ಆಖರ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ ; ಹಲವರು ವಶಕ್ಕೆ, ಮಠಕ್ಕೆ ಸಿಎಂ ಯೋಗಿ ಭೇಟಿ

21-09-21 12:08 pm       Headline Karnataka News Network   ದೇಶ - ವಿದೇಶ

ಅಖಿಲ ಭಾರತೀಯ ಆಖರ ಪರಿಷತ್ ಅಧ್ಯಕ್ಷರಾಗಿದ್ದ ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ ಮಾಡಿಕೊಂಡಿರುವುದು ಉತ್ತರ ಪ್ರದೇಶದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.

Photo credits : Ani@Ani

ಲಕ್ನೋ, ಸೆ.21: ಅಖಿಲ ಭಾರತೀಯ ಆಖರ ಪರಿಷತ್ ಅಧ್ಯಕ್ಷರಾಗಿದ್ದ ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ ಮಾಡಿಕೊಂಡಿರುವುದು ಉತ್ತರ ಪ್ರದೇಶದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ರಾಷ್ಟ್ರ ಮಟ್ಟದಲ್ಲಿ ಸಾಧುಗಳ ಪರಿವಾರದ ಸಂಸ್ಥೆಗಳಲ್ಲಿ ಪ್ರಮುಖವಾಗಿದ್ದ ಆಖರ ಪರಿಷತ್ ಮುಖ್ಯಸ್ಥರಾಗಿದ್ದ 72 ವರ್ಷದ ಮಹಾಂತ ನರೇಂದ್ರ ಗಿರಿ ಪ್ರಯಾಗ್ ರಾಜ್ ಜಿಲ್ಲೆಯ ಬಾಘಂಬರಿ ಮಠದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಸೋಮವಾರ ಮಧ್ಯಾಹ್ನ ಊಟದ ಬಳಿಕ ಮಠದಲ್ಲಿದ್ದ ನರೇಂದ್ರ ಗಿರಿ ಬಾಗಿಲು ಹಾಕಿದ್ದು ಸಂಜೆಯಾದರೂ ತೆರೆದಿರಲಿಲ್ಲ. ಬಳಿಕ ಫೋನ್ ಮಾಡಿದರೂ ತೆಗೆಯದೇ ಇದ್ದುದರಿಂದ ಶಿಷ್ಯಂದಿರು ಬಾಗಿಲು ಒಡೆದು ನೋಡಿದಾಗ, ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಕಂಡುಬಂದಿದ್ದರು. ಅಲ್ಲದೆ, ಸಾಯುವುದಕ್ಕೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದರು. ಡೆತ್ ನೋಟನ್ನೂ ಬರೆದಿಟ್ಟಿದ್ದು ಸಾವಿಗೆ ಕಾರಣವಾದ ಹಲವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಈವರೆಗೂ ಗೌರವಯುತವಾಗಿ ಬದುಕಿದ್ದೇನೆ. ನಿಂದನೆ, ಟೀಕೆ ಕೇಳಿಕೊಂಡು ಅಗೌರವದಿಂದ ಬದುಕಲು ಸಾಧ್ಯವಿಲ್ಲ. ಹೀಗಾಗಿ ನಾನು ನನ್ನದೇ ದಾರಿ ಕಂಡುಕೊಳ್ಳುತ್ತಿದ್ದೇನೆ. ಬದುಕು ಮುಗಿಸಲು ಇಚ್ಚಿಸುತ್ತೇನೆ ಎಂದು ಡೆತ್ ನೋಟ್ ಬರೆದಿದ್ದರು. ಅಲ್ಲದೆ, ಮಠ ಮುಂದೆ ಯಾರಿಗೆ ಸೇರಬೇಕು ಅನ್ನುವುದರ ಬಗ್ಗೆ ಉಯಿಲನ್ನೂ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾಂತ ನರೇಂದ್ರ ಗಿರಿಯವರ ಶಿಷ್ಯ ಆನಂದ್ ಗಿರಿ ಸೇರಿದಂತೆ ಹಲವರ ಹೆಸರುಗಳಿದ್ದು, ಆನಂದ್ ಗಿರಿಯನ್ನು ಪೊಲೀಸರು ಉತ್ತರಾಖಂಡದಲ್ಲಿ ಬಂಧಿಸಿದ್ದಾರೆ. ಆದರೆ, ಬಂಧನಕ್ಕೂ ಮುನ್ನ ಆನಂದ್ ಗಿರಿ, ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಳ್ಳುವಂಥವರಲ್ಲ. ಇದರ ಹಿಂದೆ ಏನೋ ಷಡ್ಯಂತ್ರ ಅಡಗಿದೆ. ಹಣದ ವಿಚಾರದಲ್ಲಿ ಭಾರೀ ಟಾರ್ಚರ್ ಇತ್ತು. ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಯತ್ನ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸ್ವಾಮೀಜಿ ಸಾವಿನ ಬಗ್ಗೆ ತೀವ್ರ ಕಂಬನಿ ಮಿಡಿದಿದ್ದಾರೆ. ಅಲ್ಲದೆ, ಗೋರಖಪುರ್ ಮಠದ ಪ್ರಮುಖರೂ ಆಗಿರುವ ಯೋಗಿ ಆದಿತ್ಯನಾಥ್ ಮಂಗಳವಾರ ಪ್ರಯಾಗರಾಜ್ ಗೆ ಭೇಟಿ ನೀಡಿದ್ದು, ಸ್ವಾಮೀಜಿ ಮಹಂತ ನರೇಂದ್ರ ಗಿರಿಯವರ ಅಂತಿಮ ದರ್ಶನ ಪಡೆದಿದ್ದಾರೆ. ಅಖಿಲ ಭಾರತೀಯ ಆಖರ ಪರಿಷತ್ತಿನ 13 ವಿಭಾಗಗಳ ಪ್ರಮುಖರೂ ಪಾಲ್ಗೊಂಡಿದ್ದು, ಯೋಗಿ ಆದಿತ್ಯನಾಥ್ ಸ್ವಾಮೀಜಿ ಸಾವಿನ ಬಗ್ಗೆ ವಿಭಾಗ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ.

ಪೊಲೀಸರು ಆನಂದ್ ಗಿರಿ ಜೊತೆಗೆ ಪ್ರಯಾಗರಾಜ್ ನ ಬಾಂಧವ ಹನುಮಾನ್ ದೇವಸ್ಥಾನದ ಅರ್ಚಕ ಅಧ್ಯಾಯ್ ತಿವಾರಿ ಮತ್ತು ಆತನ ಮಗ ಸಂದೀಪ್ ಅವರನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಗುರಿ ಪಡಿಸಿದ್ದಾರೆ. ಮೂಲಗಳ ಪ್ರಕಾರ್, ಮಹಾಂತ ಆನಂದ ಗಿರಿ ಅವರನ್ನು ಹಣಕ್ಕಾಗಿ ಕೆಲವರು ಪೀಡಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಮಠಕ್ಕೆ ಸಂಬಂಧಿಸಿದ ಜಾಗವನ್ನು ಮಾರಾಟ ಮಾಡಲಾಗಿತ್ತು ಅನ್ನೋದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Uttar Pradesh Chief Minister Yogi Adityanath will be visiting Prayagraj on Tuesday morning to pay his last respects to seer Mahant Narendra Giri who was found dead under suspicious circumstances on Monday. All 13 Akhil Bharatiya Akhara Parishad (ABAP) heads will be present in Prayagraj to pay their last respects to the mortal remains of Mahant Giri. They will also hold a meeting regarding a demand for a probe in the matter and the nomination of a new head of the Akhara.