ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಕೊರೊನಾಗೆ ಬಲಿ

14-05-21 05:42 pm       Headline Karnataka News Network   ಕರ್ನಾಟಕ

ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕರಾಗಿ ಹೆಸರು ಮಾಡಿದ್ದ ಮಹದೇವ ಪ್ರಕಾಶ್ (65) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಬೆಂಗಳೂರು, ಮೇ 14: ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕರಾಗಿ ಹೆಸರು ಮಾಡಿದ್ದ ಮಹದೇವ ಪ್ರಕಾಶ್ (65) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾ ಸೋಂಕು ತಗುಲಿ ಕಳೆದ ಹತ್ತು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. 2019ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಮಹದೇವ ಪ್ರಕಾಶ್ ಅವರನ್ನು ಸಿಎಂ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು. ಒಂದು ವರ್ಷದ ಕಾಲ ಆ ಹುದ್ದೆಯಲ್ಲಿದ್ದ ಅವರು ಬಳಿಕ 2020ರ ನವೆಂಬರ್ ನಲ್ಲಿ ತಮ್ಮ ಸಂಪುಟ ದರ್ಜೆಯ ಹುದ್ದೆಗೆ ರಾಜಿನಾಮೆ ನೀಡಿ ಹೊರಬಂದಿದ್ದರು.

ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಮಹದೇವ ಪ್ರಸಾದ್ ನಿವೃತ್ತಿಯ ಬಳಿಕ ಈ ಭಾನುವಾರ ಹೆಸರಿನಲ್ಲಿ ಸ್ವಂತ ವಾರ ಪತ್ರಿಕೆಯನ್ನು ಹೊಂದಿದ್ದರು. ಅದರ ಜೊತೆಗೆ ವಿವಿಧ ಪತ್ರಿಕೆಗಳಿಗೆ ರಾಜಕೀಯ ಕುರಿತ ಅಂಕಣಗಳನ್ನು ಬರೆಯುತ್ತಿದ್ದರು. ಸುದ್ದಿ ವಾಹಿನಿಗಳಲ್ಲಿ ರಾಜಕೀಯ ಕುರಿತ ವಿಚಾರಗಳಲ್ಲಿ ಚರ್ಚೆಗೆ ಬರುತ್ತಿದ್ದರು. ಹೀಗಾಗಿ ರಾಜ್ಯದಲ್ಲಿ ಹಿರಿಯ ಪತ್ರಕರ್ತ ಎನ್ನುವ ನೆಲೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು.

ಸಿಎಂ ಯಡಿಯೂರಪ್ಪ ಜೊತೆಗೆ ನಿಕಟ ಒಡನಾಟ ಇರಿಸಿಕೊಂಡಿದ್ದ ಪ್ರಕಾಶ್, ತಮ್ಮ ಲೇಖನಗಳಲ್ಲಿ ಅವರ ಬಗ್ಗೆಯೂ ಟೀಕೆ, ಟಿಪ್ಪಣಿ ಮಾಡುತ್ತಿದ್ದರು. 25-30 ವರ್ಷಗಳ ಹಿಂದಿನ ರಾಜಕೀಯ ಚಿತ್ರಣಗಳನ್ನು ತಮ್ಮ ಲೇಖನದಲ್ಲಿ ಕಟ್ಚಿಕೊಡುತ್ತಿದ್ದುದು ಓದುಗರು ಮೆಚ್ಚುವಂತಾಗಿತ್ತು.  

Karnataka CM'S Former Media advisor and senior Journalist Mahadev Prakash dies of Covid 19 in the hospital. 10 days ago he was tested positive and had been admitted to the hospital.