Mangalore, Stabbing, Suhas Shetty Murder, Arrest: ಮಂಗಳೂರಿನಲ್ಲಿ ಮೂರು ಕಡೆ ಚಾಕು ಇರಿತ ಪ್ರಕರಣ ; ಏಳು ಮಂದಿ ಆರೋಪಿಗಳ ಸೆರೆ, ಉಳ್ಳಾಲ- ಅಡ್ಯಾರ್ ನಲ್ಲಿ ಒಂದೇ ತಂಡದ ಕೃತ್ಯ  

03-05-25 08:39 pm       Mangalore Correspondent   ಕರಾವಳಿ

ಕಂಕನಾಡಿ ನಗರ ಠಾಣೆ ಮತ್ತು ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಮೇ 2ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಘೋಷಣೆಯಾಗಿದ್ದ ಸಂದರ್ಭದಲ್ಲಿ ನಸುಕಿನ ವೇಳೆಗೆ ಎರಡು ಕಡೆ ಚೂರಿ ಇರಿತ ಆಗಿತ್ತು. ಎರಡೂ ಪ್ರಕರಣವನ್ನು ಒಂದೇ ಆರೋಪಿಗಳು ಮಾಡಿದ್ದಾಗಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದ್ದು, ಮೂವರನ್ನು ಬಂಧಿಸಿದ್ದಾರೆ.

ಮಂಗಳೂರು, ಮೇ 3 : ಕಂಕನಾಡಿ ನಗರ ಠಾಣೆ ಮತ್ತು ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಮೇ 2ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಘೋಷಣೆಯಾಗಿದ್ದ ಸಂದರ್ಭದಲ್ಲಿ ನಸುಕಿನ ವೇಳೆಗೆ ಎರಡು ಕಡೆ ಚೂರಿ ಇರಿತ ಆಗಿತ್ತು. ಎರಡೂ ಪ್ರಕರಣವನ್ನು ಒಂದೇ ಆರೋಪಿಗಳು ಮಾಡಿದ್ದಾಗಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದ್ದು, ಮೂವರನ್ನು ಬಂಧಿಸಿದ್ದಾರೆ.

ಮುಡಿಪು ನಿವಾಸಿ ಲೋಹಿತಾಶ್ವ(32), ವೀರನಗರ ನಿವಾಸಿ ಪುನೀತ್ (28) ಮತ್ತು ಕುತ್ತಾರ್ ನಿವಾಸಿ ಗಣೇಶ್ ಪ್ರಸಾದ್ (23) ಬಂಧಿತರು. ಇವರು ಅಡ್ಯಾರ್ ಕಣ್ಣೂರಿನಲ್ಲಿ ನೌಶಾದ್(39) ಎಂಬ ಯುವಕನ ಮೇಲೆ ನಸುಕಿನ ವೇಳೆಗೆ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಚೂರಿಯಿಂದ ಇರಿದಿದ್ದರು. ಆತನ ಬೆನ್ನಿಗೆ ತೀವ್ರ ತರದ ಗಾಯವಾಗಿದ್ದು ಯುನಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಧ್ಯರಾತ್ರಿ 12.30ರ ವೇಳೆಗೆ ತೊಕ್ಕೊಟ್ಟು ಒಳಪೇಟೆಯ ಬಳಿ ಫೈಜಲ್ ಎನ್ನುವ ಯುವಕನಿಗೆ ಚೂರಿಯಿಂದ ಹಲ್ಲೆ ನಡೆಸುವ ಯತ್ನ ನಡೆದಿತ್ತು. ಬೆನ್ನಿಗೆ ಗೀರಿದ ಗಾಯವಾಗಿದ್ದು, ಸಂತ್ರಸ್ತ ಸ್ವಲ್ಪದರಲ್ಲಿ ಪಾರಾಗಿದ್ದ. ಈ ಕೃತ್ಯವನ್ನೂ ಇದೇ ಮೂವರು ಆರೋಪಿಗಳು ಮಾಡಿದ್ದಾಗಿ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಬಂಧಿಸಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಆರೋಪಿಗಳು ತನಿಖೆಯ ಸಂದರ್ಭದಲ್ಲಿ ಎರಡೂ ಕೃತ್ಯಗಳನ್ನು ತಾವೇ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಂಚಾಡಿಯಲ್ಲಿ ಹಲ್ಲೆಗೈದವರ ಸೆರೆ  

ಇನ್ನೊಂದು ಪ್ರಕರಣದಲ್ಲಿ ಕಾವೂರು ಠಾಣೆ ವ್ಯಾಪ್ತಿಯ ಕೊಂಚಾಡಿ ದೇರೆಬೈಲ್ ನಲ್ಲಿ ಬೆಳ್ಳಂಬೆಳಗ್ಗೆ ಮೊಹಮ್ಮದ್ ಲುಕ್ಮಾನ್ ಎಂಬ ಯುವಕನಿಗೆ ಐದಾರು ಮಂದಿ ಸೇರಿ ಹಲ್ಲೆಗೈದ ಘಟನೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ನೀಡಿದ ದೂರಿನಲ್ಲಿ ಬೆಳಗ್ಗೆ 6.45ರ ವೇಳೆಗೆ ಅಂಗಡಿ ಬಾಗಿಲು ಓಪನ್ ಮಾಡುವುದಕ್ಕಾಗಿ ಬಂದಿದ್ದಾಗ ಇನ್ನೋವಾ ಕಾರಿನಲ್ಲಿ ಬಂದ 5-6 ಮಂದಿಯಿದ್ದ ಆಗಂತುಕರು ಹೆಲ್ಮೆಟ್ ಮತ್ತು ಕೈಯಿಂದ ಗುದ್ದಿ ಹಲ್ಲೆ ಮಾಡಿದ್ದಾರೆ. ಆನಂತರ, ಮೊಬೈಲಿನಲ್ಲಿ ಫೋಟೋ ತೆಗೆಯಲು ಯತ್ನಿಸಿದಾಗ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದರು. ಈ ಸಂಬಂಧ ಬಜ್ಪೆ ಕಳವಾರಿನ ಲಿಖಿತ್ (29), ಕುತ್ತಾರಿನ ರಾಕೇಶ್(34), ಸುರತ್ಕಲ್ ಆಶ್ರಯ ಕಾಲನಿಯ ಧನರಾಜ್ (24), ಮೂಡುಬಿದ್ರೆ ಬನ್ನಡ್ಕದ ಪ್ರಶಾಂತ್ ಶೆಟ್ಟಿ (26) ಎಂಬವರನ್ನು ಬಂಧಿಸಲಾಗಿದೆ.  

ಎರಡೂ ಪ್ರಕರಣದಲ್ಲಿ ಆರೋಪಿಗಳ ಗುರುತು ಪತ್ತೆ ಪರೇಡ್ ನಡೆಸಬೇಕಿರುವುದರಿಂದ ಸದ್ಯಕ್ಕೆ ಫೋಟೋ ಪ್ರಕಟಿಸುವಂತಿಲ್ಲ. ಜಾಲತಾಣದಲ್ಲಿ ಆರೋಪಿಗಳ ಫೋಟೋ ಪ್ರಸಾರವಾಗುತ್ತಿದ್ದು, ಇದರಿಂದ ಕೋರ್ಟಿನಲ್ಲಿ ತನಿಖೆಗೆ ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ ಆರೋಪಿಗಳ ಫೋಟೊ ಪ್ರಸಾರ ಮಾಡಬೇಡಿ ಎಂದು ಪೊಲೀಸರು ವಿನಂತಿಸಿದ್ದಾರೆ.

Mangalore Three Stabbing Incidents in Mangalore over suhas murder, Seven Arrested by police. The Mangaluru City police have arrested seven individuals in connection with three separate stabbing incidents reported on Friday, May 2 across Ullal, Kankanady Town, and Kavoor police station limits.