ಧರ್ಮಸ್ಥಳ ಕ್ಷೇತ್ರದ ಘನತೆ ಕುಗ್ಗಿಸಲೆತ್ನಿಸುತ್ತಿರುವುದು ಅಕ್ಷಮ್ಯ, ನಂಬಿಕೆಗಳಿಗೆ ಅಪಚಾರವಾದರೆ ಸಹಿಸಲ್ಲ ; ವಿಶ್ವ ಹಿಂದೂ ಪರಿಷತ್

09-08-25 08:10 pm       Mangalore Correspondent   ಕರಾವಳಿ

ಧರ್ಮಸ್ಥಳ ದೇಶದ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿದ್ದು ಜಗತ್ತಿನೆಲ್ಲೆಡೆಯಿಂದ ಪ್ರತಿವರ್ಷ ಕೋಟ್ಯಾಂತರ ಭಕ್ತರು ಆಗಮಿಸುತ್ತಾರೆ....

ಮಂಗಳೂರು, ಆ.9 : ಧರ್ಮಸ್ಥಳ ದೇಶದ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿದ್ದು ಜಗತ್ತಿನೆಲ್ಲೆಡೆಯಿಂದ ಪ್ರತಿವರ್ಷ ಕೋಟ್ಯಾಂತರ ಭಕ್ತರು ಆಗಮಿಸುತ್ತಾರೆ. ಅಕ್ಷರ ಹಾಗೂ ಅನ್ನದಾಸೋಹ, ಧರ್ಮ ದಾಸೋಹಕ್ಕೆ ಪ್ರತಿರೂಪದಂತಿರುವ ಧರ್ಮಸ್ಥಳದ ಬಗ್ಗೆ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ವ್ಯಾಪಕವಾಗಿ ಅಪಪ್ರಚಾರವೆಸಗುತ್ತಿವೆ. ಆಮೂಲಕ ಕ್ಷೇತ್ರದ ಗೌರವ ಹಾಗೂ ಘನತೆ ಕುಗ್ಗಿಸಲೆತ್ನಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ವಿಶ್ವ ಹಿಂದು ಪರಿಷತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 

ಸೌಜನ್ಯಾ ಹತ್ಯೆಗೆ ಸಂಬಂಧಿಸಿ ಪಾರದರ್ಶಕ ತನಿಖೆ ನಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ನಡೆದ ಎಲ್ಲಾ ರೀತಿಯ ಪೂರ್ವಾಗ್ರಹ ರಹಿತ ಹೋರಾಟಗಳಿಗೆ ತನ್ನ ಬೆಂಬಲವನ್ನೂ ನೀಡಿದೆ. ಇದರ ನಡುವೆ ಇದೀಗ ಅನಾಮಿಕ ವ್ಯಕ್ತಿಯೊಬ್ಬ ತಾನು 10-20 ವರ್ಷಗಳ ಹಿಂದೆ ನೂರಾರು ಹೆಣಗಳನ್ನು ಧರ್ಮಸ್ಥಳದ ಕಾಡುಗಳಲ್ಲಿ ಹೂತಿದ್ದೇನೆ ಎಂಬ ಹೇಳಿಕೆಯನ್ನು ಆಧರಿಸಿ ಶ್ರೀ ಕ್ಷೇತ್ರದ ಘನತೆಗೆ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ಸಂಚನ್ನು ವ್ಯವಸ್ಥಿತವಾಗಿ ಮಾಡಲಾಗುತ್ತದೆ. 

ಹಿಂದೂ ಧರ್ಮಕ್ಕೆ ಸೇರದ ಅನ್ಯಮತೀಯ ಸಂಘಟನೆಗಳ ಪ್ರಮುಖರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಾಹಿನಿ ನಡೆಸುವವರು ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿಕೊಂಡು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದನ್ನು ನೋಡಿದಾಗ ಇದೊಂದು ದೊಡ್ಡ ಪಡ್ಯಂತ್ರದಂತೆ ಕಂಡುಬರುತ್ತಿದೆ. ಇದನ್ನು ಅಂತರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಬಿತ್ತರಿಸುವ ಮೂಲಕ ಇದರ ಹಿಂದೆ ಅಂತರಾಷ್ಟ್ರೀಯ ಮಟ್ಟದ ಪಿತೂರಿ ಅಡಗಿರುವುದನ್ನು ತೋರಿಸುತ್ತದೆ. 

ರಾಜ್ಯ ಸರಕಾರವು ಎಸ್ಐಟಿ ತನಿಖೆ ನಡೆಸುತ್ತಿರುವಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಘನತೆ ಮತ್ತು ಹಿಂದುಗಳ ನಂಬಿಕೆಗಳಿಗೆ ಅಪಚಾರವಾಗದೇ ಇರುವ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ಇದರ ನೆಪದಲ್ಲಿ ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿ ಸನಾತನ ಧರ್ಮದೊಳಗೆ ಬಿರುಕು ಮೂಡಿಸಲು ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿಶ್ವ ಹಿಂದು ಪರಿಚತ್ ಆಗ್ರಹಿಸಿದೆ. 

ಇತ್ತೀಚಿಗೆ ನಡೆಯುತ್ತಿರುವ ಎಲ್ಲಾ ಘಟನೆಗಳ ಬಗ್ಗೆ, ಆರೋಪಗಳ ಬಗ್ಗೆ ತನಿಖೆಯಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯೂ ಆಗಬೇಕು. ಹಾಗಂತ ಧರ್ಮಸ್ಥಳದಂತಹ ಶ್ರದ್ಧಾಕೇಂದ್ರದ ಘನತೆ ಗೌರವಗಳಿಗೆ ಯಾವುದೇ ಹಾನಿಯಾಗಬಾರದು. ತೇಜೋವಧೆ ಮುಂದುವರಿಸಿದರೆ ಧರ್ಮಸ್ಥಳ ಮಾತ್ರವಲ್ಲದೆ ರಾಜ್ಯ ಹಾಗೂ ದೇಶದ ಯಾವುದೇ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ಪಿತೂರಿ ಮಾಡುವ ಎಲ್ಲಾ ಅಹಿಂದು- ಆರಾಷ್ಟ್ರೀಯ ಶಕ್ತಿಗಳ ವಿರುದ್ಧ ವಿಶ್ವ ಹಿಂದು ಪರಿಷತ್ ಎಲ್ಲಾ ರೀತಿಯ ಹೋರಾಟ ಮಾಡಲು ಸಿದ್ಧವಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಅಧ್ಯಕ್ಷ ದೀಪಕ್ ರಾಜ್ ಗೋಪಾಲ್ ಹಾಗು ವಿಶ್ವ ಹಿಂದೂ ಪರಿಷತ್ತಿನ ನಿಕಟಪೂರ್ವ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ ಪುರಾಣಿಕ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

The Vishwa Hindu Parishad (VHP) has strongly condemned what it describes as a systematic attempt by vested interests and anti-Hindu forces to damage the honour and sanctity of Dharmasthala, one of the country’s most prominent pilgrimage centres that attracts millions of devotees from around the world each year.