ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40 ಅಡಿ ಎತ್ತರದಿಂದ ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಕಂದಮ್ಮ ಬಲಿ

11-06-26 11:40 am       HK News Staffer   ಕ್ರೈಂ

ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ತಾಯಿಯ ಕಂಕುಳಲ್ಲಿದ್ದ ಒಂದೂವರೆ ವರ್ಷದ ಪುಟ್ಟ ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಮಗು ಮೃತಪಟ್ಟಿದೆ. ಅಪರೂಪದಲ್ಲೂ ಅಪರೂಪದ ಈ ದುರಂತ ಇಡೀ ಗ್ರಾಮವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಉಡುಪಿ, ಜೂನ್ 11: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ತಾಯಿಯ ಕಂಕುಳಲ್ಲಿದ್ದ ಒಂದೂವರೆ ವರ್ಷದ ಪುಟ್ಟ ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಮಗು ಮೃತಪಟ್ಟಿದೆ. ಅಪರೂಪದಲ್ಲೂ ಅಪರೂಪದ ಈ ದುರಂತ ಇಡೀ ಗ್ರಾಮವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಬ್ರಹ್ಮಾವರದಲ್ಲಿ ಫಾಸ್ಟ್‌ ಫುಡ್‌ ಅಂಗಡಿ ನಡೆಸುತ್ತಿರುವ ಪ್ರಶಾಂತ್‌ ಮತ್ತು ಸುಚಿತ್ರಾ ದಂಪತಿಯ ಒಂದೂವರೆ ವರ್ಷದ ಪುತ್ರ ಈ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ.  ಸುಚಿತ್ರಾ ಅವರು ತಮ್ಮ 6 ವರ್ಷದ ಮಗಳನ್ನು ಶಾಲಾ ಬಸ್ ಹತ್ತಿಸಲು ಮನೆಯಿಂದ ಹೊರಟಿದ್ದರು. ಸಾಮಾನ್ಯವಾಗಿ ಮಳೆಗಾಲದಲ್ಲಿ ಕೊಡೆ ಹಿಡಿದು ಹೋಗಬೇಕಾಗಿದ್ದರಿಂದ ಪುಟ್ಟ ಮಗುವನ್ನು ಮನೆಯಲ್ಲೇ ಬಿಡುತ್ತಿದ್ದರು. ಆದರೆ ಅಂದು ಬಸ್ ಬರುವ ಸಮಯಕ್ಕೆ ಮಳೆ ನಿಂತಿದ್ದ ಕಾರಣ ಮಗುವನ್ನೂ ಕಂಕುಳಲ್ಲಿ ಎತ್ತಿಕೊಂಡೇ ಹೊರಟಿದ್ದರು.

ದಂಪತಿಯ ಮನೆಗೆ ನೇರ ರಸ್ತೆ ಸಂಪರ್ಕವಿಲ್ಲದ ಕಾರಣ, ಶಾಲಾ ಬಸ್ ನಿಲ್ಲುವ ಸ್ಥಳಕ್ಕೆ ತಲುಪಲು ತೋಟ ಮತ್ತು ಗದ್ದೆಯ ಮಧ್ಯದ ಹಾದಿಯಲ್ಲಿ ಸುಮಾರು 250ರಿಂದ 300 ಮೀಟರ್ ನಡೆದು ಹೋಗಬೇಕಾಗುತ್ತದೆ. ಮನೆ ದಾಟಿ ಕೇವಲ 50 ಮೀಟರ್ ಸಾಗುವಷ್ಟರಲ್ಲಿ ವಿಧಿಯ ಕ್ರೂರ ಆಟ ನಡೆದಿದೆ. ದಾರಿ ಬದಿಯಲ್ಲಿದ್ದ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ಹಸಿ ತೆಂಗಿನಕಾಯಿಯೊಂದು ಅಚಾನಕ್ ಕೆಳಗೆ ಬಿದ್ದು ನೇರವಾಗಿ ತಾಯಿಯ ಕಂಕುಳಲ್ಲಿದ್ದ ಮಗುವಿನ ತಲೆಗೆ ಅಪ್ಪಳಿಸಿದೆ.

ಕಾಯಿ ಬಿದ್ದ ರಭಸಕ್ಕೆ ಮಗುವಿನ ತಲೆಯಲ್ಲಿ ಸುಮಾರು ಒಂದು ಇಂಚು ಆಳದ ಗಾಯವಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ದುರಂತ ಕಂಡ ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ, ಪಕ್ಕದ ಮನೆಯ ವಾಹನದಲ್ಲಿ ಮಗುವನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆ ತಲುಪುವವರೆಗೂ ಮಗು ಕಣ್ಣು ಬಿಟ್ಟು ನೋಡುತ್ತಿತ್ತು ಎನ್ನಲಾಗಿದೆ.

ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಪ್ರಾಣ ಉಳಿಸಲು ಹರಸಾಹಸಪಟ್ಟರೂ, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಮಗು ಕೊನೆಯುಸಿರೆಳೆದಿದೆ.

ಯಾವುದೇ ಅಪಾಯದ ಸುಳಿವೂ ಇಲ್ಲದ ಕ್ಷಣದಲ್ಲಿ ಸಂಭವಿಸಿದ ಈ ದುರಂತ ಕುಟುಂಬವನ್ನು ಮಾತ್ರವಲ್ಲ, ಇಡೀ ಹೆರಂಜೆ ಗ್ರಾಮವನ್ನೇ ಕಂಬನಿ ಮಿಡಿಯುವಂತೆ ಮಾಡಿದೆ. ಶಾಲೆಗೆ ಮಗಳನ್ನು ಬಿಡಲು ಹೊರಟ ತಾಯಿಗೆ ಕೆಲವೇ ಕ್ಷಣಗಳಲ್ಲಿ ಮಗನನ್ನು ಕಳೆದುಕೊಳ್ಳುವ ನೋವು ಎದುರಾಗಿರುವುದು ಎಲ್ಲರ ಮನಕಲಕುವಂತಾಗಿದೆ.