ಬ್ರೇಕಿಂಗ್ ನ್ಯೂಸ್
07-01-25 11:30 am Mangalore Correspondent ಕರಾವಳಿ
ಬೆಳ್ತಂಗಡಿ, ಜ.7: ಮುಂಡಗಾರು ಲತಾ ಸೇರಿದಂತೆ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿ ಕುಟುಂಬಸ್ಥರು, ನಿವಾಸಿಗಳ ಗ್ರಾಮಸ್ಥರು ಕುತೂಹಲಕ್ಕೀಡಾಗಿದ್ದಾರೆ. ಶರಣಾಗತಿ ಆಗಲು ರೆಡಿಯಾಗಿರುವ ಆರು ಮಂದಿ ನಕ್ಸಲರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪದ ಕುತ್ಲೂರಿನ ಸುಂದರಿ ಕೂಡ ಒಬ್ಬರು.
ಸುಂದರಿ ಕುತ್ಲೂರು ಗ್ರಾಮದ ಕೋಟ್ಯಂದಡ್ಕ ನಿವಾಸಿಯಾಗಿದ್ದು, ದಿ.ಬಾಬು ಮತ್ತು ಶ್ರೀಮತಿ ದಂಪತಿಯ ಹಿರಿಯ ಪುತ್ರಿ. 2002-04ರ ವೇಳೆಗೆ ಕುದುರೆಮುಖ ರಕ್ಷಿತಾರಣ್ಯದಿಂದ ಮಲೆಕುಡಿಯ ನಿವಾಸಿಗಳನ್ನು ಒಕ್ಕಲೆಬ್ಬಿಸುವುದು, ಪಶ್ಚಿಮ ಘಟ್ಟದ ತಪ್ಪಲಿನಿಂದ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ವಿಚಾರ ಮುನ್ನೆಲೆಗೆ ಬಂದಿತ್ತು. ಇದಕ್ಕೆದುರಾಗಿ ನಕ್ಸಲ್ ಚಳವಳಿ ಜೋರಾಗಿತ್ತು. ವಿಮೋಚನಾ ರಂಗದ ಹೆಸರಲ್ಲಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ನಕ್ಸಲ್ ಚಳವಳಿಯತ್ತ ಮಲೆಕುಡಿಯ ಜನಾಂಗದ ಯುವಕರು ಆಕರ್ಷಿತರಾಗಿದ್ದರು. ಇದೇ ವೇಳೆ, ಕುತ್ಲೂರಿನ ಬಾಬು ದಂಪತಿಯ ಕಿರಿಯ ಮಗ ವಸಂತನೂ ನಕ್ಸಲ್ ಚಳವಳಿ ಸೇರಿಕೊಂಡಿದ್ದ. 2007ರಲ್ಲಿ ವಸಂತನ ಅಕ್ಕ ಸುಂದರಿಯೂ ಇವರ ಜೊತೆ ಕಾಡು ಸೇರಿಕೊಂಡಿದ್ದಳು.
2010ರಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ವಸಂತ ಕುತ್ಲೂರಿನ ಮನೆಗೆ ಬಂದು ಹೋಗುತ್ತಿದ್ದಾಗ ಎಎನ್ಎಫ್ ಗುಂಡಿಗೆ ಬಲಿಯಾಗಿದ್ದ. ಬೆನ್ನು ಬೆನ್ನಿಗೆ ಎನ್ಕೌಂಟರ್ ಆಗಿದ್ದರಿಂದ ನಕ್ಸಲರು ಕರ್ನಾಟಕದ ಕಾಡನ್ನೇ ಬಿಟ್ಟು ಹೋಗಬೇಕಾದ ಸ್ಥಿತಿ ಬಂದಿತ್ತು. 2011ರ ಬಳಿಕ ಬಹುತೇಕ ನಕ್ಸಲರ ಹೆಜ್ಜೆಗಳೇ ಕರ್ನಾಟಕದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಮಾಯವಾಗಿದ್ದವು. ವಿಕ್ರಂ ಗೌಡ, ಮುಂಡಗಾರು ಲತಾ ನೇತೃತ್ವದಲ್ಲಿ ನಕ್ಸಲರು ತಮ್ಮ ಬಂದೂಕಿನೊಂದಿಗೆ ಕೇರಳದ ಕಾಡು ಸೇರಿಕೊಂಡಿದ್ದರು.
ಎರಡು ವರ್ಷದಿಂದೀಚೆಗೆ ಕೇರಳದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಬಿಗುಗೊಂಡಿದ್ದರಿಂದ ಆ ಕಡೆಯಿಂದ ಮತ್ತೆ ಕರ್ನಾಟಕದತ್ತ ನಕ್ಸಲರು ಹೆಜ್ಜೆ ಇಟ್ಟಿದ್ದರು. ಮುಂಡಗಾರು ಲತಾ ಮತ್ತು ವಿಕ್ರಂ ಗೌಡ ನೇತೃತ್ವದ ಪ್ರತ್ಯೇಕ ತಂಡಗಳು ಕರ್ನಾಟಕದ ಕಾಡಿಗೆ ಹೆಜ್ಜೆ ಇಟ್ಟಿದ್ದವು. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನೆಲೆಯಲ್ಲಿ ಪ್ರಯತ್ನಗಳು ಶುರುವಾಗಿದ್ದವು. ಆದರೆ ಈ ಪ್ರಯತ್ನಕ್ಕೆ ವಿಕ್ರಂ ಗೌಡ ಅಡ್ಡಿಯಾಗಿದ್ದ ಎನ್ನಲಾಗಿತ್ತು. ಮುಂಡಗಾರು ಲತಾ ಮತ್ತು ಸುಂದರಿ ಕುತ್ಲೂರು ಪರವಾಗಿದ್ದರು. ಇವರೊಳಗೆ ಇದೇ ವಿಚಾರದಲ್ಲಿ ವೈಮನಸ್ಸು ಕೂಡ ಉಂಟಾಗಿತ್ತು. ಆನಂತರ, ವಿಕ್ರಂ ಗೌಡನನ್ನು ಆತನದ್ದೇ ಊರು ಕಬ್ಬಿನಾಲೆಯಲ್ಲೇ ಎನ್ಕೌಂಟರ್ ಮಾಡಲಾಗಿತ್ತು.
ಇದೀಗ ಮುಂಡಗಾರು ಲತಾ ನೇತೃತ್ವದಲ್ಲಿ ಆರು ಮಂದಿ ನಕ್ಸಲರು ಶರಣಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಲೋಕಮ್ಮ ಅಲಿಯಾಸ್ ಶ್ಯಾಮಲಾ ಎಂದು ಕರೆದುಕೊಳ್ಳುತ್ತಿದ್ದ ಲತಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಗ್ರಾಮದ ಬಕ್ಕಡಿಬೈಲು ನಿವಾಸಿ. ಈಕೆಯ ಜೊತೆಗಿದ್ದ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ಸುಂದರಿ @ ಗೀತಾ, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊಳೆಯ ಎಂ.ವನಜಾಕ್ಷಿ ಜ್ಯೋತಿ@ಕಲ್ಪನಾ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಕೂಡ ಶರಣಾಗತಿ ಆಗಲಿದ್ದಾರೆ.
ಬದುಕಿ ಬರುತ್ತಾಳೆಂದು ಅಂದ್ಕೊಂಡಿರಲಿಲ್ಲ
ಕೋಟ್ಯಂದಡ್ಕ ನಿವಾಸಿ ದಿ.ಬಾಬು ಮತ್ತು ಶ್ರೀಮತಿ ದಂಪತಿಯ ಐವರು ಮಕ್ಕಳಲ್ಲಿ ಸುಂದರಿ ಹಿರಿಯಾಕೆ ಮತ್ತು ಏಕೈಕ ಪುತ್ರಿ. ನಾಲ್ವರು ಸೋದರರು ಕಿರಿಯವರೇ ಆಗಿದ್ದರು. 2005ರ ವೇಳೆಗೆ ಚಿಗುರು ಮೀಸೆಯ ಯುವಕನಾಗಿದ್ದ ವಸಂತ ಕೆಲವೇ ವರ್ಷಗಳಲ್ಲಿ ಪೊಲೀಸರ ಗುಂಡಿಗೆ ಹತನಾಗಿದ್ದರಿಂದ ಆನಂತರ ಸುಂದರಿ ಮರಳಿ ಬರುತ್ತಾಳೆಂದು ಕುಟುಂಬಸ್ಥರು ಅಂದ್ಕೊಂಡಿರಲಿಲ್ಲ. ಕೆಲವೇ ದಿನಗಳಲ್ಲಿ ಈಕೆಯ ಸಾವಿನ ಸುದ್ದಿಯೂ ಬರಬಹುದು ಎಂದೇ ಭಾವಿಸಿದ್ದರು. ಆದರೆ 17 ವರ್ಷ ಕಳೆದರೂ, ಆಕೆ ಮತ್ತೆ ಮನೆಯತ್ತ ಸುಳಿದೇ ಇಲ್ಲ ಎನ್ನುತ್ತಾರೆ, ಮನೆಯಲ್ಲಿರುವ ಸೋದರರು.
ಇವರದ್ದು ಪಶ್ಚಿಮ ಘಟ್ಟದ ಬೆಟ್ಟಗಳ ನಡುವಿನ ಕುಗ್ರಾಮದ ಮೂಲೆಯಲ್ಲಿರುವ ಮನೆ. ಒಂದಷ್ಟು ಗದ್ದೆ, ಮತ್ತೊಂದಷ್ಟು ಅಡಿಕೆ ತೋಟ ಮಾಡಿಕೊಂಡಿದ್ದಾರೆ. ಒಂದು ಅಂಗಡಿಗೆ ಬಂದು ಹೋಗಬೇಕಿದ್ದರೂ ಕಿಮೀಗಟ್ಟಲೆ ನಡೆದೇ ಹೋಗಬೇಕು. ವಸಂತ ಸೇರಿದಂತೆ ಸುಂದರಿಯ ಇಬ್ಬರು ಸೋದರರು ಅಕಾಲಿಕ ಸಾವು ಕಂಡಿದ್ದಾರೆ. ಈಗ ಸುರೇಶ್ ಎನ್ನುವ ಮತ್ತೊಬ್ಬ ಕಿರಿಯ ಸೋದರ ಮೂಲ ಮನೆಯಲ್ಲಿದ್ದಾರೆ. ಇನ್ನೊಬ್ಬ ಸೋದರ ಹತ್ತಿರದಲ್ಲೇ ಮತ್ತೊಂದು ಮನೆ ಮಾಡಿಕೊಂಡಿದ್ದಾರೆ. ಸುಂದರಿ ಮತ್ತೆ ಮನೆಗೆ ಮರಳುತ್ತಾಳೆ ಎಂದರಿತು ಪತ್ರಕರ್ತರು ಅಲ್ಲಿಗೆ ತೆರಳಿದಾಗ, ನಮಗೇನೂ ಮಾಹಿತಿ ಇಲ್ಲ. 2007ರ ಬಳಿಕ ನಾವು ಆಕೆಯನ್ನು ನೋಡಿಯೇ ಇಲ್ಲ. ಕಾಡಿಗೆ ಹೋದ ಬಳಿಕ ಮನೆಗೆ ಭೇಟಿ ಕೊಟ್ಟಿಲ್ಲ. ಅವರ ಹೋರಾಟದಿಂದಾಗಿ ನಮ್ಮನ್ನು ಒಕ್ಕಲೆಬ್ಬಿಸುವುದು ನಿಂತು ಹೋಗಿದೆ. ನಮ್ಮ ಓರಗೆಯವರು ಸ್ವಲ್ಪ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಈಗ ಮರಳಿ ಬರುತ್ತಾರೆ ಎಂದರೆ ತುಂಬ ಸಂತೋಷ. ಎಲ್ಲ ಹೋರಾಟಗಾರರು ಕಾಡಿನಿಂದ ನಾಡಿಗೆ ಬರಲೆಂದು ಆಶಿಸುತ್ತೇವೆ ಎಂದು ಸುರೇಶ್ ಹೇಳುತ್ತಾರೆ.
ಸುಂದರಿಗೂ ಈಗ ವಯಸ್ಸಾಗಿರಬಹುದು. ಇನ್ನು ಹೋರಾಟ ಮಾಡಲು ಶಕ್ತಿ ಇರಲಿಕ್ಕಿಲ್ಲ. ಆಕೆ ಬಂದರೆ ನಾವು ಒಟ್ಟಿಗೆ ಸೇರಿಸಿಕೊಳ್ಳುತ್ತೇವೆ. ಆದರೆ ಅವರೆಲ್ಲ ಶರಣಾಗತಿಯಾಗಿ ತಮ್ಮ ಪ್ರಕರಣಗಳನ್ನು ಮುಗಿಸಲಿ. ಅವರನ್ನು ಮತ್ತೆ ಜೈಲಿನಲ್ಲಿಟ್ಟು ಕೊಳೆಯಿಸಬೇಡಿ. ಹಿಂದೆ ವಸಂತ ಮತ್ತು ಸುಂದರಿ ನಕ್ಸಲರ ಜೊತೆ ಹೋದಾಗ ಪೊಲೀಸರು ಸಾಕಷ್ಟು ಕಿರುಕುಳ ಕೊಟ್ಟಿದ್ದರು. ಈಗ ಮತ್ತೆ ಸುಂದರಿ ಬಂದ ಬಳಿಕ ಅದೇ ರೀತಿಯ ಕಿರುಕುಳ ನೀಡದಿರಲಿ ಎಂದು ಆಶಿಸುತ್ತೇನೆ ಎಂದು ಸುರೇಶ್ ಹೇಳಿಕೊಂಡರು.
ಪೊಲೀಸರು ಸುಂದರಿಗೆ ಹಾಗೂ ನಮ್ಮ ಮನೆಯವರಿಗೆ ತನಿಖೆ ನೆಪ ಹೇಳಿ ತೊಂದರೆ ನೀಡಬಾರದು. ಹಿಂದಿಗಿಂತ ಈಗ ಊರು, ರಸ್ತೆ ಉತ್ತಮವಾಗಿ ಬೆಳೆದಿದೆ. ಇತ್ತೀಚೆಗೆ ವಿದ್ಯುತ್ ಲೈನ್ ಬಗ್ಗೆ ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಸರ್ವೆ ನಡೆಸಿ ಹೋಗಿದ್ದಾರೆ. ಈ ನಕ್ಸಲ್ ಹೋರಾಟ ಇಲ್ಲಿಗೆ ಅಂತ್ಯವಾಗಲಿ ಎಂದು ಸುಂದರಿಯ ಸಹೋದರ ಸುರೇಶ್ ಅವರ ಪತ್ನಿ ಸವಿತಾ ಕೇಳಿಕೊಂಡಿದ್ದಾರೆ.
Mangalore Naxal surrender, residents of Kuthlur excited, sundari house members request not to create any problem. Urging Naxalites to join mainstream society, Chief Minister Siddaramaiah on Monday said the government will be sensitive to the matter and work within the legal framework to facilitate their surrender.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm