ಮೆದುಳು ನಿಷ್ಕ್ರಿಯ ; ಮಗನ ಅಂಗಾಂಗ ದಾನ ಮಾಡಿದ್ದ ಪೋಷಕರು, ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ಪರಿಹಾರ ಒದಗಿಸಿದ ಶಾಸಕ ಯುಟಿ ಖಾದರ್ 

20-03-23 07:59 pm       Mangalore Correspondent   ಕರಾವಳಿ

ಬಸ್ಸಿನಿಂದ ಎಸೆಯಲ್ಪಟ್ಟು ಪಿಯು ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದ ಪರಿಣಾಮ ಪೋಷಕರು ಆತನ ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದರು.

ಉಳ್ಳಾಲ, ಮಾ.20: ಬಸ್ಸಿನಿಂದ ಎಸೆಯಲ್ಪಟ್ಟು ಪಿಯು ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದ ಪರಿಣಾಮ ಪೋಷಕರು ಆತನ ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದರು. ಮಗನ ಕಳಕೊಂಡು ಸಂತ್ರಸ್ತರಾಗಿದ್ದ ಕುಟುಂಬಕ್ಕೆ ಶಾಸಕ ಯು.ಟಿ.ಖಾದರ್ ಅವರು ಮುಖ್ಯಮಂತ್ರಿಯವರ ವಿಶೇಷ ಅನುದಾನದಿಂದ 5 ಲಕ್ಷ ರೂಪಾಯಿ ಪರಿಹಾರ ತೆಗೆಸಿ ಕೊಟ್ಟಿದ್ದಾರೆ.

ಉಳ್ಳಾಲ ಮಾಸ್ತಿಕಟ್ಟೆ, ಬೈದೆರೆಪಾಲು ನಿವಾಸಿಗಳಾದ ತ್ಯಾಗರಾಜ್ ,ಮಮತಾ ಕರ್ಕೇರ ದಂಪತಿಯ ಪ್ರಥಮ ಪುತ್ರ ಯಶರಾಜ್(16) ಕಳೆದ ಸೆ.7 ರಂದು ಬೆಳಗ್ಗೆ ಉಳ್ಳಾಲದಿಂದ ಸಿಟಿ ಬಸ್ಸಲ್ಲಿ ಮಂಗಳೂರಿನ ಕಾಲೇಜಿಗೆ ಪಯಣಿಸುತ್ತಿದ್ದಾಗ ಬಸ್ಸಿಂದ ಹೊರಗೆಸೆಯಲ್ಪಟ್ಟಿದ್ದ. ತಲೆಗೆ ಗಂಭೀರ ಗಾಯಗೊಂಡ ಯಶರಾಜನ್ನು ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆ.13 ರಂದು ಮಧ್ಯಾಹ್ನ ಯಶರಾಜ್ ಮೆದುಳು ನಿಷ್ಕ್ರಿಯಗೊಂಡಿದ್ದನ್ನ ವೈದ್ಯರು ಘೋಷಿಸಿದ್ದರು. ಪೋಷಕರ ನಿರ್ಧಾರದಂತೆ ಯಶರಾಜ್ ಅಂಗಾಂಗಗಳನ್ನ ದಾನ ಮಾಡಲಾಗಿತ್ತು. 

ಸಾವಿನಲ್ಲೂ ಸಾರ್ಥಕ್ಯ ಮೆರೆದ ಯಶರಾಜ್ ಮನೆಗೆ ಭೇಟಿ ನೀಡಿದ್ದ ಶಾಸಕ ಖಾದರ್ ಅವರು ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ‌ ಪರಿಹಾರ ಕೊಡಿಸುವುದಾಗಿ ಮಾತು ಕೊಟ್ಟಿದ್ದಲ್ಲದೆ ತನ್ನ ಆಪ್ತ ಸಹಾಯಕರ ಮೂಲಕವೇ ಎಲ್ಲಾ ದಾಖಲೆಗಳನ್ನ ಸರಕಾರಕ್ಕೆ ಸಲ್ಲಿಸಿದ್ದರು. ಇದೀಗ ಯಶರಾಜ್ ತಂದೆ ತ್ಯಾಗರಾಜ್ ಅವರ ಬ್ಯಾಂಕ್ ಖಾತೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 5 ಲಕ್ಷ ರೂಪಾಯಿ ಜಮೆ‌ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ತ್ಯಾಗರಾಜ್ ಅವರು ನಮ್ಮಂತಹ ನೊಂದ ಕುಟುಂಬಕ್ಕೆ ಕೇಳದೇನೆ ಬಂದು ಪರಿಹಾರ ಒದಗಿಸಿ ಕೊಟ್ಟ ಶಾಸಕ ಖಾದರ್ ಅವರ ಸರಳತೆ, ಕಾಳಜಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

ಅಂಗಾಂಗ ದಾನ ಎಂಬುದು ಭಾವನಾತ್ಮಕ ವಿಚಾರ. ಇದರ ಬಗ್ಗೆ ಜನಜಾಗೃತಿ ಮೂಡಿಸಬೇಕು. ಯಶರಾಜ್ ಮೆದುಳು ನಿಷ್ಕ್ರಿಯಗೊಂಡಿದ್ದ ಸಂದರ್ಭದಲ್ಲಿ ಆತನ ಕುಟಂಬದವರು ಅಂಗಾಂಗ ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದು ಆತನಿಂದ ಇವತ್ತು ಆರು ಜನ ಬದುಕುವಂತಾಗಿದೆ. ಮನೆ ಮಗನನ್ನ ಕಳಕೊಂಡ ಕುಟಂಬಕ್ಕೆ ಎಷ್ಟು ಕೊಟ್ಟರೂ ಕಡಿಮೆಯೇ. ಅವರನ್ನ ಅಭಿನಂದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಲ್ಲಿ ಮಾತನಾಡಿ ಪರಿಹಾರ ಕೊಡಿಸಿದ್ದೇನೆ. ಇತ್ತೀಚಿಗೆ ಕುತ್ತಾರಲ್ಲಿ ನಡೆದ ಅಪಘಾತದಲ್ಲಿ ಕಲ್ಲಾಪಿನ ಭೂಷಣ್ ರೈ ಎಂಬ ಯುವಕನ ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನ ಮಾಡಲಾಗಿತ್ತು. ಆತನ ಬಡ ಕುಟುಂಬಕ್ಕೂ ಸಹಾಯವಾಗುವ ನಿಟ್ಟಿನಲ್ಲಿ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಶೀಘ್ರವೇ ಹಣ ಬಿಡುಗಡೆಯಾಗುವುದೆಂದು ಖಾದರ್ ಹೇಳಿದ್ದಾರೆ.

Mangalore Ullal 16 year old Yashraj Brain dead youth organ donation, MLA Khader grants 5 lakhs from CM Special fund. Yashraj (16), the son of Ullal Mastikatte residents Tyagaraj and Mamata, who fell off a city bus on September 7 was a first year PUC student of computer science at St Aloysius P U college.