ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತರಲ್ವೇ, ಸಚಿವ ಸ್ಥಾನ ಕೊಡಿಸಿ ಎಂದ ಬೆಂಬಲಿಗರಿಗೆ ಸಿದ್ದರಾಮಯ್ಯ ಕ್ಲಾಸ್, ಆಪ್ತ ಅಂದ್ಮೇಲೆ ನನ್ನ ವಿರುದ್ಧವೇ ಪಿತೂರಿ ಮಾಡೋದಾ..?!

11-06-26 07:36 pm       HK News Staffer   ಕರ್ನಾಟಕ

ರಾಜ್ಯ ರಾಜಕಾರಣದಲ್ಲಿ ಆಪ್ತ ಜೋಡಿಯಂತಿದ್ದ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್ ಖಾನ್ ನಡುವಣ ಸಂಬಂಧ ಈಗ ಹಳಸಿದ್ಯಾ ಎನ್ನುವ ಶಂಕೆ ಮೂಡಿಸುವ ರೀತಿಯ ವಿಡಿಯೋ ವೈರಲ್ ಆಗಿದೆ. ತಾವು ಸಿಎಂ ಪದವಿಯಲ್ಲಿ ಅಧಿಕಾರದಲ್ಲಿದ್ದಾಗ ತನ್ನ ವಿರುದ್ಧವೇ ಜಮೀರ್ ಕೆಲಸ ಮಾಡಿದ್ದಾರೆ ಎಂಬ ಅಸಮಾಧಾನವನ್ನು ಸಿದ್ದರಾಮಯ್ಯ ಸಿಟ್ಟಿನ ರೂಪದಲ್ಲಿ ಬಹಿರಂಗ ಪಡಿಸಿದ್ದಾರೆ.‌

ಬೆಂಗಳೂರು, ಜೂ.11: ರಾಜ್ಯ ರಾಜಕಾರಣದಲ್ಲಿ ಆಪ್ತ ಜೋಡಿಯಂತಿದ್ದ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್ ಖಾನ್ ನಡುವಣ ಸಂಬಂಧ ಈಗ ಹಳಸಿದ್ಯಾ ಎನ್ನುವ ಶಂಕೆ ಮೂಡಿಸುವ ರೀತಿಯ ವಿಡಿಯೋ ವೈರಲ್ ಆಗಿದೆ. ತಾವು ಸಿಎಂ ಪದವಿಯಲ್ಲಿ ಅಧಿಕಾರದಲ್ಲಿದ್ದಾಗ ತನ್ನ ವಿರುದ್ಧವೇ ಜಮೀರ್ ಕೆಲಸ ಮಾಡಿದ್ದಾರೆ ಎಂಬ ಅಸಮಾಧಾನವನ್ನು ಸಿದ್ದರಾಮಯ್ಯ ಸಿಟ್ಟಿನ ರೂಪದಲ್ಲಿ ಬಹಿರಂಗ ಪಡಿಸಿದ್ದಾರೆ.‌ 

ಜಮೀರ್ ಅಹಮದ್ ಖಾನ್ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಚಿವ ಸಂಪುಟದಲ್ಲಿ ಸ್ಥಾನ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆದರೆ ಜಮೀರ್ ಹೆಸರನ್ನು ಪ್ರಸ್ತಾಪಿಸುತ್ತಿದ್ದಂತೆ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, "ಯಾಕೆ ಸಚಿವ ಸ್ಥಾನ ಕೊಡಬೇಕು?” ಎಂದು ನೇರ ಪ್ರಶ್ನಿಸಿದ್ದು ಸೇರಿದ್ದ ಬೆಂಬಲಿಗರನ್ನೇ ಅಚ್ಚರಿಗೀಡು ಮಾಡಿತು. 

“ಅವರು ನಿಮ್ಮ ಪರಮಾಪ್ತರಲ್ಲವೇ ಸಾಹೇಬ್ರೇ” ಎಂದು ಬೆಂಬಲಿಗರು ಕೇಳಿದಾಗ, ಸಿದ್ದರಾಮಯ್ಯ ಸಿಟ್ಟಾಗಿದ್ದು “ಹೇಯ್ ಆಪ್ತ ಅಂದ್ಮೇಲೆ ನನ್ನ ವಿರುದ್ಧವೇ ಪಿತೂರಿ ಮಾಡೋದಾ? ನನ್ನ ವಿರುದ್ಧವೇ ಕೆಲಸ ಮಾಡೋದಾ?” ಎಂದು ಖಾರವಾಗಿ ಪ್ರಶ್ನಿಸಿರುವ ವಿಡಿಯೋ ವೈರಲ್ ಆಗಿದೆ. ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಕೇಳಿದ ಜಮೀರ್ ಬೆಂಬಲಿಗರು, “ಹಾಗೆಲ್ಲಾ ಮಾಡಬಾರದಿತ್ತು, ನೀವೇ ಅವರನ್ನು ಕರೆದು ಬುದ್ದಿ ಹೇಳಬೇಕು” ಎಂದು ಮನವಿ ಮಾಡಿ ಅಲ್ಲಿಂದ ತೆರಳಿದ್ದಾರೆ. 

ಹಲವು ವರ್ಷಗಳಿಂದಲೂ ಸಿದ್ದರಾಮಯ್ಯ ಮತ್ತು ಜಮೀರ್ ಆಪ್ತರಾಗಿಯೇ ಇದ್ದವರು. ಇತ್ತೀಚಿಗೆ ದಾವಣಗೆರೆ ಉಪ ಚುನಾವಣೆಯಲ್ಲಿ ಜಮೀರ್ ಅಭ್ಯರ್ಥಿ ಬಗ್ಗೆ ಆಕ್ಷೇಪದ ಮಾತನಾಡಿದ್ದು ಆನಂತರದ ಬೆಳವಣಿಗೆಗಳು ಇವರ ನಡುವೆ ಕಂದಕ ಸೃಷ್ಟಿಸಿತ್ತು. ಜಮೀರ್ ಮತ್ತು ನಸೀರ್ ಅಹ್ಮದ್ ಸೇರಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಷಡ್ಯಂತ್ರ ಮಾಡಿದ್ದರೆಂಬ ಆರೋಪ ಕೇಳಿಬಂದಿತ್ತು. ಇದೇ ಹಿನ್ನೆಲೆಯಲ್ಲಿ ನಸೀರ್ ಅಹ್ಮದ್ ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ತೆರವು ಮಾಡಿದ್ದೂ ಆಗಿತ್ತು. ಈ ವೇಳೆಯೂ ಸಿದ್ದರಾಮಯ್ಯ ಮೌನವಾಗಿಸಿದ್ದು ಮುಸ್ಲಿಂ ನಾಯಕರನ್ನು ಕೆರಳಿಸಿತ್ತು. ಆಬಳಿಕ ಹಠಾತ್ತಾಗಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಅಲ್ಲಿ ವರೆಗೂ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಎನ್ನುತ್ತಿದ್ದ ಜಮೀರ್ ಮೌನವಾಗಿದ್ದರು. 

ಕಳೆದ ಬಾರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಜಮೀರ್ ಅವರಿಗೆ “ಡೋಂಟ್ ಕಮ್ ಟು ದೆಹಲಿ” ಎಂದು ಖಡಕ್ ಸಂದೇಶ ರವಾನಿಸಿದ್ದರೆಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ಪಕ್ಷದ ಶಿಸ್ತಿಗೆ ವಿರುದ್ಧವಾಗಿರುವ ಅವರ ನಡೆಗಳು ಹಾಗೂ ತಮ್ಮ ರಾಜಕೀಯ ಸ್ಥಾನಮಾನಕ್ಕೆ ಧಕ್ಕೆ ತರುವ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು. ಇದೀಗ ತನ್ನ ವಿರುದ್ಧವೇ ಪಿತೂರಿ ನಡೆಸಿದ್ದರು ಎನ್ನೋದನ್ನು ಸಿದ್ದರಾಮಯ್ಯ ಹೇಳಿರುವ ವಿಡಿಯೋ ಹೊರ ಬಂದಿರುವುದು ಇಬ್ಬರ ನಡುವೆ ಹಳೆಯ ಒಡನಾಟ ಇಲ್ಲ ಎನ್ನುವುದನ್ನು ಸೂಚಿಸುತ್ತದೆ. 

ಇದೀಗ ಡಿಕೆಶಿ ಸರ್ಕಾರದಲ್ಲಿ ಜಮೀರ್ ಅವರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೂ ಇದೇ ಮುನಿಸು ಕಾರಣವೇ ಎಂಬ ಪ್ರಶ್ನೆ ಉದ್ಭವಿಸಿದೆ. ಜಮೀರ್ ಬೆಂಬಲಿಗರು ಪ್ರತಿಭಟನೆ, ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದರೂ ಸಿದ್ದರಾಮಯ್ಯ ಮೌನ ವಹಿಸಿರುವ ಹಿಂದೆ ಗೂಢಾರ್ಥ ಇರುವಂತಿದೆ.