VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ ದಿನ ; ವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಂಡಿದ್ದನ್ನು ಬೆಂಬಲಿಸಿದ ಎಮರ್ಜೆನ್ಸಿ ಕಾಲದ ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಾಂಗ ಚರಿತ್ರೆಯಲ್ಲಿ ದೊಡ್ಡ ಕಪ್ಪು ಚುಕ್ಕೆ ; ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ 

22-06-25 07:48 pm       HK News Desk   ದೇಶ - ವಿದೇಶ

1975ರ ಎಮರ್ಜೆನ್ಸಿ ಸಮಯದಲ್ಲಿ ಜನರ ಮೂಲಭೂತ ಹಕ್ಕುಗಳ ಕುರಿತಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇಡೀ ಜಗತ್ತಿನ ನ್ಯಾಯಾಂಗ ಚರಿತ್ರೆಯಲ್ಲಿ ದೊಡ್ಡ ಕಪ್ಪು ಚುಕ್ಕೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದ್ದಾರೆ.

ನವದೆಹಲಿ, ಜೂನ್ 22: 1975ರ ಎಮರ್ಜೆನ್ಸಿ ಸಮಯದಲ್ಲಿ ಜನರ ಮೂಲಭೂತ ಹಕ್ಕುಗಳ ಕುರಿತಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇಡೀ ಜಗತ್ತಿನ ನ್ಯಾಯಾಂಗ ಚರಿತ್ರೆಯಲ್ಲಿ ದೊಡ್ಡ ಕಪ್ಪು ಚುಕ್ಕೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದ್ದಾರೆ.

ದೇಶದ ಒಂಬತ್ತು ಹೈಕೋರ್ಟುಗಳು ಎಮರ್ಜೆನ್ಸಿ ಇರಲಿ, ಇಲ್ಲದಿರಲಿ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗದು ಎಂದು ತೀರ್ಪಿತ್ತರೂ, ಸುಪ್ರೀಂ ಕೋರ್ಟ್ ಮಾತ್ರ ಮೂಲಭೂತ ಹಕ್ಕಿರ ರಕ್ಷಿಸುವುದನ್ನು ಎತ್ತಿಹಿಡಿಯುವುದಕ್ಕೂ ನಿರಾಕರಿಸಿತ್ತು. ಹೈಕೋರ್ಟ್ ಆದೇಶಗಳನ್ನೆಲ್ಲ ಬದಿಗೊತ್ತಿ ಎಮರ್ಜೆನ್ಸಿ ಪರವಾಗಿ ತೀರ್ಪು ಕೊಟ್ಟಿರುವುದು ಕಾನೂನನ್ನು ನಂಬುವ ಇಡೀ ಜಗತ್ತಿನ ನ್ಯಾಯಾಂಗ ಚರಿತ್ರೆಯಲ್ಲಿ ದೊಡ್ಡ ಕಪ್ಪು ಚುಕ್ಕೆ ಎಂದು ಧನ್ಕರ್ ಹೇಳಿದ್ದಾರೆ.

ವ್ಯಕ್ತಿ ಸ್ವಾತಂತ್ರ್ಯ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ರಾಜ್ಯಗಳು ಯಾವುದೇ ವ್ಯಕ್ತಿಯನ್ನು ವಶಕ್ಕೆ ಪಡೆದಿರುವಾಗ ಅದಕ್ಕೆದುರಾಗಿ ಜನರು ಹೈಕೋರ್ಟ್ ಮೆಟ್ಟಿಲೇರುವಂತಿಲ್ಲ. ಬಂಧನ ವಿರುದ್ಧ ರಿಲೀಫ್ ಕೇಳುವಂತಿಲ್ಲ ಎಂದು 4-1 ಬಹುಮತದಲ್ಲಿ ತೀರ್ಪು ನೀಡಿತ್ತು. ಈ ರೀತಿಯ ತೀರ್ಪು ಸರ್ವಾಧಿಕಾರವನ್ನು ಬೆಂಬಲಿಸುತ್ತದೆ. ಅಲ್ಲದೆ, ವ್ಯಕ್ತಿಯೊಬ್ಬರು ಎಮರ್ಜೆನ್ಸಿ ಬಗ್ಗೆ ನಿರ್ಣಯಿಸಿ ಜನರ ಮೇಲೆ ಹೇರಿದ್ದನ್ನು ಈ ತೀರ್ಪು ಬೆಂಬಲಿಸಿದಂತಾಗಿತ್ತು ಎಂದು ಜಗದೀಪ್ ಧನ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ರಾಜ್ಯಸಭೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಗದೀಪ್ ಧನ್ಕರ್ ಈ ಮಾತುಗಳನ್ನು ಹೇಳಿದ್ದಾರೆ. ಇದಲ್ಲದೆ, ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹ್ಮದ್ ಅವರು ಪ್ರಧಾನಿ ಇಂದಿರಾ ಗಾಂಧಿ ಸೂಚಿಸಿದ್ದನ್ನೇ ಅನುಮೋದಿಸಿ ದೇಶಕ್ಕೆ ಎಮರ್ಜೆನ್ಸಿ ಹೇರಲು ಕಾರಣವಾಗಿದ್ದರು. ಎಮರ್ಜೆನ್ಸಿ ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರ ಆಗಿರಲಿಲ್ಲ ಎಂದು ಜಗದೀಪ್ ಹೇಳಿದ್ದಾರೆ. ಯಾರೇ ರಾಷ್ಟ್ರಪತಿ ಇದ್ದರೂ, ಪ್ರಧಾನ ಮಂತಿ ಒಬ್ಬನೇ ನಿರ್ಧಾರ ಕೈಗೊಂಡಿದ್ದರೆ ಅದನ್ನು ಪಾಲನೆ ಮಾಡಬೇಕಾಗಿಲ್ಲ. ಈ ಬಗ್ಗೆ ಸಂವಿಧಾನದ ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಪ್ರಧಾನ ಮಂತ್ರಿ ನೇತೃತ್ವದ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡೇ ರಾಷ್ಟ್ರಪತಿಗೆ ಶಿಫಾರಸು ಮಾಡಬೇಕಾಗುತ್ತದೆ. ಆದರೆ ಎಮರ್ಜೆನ್ಸಿ ವಿಚಾರದಲ್ಲಿ ಆ ರೀತಿ ಆಗಿರಲಿಲ್ಲ. ಇಲ್ಲಿಯೂ ಸಂವಿಧಾನದ ಉಲ್ಲಂಘನೆಯಾಗಿತ್ತು ಎಂದು ಜಗದೀಪ್ ಹೇಳಿದ್ದಾರೆ.

ಇದರ ಪರಿಣಾಮ ಕೆಲವೇ ಗಂಟೆಗಳಲ್ಲಿ ದೇಶಾದ್ಯಂತ ಲಕ್ಷಾಂತರ ಜನರನ್ನು ಬಂಧಿಸಲಾಯಿತು. ಮನೆ, ಕಚೇರಿಗಳಲ್ಲಿದ್ದವರನ್ನು ಎಳೆತಂದು ಜೈಲಿಗೆ ಅಟ್ಟಲಾಯಿತು. ಸಂವಿಧಾನ ಕೊಟ್ಟ ಅಧಿಕಾರವನ್ನೇ ಮೊಟಕುಗೊಳಿಸಿ, ಪತ್ರಿಕೆ, ಮಾಧ್ಯಮ ಸ್ವಾತಂತ್ರ್ಯ ನಿಷೇಧಿಸಲಾಯಿತು. ಇಂಡಿಯನ್ ಎಕ್ಸ್ ಪ್ರೆಸ್ ಸೇರಿದಂತೆ ಕೆಲವು ಪತ್ರಿಕೆಗಳು ತಮ್ಮ ಸಂಪಾದಕೀಯವನ್ನು ಖಾಲಿಯಾಗಿ ಬಿಟ್ಟು ಪ್ರಸಾರ ಮಾಡಿದ್ದವು. ಆನಂತರ, ಪ್ರಧಾನಿ ಪಟ್ಟಕ್ಕೇರಿದ ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ, ಚಂದ್ರಶೇಖರ್ ಅವರಂತಹ ಸಾಮಾಜಿಕ ಮುಂದಾಳುಗಳನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಹಾಗಾಗಿ, 1975ರ ಜೂನ್ 25ರಂದು ಇಂದಿರಾ ಗಾಂಧಿ ಕೈಗೊಂಡಿದ್ದ ತುರ್ತು ಸ್ಥಿತಿಯ ನಿರ್ಧಾರ ಸಂವಿಧಾನ ಹತ್ಯೆಗೈದ ದಿನವಾಗಿತ್ತು. ಇದಕ್ಕಾಗಿ ಈಗಿನ ಸರ್ಕಾರವು ಪ್ರತಿ ವರ್ಷ ಜೂನ್ 25ರ ದಿನವನ್ನು ಸಂವಿಧಾನ ಹತ್ಯೆಗೈದ ದಿನವನ್ನಾಗಿ ಆಚರಿಸುತ್ತ ಬಂದಿದೆ.

ಆಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ, ಕಾನೂನು ರಕ್ಷಣೆಯ ಕಾವಲುಗಾರನಾಗಿ ನಾವು ಇದ್ದೇವೆ ಎಂಬುದನ್ನು ದೇಶಕ್ಕೆ ನೆನಪಿಸಿಕೊಳ್ಳುವ ದಿನವಾಗಿ ಜೂನ್ 25 ಅನ್ನು ಆಚರಿಸಬೇಕು. ಎಮರ್ಜೆನ್ಸಿ ಹೇಗಾಯ್ತು, ಅದರ ಪರಿಣಾಮಗಳೇನು ಎನ್ನುವ ಕುರಿತಾಗಿ ನೀವು ಕಲಿತುಕೊಂಡರೆ ಪ್ರಜಾಪ್ರಭುತ್ವದ ಮೌಲ್ಯವನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. (ಮೂಲ- ಬಾರ್ ಅಂಡ್ ಬೆಂಚ್ ನ್ಯೂಸ್ ವೆಬ್)

Supreme Court of India's emergency-era judgment was the darkest in judicial history, Vice President Jagdeep Dhankhar said on Friday. Dhankhar said that during times of crisis, people turn to the judiciary for protection. However, the Supreme Court of India declined to uphold the fundamental rights.