Mangalore: ಕುರ್ನಾಡಿನ ವೃದ್ಧ ದಂಪತಿಗೆ ನೂತನ ಮನೆ ಹಸ್ತಾಂತರ ; ಮೋದಿ ಹೆಸರಲ್ಲಿ ಆರನೇ "ನಮೋ ಕುಟೀರ" ನಿರ್ಮಾಣ, ಸರಣಿ ಯೋಜನೆ ಬಗ್ಗೆ ಪ್ರಧಾನಿಯಲ್ಲಿ ಪ್ರಸ್ತಾಪಿಸುತ್ತೇನೆ ; ಸಂಸದ ಕ್ಯಾ. ಬೃಜೇಶ್ ಚೌಟ

26-02-26 10:37 am       HK News Staffer   ಕರಾವಳಿ

ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಅಂತ್ಯೋದಯ ಪರಿಕಲ್ಪನೆಯನ್ನ ಪ್ರಧಾನಿ ಮೋದಿಯವರು ಸಾಕಾರಗೊಳಿಸಿದ್ದಾರೆ. ದೇಶದ ಕಟ್ಟ ಕಡೆಯ ವ್ಯಕ್ತಿಯೂ ವಸತಿ, ಆರೋಗ್ಯ, ಶಿಕ್ಷಣದಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಮೋದಿಯವರು ಯೋಜನೆಗಳನ್ನ ರೂಪಿಸಿದ್ದಾರೆ.

ಉಳ್ಳಾಲ, ಫೆ. 26: ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಅಂತ್ಯೋದಯ ಪರಿಕಲ್ಪನೆಯನ್ನ ಪ್ರಧಾನಿ ಮೋದಿಯವರು ಸಾಕಾರಗೊಳಿಸಿದ್ದಾರೆ. ದೇಶದ ಕಟ್ಟ ಕಡೆಯ ವ್ಯಕ್ತಿಯೂ ವಸತಿ, ಆರೋಗ್ಯ, ಶಿಕ್ಷಣದಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಮೋದಿಯವರು ಯೋಜನೆಗಳನ್ನ ರೂಪಿಸಿದ್ದಾರೆ. ಹೆಮ್ಮೆಯ ಪ್ರಧಾನಿ ಹೆಸರಲ್ಲಿ ಸಮಾಜದ ಅಶಕ್ತ ವರ್ಗದವರಿಗೆ ಮನೆಗಳನ್ನ ನಿರ್ಮಿಸಿ ಕೊಡುತ್ತಿರುವ ಕಾರ್ಯ ಮಹತ್ತರವಾಗಿದೆ. ಸಂತೋಷ್ ಬೋಳಿಯಾರ್ ಅವರು ಕೈಗೊಂಡಿರುವ ನಮೋ ಕುಟೀರಗಳ ನಿರ್ಮಾಣದ ಸರಣಿ ಯೋಜನೆಯ ಬಗ್ಗೆ ಅವಕಾಶ ಸಿಕ್ಕಾಗ ಪ್ರಧಾನಿಯವರಲ್ಲಿ ಪ್ರಸ್ತಾಪಿಸುತ್ತೇನೆಂದು ಸಂಸದ ಕ್ಯಾ.ಬೃಜೇಶ್ ಚೌಟ ಹೇಳಿದರು.

ಬಿಜೆಪಿ ಮುಖಂಡರು ಹಾಗೂ ದಿ ಮೈಸೂರು ಇಲೆಕ್ಟ್ರಿಕಲ್ಸ್ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಕುರ್ನಾಡು ಗ್ರಾಮದ ಅಬೆಮಾರ್ ಎಂಬಲ್ಲಿ ರುಕ್ಮಯ ಮತ್ತು ವಿಜಯ ಎಂಬ ಮಕ್ಕಳಿಲ್ಲದ ಹಿರಿಯ ದಂಪತಿಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ನಿರ್ಮಿಸಿ ಕೊಟ್ಟ ಆರನೇ ನೂತನ ಮನೆ "ನಮೋ ಕುಟೀರ"ದ ಕೀಲಿ ಕೈಯನ್ನು ಫಲಾನುಭವಿ ಕುಟುಂಬಕ್ಕೆ ಬುಧವಾರ ನಡೆದ ಗೃಹ ಪ್ರವೇಶ ಸಮಾರಂಭದಲ್ಲಿ ಹಸ್ತಾಂತರಿಸಿ ಅವರು ಮಾತನಾಡಿದರು.

ಆರು ಮನೆಗಳನ್ನು ನಿರ್ಮಿಸಿದರೂ ಸಂತೋಷ್ ಬೋಳಿಯಾರ್ ಅವರ ಉತ್ಸಾಹವು ಕುಂದಿಲ್ಲ. ಅವರ ಸೇವಾ ಚಟುವಟಿಕೆ ಏಳನೇ ಮನೆ ನಿರ್ಮಾಣದತ್ತ ಮುಂದುವರೆದಿರುವುದು ನಮಗೆಲ್ಲ ಪ್ರೇರಣೆಯಾಗಿದೆ. ಜಿಲ್ಲೆಯಲ್ಲಿ ನಡೆಯುವ ದಾನ, ಧರ್ಮದ ಕೈಂಕರ್ಯಗಳು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ನಿರ್ದಿಷ್ಟ ಗುರಿ ಸಾಧನೆಯ ಸೇವಾ ಕಾರ್ಯಗಳು ಹಿಂದೂ ಸಮಾಜದ ಇಂದಿನ ಅನಿವಾರ್ಯತೆ ಆಗಿದೆಯೆಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ಧರ್ಮವೇ ದೇಶದ ಆತ್ಮವಾಗಿದ್ದು, ತ್ಯಾಗ ಮತ್ತು ಸೇವೆಯೇ ಧರ್ಮದ ಭಾಗವಾಗಿದೆ. ಚುನಾಯಿತ ಜನಪ್ರತಿನಿಧಿಗಳು, ಸಹಕಾರಿ ಸಂಸ್ಥೆಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿನ ನಿವೇಶನ ರಹಿತರು, ಶಿಕ್ಷಣ ವಂಚಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡುವ ಕಾರ್ಯ ನಡೆಸಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮೂಲಭೂತ ಸೌಲಭ್ಯ ಲಭಿಸಿದರೆ ಅದುವೇ ದೇಶದ ಅಭಿವೃದ್ಧಿಯ ಸಂಕೇತವಾಗಿದೆ. ನಮ್ಮ ಸಮಾಜದಲ್ಲಿ ತಾನು ತನಗಾಗಿಯೆಂಬ ಯೋಚನೆಗಳೇ ತುಂಬಿದ್ದು, ಸಾಮಾಜಿಕ, ಜನಪರ ಚಿಂತನೆಗಳು ತೀರಾ ಕಡಿಮೆಯಾಗಿವೆ. ಪ್ರತಿಯೊಬ್ಬರೂ ಸಂತೋಷ್ ಬೋಳಿಯಾರ್ ಅವರ ಹಾದಿಯಲ್ಲೇ ಯೋಚಿಸಿ ಸಮಾಜಮುಖಿ ಕಾರ್ಯಗಳನ್ನು ನಡೆಸಿದಲ್ಲಿ ಹಿಂದೂ ಸಮಾಜ ಸಧೃಡಗೊಳ್ಳಲು ಸಾಧ್ಯವಿದೆಯೆಂದರು.

ನಮೋ ಕುಟೀರ ನಿರ್ಮಾಣ ಯೋಜನೆಯ ರೂವಾರಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಸಮಾಜದ ಅರ್ಹ ಅಶಕ್ತ ವರ್ಗದವರಿಗೆ ಹತ್ತು ಮನೆಗಳನ್ನ ನಿರ್ಮಿಸಿಕೊಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಭಾರತವನ್ನು ವಿಶ್ವಗುರುವಿನ ಸ್ಥಾನಕ್ಕೇರಿಸಿದ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಈ ಸರಣಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಪತ್ನಿ, ಮಕ್ಕಳು ಮತ್ತು ಸಮಾಜ ಭಾಂದವರ ನಿರಂತರ ಪ್ರೋತ್ಸಾಹದಿಂದ ಸಮಾಜಮುಖಿ ಕಾರ್ಯಗಳನ್ನ ನಡೆಸಲು ಉತ್ಸಾಹ ಇಮ್ಮಡಿಯಾಗಿದೆ. ದೇವರು ಕರುಣಿಸಿದರೆ ನೂರು ನಮೋ ಕುಟೀರಗಳನ್ನ ಕಟ್ಟುವ ಮಹದಾಸೆ ಇದೆಯೆಂದರು.

ಮಾಡೂರು ಮರಿಯಣ್ಣಪಾಲು ಶಿವದುರ್ಗಾಂಭ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಆಶೀರ್ವಚನವಿತ್ತರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹಕ ಪಿ.ಎಸ್.ಪ್ರಕಾಶ್, ಕಣಂತೂರು ಕ್ಷೇತ್ರದ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯ, ನಾರ್ಯಗುತ್ತುವಿನ ಗಡಿ ಪ್ರಧಾನರಾದ ಪದ್ಮನಾಭ ಯಾನೆ ಮಂಜು ಭಂಡಾರಿ, ವೀಣಾ ಸಂತೋಷ್ ಕುಮಾರ್ ರೈ, ಸ್ಪರ್ಶ ಎಸ್.ರೈ, ಸಮ್ಯಕ್ತ್ ರೈ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.