪೋಸು ಕೊಟ್ಟು ರಾಜೇಶ್​ ಅವರನ್ನು ನಂಬಿಸಿದ್ದಾಳೆ.

ರಾಜೇಶ್​ ಅವರು ಬಂಟ್ವಾಳ‌ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣದ ಬಗ್ಗೆ ಸಂಧ್ಯಾಗೆ ತಿಳಿಸಿದ್ದಾರೆ. ಅದನ್ನು ಹೈಕೋರ್ಟ್​ ಹಾಕಿ ಎಫ್ಐಆರ್ ರದ್ದುಪಡಿಸುತ್ತೇನೆ. ಅದಕ್ಕೆ ಸ್ವಲ್ಪ ಖರ್ಚು ಇದೆ ಎಂದಿದ್ದಾಳೆ. ನಂತರ, ರಾಜೇಶ್​ ಅವರಿಂದ 2025ರ ಫೆಬ್ರವರಿ- ಮೇ ತಿಂಗಳಲ್ಲಿ ಹಂತ ಹಂತವಾಗಿ 3.20 ಲಕ್ಷ ರೂ. ಹಣ ಪಡೆದಿದ್ದಾಳೆ. ಹಣ ನೀಡಿದ ನಂತರವೂ ಸಮಸ್ಯೆ ಬಗೆಹರಿಯದ ಕಾರಣ ರಾಜೇಶ್​ ಅವರು ಸಂಧ್ಯಾಗೆ ಪ್ರಶ್ನಿಸಿದ್ದಾರೆ. 

ಈ ವೇಳೆ, ಸಂಧ್ಯಾ ಇನ್ನೂ ಹೆಚ್ಚಿನ ಹಣ ನೀಡುವಂತೆ ಕೇಳಿದ್ದಾಳೆ. ಇದರಿಂದ ಸಂಶಯಗೊಂಡ ರಾಜೇಶ್​ ಅವರು ಹೈಕೋರ್ಟಿಗೆ ಸಲ್ಲಿಸಿರುವ ದಾಖಲೆಗಳನ್ನು ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಸಂಧ್ಯಾ ಉಲ್ಟಾ ಮಾತನಾಡಿದ್ದು ಅವಾಚ್ಯ ಶಬ್ದಗಳಿಂದ ಬೈದು ಕೈಕಾಲು ಮುರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ರಾಜೇಶ್​ ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಸಿದ್ದು ಬಿಎನ್​ಎಸ್​ ಕಾಯ್ದೆ 318(4) ಮತ್ತು 351(2) ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದೇ ಪವಿತ್ರಾ ನಾಗರಾಜ್ ಈ ಹಿಂದೆ ಚಳವಳಿ, ಹೋರಾಟದ ನೆಪದಲ್ಲಿ ಹತ್ತಿರವಾಗಿ ಎಸ್ಡಿಪಿಐ ಮುಖಂಡ ಬಿಆರ್ ಭಾಸ್ಕರ ಪ್ರಸಾದ್ ಅವರನ್ನು ಹನಿಟ್ರ್ಯಾಪ್ ಮಾಡಿ, ಆ ಬಗ್ಗೆಯೂ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿ ಬಂಧಿತಳಾಗಿದ್ದಳು.‌

A woman who operated under the alias Pavithra Nagaraj has been booked by Poonjalkatte Police in Mangalore for allegedly defrauding a man from Belthangady by posing as a social worker helping people in distress