ಕನ್ಯಾಕುಮಾರಿ ; ವೇಮೂರ್ ಬೀಚ್ ನಲ್ಲಿ ಐವರು ಮೆಡಿಕಲ್ ವಿದ್ಯಾರ್ಥಿಗಳು ನೀರುಪಾಲು, ನಿಷೇಧ ಇದ್ದರೂ ಲೆಕ್ಕಿಸದೆ ನೀರಿಗಿಳಿದು ಸಾವು ಎಳ್ಕೊಂಡರು !

06-05-24 09:31 pm       HK News Desk   ದೇಶ - ವಿದೇಶ

ಕನ್ಯಾಕುಮಾರಿ ಜಿಲ್ಲೆಯ ವೇಮೂರ್ ಬೀಚ್ ನಲ್ಲಿ ಈಜಲು ಹೋಗಿದ್ದ ಐವರು ಮೆಡಿಕಲ್ ವಿದ್ಯಾರ್ಥಿಗಳು ದುರಂತ ಸಾವಿಗೀಡಾಗಿದ್ದಾರೆ. ವಿದ್ಯಾರ್ಥಿಗಳು ತಮಿಳುನಾಡಿನ ತಿರುಚಿರಾಪಳ್ಳಿಯವರಾಗಿದ್ದು, ಗೆಳೆಯನ ಮದುವೆಗಾಗಿ ಕನ್ಯಾಕುಮಾರಿಗೆ ತೆರಳಿದ್ದರು.

ತಿರುವನಂತಪುರಂ, ಮೇ.6: ಕನ್ಯಾಕುಮಾರಿ ಜಿಲ್ಲೆಯ ವೇಮೂರ್ ಬೀಚ್ ನಲ್ಲಿ ಈಜಲು ಹೋಗಿದ್ದ ಐವರು ಮೆಡಿಕಲ್ ವಿದ್ಯಾರ್ಥಿಗಳು ದುರಂತ ಸಾವಿಗೀಡಾಗಿದ್ದಾರೆ. ವಿದ್ಯಾರ್ಥಿಗಳು ತಮಿಳುನಾಡಿನ ತಿರುಚಿರಾಪಳ್ಳಿಯವರಾಗಿದ್ದು, ಗೆಳೆಯನ ಮದುವೆಗಾಗಿ ಕನ್ಯಾಕುಮಾರಿಗೆ ತೆರಳಿದ್ದರು.

ಸೋಮವಾರ ಮಧ್ಯಾಹ್ನ ಕನ್ಯಾಕುಮಾರಿ ಬಳಿಯ ವೇಮೂರ್ ಬೀಚ್ ನಲ್ಲಿ ಎಂಟು ಮಂದಿ ಈಜಾಟಕ್ಕಿಳಿದಿದ್ದಾಗ ದುರಂತ ಸಂಭವಿಸಿದೆ. ಮೂವರನ್ನು ರಕ್ಷಣೆ ಮಾಡಲಾಗಿದ್ದು, ಒಬ್ಬನ ಸ್ಥಿತಿ ಗಂಭೀರ ಇದೆಯೆಂದು ಮಾಹಿತಿ ಇದೆ. ಕನ್ಯಾಕುಮಾರಿ ನಿವಾಸಿ ಸರ್ವದರ್ಶಿತ್(23), ದಿಂಡಿಗಲ್ ನಿವಾಸಿ ಪ್ರವೀಣ್ ಸ್ಯಾಮ್(23), ನೆಯ್ ವೇಲಿ ನಿವಾಸಿ ಗಾಯತ್ರಿ(25), ಆಂಧ್ರಪ್ರದೇಶ ಮೂಲದ ವೆಂಕಟೇಶ್ (24), ತಂಜಾವೂರು ನಿವಾಸಿ ಚಕ್ರವರ್ತಿ (23) ಮೃತರು.

ಭಾನುವಾರ ಇದೇ ವೇಮೂರು ಬೀಚ್ ನಲ್ಲಿ ಮೂವರು ನೀರುಪಾಲಾಗಿದ್ದರು. ಸಮುದ್ರದ ಅಲೆಗಳು ರಕ್ಕಸ ಗಾತ್ರ ತಾಳಿದ್ದರಿಂದ ಜನರ ಪ್ರವೇಶಕ್ಕೆ ಸೋಮವಾರ ನಿರ್ಬಂಧ ಹೇರಲಾಗಿತ್ತು. ಹಾಗಿದ್ದರೂ, ವೈದ್ಯಕೀಯ ವಿದ್ಯಾರ್ಥಿಗಳು ನೀರಾಟಕ್ಕಿಳಿದಿದ್ದು ಸ್ಥಳೀಯ ಮೀನುಗಾರರ ಎಚ್ಚರಿಕೆ ಲೆಕ್ಕಿಸದೆ ಸಾವು ಕಂಡಿದ್ದಾರೆ. ಮೂರು ದಿನಗಳಲ್ಲಿ ಎಂಟು ಮಂದಿ ಈ ಬೀಚ್ ನಲ್ಲಿ ಸಾವು ಕಂಡಂತಾಗಿದೆ. ಐವರು ವಿದ್ಯಾರ್ಥಿಗಳು ಕೂಡ ತಿರುಚ್ಚಿಯ ಎಸ್ ಆರ್ ಎಂ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯಕೀಯ ಕೋರ್ಸ್ ಓದುತ್ತಿದ್ದರು. ಕೆಲವೇ ವಾರಗಳಲ್ಲಿ ಮೆಡಿಕಲ್ ಮುಗಿಸಿ ಹೊರಬರುತ್ತಿದ್ದರು.

ಸೋಮವಾರ ಬೆಳಗ್ಗೆ ಅಲ್ಲಿಯೇ ಸಮೀಪದ ತಿರಪ್ಪರಪ್ಪು ಫಾಲ್ಸ್ ಗೆ ಇವರು ತೆರಳಿದ್ದರು. ಅಲ್ಲಿ ಸಾಕಷ್ಟು ನೀರಿಲ್ಲವೆಂದು ವೇಮೂರ್ ಬೀಚ್ ಗೆ ಬಂದಿದ್ದರು. ಆದರೆ ಮಧ್ಯಾಹ್ನ ಹೊತ್ತಿಗೆ ಹಠಾತ್ತಾಗಿ ಬಂದ ಬೃಹತ್ತಾಕಾರದ ಅಲೆಯೊಂದು ಇವರನ್ನು ಎಳೆದೊಯ್ದಿತ್ತು. ಕೂಡಲೇ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಹವಾಮಾನ ಇಲಾಖೆ, ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು ಏಳುವ ಮುನ್ಸೂಚನೆ ನೀಡಿದ್ದು, ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

Five students of a private medical college in Tamil Nadu’s Trichy, who went to Nagercoil to attend a wedding, drowned in the sea off the Rajakkamangalam Lemur Beach on Monday morning.