ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್, ಪಹಲ್ಗಾಮ್ ದಾಳಿ ರೂವಾರಿ ಲಷ್ಕರ್ ಉಗ್ರ ಎನ್ಕೌಂಟರ್, ಅರಣ್ಯ ಮಧ್ಯದಿಂದ ಸ್ಯಾಟಲೈಟ್ ಫೋನ್ ನೀಡಿತ್ತು ಸುಳಿವು! 

28-07-25 11:07 pm       HK News Desk   ದೇಶ - ವಿದೇಶ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾಗಿದ್ದ ಲಷ್ಕರ್ ಉಗ್ರನನ್ನು ಭಾರತೀಯ ಸೇನೆಯು ಆಪರೇಶನ್ ಮಹಾದೇವ್ ಹೆಸರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿದೆ.

ಶ್ರೀನಗರ, ಜುಲೈ 28 : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾಗಿದ್ದ ಲಷ್ಕರ್ ಉಗ್ರನನ್ನು ಭಾರತೀಯ ಸೇನೆಯು ಆಪರೇಶನ್ ಮಹಾದೇವ್ ಹೆಸರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿದೆ.

ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ದಚಿಗಮ್ ಅರಣ್ಯದಲ್ಲಿ ಉಗ್ರರು ಅಡಗಿರುವ ಸುಳಿವು ಲಭಿಸಿತ್ತು. ಇದರಂತೆ, ಕಾಡಿಗೆ ನುಗ್ಗುವ ಕಾರ್ಯಾಚರಣೆಗೆ ಮುಂದಾದ ಸೇನೆಯು ಸೋಮವಾರ ಬೆಳಗ್ಗೆ ಮೂವರನ್ನು ಎನ್ಕೌಂಟರ್ ಮಾಡಿದೆ. ಅದರಲ್ಲಿ ಒಬ್ಬಾತ ಪಹಲ್ಗಾಮ್ ದಾಳಿಯ ರೂವಾರಿ ಎನ್ನಲಾದ ಸುಲೇಮಾನ್ ಅಲಿಯಾಸ್ ಹಾಶಿಮ್ ಮೂಸಾ ಎನ್ನುವುದನ್ನು ಗುರುತಿಸಲಾಗಿದೆ. ಈತ ಪಾಕಿಸ್ತಾನಿ ಪ್ರಜೆಯಾಗಿದ್ದು, ಲಷ್ಕರ್ ತೊಯ್ಬಾ ಸಂಘಟನೆಯ ಟಾಪ್ ಕಮಾಂಡರ್ ಆಗಿದ್ದ. ಈತನ ಇನ್ನಿಬ್ಬರು ಸಹಚರರಾದ ಯಾಸಿರ್ ಮತ್ತು ಅಬು ಹಮ್ಜಾ ಕೂಡ ಸೇನಾ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ.

ಪಹಲ್ಗಾಮ್ ದಾಳಿಗೂ ಹಿಂದೆ ಸ್ಯಾಟಲೈಟ್ ಫೋನ್ ಬಳಕೆಯಾಗಿದ್ದನ್ನು ಸೇನೆ ಪತ್ತೆ ಮಾಡಿತ್ತು. ಆಬಳಿಕ ಆ ರೀತಿಯ ಸ್ಯಾಟಲೈಟ್ ಫೋನ್ ಬಳಕೆ ಆಗಿರಲಿಲ್ಲ. ಆನಂತರ, ಇದೇ ಮೊದಲ ಬಾರಿಗೆ ಎರಡು ದಿನಗಳ ಹಿಂದೆ ಸ್ಯಾಟಲೈಟ್ ಸಿಗ್ನಲ್ ಸಿಕ್ಕಿತ್ತು. ಅದು ಜನವಸತಿ ಇಲ್ಲದ ದಚಿಗಮ್ ಅರಣ್ಯದಲ್ಲಿ ಇರುವುದನ್ನು ತೋರಿಸಿದ್ದರಿಂದ ಪಹಲ್ಗಾಮ್ ದಾಳಿ ನಡೆಸಿದ ಉಗ್ರರು ಅದೇ ಜಾಗದಲ್ಲಿ ಅಡಗಿರುವ ಸುಳಿವು ಲಭಿಸಿತ್ತು.

ಇದರ ಬೆನ್ನಲ್ಲೇ ಸಿಆರ್ ಪಿಎಫ್ ಮತ್ತು ಸೇನಾ ಯೋಧರು ಜಂಟಿ ಕಾರ್ಯಾಚರಣೆ ನಡೆಸಿದ್ದು, ನಸುಕಿನ ವೇಳೆಗೆ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಸ್ಥಳದಲ್ಲಿ ಅಡುಗೆ ಮಾಡಿದ್ದ ಕುರುಹುಗಳು ಪತ್ತೆಯಾಗಿವೆ. ಹೀಗಾಗಿ ಉಗ್ರರು ಕಾಡಿನ ಒಳಗಡೆ ಅವಿತುಕೊಂಡಿದ್ದರು ಎನ್ನಲಾಗುತ್ತಿದೆ. ಈ ಜಾಗದಲ್ಲಿ ಲಷ್ಕರ್ ಮತ್ತು ಮುಜಾಹಿದೀನ್ ಸಂಘಟನೆಯ ಏಳು ಉಗ್ರರು ಇದ್ದರು ಎನ್ನುವ ಮಾಹಿತಿ ಸ್ಥಳೀಯರಿಂದ ಲಭಿಸಿದ್ದು, ಸೇನಾ ಕಾರ್ಯಾಚರಣೆ ಮುಂದುವರಿದಿದೆ.

As Defence Minister Rajnath Singh began the Operation Sindoor debate in Parliament, security forces scored a massive win today by gunning down three Pakistani terrorists in an encounter near Srinagar, two of them involved in the Pahalgam attack in which 26 innocents were murdered in cold blood.