ಬ್ರೇಕಿಂಗ್ ನ್ಯೂಸ್
30-07-20 07:21 pm ಸಜ್ಜನ ಪೂವಯ್ಯ - ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ನ್ಯೂಸ್ View
ತಮಿಳುನಾಡಿನ ತೂತುಕುಡಿಯ ಪೊಲೀಸ್ ಠಾಣೆಯಲ್ಲಿ ತಂದೆ ಮತ್ತು ಮಗನ ಘೋರ ಸಾವು ದೇಶದಾದ್ಯಂತ ಆಕ್ರೋಶದ ಅಲೆ ಎಬ್ಬಿಸಿದ್ದು ವ್ಯಾಪಕ ಚರ್ಚೆಯಾಗುತ್ತಿದೆ. ಈ ಕ್ರೌರ್ಯ ಮೆರೆದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಈ ಪ್ರಕರಣ, ಜನರ ಜೀವನ ಮತ್ತು ಸ್ವಾತಂತ್ರ್ಯ ರಕ್ಷಣೆಯ ಕರ್ತವ್ಯ ಹೊಂದಿರುವ ಸರ್ಕಾರಿ ಯಂತ್ರದ ಕುರಿತು ಗಂಭೀರ ಪ್ರಶ್ನೆಗಳನ್ನೂ ಎತ್ತಿದೆ. ಕಾನೂನು ರಕ್ಷಣೆಯ ಹೊಣೆ ಹೊತ್ತಿರುವವರೇ ಅಪರಾಧ ಎಸಗಿದರೆ, ಸಮಾಜದ ಯಾವೊಬ್ಬ ಸದಸ್ಯರೂ ಸುಭದ್ರ ಹಾಗೂ ಸುರಕ್ಷಿತವಾಗಿ ಇರುವುದಿಲ್ಲ.
ಯಾವುದೇ ದೇಶದಲ್ಲಿ ಜನರ ಪ್ರಾಣ, ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ರಕ್ಷಿಸುವ ಕರ್ತವ್ಯವನ್ನು ಪೊಲೀಸರಿಗೆ ವಹಿಸಲಾಗಿರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ತರವಾದುದು. ಆದರೆ ರಕ್ಷಕರೇ ಕಾನೂನು ಉಲ್ಲಂಘನೆ ಮಾಡಿ ಹೇಯ ಅಪರಾಧ ಕೃತ್ಯಗಳಲ್ಲಿ ತೊಡಗಿದ ಅನೇಕ ಪ್ರಕರಣಗಳಿವೆ. ಕಾನೂನನ್ನು ಸರಿಯಾಗಿ ಅನುಷ್ಠಾನಗೊಳಿಸದೆ ಇರುವುದರಿಂದ ಈ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಮಾನವ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಅನುಭವಿಸಬೇಕಾದರೆ ಕಾನೂನಿನ ಕಟ್ಟುನಿಟ್ಟಿನ ನಿಗಾ ಹಾಗೂ ಅನುಷ್ಠಾನ ಮಹತ್ವದ ಪಾತ್ರ ನಿರ್ವಹಿಸುತ್ತದೆ.
ಮಾನವ ಹಕ್ಕುಗಳು: ಮಾನವ ಹಕ್ಕುಗಳ ಪರಿಕಲ್ಪನೆ ಭೂಮಿಯ ಮೇಲೆ ಮಾನವ ಉಗಮದಷ್ಟೇ ಹಳೆಯದಾದುದು. ಮನುಷ್ಯರಿಗೆ ಸಂಬಂಧಿಸಿದ ಮೂಲಭೂತ ಮತ್ತು ಪ್ರಾಕೃತಿಕವಾದ ಹಾಗೂ ಮನುಷ್ಯರನ್ನು ಮಾನವ ಎಂದು ಪರಿಗಣಿಸಲು ಬೇಕಾದ ಹಕ್ಕುಗಳೇ ಮಾನವ ಹಕ್ಕುಗಳೆಂದು ಸರಳವಾಗಿ ಹೇಳಬಹುದು. ಅವುಗಳನ್ನು ಯಾವುದೇ ದೇಶ, ಸರ್ಕಾರ ಅಥವಾ ಕಾನೂನು ಸೃಷ್ಟಿ ಮಾಡಿದ್ದಲ್ಲ. ಮಾನವರಾಗಿ ಪ್ರತಿ ಮನುಷ್ಯರಲ್ಲೂ ಅದು ಜನ್ಮತಃ ಬಂದಿರುವಂಥದ್ದಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಘನತೆ ಮತ್ತು ಗೌರವದಿಂದ ಕಾಣಬೇಕೆಂಬ ಸರಳ ನಂಬಿಕೆಯನ್ನು ಅದು ಆಧರಿಸಿರುತ್ತದೆ.
ಹಿಂಸೆಯು ಕಾನೂನಿನ ಆಡಳಿತ ಹಾಗೂ ಮಾನವ ಹಕ್ಕುಗಳ ಸಿದ್ಧಾಂತಕ್ಕೆ ವಿರುದ್ಧವಾದ ಕೃತ್ಯವಾಗಿದೆ. ಹೀಗಾಗಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕುರಿತ ಘೋಷಣೆಯ 8 ಮತ್ತು 9ನೇ ಅಧಿನಿಯಮಗಳು ಜನರನ್ನು ಚಿತ್ರಹಿಂಸೆ ಮತ್ತು ಇತರ ಅಮಾನವೀಯ ಅಥವಾ ಘನತೆ ಕುಂದಿಸುವ ಶಿಕ್ಷೆ ನೀಡುವುದರಿಂದ ರಕ್ಷಣೆ ನೀಡುತ್ತವೆ. ಭಾರತೀಯ ಸಂವಿಧಾನ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ (ಸಿಪಿಸಿ), ಭಾರತೀಯ ಸಾಕ್ಷ್ಯ ಕಾನೂನು ಮತ್ತು ಮಾನವ ಹಕ್ಕುಗಳ ರಕ್ಷಣೆ ಕಾನೂನು, ಪೊಲೀಸರ ಹಿಂಸೆ ಹಾಗೂ ಠಾಣಾ ಹಿಂಸಾಚಾರಗಳಿಂದ ರಕ್ಷಣೆ ನೀಡುತ್ತವೆ. ಆದರೆ, ಭಾರತದಲ್ಲಿ ಹೆಚ್ಚುತ್ತಿರುವ ಜೈಲು-ಹಿಂಸೆಗಳ ಸಂಖ್ಯೆಯನ್ನು ನಿಭಾಯಿಸಲು ಅದು ಸಾಕಾಗುವುದಿಲ್ಲ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ರಚನೆ ಆದಾಗಿನಿಂದಲೂ, ಠಾಣೆಗಳಲ್ಲಿ ಸಾವಿಗೆ ಕಾರಣವಾಗುವ ಚಿತ್ರಹಿಂಸೆ ಮತ್ತು ಪೊಲೀಸರಿಂದಾಗುವ ಅತ್ಯಾಚಾರ ಪ್ರಕರಣಗಳಲ್ಲಿ ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಠಾಣೆಗಳಲ್ಲಿ ಪೊಲೀಸರ ಕ್ರೌರ್ಯಕ್ಕೆ ನಲುಗಿ ಸಾಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಎನ್ಎಚ್ಆರ್ಸಿ ವಾರ್ಷಿಕ ವರದಿಗಳು ತೋರಿಸುತ್ತವೆ. 2012-13ರಲ್ಲಿ 1700 ಲಾಕಪ್ಡೆತ್ಗಳು ಸಂಭವಿಸಿದ್ದು 2015-16ರಲ್ಲಿ 1819ಕ್ಕೆ ಏರಿತ್ತು. 1987ರ ವಿಶ್ವಸಂಸ್ಥೆಯ ಚಿತ್ರಹಿಂಸೆ-ವಿರೋಧಿ ಘೋಷಣೆಗೆ ಭಾರತ ಸಹಿ ಮಾಡುವಂತೆ ಸರ್ಕಾರದ ಮನವೊಲಿಸಲು ಮುಂದಾಗಿದ್ದುದು ಎನ್ಎಚ್ಆರ್ಸಿಯ ಮಹತ್ವದ ಸಾಧನೆಯಾಗಿದೆ. ಆದರೆ ಇಂದಿನವರೆಗೂ ಆ ಘೋಷಣೆಯನ್ನು ಭಾರತ ಸ್ಥಿರೀಕರಿಸಿಯೂ ಇಲ್ಲ ಅಥವಾ ಅದಕ್ಕೆ ಅನುಗುಣವಾದ ದೇಶೀಯ ಕಾನೂನುಗಳನ್ನು ಸರಿಯಾಗಿ ಜಾರಿಗೊಳಿಸಿಯೂ ಇಲ್ಲ. ವಿಶ್ವಸಂಸ್ಥೆ ಘೋಷಣೆಗೆ ಅನುಸಾರವಾಗಿ 2010ರಲ್ಲಿ ಲೋಕಸಭೆ ಅಂಗೀಕರಿಸಿದ ‘ಚಿತ್ರಹಿಂಸೆ ತಡೆ ಮಸೂದೆ’ ಈಗಲೂ ಒಂದು ಮೃತಪತ್ರವಾಗಿಯಷ್ಟೆ ಉಳಿದಿದೆ. ಈ ಕುರಿತ ಒಂದು ಸಮಗ್ರ ಕಾನೂನು ಇನ್ನೂ ರೂಪುಗೊಳ್ಳಬೇಕಷ್ಟೆ.
ಸರ್ಕಾರದ ಕರ್ತವ್ಯ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮೂಲಕ ತನ್ನ ಪ್ರಜೆಗಳ ಪ್ರಾಣ, ಸ್ವಾತಂತ್ರ್ಯ ಮತ್ತು ಆಸ್ತಿಪಾಸ್ತಿ ರಕ್ಷಿಸುವುದು ಯಾವುದೇ ಸರ್ಕಾರದ ಪ್ರಮುಖ ಕಾರ್ಯಭಾರವಾಗಿದೆ. ಅಪರಾಧಗಳನ್ನು ಪತ್ತೆ ಮಾಡುವ, ತಡೆಯುವ ಮೂಲಕ ಕ್ರಿಮಿನಲ್ ನ್ಯಾಯದ ಆಡಳಿತದಿಂದ ಸಮಾಜವನ್ನು ರಕ್ಷಿಸುವಲ್ಲಿ ಪೊಲೀಸ್ ಪಡೆಗೆ ಮಹತ್ವದ ಪಾತ್ರವಿದೆ.
ದುರದೃಷ್ಟವಶಾತ್, ಜನಸಾಮಾನ್ಯರನ್ನು ರಕ್ಷಿಸಬೇಕಾದ ಪೊಲೀಸರೇ ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಕಾನೂನು ಭಂಜಕರಾದಾಗ ಕಾನೂನಿನ ಆಡಳಿತವೇ ಅಂತ್ಯಗೊಳ್ಳುತ್ತದೆ. ದೇಶದಲ್ಲಿ ಪೊಲೀಸ್ ತನಿಖೆ, ವಿಚಾರಣೆ, ಬಂಧನ ಮತ್ತು ವಶಕ್ಕೆ ಪಡೆಯುವ ಪ್ರಕ್ರಿಯೆಗಳು ನಿಯಮಗಳ ಪಾಲನೆ ಇಲ್ಲದಿರುವುದರಿಂದ ಸದಾ ವಿವಾದಾತ್ಮಕವಾಗಿಯೇ ಇವೆ.
ಲಾಕಪ್ಡೆತ್, ಹಿಂಸೆ, ಕಾನೂನುಬಾಹಿರ ಬಂಧನ, ಅಕ್ರಮ ವಶ, ಕ್ರಮ ಕೈಗೊಳ್ಳುವಲ್ಲಿ ವೈಫಲ್ಯ, ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದು ಇವೇ ಮೊದಲಾದವು ಪೊಲೀಸರಿಂದಾಗುವ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಸೇರುತ್ತವೆ. ಆದರೆ ಕಾನೂನು ರಕ್ಷಕರೇ ದಬ್ಬಾಳಿಕೆ ನಡೆಸಿದರೆ ಕಾನೂನಾತ್ಮಕ ಆಡಳಿತವೇ ಕುಸಿದು ಬೀಳುತ್ತದೆ. ಮಾನವ ಘನತೆಗೆ ಕುಂದು ತರುವ ರೀತಿಯಲ್ಲಿ ಠಾಣೆಯಲ್ಲಿ ಕ್ರಮ ಕೈಗೊಳ್ಳುವುದು ಅಥವಾ ವರ್ತಿಸುವುದು ಸಂವಿಧಾನದ 21ನೇ ವಿಧಿಗೆ ದೊಡ್ಡ ಹೊಡೆತವಾಗಿದೆ.
ಸುಪ್ರೀಂ ಕೋರ್ಟ್ ಕ್ರಮ: ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಮಾನವ ಹಕ್ಕುಗಳ ಪಾಲಕ ಹಾಗೂ ಸಂರಕ್ಷಕವಾದ ಸುಪ್ರೀಂ ಕೋರ್ಟ್, ಠಾಣೆಗಳಲ್ಲಿನ ಅಪರಾಧಗಳಿಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಮಾಡುವ ಆರೋಪಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಜನರನ್ನು ಹಿಂಸಿಸಲು ಸರ್ಕಾರಿ ನೌಕರರನ್ನು ಬಳಸಿಕೊಳ್ಳಲೇ ಬಾರದು. ಜನರನ್ನು ಇಂಥ ದುರಂತಗಳಿಂದ ಕಾಪಾಡಲು ಸುಪ್ರೀಂ ಕೋರ್ಟ್ ಸದಾ ಎಚ್ಚರದಿಂದಿರುತ್ತದೆ. ಜನರಿಗೆ ಅಭೂತಪೂರ್ವ ಪರಿಹಾರಗಳನ್ನು ನೀಡುವ ಮೂಲಕ ನ್ಯಾಯಾಂಗ ಉತ್ತಮ ಕೆಲಸ ಮಾಡುತ್ತಿದೆ.
ರಘಬೀರ್ ಸಿಂಗ್ ವರ್ಸಸ್ ಹರಿಯಾಣ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೊಲೀಸ್ ದೌರ್ಜನ್ಯದ ಬಗ್ಗೆ ಕಟುವಾದ ಟಿಪ್ಪಣಿ ಮಾಡಿದೆ. ‘ಪೊಲೀಸರು ರಾಕ್ಷಸಿ ವರ್ತನೆ ತೋರಿ ಜನರಲ್ಲಿ ಭಯ ಹುಟ್ಟಿಸುತ್ತಲೇ ಇದ್ದರೆ ನಮ್ಮ ಜೀವ ಮತ್ತು ಸ್ವಾತಂತ್ರ್ಯ ಹೊಸ ಅಪಾಯದಲ್ಲಿ ಸಿಲುಕಿದೆ ಎಂದು ಜನರು ಆತಂಕಪಡುವಂತಾಗುತ್ತದೆ’ ಎಂದು ನ್ಯಾಯಾಲಯ ಹೇಳಿದೆ. ‘ಕಾನೂನು ರಕ್ಷಕರೇ ಮಾನವ ಹಕ್ಕುಗಳ ಕೊಲೆಗಡುಕರಾಗುವುದು ತೀರಾ ಆತಂಕದ ವಿಚಾರ’ ಎಂದು ಈ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
ಮಹಿಳೆಯರಿಗೆ ರಕ್ಷಣೆ: ಪೊಲೀಸ್ ಲಾಕಪ್ಗಳಲ್ಲಿ ಮಹಿಳೆಯರಿಗೆ ಹಿಂಸೆ ನೀಡದಿರುವುದನ್ನು ಖಾತರಿಗೊಳಿಸುವಂತೆ ಶೀಲಾ ಬರ್ಸೆ ವರ್ಸಸ್ ಮಹಾರಾಷ್ಟ್ರ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ಕೊಟ್ಟಿದೆ. ಡಿ.ಕೆ ಬಸು ವರ್ಸಸ್ ಪಶ್ಚಿಮ ಬಂಗಾಳ ಸರ್ಕಾರ ಪ್ರಕರಣದಲ್ಲಿ ಕೂಡ ಸುಪ್ರೀಂ ಕೋರ್ಟ್ ಪೊಲೀಸ್ ದಬ್ಬಾಳಿಕೆ ವಿರುದ್ಧ ಕಿಡಿ ಕಾರಿದೆ. ಸಾಂವಿಧಾನಿಕ ಮತ್ತು ಕಾನೂನಿನ ನಿಯಮಗಳಿದ್ದಾಗ್ಯೂ ಪೊಲೀಸ್ ದೌರ್ಜನ್ಯ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದೆ.
ತನಿಖೆ ವೇಳೆಯೇ ಕೆಟ್ಟ ಸ್ವರೂಪದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆಂಬುದು ಅನುಭವಗಳಿಂದ ತಿಳಿದು ಬಂದಿದೆ. ಲಾಕಪ್ಡೆತ್, ಬಹುಶಃ ಕಾನೂನಿನ ಆಡಳಿತವಿರುವ ನಾಗರಿಕ ಸಮಾಜವೊಂದರಲ್ಲಿ ದಾಖಲಾಗುವ ಹೇಯ ಅಪರಾಧಗಳಲ್ಲಿ ಒಂದಾಗಿದೆ. ಸುಪ್ರೀಂ ಕೋರ್ಟ್ ಅನೇಕ ಮಾರ್ಗಸೂಚಿ ಹೊರಡಿಸಿದ್ದು, ಅವುಗಳನ್ನು ಕ್ರಿಮಿನಲ್ ದಂಡ ಸಂಹಿತೆಯಲ್ಲಿ ಅಳವಡಿಸಲಾಗಿದೆ.
ಸಾಂಕ್ರಾಮಿಕ ಪಿಡುಗು: ಇತ್ತೀಚಿನ ವರ್ಷಗಳಲ್ಲಿ ಅನೇಕ ಉಪಕ್ರಮಗಳ ಹೊರತಾಗಿಯೂ ಜೈಲು ಹಿಂಸೆ ಭಾರತದಾದ್ಯಂತ ಸಾಂಕ್ರಾಮಿಕ ರೋಗವಾಗಿ ಬಿಟ್ಟಿದೆ. ಸಾವಿರಾರು ಜನರಿಗೆ ಮಾನವ ಘನತೆ ನಿರಾಕರಿಸುವ ಪ್ರಕ್ರಿಯೆ ಮುಂದುವರಿದೇ ಇದೆ. ಭಾರತದಲ್ಲಿ ಲಾಕಪ್ಡೆತ್ಗಳು ಎಷ್ಟು ಸಾಮಾನ್ಯವಾಗಿವೆ ಎಂದರೆ ಅವುಗಳು ಪೊಲೀಸ್ ತನಿಖೆಯ ಮಾಮೂಲಿ ಭಾಗ ಎಂದು ಸಾರ್ವಜನಿಕರು ಒಪ್ಪಿಕೊಳ್ಳುವಂತಾಗಿದೆ. ಲಾಕಪ್ಡೆತ್ ಸಂಭವಿಸಿದಾಗ ಸಾರ್ವಜನಿಕರು ರೊಚ್ಚಿಗೇಳುತ್ತಾರೆ. ಸಮಯ ಕಳೆದಂತೆ ಅದು ತಣ್ಣಗಾಗುತ್ತದೆ. ಇಲ್ಲವೇ ಹೆಚ್ಚೆಂದರೆ ಒಂದು ತನಿಖಾ ಸಮಿತಿಯ ರಚನೆಯೊಂದಿಗೆ ಅದರ ಕಾವು ಇಳಿಯುತ್ತದೆ. ಚಿತ್ರಹಿಂಸೆಯ ವಿರುದ್ಧ ಸರಿಯಾದ ಕಾನೂನು ರೂಪಿಸದೆ ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಪೊಲೀಸ್ ಠಾಣೆಗಳಲ್ಲಿನ ಚಿತ್ರಹಿಂಸೆ ಮತ್ತು ಲಾಕಪ್ಡೆತ್ ಪಿಡುಗಿನ ನಿಮೂಲನೆಗಾಗಿ ಒಂದು ಪ್ರಬಲವಾದ ಕಾನೂನು ರೂಪಿಸಲು ಇದು ಸಕಾಲವಾಗಿದೆ.
(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)
01-07-26 09:49 pm
HK News Desk
ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನ...
29-06-26 10:33 pm
ಬಿಜೆಪಿಯಲ್ಲಿ ಆಡಿಯೋ ಬಿರುಗಾಳಿ ; ವಿಜಯೇಂದ್ರರನ್ನು ಈ...
29-06-26 10:22 pm
ಅಮಲು ಪದಾರ್ಥ ಬೆರೆಸಿದರೆ ರಾಜ್ಯದಲ್ಲಿ ಎಲ್ಲಾ ಪಾನ್ ಮ...
28-06-26 06:30 pm
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
30-06-26 08:06 pm
HK News Staffer
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
ಮೊಹರಂ ಮೆರವಣಿಗೆಯಲ್ಲಿ 15,000 ಜನರ ಹತ್ಯೆಗೆ ಸ್ಕೆಚ್...
29-06-26 03:35 pm
3-6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ; ಇದು ಅಲುಗಾಡುವ...
29-06-26 12:41 pm
01-07-26 10:37 pm
HK News Desk
ಭಾರಿ ಮಳೆ ; ಜುಲೈ 2 ದಕ್ಷಿಣ ಕನ್ನಡ ಶಾಲೆ - ಕಾಲೇಜಿಗ...
01-07-26 09:58 pm
ನಾಗುರಿ ದುರಂತ ನಮಗೆಲ್ಲ ಎಚ್ಚರಿಕೆ ಕರೆಗಂಟೆ, ವಿಕೋಪಗ...
01-07-26 09:18 pm
Mangalore Garodi Landslide: ನಾಗುರಿ ದುರಂತ ; ಗು...
01-07-26 08:41 pm
ಕಡೆಗೂ ಮಳೆ ಬಿರುಸು ; ತೊಕ್ಕೊಟ್ಟಿನಲ್ಲಿ ಮನೆ ಮೇಲೆರ...
01-07-26 11:46 am
01-07-26 09:34 pm
HK News Desk
ಹೋಂ ಸ್ಟೇನಲ್ಲಿ ಯುವತಿ ನಿಗೂಢ ಸಾವು ; ನನ್ನ ಪ್ರಿಯತಮ...
01-07-26 06:52 pm
ಭಗ್ನ ಪ್ರೇಮಿಯಿಂದ ಕಾರು ಸ್ಫೋಟ ಕೇಸ್ ; ಕಚ್ಚಾ ಬಾಂಬ್...
01-07-26 04:51 pm
ಕಂಕನಾಡಿ ಗರೋಡಿಯಲ್ಲಿ ನಾಲ್ಕು ಬಾಡಿಗೆ ಮನೆಗಳಿದ್ದ ಕಟ...
01-07-26 08:59 am
Panambur Gold Robbery, Update: ಪಣಂಬೂರಿನಲ್ಲಿ ಚ...
30-06-26 11:02 pm