Bantwal Abdul Raheem Murder Case, ADGP Hitendra, Mangalore: ಅಬ್ದುಲ್ ರಹೀಂ ಕೊಲೆ ಪ್ರಕರಣ ; ಐದು ಪೊಲೀಸ್ ತಂಡಗಳಿಂದ ತನಿಖೆ, ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದನ್ನೆಲ್ಲ ನಂಬಬೇಡಿ – ಎಡಿಜಿಪಿ ಹಿತೇಂದ್ರ

28-05-25 08:04 pm       Mangalore Correspondent   ಕರಾವಳಿ

ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐದು ವಿಶೇಷ ಪೊಲೀಸ್ ತಂಡಗಳು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ. ತನಿಖೆಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಪ್ರಸಕ್ತ ಸನ್ನಿವೇಶದಲ್ಲಿ ಅದರ ವಿವರ ನೀಡಲಾಗದು. ಕೊಲೆ ಘಟನೆಗೆ ಕಾರಣವೇನು ಮತ್ತು ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಹೇಳಿದ್ದಾರೆ.

ಮಂಗಳೂರು, ಮೇ 28 : ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐದು ವಿಶೇಷ ಪೊಲೀಸ್ ತಂಡಗಳು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ. ತನಿಖೆಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಪ್ರಸಕ್ತ ಸನ್ನಿವೇಶದಲ್ಲಿ ಅದರ ವಿವರ ನೀಡಲಾಗದು. ಕೊಲೆ ಘಟನೆಗೆ ಕಾರಣವೇನು ಮತ್ತು ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಹೇಳಿದ್ದಾರೆ.

ಬಂಟ್ವಾಳದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹ, ವದಂತಿಗಳಿಗೆ ಕಿವಿ ಕೊಡಬಾರದು ಎಂದು ಮನವಿ ಮಾಡುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ವಿದೇಶದಲ್ಲಿ ಕುಳಿತು ಪೋಸ್ಟ್ ಹಾಕುವುದೆಲ್ಲ ನಡೆದಿದೆ. ಬುದ್ಧಿವಂತರು ಟೆಕ್ನಾಲಜಿ ಬಳಸಿಕೊಂಡು ಇಂಥದ್ದನ್ನು ಮಾಡುತ್ತಾರೆ. ಪೋಸ್ಟ್ ಹಾಕಿದ್ದೆಲ್ಲ ಸತ್ಯ ಎಂದು ಜನರು ನಂಬುವುದಲ್ಲ. ಬಹಳಷ್ಟು ಪೋಸ್ಟ್ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಅಬ್ದುಲ್ ರಹಿಮಾನ್ ಅವರ ಮೃತದೇಹದ ಅಂತ್ಯಕ್ರಿಯೆ ಶಾಂತಿಯುತವಾಗಿ ನಡೆದಿದ್ದು, ಅದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

ಪ್ರಚೋದನಕಾರಿ ಹೇಳಿಕೆ ನೀಡಿದವರ ಬಗ್ಗೆ ಕ್ರಮ ಕೈಗೊಳ್ತೀರಾ ಎಂಬ ಪ್ರಶ್ನೆಗೆ, ಪ್ರಚೋದಕ ಹೇಳಿಕೆ ನೀಡುವುದರಲ್ಲಿ ಈಗ ವಿಚಿತ್ರ ಬೆಳವಣಿಗೆ ಆಗ್ತಾ ಇದೆ. ಪ್ರಚೋದಕ ಹೇಳಿಕೆಯ ಲೈವ್ ಕಾಸ್ಟ್ ಮಾಡುತ್ತಿರುವುದರ ಬಗ್ಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತಿದೆ. ಆದರೆ, ಇದರ ಬಗ್ಗೆ ಸಂಶಯಾಸ್ಪದ ಇದ್ದರೂ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ನುರಿತ ವಕೀಲರನ್ನು ಇಟ್ಟುಕೊಂಡು ಅಂಥವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಟಾಸ್ಕ್ ಫೋರ್ಸ್ ರಚನೆ ಬಗ್ಗೆ ಈಗಾಗಲೇ ನಾವು ಸರಕಾರಕ್ಕೆ ಬರೆದಿದ್ದೇವೆ. ಸರಕಾರದ ಮಟ್ಟದಲ್ಲಿ ಚರ್ಚೆಯಲ್ಲಿದ್ದು, ಇಂದು- ನಾಳೆ ಅಲ್ಲಿಂದ ನೀತಿ ರೂಪುರೇಷೆ ಬಗ್ಗೆ ಆದೇಶ ಬರಲಿದೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದು ಆರ್. ಹಿತೇಂದ್ರ ಹೇಳಿದರು. ಜಿಲ್ಲೆಯಲ್ಲಿ ಪೊಲೀಸರು ಹೊಸಬರಿದ್ದಾರೆ, ಹಾಗಾಗಿ ಈ ರೀತಿ ಆಗ್ತಾ ಇದ್ಯಾ ಎಂಬ ಪ್ರಶ್ನೆಗೆ, ದಕ್ಷಿಣ ಕನ್ನಡ ಜಿಲ್ಲೆಗೆ ನಾವು ಹೊಸಬರು ಬಿಟ್ಟರೆ ಬೇರೆ ಯಾರೂ ಹೊಸಬರು ಇಲ್ಲ. ಎಲ್ಲರೂ ಇಲ್ಲಿನ ಇತಿಹಾಸ ತಿಳಿದವರೇ ಆಗಿದ್ದಾರೆ. ಈ ಪ್ರಶ್ನೆಗೆ ನಿಮಗೇ ಉತ್ತರ ಗೊತ್ತಿದೆ ಎಂದು ಹೇಳಿದರು. ಅಹಿತಕರ ಘಟನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕಾರವಾರ, ಚಿಕ್ಕಮಗಳೂರು, ಹಾಸನ, ಉಡುಪಿಯಿಂದ ಒಂದು ಸಾವಿರದಷ್ಟು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದಲ್ಲದೆ, ಕೆಎಸ್ಸಾರ್ಪಿ ಪೊಲೀಸರನ್ನೂ ನಿಯೋಜಿಸಲಾಗಿದೆ ಎಂದರು.

ಮೆರವಣಿಗೆಯಲ್ಲಿ ಸಾವಿರಾರು ಜನರ ಸಾಥ್ 

ಬುಧವಾರ ಬೆಳಗ್ಗೆ ಯೇನಪೋಯ ಆಸ್ಪತ್ರೆಯಿಂದ ಅಬ್ದುಲ್ ರಹಿಮಾನ್ ಅವರ ಶವವನ್ನು ಪಡೆದು ಕುತ್ತಾರಿನ ಜುಮ್ಮಾ ಮಸೀದಿಯಲ್ಲಿಟ್ಟು ಅಂತಿಮ ದರ್ಶನ ಪಡೆದು ಸಾವಿರಾರು ಜನರ ಸಮ್ಮುಖದಲ್ಲಿ ತೊಕ್ಕೊಟ್ಟು, ಪಂಪ್ವೆಲ್, ಫರಂಗಿಪೇಟೆ ದಾರಿಯಾಗಿ ಬೆಂಜನಪದವು ಬಳಿಯ ಕೊಳತ್ತಮಜಲು ಗ್ರಾಮಕ್ಕೆ ಒಯ್ಯಲಾಯಿತು. ಫರಂಗಿಪೇಟೆ ತಲುಪಿದಾಗ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಯುವಕರು ಉದ್ರಿಕ್ತರಾಗಿ ರಸ್ತೆ ತಡೆಯನ್ನೂ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಶವ ಮೆರವಣಿಗೆ ಸಂದರ್ಭದಲ್ಲಿ ಹೆದ್ದಾರಿ ಉದ್ದಕ್ಕೂ ಮುಸ್ಲಿಂ ಮತ್ತು ಇತರ ಸಮುದಾಯದ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಗೌರವ ಸಲ್ಲಿಸಿದರು.

Bantwal Abdul Raheem Murder Case, Five Police Teams Investigating, Don’t Believe Social Media Posts says ADGP Hitendra in Mangalore.