ಕನ್ನಯ್ಯಲಾಲ್ ಕೊಲೆಗೂ ಮೊದಲೇ ಮಹಾರಾಷ್ಟ್ರದಲ್ಲಿ ಫಾರ್ಮಸಿಸ್ಟ್ ಕುತ್ತಿಗೆ ಸೀಳಿ ಹತ್ಯೆ ! ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದಕ್ಕೆ ಹತ್ಯೆ ಶಂಕೆ, ಎನ್ಐಎ ತನಿಖೆಗೆ ಒಪ್ಪಿಸಿದ ಕೇಂದ್ರ

02-07-22 05:02 pm       HK News Desk   ಕ್ರೈಂ

ಬಿಜೆಪಿ ನಾಯಕಿ ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದ ಉದಯಪುರದ ಕನ್ನಯ್ಯಲಾಲ್ ಕೊಲೆ ದೇಶದಲ್ಲಿ ಸದ್ದು ಮಾಡಿರುವ ಬೆನ್ನಲ್ಲೇ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲೂ ಇದೇ ರೀತಿಯ ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದೆ.

ನವದೆಹಲಿ, ಜುಲೈ 2: ಬಿಜೆಪಿ ನಾಯಕಿ ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದ ಉದಯಪುರದ ಕನ್ನಯ್ಯಲಾಲ್ ಕೊಲೆ ದೇಶದಲ್ಲಿ ಸದ್ದು ಮಾಡಿರುವ ಬೆನ್ನಲ್ಲೇ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲೂ ಇದೇ ರೀತಿಯ ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದೆ.

ಅಮರಾವತಿ ನಗರದಲ್ಲಿ ಪಶು ಚಿಕಿತ್ಸಾಲಯದ ಮೆಡಿಕಲ್ ಶಾಪ್ ಹೊಂದಿದ್ದ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ (54) ಎಂಬವರನ್ನು ಜೂನ್ 21 ರಂದು ರಾತ್ರಿ ಅಪರಿಚಿತ ವ್ಯಕ್ತಿಗಳು ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ.‌ ಉಮೇಶ್ ಕೊಲ್ಹೆ ಅವರು ಕೂಡ ಕೊಲೆಯಾಗುವುದಕ್ಕೂ ಮುನ್ನ ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದರು. ಆದರೆ ಆಗ ಯಾವ ಕಾರಣಕ್ಕೆ ಕೊಲೆ ಮಾಡಿದ್ದರು ಎನ್ನೋದು ತಿಳಿದುಬಂದಿರಲಿಲ್ಲ. ರಾತ್ರಿ ವೇಳೆ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕಿನಲ್ಲಿ ಬಂದಿದ್ದ ಆಗಂತುಕರು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಂದಿದ್ದಾರೆ. ಈ ವೇಳೆ, ಉಮೇಶ್ ಅವರ ಮಗ, ಪತ್ನಿಯೂ ಇದ್ದುದರಿಂದ ರಸ್ತೆಗೆ ಬಂದು ಬೊಬ್ಬೆ ಹಾಕಿದ್ದರು. ಬಳಿಕ ಹಂತಕರು ಪರಾರಿಯಾಗಿದ್ದರೆ, ಉಮೇಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಉಮೇಶ್ ಸಾವು ಕಂಡಿದ್ದರು.

ಮಗ ನೀಡಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಅಬ್ದುಲ್ ತೌಫೀಕ್ ತಸ್ಲಿಮ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24), ಶೋಯೆಬ್ ಖಾನ್ (22), ಅತಿಬ್ ರಶೀದ್ (22), ಮುದಾಸಿರ್ ಇಬ್ರಾಹಿಂ(23) ಬಂಧಿತರು.

ಇದೀಗ ಕನ್ನಯ್ಯ ಲಾಲ್ ಕೊಲೆಯ ವಿಚಾರ ಸಾಕಷ್ಟು ಸದ್ದು ಮಾಡಿರುವುದರಿಂದ ಉಮೇಶ್ ಅವರನ್ನೂ ಇದೇ ಕಾರಣಕ್ಕಾಗಿ ಕೊಲೆ ಮಾಡಲಾಗಿತ್ತು ಎಂದು ಅಮರಾವತಿ ಬಿಜೆಪಿ ಘಟಕದ ನಾಯಕರು ಆರೋಪಿಸಿದ್ದಾರೆ. ಅಲ್ಲದೆ, ಪೊಲೀಸರು ಕೊಲೆಯ ಹಿಂದಿನ ಕಾರಣ ಪತ್ತೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಆರೋಪ ಕೇಳಿಬಂದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಉಮೇಶ್ ಕೊಲ್ಹೆ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಿದ್ದಾರೆ.

A 54-year-old chemist was hacked to death in Maharashtra’s Amravati for allegedly making a social media post in support of suspended BJP leader Nupur Sharma.