ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾಮೆ ; ಟಿವಿಕೆ ಪಕ್ಷ ಸೇರಿದ ವೇಲುಮಣಿ ಬಣದ ಬೆಂಬಲಿಗರು

25-05-26 08:18 pm       HK News Staffer   ದೇಶ - ವಿದೇಶ

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಎಐಎಡಿಎಂಕೆ ಪಕ್ಷದ ಎಸ್‌.ಪಿ ವೇಲುಮಣಿ ಮತ್ತು ಸಿ.ವಿ ಷಣ್ಮುಗಂ ಬಣದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದು ಟಿವಿಕೆ ಪಕ್ಷ ಸೇರಿದ್ದಾರೆ.

ಚೆನ್ನೈ, ಮೇ 25: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಎಐಎಡಿಎಂಕೆ ಪಕ್ಷದ ಎಸ್‌.ಪಿ ವೇಲುಮಣಿ ಮತ್ತು ಸಿ.ವಿ ಷಣ್ಮುಗಂ ಬಣದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದು ಟಿವಿಕೆ ಪಕ್ಷ ಸೇರಿದ್ದಾರೆ. 

ಮರಗತಂ ಕುಮಾರ್‌ವೇಲು (ಮಧುರಾಂತಕಂ ಕ್ಷೇತ್ರ), ಜಯಕುಮಾರ್ (ಪೆರುಂದುರೈ ಕ್ಷೇತ್ರ), ಸತ್ಯಭಾಮಾ (ಧಾರಾಪುರಂ ಕ್ಷೇತ್ರ) ಅವರು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಜೆ.ಸಿ.ಡಿ ಪ್ರಭಾಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಬಳಿಕ ಈ ಮೂವರು ಶಾಸಕರು ಸಚಿವ ಆಧವ್ ಅರ್ಜುನ್ ಅವರನ್ನು ಭೇಟಿಯಾಗಿ ಟಿವಿಕೆ ಸೇರಿದ್ದಾರೆ. ಇದರೊಂದಿಗೆ ತಮಿಳುನಾಡು ವಿಧಾನಸಭೆಯಲ್ಲಿ ಮತ್ತೆ ಮೂರು ಸ್ಥಾನಗಳು ಖಾಲಿಯಾಗಿವೆ. ಸಿಎಂ ವಿಜಯ್ ರಾಜೀನಾಮೆ ನಂತರ ತಾನು ಪ್ರತಿನಿಧಿಸಿದ್ದ ತಿರುಚ್ಚಿ ಪೂರ್ವ ಕ್ಷೇತ್ರವನ್ನು ಬಿಟ್ಟು ಪೆರಂಬದೂರು ಕ್ಷೇತ್ರವನ್ನು ಉಳಿಸಿಕೊಂಡಿದ್ದರು. 

ತಮಿಳುನಾಡು ಚುನಾವಣೆ ಫಲಿತಾಂಶದ ನಂತರ ಎಐಎಡಿಎಂಕೆಯಲ್ಲಿ ತೀವ್ರ ಆಂತರಿಕ ಕಲಹ ಏರ್ಪಟ್ಟಿತ್ತು. ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ವಿರುದ್ಧ ಬಂಡಾಯ ಎದ್ದಿರುವ ಎಸ್‌ ಪಿ ವೇಲುಮಣಿ ಮತ್ತು ಸಿ.ವಿ ಷಣ್ಮುಗಂ ನೇತೃತ್ವದ ಸುಮಾರು 30 ಶಾಸಕರ ಗುಂಪು, ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಸರ್ಕಾರಕ್ಕೆ ಬೆಂಬಲ ಘೋಷಿಸಿತ್ತು. ವಿಧಾನಸಭೆ ಕಲಾಪದಲ್ಲಿ ಈ ಬಂಡಾಯ ಶಾಸಕರು ಮುಖ್ಯಮಂತ್ರಿ ವಿಜಯ್ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ್ರೋಹ ಎಸಗಿದ ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಇಪಿಎಸ್ ನೇತೃತ್ವದ ಎಐಎಡಿಎಂಕೆ ನಾಯಕತ್ವವು ಕಾನೂನು ಪ್ರಕ್ರಿಯೆ ಆರಂಭಿಸಿತ್ತು. ಅನರ್ಹತೆಯ ಕಾನೂನು ಕ್ರಮ ಎದುರಿಸುವ ಮುನ್ನವೇ ಎಚ್ಚತ್ತುಕೊಂಡ ಮೂವರು ಶಾಸಕರು, ತಾವಾಗಿಯೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.