Mangalore, Former MLA Moinuddin Bava, NMPT: 26 ಗಂಟೆಯ ಬಳಿಕ ನನ್ನ ಮೇಲೆ ಕೇಸ್‌ ಹಾಕಿದ್ದು ಯಾಕೆ? ತಪ್ಪು ಮಾಡಿದ್ದರೆ ಶಿಕ್ಷೆ ಎದುರಿಸುತ್ತೇನೆ, ವಿನಾಕಾರಣ ಹಿಂಸಿಸಿದ್ದಕ್ಕೆ 24 ಕೋಟಿ ಮಾನನಷ್ಟ ಹಾಕುತ್ತೇನೆ ; ಎನ್ಎಂಪಿಎ ಡೆಪ್ಯುಟಿ ಚೇರ್ಮನ್ ವಿರುದ್ಧ ಮೊಯ್ದೀನ್ ಬಾವಾ ಗರಂ 

13-06-25 06:47 pm       Mangalore Correspondent   ಕರಾವಳಿ

ಕನ್ಸ್ಟ್ರಕ್ಷನ್‌ ಸಂಸ್ಥೆಯೊಂದರ ಸಹ ಗುತ್ತಿಗೆದಾರನ ಬಿಲ್‌ ಕೇಳಲು ಹೋದಾಗ ಅಲ್ಲಿನ ಡೆಪ್ಯುಟಿ ಚೇರ್‌ ಮೆನ್‌ ಜೊತೆ ಗೌರವಯುತವಾಗಿ ವರ್ತಿಸಿದ್ದೇನೆ.

ಮಂಗಳೂರು, ಜೂನ್.13: "ಕನ್ಸ್ಟ್ರಕ್ಷನ್‌ ಸಂಸ್ಥೆಯೊಂದರ ಸಹ ಗುತ್ತಿಗೆದಾರನ ಬಿಲ್‌ ಕೇಳಲು ಹೋದಾಗ ಅಲ್ಲಿನ ಡೆಪ್ಯುಟಿ ಚೇರ್‌ ಮೆನ್‌ ಜೊತೆ ಗೌರವಯುತವಾಗಿ ವರ್ತಿಸಿದ್ದೇನೆ. ಆದರೆ 26 ಗಂಟೆಯ ನಂತರ ಎನ್ ಎಂಪಿಎ ಕಾರ್ಯದರ್ಶಿ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದು ಯಾಕೆ? ಚೇರ್‌ಮೆನ್‌ ಒತ್ತಡದಿಂದ ಸೆಕ್ರಟರಿ ಮತ್ತು ಲೀಗಲ್‌ ಅಡ್ವೈಸರ್‌ ನನ್ನ ಮೇಲೆ ಸುಳ್ಳು ಕೇಸ್‌ ಹಾಕಿಸಿದ್ದಾರೆ. ಹಾಗಾಗಿ ಡೆಪ್ಯುಟಿ ಚೇರ್ಮೆನ್‌ ವಿರುದ್ಧ 24 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ" ಎಂದು ಸುರತ್ಕಲ್‌ ಮಾಜಿ ಶಾಸಕ ಮೊಹಿಯುದ್ದೀನ್‌ ಬಾವಾ ಎಚ್ಚರಿಕೆ ನೀಡಿದ್ದಾರೆ. 

ತನ್ನ ಮೇಲೆ ಎನ್‌ಎಂಪಿಎ ಅಧಿಕಾರಿಗಳು ಪ್ರಕರಣ ದಾಖಲಿಸಿರುವ ಕುರಿತು ಮಂಗಳೂರಿನ ಖಾಸಗಿ ಹೋಟೆಲ್‌ ಒಂದರಲ್ಲಿ ಸ್ಪಷ್ಟನೆ ನೀಡಿದ ಅವರು, “ಒಂದು ವೇಳೆ ನಾನು ಅಧಿಕಾರಿ ಜೊತೆ ಅನಾಗರಿಕವಾಗಿ ವರ್ತಿಸಿದ್ದರೆ ಅಲ್ಲಿನ ಸಿಸಿಟಿವಿ ಚೆಕ್‌ ಮಾಡಲಿ, ನಾನು ಮೇಡಂ ಜೊತೆ ಕೈ ಮುಗಿದು ಸೌಜನ್ಯಯುತವಾಗಿ ಬೀಳ್ಕೊಟ್ಟು ಬಂದಿದ್ದೇನೆ. ಆವರು ನನ್ನ ಅಕ್ಕನ ಸಮಾನ. ಒಂದು ವೇಳೆ ಆರೋಪ ಸಾಬೀತಾದರೆ ಗಲ್ಲಿಗೇರಲೂ ರೆಡಿ ಇದ್ದೇನೆ“ ಎಂದು ಬಾವಾ ಗುಡುಗಿದರು.

ಜೂ.6ರಂದು ನಿಖಿತ ಕನ್ಸ್ ಟ್ರಕ್ಷನ್ ಸಹ ಕಂಟ್ರಾಕ್ಟರ್‌ ಅವರು ತನ್ನ 2.60 ಕೋಟಿ ಬಿಲ್‌ನಲ್ಲಿ ಬಾಕಿ ಇರಿಸಿದ್ದ 1.50 ಕೋಟಿ ಹಣ ಬಂದಿಲ್ಲ ಎಂದು ಹೇಳಿದ್ದರು.  ಅದಕ್ಕಾಗಿ ನಾನು ಅಂದು ನವಮಂಗಳೂರು ಬಂದರು ಕಚೇರಿಗೆ ಹೋಗಿ ಚೀಫ್ ಇಂಜಿನಿಯರ್ ಕಚೇರಿಗೆ ಹೋದಾಗ ಅಧಿಕಾರಿ ನನ್ನ ಜೊತೆ ಮಾತನಾಡಿ, ರೂ.5 ಲಕ್ಷ ಮಾತ್ರ ತಡೆಹಿಡಿದು ಬಾಕಿ ಮೊತ್ತವನ್ನು ಪಾವತಿಸಲು ಆನುಮೋದನೆ ನೀಡುತ್ತೇನೆ ಎಂದೂ, ಫೈನಾನ್ಸ್‌ನಿಂದ ನಿಮ್ಮ ಅಕೌಂಟಿಗೆ ದುಡ್ಡು ಬರುತ್ತದೆ ಎಂಬ ಮಾತನ್ನು ಹೇಳಿದ್ದರು. ಆದರೆ ದುಡ್ಡು ಇನ್ನೂ ಬಂದಿಲ್ಲವೆಂದು ಚೀಫ್ ಇಂಜಿನಿಯರ್‌ ನನ್ನಲ್ಲಿ ಹೇಳಿದ್ದು ಈ ಬಗ್ಗೆ ಡೆಪ್ಯುಟಿ ಚೇರ್‌ಮೆನ್‌ ಅವರನ್ನು ಕಾಣಬೇಕೆಂದು ತಿಳಿಸಿದರು. 

ನಾನು ಜೂ.9ರಂದು ಪುನಃ ಕಂಟ್ರಾಕ್ಟರೊಂದಿಗೆ ಡೆಪ್ಯುಟಿ ಚೇರ್ ಮೆನ್ ಅವರನ್ನು ಕಾಣಲು ಹೋದಾಗ ಅವರು ಬೋರ್ಡ್ ಮೀಟಿಂಗ್‌ನಲ್ಲಿ ಇದ್ದ ಕಾರಣ ಕಾಯಬೇಕೆಂದು ತಿಳಿಸಿದರು. ಮೀಟಿಂಗ್ ಆಗಿ ಮತ್ತೆ 4 ಗಂಟೆಗೆ ಅವರ ಕಚೇರಿಗೆ ತೆರಳಿದೆನು. ಆಗ ಅವರ ಪಿಎ ರಘುರಾಮ ಎಂಬವರು ಮೇಡಂ ಬೇರೆ ಕೆಲಸದಲ್ಲಿ ಇರುವುದಾಗಿಯೂ, ನನ್ನನ್ನು ಕಾಯುವಂತೆ ತಿಳಿಸಿದರು. ನಾನು ಹಾಗೆಯೇ ಕಾದಿದ್ದೆ. ಮೇಡಂ ಸಂಜೆ 8 ಗಂಟೆಗೆ ಅವರ ಕಚೇರಿಯಿಂದ ಹೊರಗೆ ಬಂದಿದ್ದರು ಎಂದು ಬಾವಾ ಹೇಳಿದರು.

ಪಿ.ಎ. ರೂಮಿನಲ್ಲಿದ್ದಾಗ ಅವರ ಜೊತೆ ಸೌಜನ್ಯದಿಂದಲೇ ಮಾತನಾಡಿದ್ದು, ಬಿಲ್ಲಿನಲ್ಲಿ ಕಡಿತ ಮಾಡುವುದು ಬೇಡ. ಚೀಫ್ ಇಂಜಿನಿಯರ್ ರೂ. 5 ಲಕ್ಷ ಅಪ್ರೂವ್ ಕೊಟ್ಟಿದ್ದಾರೆ. ಆದ್ದರಿಂದ ರೂ. 5 ಲಕ್ಷವನ್ನು ತಡೆ ಹಿಡಿದು ಬಾಕಿ ಮೊತ್ತವನ್ನು ರಿಲೀಸ್ ಮಾಡಿ. ಮತ್ತು ಎಲ್.ಡಿ. ಇದ್ದಲ್ಲಿ, ಇ.ಎಂ.ಡಿ. ಮೊತ್ತ ಮತ್ತು ಉಳಿಕೆ ಹಣ, ಮತ್ತು ಬಾಕಿಯಾಗಿರುವ ಬಿಲ್ಲಿನ ಮೊತ್ತದಿಂದ ಕಡಿತ ಮಾಡಿ ಎಂದು ವಿನಂತಿಸಿರುತ್ತೇನೆ. ಅಲ್ಲದೆ ಮೇಡಂ ಕಚೇರಿಯನ್ನು ಬಿಡುವಾಗ ಅವರ ವಾಹನದ ಹತ್ತಿರ ಹೋಗಿ ಗೌರವದಿಂದ ಬೀಳ್ಕೊಟ್ಟಿದ್ದೆ. ಆದರೆ 26 ಗಂಟೆಗಳ ನಂತರ ಬಂದರಿನ ಕಾರ್ಯದರ್ಶಿ‌ ರಾತ್ರಿ ಹೋಗಿ ನನ್ನ ವಿರುದ್ಧ ಕೇಸನ್ನು ದಾಖಲಿಸಿದ್ದು ಯಾಕೆ ಎಂದು ಬಾವಾ ಪ್ರಶ್ನಿಸಿದರು.

ನಾನು ಕಾರನ್ನು ತಡೆ ಹಿಡಿದಿದ್ದೇನೆ, ಅನಾಗರಿಕನಂತೆ ವರ್ತಿಸಿ ಕೆಲಸಕ್ಕೆ ಅಡ್ಡಿ ಪಡಿಸಿರುತ್ತೇನೆ ಎಂದು  ಚೇರ್ ಮೆನ್ ಒತ್ತಡದಿಂದ ಸೆಕ್ರೆಟರಿ ಮತ್ತು ಲೀಗಲ್ ಅಡ್ವೈಸರ್ ಹೋಗಿ ನನ್ನ ಮೇಲೆ ಸುಳ್ಳು ಕೇಸ್‌ ಹಾಕಿರುವುದರಿಂದ ಮನಸ್ಸಿಗೆ ನೋವಾಗಿದೆ. ನಾನು ನವಮಂಗಳೂರು ಬಂದರು ಪ್ರದೇಶದಲ್ಲಿ ಪುನರ್ವಸತಿಗನಾಗಿ, ಆ ಭಾಗದಲ್ಲಿ ಶಾಸಕನಾಗಿ ಮತ್ತು ಈಗ ಮಾಜಿ ಶಾಸಕನಾಗಿ ನಾಗರಿಕರಿಗೆ ಆದಂತಹ ತೊಂದರೆಗೆ ಸಹಾಯ ಮಾಡಲು ಹೋಗಿದ್ದರಲ್ಲಿ ತಪ್ಪೇನು? ತಪ್ಪು ಮಾಡಿದ್ದರೆ ನನ್ನ ಮೇಲೆ ಆಗಲೇ ಯಾಕೆ ದೂರು ಕೊಡಲಿಲ್ಲ? ನಾನು ಏನಾದರೂ ಅನಾಗರಿಕನಂತೆ ವರ್ತಿಸಿದ್ದರೆ, ಅಸಂವಿಧಾನಿಕ ಪದ ಬಳಸಿದ್ದರೆ ಕಾನೂನು ಪ್ರಕಾರ ಶಿಕ್ಷೆ ಪಡೆಯಲು ಸಿದ್ಧ. ಹೀಗಾಗಿ ನಮಗಾದ ಅನ್ಯಾಯದ ಬಗ್ಗೆ ಪೊಲೀಸ್‌ ಕಮೀಷನರ್‌ಗೆ ದೂರು ನೀಡುತ್ತೇನೆ. ಚೀಫ್ ಇಂಜಿನಿಯರ್ ಮತ್ತು ಡೆಪ್ಯುಟಿ ಇಂಜಿನಿಯರ್ ಹೇಳಿಕೆಯನ್ನು ಪಡೆದು ಕೂಲಂಕುಷ ತನಿಖೆ ನಡೆಸಿ, ಸಿಸಿ ಟಿವಿಯನ್ನು ಪರಿಶೀಲಿಸಲಿ, ಈ ಬಗ್ಗೆ ಹೋರಾಟಕ್ಕೂ ಸಿದ್ಧ ಎಂದು ಮೊಯ್ದೀನ್ ಬಾವಾ ಸವಾಲು ಹಾಕಿದ್ದಾರೆ.

Mangalore Former MLA Moinuddin Bava Slams NMPT Deputy Chairperson, False Case Filed After 26 Hours, Will File rs 24 Crore Defamation Suit.