ಮಸೀದಿ ವಾಚ್ ಮನ್ ಜೊತೆಗೆ ಕುಡಿದು ಕಿರಿಕ್ ; ಹೊಡೆದ ಏಟಿಗೆ ಕುಸಿದು ಬಿದ್ದು ವ್ಯಕ್ತಿ ಸಾವು, ಕೊಲೆ ಕೇಸಿನಲ್ಲಿ ಜೈಲು ಪಾಲಾದ ಕಾವಲುಗಾರ

29-04-26 11:17 am       HK News Staffer   ಕ್ರೈಂ

ನಗರದ ವೆನ್ಲಾಕ್ ಆಸ್ಪತ್ರೆ ಹಿಂಭಾಗದ ಮಸೀದಿಯ ವಾಚ್ ಮನ್ ಮತ್ತು ಕುಡಿದು ಬಂದಿದ್ದ ವ್ಯಕ್ತಿಯೊಬ್ಬನ ನಡುವೆ ಕಿರಿಕ್ ಆಗಿ ವಾಚ್ ಮನ್ ಹೊಡೆದ ಏಟಿಗೆ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮಂಗಳೂರು, ಎಪ್ರಿಲ್ 29: ನಗರದ ವೆನ್ಲಾಕ್ ಆಸ್ಪತ್ರೆ ಹಿಂಭಾಗದ ಮಸೀದಿಯ ವಾಚ್ ಮನ್ ಮತ್ತು ಕುಡಿದು ಬಂದಿದ್ದ ವ್ಯಕ್ತಿಯೊಬ್ಬನ ನಡುವೆ ಕಿರಿಕ್ ಆಗಿ ವಾಚ್ ಮನ್ ಹೊಡೆದ ಏಟಿಗೆ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. 

ಎಪ್ರಿಲ್ 26ರಂದು ಮಧ್ಯಾಹ್ನ ಘಟನೆ ನಡೆದಿದ್ದು ಬಜಾಲ್ ಜಲ್ಲಿಗುಡ್ಡೆಯ ಪದ್ಮನಾಭ (44) ಎಂಬವರು ಕುಡಿತದ ಚಟ ಹೊಂದಿದ್ದು ಮಸೀದಿ ಎದುರಿನ ಆಟೋ ಚಾಲಕರಿಗೆ ಕಿರಿಕ್ ಮಾಡುತ್ತಿದ್ದ. ಕುಡಿದು ಬಂದು ಆಟೋದಲ್ಲಿ ಕುಳಿತುಕೊಳ್ಳುವುದು, ಮಸೀದಿ ಬಳಿ ಕುಳಿತು ಅಸಭ್ಯ ರೀತಿ ಮಾತನಾಡುತ್ತಿದ್ದ. ಈ ಬಗ್ಗೆ ಆಟೋ ಚಾಲಕರು, ಅಲ್ಲಿಯೇ ಇದ್ದ ಮಸೀದಿ ವಾಚ್ ಮನ್ ಬೈದಾಟ ಮಾಡುತ್ತಿದ್ದರು. ಮೊನ್ನೆ ಮಧ್ಯಾಹ್ನ ವಾಚ್ ಮನ್ ವೆಂಕಟ ಮತ್ತು ಪದ್ಮನಾಭ ನಡುವೆ ಗಲಾಟೆಯಾಗಿದ್ದು ವಾಚ್ ಮನ್ ತನ್ನ ಕೈಲಿದ್ದ ಲಾಠಿಯಲ್ಲಿ ಹೊಡೆದಿದ್ದ. ಆನಂತರ ಪದ್ಮನಾಭ ಕುಸಿದು ಬಿದ್ದಿದ್ದು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಕೆಲ ಹೊತ್ತಿನಲ್ಲಿ ಪದ್ಮನಾಭ ಸಾವನ್ನಪ್ಪಿದ್ದ. 

ಘಟನೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು ವಾಮಂಜೂರು ನಿವಾಸಿ ವಾಚ್ ಮನ್ ವೆಂಕಟನನ್ನು ಬಂಧಿಸಿದ್ದು ಜೈಲು ಪಾಲಾಗಿದ್ದಾನೆ.