ಕೇರಳದಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಛಿದ್ರ ; ಲವ್ ಜಿಹಾದ್ ಕಾರಣಕ್ಕೆ ಕ್ರೈಸ್ತರ ಮುನಿಸು ! ಬಿಷಪರಿಗೆ ಕೈಮುಗಿದ ಬಿಜೆಪಿ ರಾಜ್ಯಾಧ್ಯಕ್ಷ !

29-03-21 02:38 pm       Mangalore Correspondent   ಕರಾವಳಿ

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಚುನಾವಣಾ ಪ್ರಚಾರದ ಮಧ್ಯೆ ದಿಢೀರ್ ಆಗಿ ಮಂಗಳೂರಿಗೆ ಬಂದು ಬಿಷಪ್ ಅವರನ್ನು ಭೇಟಿಯಾಗಿದ್ದಾರೆ.

ಮಂಗಳೂರು, ಮಾ.29: ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಚುನಾವಣಾ ಪ್ರಚಾರದ ಮಧ್ಯೆ ದಿಢೀರ್ ಆಗಿ ಮಂಗಳೂರಿಗೆ ಬಂದು ಬಿಷಪ್ ಅವರನ್ನು ಭೇಟಿಯಾಗಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನಾ ಅವರನ್ನು ಭೇಟಿಯಾಗಿ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಸಾಮುದಾಯಿಕ ನೆಲೆಯಲ್ಲಿ ಕ್ರೈಸ್ತರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಮತಬ್ಯಾಂಕ್ ಎಂಬ ನಂಬಿಕೆ ಇದೆ. ಕೇರಳದಲ್ಲಿಯೂ ಕ್ರೈಸ್ತರು ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಪರವಾಗಿಯೇ ಮತ ಚಲಾಯಿಸಿಕೊಂಡು ಬಂದಿದ್ದಾರೆ. ಕ್ರೈಸ್ತ ಸಮುದಾಯದ ಮುಖಂಡರು ಕೂಡ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನೇ ಪ್ರತಿನಿಧಿಸುತ್ತಾರೆ. ಆದರೆ, ಈ ಬಾರಿ ಕೇರಳದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳಕೊಂಡು ಲೀಗ್ ಆ ಸ್ಥಾನವನ್ನು ತುಂಬುತ್ತಿರುವುದನ್ನು ಮನಗಂಡಿರುವ ಕ್ರೈಸ್ತರು ಕಾಂಗ್ರೆಸಿನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸಿನ ಸಾಂಪ್ರದಾಯಿಕ ಮತಗಳನ್ನು ತಮ್ಮತ್ತ ಸೆಳೆಯಲು ಬಿಜೆಪಿ ಚರ್ಚ್ ಮುಖ್ಯಸ್ಥರ ಮೂಲಕವೇ ಲಾಬಿ ನಡೆಸಿದೆ.

ಕೇರಳದಲ್ಲಿ ಅತಿ ಹೆಚ್ಚು ಲವ್ ಜಿಹಾದ್ ಕೃತ್ಯಕ್ಕೆ ಬಲಿಯಾದವರು ಕ್ರಿಸ್ತಿಯನ್ ಮತ್ತು ಹಿಂದು ಯುವತಿಯರು. ಕ್ರೈಸ್ತರ ಒಕ್ಕೂಟ ಮತ್ತು ಚರ್ಚ್ ಮುಖ್ಯಸ್ಥರು ಸೇರಿ ಈ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಆಡಳಿತಾರೂಢ ಕಮ್ಯುನಿಸ್ಟರಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರೂ, ಆ ಪಕ್ಷಗಳು ಓಲೈಕೆಯ ರಾಜಕಾರಣದಿಂದಾಗಿ ಲವ್ ಜಿಹಾದ್ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಈ ಬಾರಿಯಂತೂ ಪಕ್ಷದ ಒಳಗಿನ ರಾಜಕೀಯದಿಂದಾಗಿ ಕಾಂಗ್ರೆಸಿನಲ್ಲಿದ್ದ ಪ್ರಭಾವಿ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಕೆಲವರು ಬಿಜೆಪಿಗೆ ಬಂದಿದ್ದರೆ, ಪಿ.ಸಿ.ಚಾಕೋ ಸೇರಿ ಕೆಲವರು ಪ್ರತ್ಯೇಕವಾಗಿ ಗುರುತಿಸ್ಕೊಂಡಿದ್ದಾರೆ.

ಇದರ ಮಧ್ಯದಲ್ಲೇ ಸುರೇಂದ್ರನ್ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡುತ್ತಿದ್ದು ಮಂಗಳೂರಿಗೆ ವಿಮಾನದಲ್ಲೇ ಬಂದು ಬಿಷಪ್ ಅವರನ್ನು ಭೇಟಿಯಾಗಿ, ಆಶೀರ್ವಾದ ಕೋರಿದ್ದಾರೆ. ಅಲ್ಲದೆ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಸೇರಿ ಖುದ್ದಾಗಿ ಬಿಷಪ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಾಸರಗೋಡಿನಲ್ಲಿ 15 ಚರ್ಚ್ ಗಳಿದ್ದು ಒಟ್ಟು 18 ಸಾವಿರ ಕ್ರೈಸ್ತ ಮತದಾರರಿದ್ದಾರೆ. ಇವು ಮಂಗಳೂರು ಧರ್ಮಪ್ರಾಂತ್ಯದ ಅಧೀನಕ್ಕೆ ಒಳಪಟ್ಟಿರುವಂಥವು. ಸಾಮಾನ್ಯವಾಗಿ ಮಸೀದಿಗಳ ರೀತಿ ಚರ್ಚ್ ಗಳು ಕೂಡ ಚುನಾವಣೆ ಸಂದರ್ಭದಲ್ಲಿ ನಿರ್ದಿಷ್ಟ ಪಕ್ಷಕ್ಕೇ ಮತ ನೀಡುವಂತೆ ಸೂಚನೆ ಕೊಡುತ್ತವೆ ಅನ್ನುವ ನಂಬಿಕೆ ಕೆಲವರಲ್ಲಿದೆ. ಇದೇ ಕಾರಣಕ್ಕೋ ಏನೋ, ಬಿಜೆಪಿ ರಾಜ್ಯಾಧ್ಯಕ್ಷರು ಮಂಗಳೂರು ಬಿಷಪರಿಗೆ ಕೈಮುಗಿದು ಆಶೀರ್ವಾದ ಬೇಡಿದ್ದಾರೆ.

ಕಳೆದ ಬಾರಿ ಮಂಜೇಶ್ವರದ ಪಾವೂರಿನಲ್ಲಿ ಚರ್ಚ್ ಪರಿಸರದಲ್ಲಿ ಗಲಾಟೆ ನಡೆದಾಗ ಸ್ಥಳೀಯ ಲೀಗ್ ಮತ್ತು ಕಾಂಗ್ರೆಸ್ ಮುಖಂಡರು ಆರೋಪಿಗಳಿಗೆ ರಕ್ಷಣೆ ನೀಡಿದ್ದರೆಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಸ್ಥಳೀಯವಾಗಿ ಕ್ರೈಸ್ತರು ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ವಿರುದ್ಧ ಮುನಿಸಿಕೊಳ್ಳಲು ಕಾರಣವಾಗಿತ್ತು. ಈ ಮುನಿಸಿನಲ್ಲಿ ಕ್ರೈಸ್ತರು ಯಾರ ಕಡೆ ಮತ ಚಲಾಯಿಸುತ್ತಾರೋ ಅನ್ನುವ ಕುತೂಹಲ ಇದೆ.

ಮಂಗಳೂರಿನಲ್ಲಿ ಬಿಷಪ್ ಹೌಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಂಗಳೂರಿನ ಬಿಜೆಪಿ ನಾಯಕ ಮತ್ತು ಸುರೇಂದ್ರನ್ ಆಪ್ತರಾಗಿರುವ ಕ್ಯಾ.ಬೃಜೇಶ್ ಚೌಟ, ಅಲ್ಪಸಂಖ್ಯಾತ ಮೋರ್ಚಾ ಪ್ರತಿನಿಧಿ ಆಶಾ ಡಿಸಿಲ್ವಾ, ವಿಜಯ ಕುಮಾರ್ ರೈ, ಸುಜಿತ್ ಪ್ರತಾಪ್ ಮತ್ತು ಡಯಾಸಿಸ್ ಪ್ರತಿನಿಧಿ ರಿಚರ್ಡ್ ಕ್ಯಾಸ್ಟಲಿನೋ ಉಪಸ್ಥಿತರಿದ್ದರು. 

Kerala Bjp k Surendra visits Mangalore Bishop Peter Paul Saldanha for blessings. This was to seek Christian votes for Bjp gov says sources.