ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆಯಾಚಿಸಿದ ನಟ ರಣವೀರ್‌ ಸಿಂಗ್‌

26-05-26 08:51 pm       HK News Staffer   ಕರ್ನಾಟಕ

‘ಕಾಂತಾರ’ ಚಿತ್ರದ ಚಾವುಂಡಿ ದೈವದ ಪಾತ್ರದ ಬಗ್ಗೆ ನೀಡಿದ್ದ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದ ಬಾಲಿವುಡ್ ನಟ ರಣವೀರ್‌ ಸಿಂಗ್‌ ಇದೀಗ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಸನ್ನಿಧಿಯಲ್ಲಿ ಕ್ಷಮೆಯಾಚಿಸಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮೈಸೂರು, ಮೇ 25: ‘ಕಾಂತಾರ’ ಚಿತ್ರದ ಚಾವುಂಡಿ ದೈವದ ಪಾತ್ರದ ಬಗ್ಗೆ ನೀಡಿದ್ದ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದ ಬಾಲಿವುಡ್ ನಟ ರಣವೀರ್‌ ಸಿಂಗ್‌ ಇದೀಗ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಸನ್ನಿಧಿಯಲ್ಲಿ ಕ್ಷಮೆಯಾಚಿಸಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಯಾರಿಗೂ ತಿಳಿಯದಂತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಆಗಮಿಸಿದ ರಣವೀರ್ ಸಿಂಗ್ ವಿಶೇಷ ಪೂಜೆ ಸಲ್ಲಿಸಿ, ತಾಯಿ ಚಾಮುಂಡೇಶ್ವರಿ ಎದುರು ತಲೆಬಾಗಿ ಪ್ರಾರ್ಥನೆ ಸಲ್ಲಿಸಿರುವ ದೃಶ್ಯಗಳು ಇದೀಗ ವೈರಲ್ ಆಗುತ್ತಿವೆ. ದೇವಾಲಯದಲ್ಲಿ ಅವರು ಮೌನವಾಗಿ ಕುಳಿತು ಕ್ಷಮೆ ಕೇಳಿದ ಕ್ಷಣಗಳು ಸಾರ್ವಜನಿಕರ ಗಮನ ಸೆಳೆದಿವೆ.

ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ, ರಣವೀರ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಈಗಾಗಲೇ ಕ್ಷಮೆ ಯಾಚಿಸಿದ್ದರು. ಜೊತೆಗೆ, ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆ ಕೇಳುವುದಾಗಿ ತಿಳಿಸಿದ್ದರು. ಇದೀಗ ಅವರು ಹೇಳಿದಂತೆ ನಡೆದುಕೋಂಡಿದ್ದಾರೆ.

ಘಟನೆ ಹಿನ್ನೆಲೆ:

ಗೋವಾದಲ್ಲಿ ನಡೆದ ಫಿಲ್ಮೋತ್ಸವದಲ್ಲಿ ನಟ ರಿಷಬ್‌ ಶೆಟ್ಟಿ ಎದುರೇ ಮಾತನಾಡಿದ್ದ ರಣವೀರ್ ಸಿಂಗ್, ‘ಕಾಂತಾರ’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ವೇಳೆ ದೈವದ ಪಾತ್ರವನ್ನು ಅನುಕರಿಸಿ ಮಾತನಾಡಿದ್ದರು. “ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯ ಅದ್ಭುತವಾಗಿತ್ತು” ಎಂದು ಹೇಳಿ, ಆ ಪಾತ್ರದ ಭಾವಭಂಗಿಯನ್ನು ಮಿಮಿಕ್ರಿ ಮಾಡಿದ್ದರು.

ರಣವೀರ್ ಸಿಂಗ್ ಅವರ ಈ ನಡೆಗೆ ಕರಾವಳಿ ಭಾಗದ ದೈವಾರಾಧಕರು ಹಾಗೂ ಹಲವಾರು ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ದೈವ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದಡಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಈ ಬೆಳವಣಿಗೆಯ ಬಳಿಕ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ನಟ ಕ್ಷಮೆಯಾಚಿಸಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.