# Arrest kohli ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ; ಕೇವಲ 36 ಗಂಟೆಯಲ್ಲಿ ಹೀರೋ ಕೊಹ್ಲಿ ವಿಲನ್, ಪತ್ನಿಯೊಂದಿಗೆ ಲಂಡನ್ ಹಾರಿದ ವಿರಾಟ್, ಲಂಡನ್ ಹೋಗೋಕೆ ಅಂತಲೇ ತರಾತುರಿಯಲ್ಲಿ ವಿಜಯೋತ್ಸವ ಮಾಡಿದ್ರಾ..?

07-06-25 09:54 pm       HK News Desk   ದೇಶ - ವಿದೇಶ

18 ವರ್ಷಗಳ ಬಳಿಕ ಆರ್ ಸಿಬಿ ಐಪಿಎಲ್ ಟ್ರೋಫಿ ಎತ್ತುತ್ತಿದ್ದಂತೆ ವಿರಾಟ್ ಕೊಹ್ಲಿ ಪ್ರಚಾರದ ಉತ್ತುಂಗಕ್ಕೆ ಏರಿದ್ದರು. ಕೊಹ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನಿಗೆ ಭಾರತ ರತ್ನ ನೀಡುವಂತೆಯೂ ಆಗ್ರಹ ಮಾಡತೊಡಗಿದ್ದರು. ಆದರೆ ಇದಾಗಿ ಕೇವಲ ಎರಡೇ ದಿನದಲ್ಲಿ ಕೊಹ್ಲಿ ಅರೆಸ್ಟ್ ಮಾಡುವಂತೆ ಜಾಲತಾಣದಲ್ಲಿ ನೆಟ್ಟಿಗರು ಆಗ್ರಹ ಮಾಡಿದ್ದಾರೆ.

ಮುಂಬೈ, ಜೂನ್ 7 : 18 ವರ್ಷಗಳ ಬಳಿಕ ಆರ್ ಸಿಬಿ ಐಪಿಎಲ್ ಟ್ರೋಫಿ ಎತ್ತುತ್ತಿದ್ದಂತೆ ವಿರಾಟ್ ಕೊಹ್ಲಿ ಪ್ರಚಾರದ ಉತ್ತುಂಗಕ್ಕೆ ಏರಿದ್ದರು. ಕೊಹ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನಿಗೆ ಭಾರತ ರತ್ನ ನೀಡುವಂತೆಯೂ ಆಗ್ರಹ ಮಾಡತೊಡಗಿದ್ದರು. ಆದರೆ ಇದಾಗಿ ಕೇವಲ ಎರಡೇ ದಿನದಲ್ಲಿ ಕೊಹ್ಲಿ ಅರೆಸ್ಟ್ ಮಾಡುವಂತೆ ಜಾಲತಾಣದಲ್ಲಿ ನೆಟ್ಟಿಗರು ಆಗ್ರಹ ಮಾಡಿದ್ದಾರೆ. ಆರ್ ಸಿಬಿ ಗೆಲುವಿನ 36 ಗಂಟೆಯಲ್ಲಿ ಕೊಹ್ಲಿ ವಿಲನ್ ಆಗಿದ್ದು, ಜಾಲತಾಣದಲ್ಲಿ ಅರೆಸ್ಟ್ ಹ್ಯಾಷ್ ಟ್ಯಾಗ್ ಹೆಚ್ಚುತ್ತಿದ್ದಂತೆ ಕೊಹ್ಲಿ ತನ್ನ ಪತ್ನಿಯೊಂದಿಗೆ ಲಂಡನ್ ಹಾರಿದ್ದಾರೆ.

# Arrest kohli ಜಾಲತಾಣದಲ್ಲಿ ತೀವ್ರ ಟ್ರೆಂಡ್ ಆಗಿದ್ದು, ಬೆಂಗಳೂರಿನ ಕಾಲ್ತುಳಿತಕ್ಕೆ ಕೊಹ್ಲಿಯನ್ನು ಅರೆಸ್ಟ್ ಮಾಡಬೇಕೆಂದು ಜನರು ಆಗ್ರಹ ಮಾಡತೊಡಗಿದ್ದಾರೆ. ಕೇವಲ 36 ಗಂಟೆಯಲ್ಲಿ ಅಭಿಮಾನಿಗಳ ವರಸೆ ಬದಲಾಗಿದ್ದನ್ನು ನೋಡಿ ಕೊಹ್ಲಿಯೂ ಬೆದರಿದ್ದಾರೆ. ಇದನ್ನು ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಟ್ರೋಲ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಆರ್ ಸಿಬಿ ಗೆಲುವಿನ ವಿಜಯೋತ್ಸವ ಆಗುತ್ತಿದ್ದಂತೆ ಕಾಲ್ತುಳಿತ ಆಗಿದ್ದು, 11 ಜನರು ಪ್ರಾಣ ಕಳಕೊಂಡಿದ್ದರು. ಅಲ್ಲದೆ, 50ಕ್ಕೂ ಹೆಚ್ಚು ಮಂದಿ ಗಾಯಕ್ಕೀಡಾಗಿದ್ದರು. ಈ ಘಟನೆ ಬೆನ್ನಲ್ಲೇ ಜಾಲತಾಣದಲ್ಲಿ ಆರ್ ಸಿಬಿ ವಿರುದ್ಧ ಜನಸಾಮಾನ್ಯರು ಕೋಪ ತೋರಿದ್ದರು.

ಮೂಲಗಳ ಪ್ರಕಾರ, ಫೈನಲ್ ಆದ ಬೆನ್ನಲ್ಲೇ ಲಂಡನ್ ಹಾರುವುದು ಮೊದಲೇ ನಿಗದಿಯಾಗಿತ್ತಂತೆ. ಇದೇ ಕಾರಣಕ್ಕೆ, ಮಾಡೋದಿದ್ದರೆ 24 ಗಂಟೆಯೊಳಗೆ ವಿಜಯೋತ್ಸವ ಮಾಡಬೇಕೆಂದು ಕೊಹ್ಲಿಯೇ ತಂಡದ ಮ್ಯಾನೇಜರಿಗೆ ಸೂಚಿಸಿದ್ದರಂತೆ. ಹೀಗಾಗಿ ತರಾತುರಿಯಲ್ಲಿ ವಿಜಯೋತ್ಸವ ನಿಗದಿಯಾಗಿತ್ತು ಎಂದೂ ಹೇಳಲಾಗುತ್ತಿದೆ. ಬೆಂಗಳೂರಿನ ಘಟನೆ ಮರುದಿನವೇ ಮುಂಬೈ ಏರ್ಪೋರ್ಟಿನಲ್ಲಿ ಕೊಹ್ಲಿ ತನ್ನ ಪತ್ನಿಯೊಂದಿಗೆ ಕುಣಿಯುತ್ತಾ ಹೊರಬರುವ ವಿಡಿಯೋವನ್ನು ಟ್ವೀಟ್ ಮಾಡಿದ್ದ ಕೆಲವರು, ದುರಂತದ ಬಗ್ಗೆ ಕಾಳಜಿಯಿಲ್ಲ ಎಂದು ಟೀಕಿಸಿದ್ದರು. ಇದರ ಮರುದಿನವೇ ದಂಪತಿ ಲಂಡನ್ ಹಾರಿದ್ದು, ಅಲ್ಲಿನ ರೆಸ್ಟೋರೆಂಟ್ ಗಳಲ್ಲಿ ಅಡ್ಡಾಡುವ ಫೋಟೋ ವೈರಲ್ ಆಗಿದೆ.

ಇದೇ ವೇಳೆ, ಅರೆಸ್ಟ್ ಕೊಹ್ಲಿ ಎನ್ನುವುದು ಟ್ರೆಂಡ್ ಆಗುತ್ತಿದ್ದಾಗಲೇ ಮತ್ತೊಂದಷ್ಟು ಫಾಲೋವರ್ ಗಳು ವಿ ಲವ್ ಯು ಕೊಹ್ಲಿ ಎನ್ನುವ ಫ್ರೇಸ್ ಬಳಸಿ ಕೊಹ್ಲಿ ಪರವಾಗಿಯೂ ಅಭಿಯಾನ ಆರಂಭಿಸಿದ್ದಾರೆ. ಆದರೆ ಬೆಂಗಳೂರಿನ ದುರಂತ ಮುಂದಿಟ್ಟು ಪ್ರಶ್ನೆ ಮಾಡುತ್ತಿರುವವರು, ದುರಂತ ಆಯ್ತು ಅಂತ ಕೊಹ್ಲಿ ತನ್ನ ಲಂಡನ್ ಪ್ರವಾಸ ಮುಂದೆ ಹಾಕಿಲ್ಲ. ತಂಡದ ವಿರುದ್ಧ ಎಫ್ಐಆರ್ ದಾಖಲಾದ್ರೂ ವಿಚಾರಣೆಗೆ ಹಾಜರಾಗಲಿಲ್ಲ. ಕನಿಷ್ಠ ಸತ್ತು ಹೋದ ಸಂತ್ರಸ್ತ ಕುಟುಂಬಗಳನ್ನೂ ಕಾಣಲು ಹೋಗಲಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ. 

ಇದೇ ವೇಳೆ, ಆರ್‌ಸಿಬಿ ಸಂಭ್ರಮಾಚರಣೆಯನ್ನು ಆಯೋಜಿಸುವಲ್ಲಿ ಭಾಗಿಯಾಗಿರುವವರ ವಿರುದ್ಧ ಬೆಂಗಳೂರು ಪೊಲೀಸರು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ (ಆರ್‌ಸಿಬಿ) ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಮತ್ತು ಕಾರ್ಯಕ್ರಮದ ಆಯೋಜನೆ ಜವಾಬ್ದಾರಿ ಹೊತ್ತಿದ್ದ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ಮೂವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

"ಫ್ರಾಂಚೈಸಿಯು ಲೀಗ್‌ನಲ್ಲಿ ಗೆಲುವು ಸಾಧಿಸಿದಾಗ ನೀವು ಕಣ್ಣೀರಾಕಿದ್ದೀರಿ. ಆದರೆ, ನಿಮ್ಮ ಸ್ವಾರ್ಥದ ಆಯ್ಕೆಯಿಂದಾಗಿ ಅಭಿಮಾನಿಗಳು ಸತ್ತಾಗ ಆ ಕಣ್ಣೀರು ಎಲ್ಲಿ ಹೋಗಿತ್ತು? ನಿಮ್ಮ ಮೇಲಿದ್ದ ನಮ್ಮ ಗೌರವವನ್ನು ಕಳೆದುಕೊಂಡಿದ್ದೀರಿ ವಿರಾಟ್ ಕೊಹ್ಲಿ. ನೀವು ಬೇಗ ಲಂಡನ್‌ಗೆ ಹೊರಡಲು ನಿಷ್ಠಾವಂತ ಅಭಿಮಾನಿಗಳ ಜೀವವನ್ನೇ ಬಲಿ ತೆಗೆದುಕೊಂಡಿದ್ದೀರಿ ಮತ್ತು ನೀವು ಕಾಳಜಿ ವಹಿಸುತ್ತಿಲ್ಲ ಎಂದು ಬಳಕೆದಾರರು ಕಿಡಿಕಾರಿದ್ದಾರೆ.

ArrestKohli Trends on Social Media as RCB Victory Turns Tragic, Virat Flees to London Amid Backlash.