ಬ್ರೇಕಿಂಗ್ ನ್ಯೂಸ್
02-05-26 06:35 pm HK News Staffer ಕರ್ನಾಟಕ
ಬೆಂಗಳೂರು, ಮೇ 2: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಳಿಕ ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ ಎಂದು ಹೇಳುತ್ತಿದ್ದವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುನ್ನಾ ಇಟ್ಟಿದ್ದಾರೆ. ಸದ್ಯಕ್ಕೆ ಸಿಎಂ ಬದಲಾವಣೆ ಪ್ರಸ್ತಾಪ ಇಲ್ಲವೆಂದು ಕಡ್ಡಿ ಮುರಿದಂತೆ ಹೇಳಿದ್ದು ಆಮೂಲಕ ಸಿಎಂ ಕನಸಿನಲ್ಲಿದ್ದ ಡಿಕೆಶಿ ಪಾಳಯಕ್ಕೆ ತಣ್ಣೀರು ಹಾಕಿದ್ದಾರೆ. ಆಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೆರಡು ವರ್ಷ ಮಾತ್ರ ಇರುವುದು ಮತ್ತು ಮುಂದಿನ ಚುನಾವಣೆಯನ್ನು ಗೆಲ್ಲುವುದಕ್ಕೆ ಈಗ ಇರುವಂತೆಯೇ ಮುನ್ನಡೆದು ಪಕ್ಷವನ್ನು ಗೆಲ್ಲಿಸುವ ಟಾಸ್ಕ್ ನತ್ತ ಹೈಕಮಾಂಡ್ ಗಮನ ನೆಟ್ಟಿರುವಂತೆ ತೋರಿದೆ.
2028ರ ವಿಧಾನಸಭಾ ಚುನಾವಣೆ ಗೆಲ್ಲಬೇಕಿದ್ದರೆ ಅಹಿಂದ ಬಲ ಇರುವ ಸಿದ್ದರಾಮಯ್ಯ ಮತ್ತು ಒಕ್ಕಲಿಗ ಹಾಗೂ ಹಣ ಬಲದ ಅಸ್ತ್ರ ಇರುವ ಡಿಕೆ ಶಿವಕುಮಾರ್ ಇಬ್ಬರದ್ದೂ ಸಾರಥ್ಯ ಬೇಕಾಗುತ್ತದೆ. ಇದನ್ನೇ ಗಮನದಲ್ಲಿಟ್ಟು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಯಾರು ಏನು ಹೇಳುತ್ತ ಬಂದರೂ ಕಾಂಗ್ರೆಸ್ ಹೈಕಮಾಂಡ್ ನಾಯಕರು ಅತಿ ಎಚ್ಚರಿಕೆಯ ಹೆಜ್ಜೆಯಿಡುತ್ತಿದ್ದಾರೆ. ಸದ್ಯಕ್ಕೆ ಬಿಜೆಪಿಯಲ್ಲಿ ದಿಗ್ಗಜ ನಾಯಕರ ಬಲ ಇಲ್ಲದಿರುವುದು ಮತ್ತು ಕಾಂಗ್ರೆಸ್ ಸರ್ಕಾರದ ಸಮನ್ವಯ ಇದೇ ರೀತಿ ಮುಂದುವರಿದರೆ ಗೆಲುವು ಕಷ್ಟವಲ್ಲ ಎನ್ನುವ ಅಂದಾಜು ಹೈಕಮಾಂಡ್ ಕಡೆಯವರಲ್ಲಿದೆ.
ಪಂಚರಾಜ್ಯ ಚುನಾವಣೆ ಫಲಿತಾಂಶ ಬಳಿಕ ರಾಜ್ಯಸಭೆ ಮತ್ತು ಪರಿಷತ್ ಚುನಾವಣೆ ಬರುತ್ತದೆ. ಆಬಳಿಕ ರಾಜ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆಯೂ ಎದುರಾಗಲಿದೆ. ಇದಲ್ಲದೆ, ಕೇರಳದಲ್ಲಿ ಯುಡಿಎಫ್ ಗೆಲ್ಲುವ ಸಾಧ್ಯತೆ ಇರುವುದರಿಂದ ಅಲ್ಲಿನ ಮುಖ್ಯಮಂತ್ರಿ ಆಯ್ಕೆಯ ಕಗ್ಗಂಟೂ ಎದುರಿಗಿದೆ. ಇದರ ಮಧ್ಯೆ ಕರ್ನಾಟಕದಲ್ಲಿ ಬಿಕ್ಕಟ್ಟು ತಂದುಕೊಳ್ಳುವ ಅಗತ್ಯ ದೆಹಲಿ ನಾಯಕರಿಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಯಾವುದೇ ಬಣಗಳ ಒತ್ತಡಕ್ಕೆ ಪಕ್ಷದ ಹೈಕಮಾಂಡ್ ಮಣಿಯುವುದಾಗಲೀ, ದಲಿತ ಕೋಟಾದ ಸೂತ್ರ ಹೆಣೆಯುವುದಕ್ಕಾಗಲೀ ಮುಂದಾಗುವ ಸಾಧ್ಯತೆ ಇಲ್ಲ.
ಮುಂದಿನ ಚುನಾವಣೆ ವರೆಗೂ ಸೋನಿಯಾ ಗಾಂಧಿ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ದೆಹಲಿ ನಾಯಕರು, ಸಿದ್ದರಾಮಯ್ಯ ಅವರನ್ನು ಪಕ್ಷದ ಅಹಿಂದ ಮುಖವಾಗಿ ಮತ್ತು ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರಿಸುವ ಮೂಲಕ ಯಥಾಸ್ಥಿತಿ ಕಾಯ್ದುಕೊಳ್ಳಲು ಬಯಸಿದ್ದಾರೆ. ಇದೇ ವೇಳೆ, ಸಿದ್ದರಾಮಯ್ಯ ಅವರನ್ನು ಕೆಳಕ್ಕಿಳಿಸಿದರೆ ನೀವೇ ಸಿಎಂ ಆಗುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದ ಕೆಲವು ನಾಯಕರು ಒತ್ತಡ ಹೇರಿದ್ದಾರೆ. ಆದರೆ ಇದ್ಯಾವುದಕ್ಕೂ ಪಕ್ಷದ ಹೈಕಮಾಂಡ್ ಸೊಪ್ಪು ಹಾಕಿಲ್ಲ.
ಮೇ 4ರಂದು ಹೊರ ಬೀಳುವ ಐದು ರಾಜ್ಯಗಳ ವಿಧಾನಸಭೆಗಳ ಫಲಿತಾಂಶವು ಕರ್ನಾಟಕದ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ. ಕೇರಳವನ್ನು ಗೆದ್ದು ಯುಡಿಎಫ್ ಸರ್ಕಾರವನ್ನು ರಚಿಸುವ ಸಾಧ್ಯತೆ ಇರುವುದರಿಂದ ಪಕ್ಷದ ಹೈಕಮಾಂಡ್ ಅಲ್ಲಿ ಸಕ್ರಿಯವಾಗಲಿದೆ. ಯುಡಿಎಫ್ ಬಹುಮತ ಪಡೆದರೆ ಕೇರಳ ಮುಖ್ಯಮಂತ್ರಿ ಆಯ್ಕೆ ಮೊದಲ ಆದ್ಯತೆಯಾಗುತ್ತದೆ, ಕರ್ನಾಟಕದ ನಾಯಕತ್ವ ವಿಚಾರ ಆದ್ಯತೆಯಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ನಾಯಕರ ವಿರೋಧ- ಒಲವು ಏನಿದ್ದರೂ, ದೆಹಲಿ ನಾಯಕರಿಗೆ ಯಾವುದೇ ರಾಜ್ಯದಲ್ಲಿ ಅಧಿಕಾರ ಗಳಿಸಿಕೊಳ್ಳುವುದು, ಚುನಾವಣೆಯಲ್ಲಿ ಅಧಿಕಾರ ಇದ್ದುದನ್ನು ಉಳಿಸಿಕೊಳ್ಳುವುದೇ ಮೊದಲ ಗುರಿಯಾಗಿರುತ್ತದೆ. ಹೀಗಾಗಿ 2028ರ ಚುನಾವಣೆ ಮೇಲೆ ಕಣ್ಣಿಟ್ಟಿರುವ ದೆಹಲಿ ನಾಯಕರು ಈ ಹೊತ್ತಲ್ಲಿ ಹುತ್ತಕ್ಕೆ ಕೈ ಹಾಕುವ ಕೆಲಸಕ್ಕೆ ಮುಂದಾಗಲ್ಲ ಎನ್ನುವ ಸಂದೇಶವನ್ನು ಮಲ್ಲಿಕಾರ್ಜುನ ಖರ್ಗೆ ಮೂಲಕ ಹೇಳಿಸಿದ್ದಾರೆ. ಅದೇ ಕಾರಣಕ್ಕೆ ಖರ್ಗೆಯವರು, ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದು ಹೇಳಿ ನಾಯಕತ್ವ ಬದಲಾವಣೆ ವದಂತಿಗೆ ತೆರೆ ಎಳೆದಿದ್ದಾರೆ.
ಒಂದೆಡೆ ಡಿಕೆಶಿ ಸಿಎಂ ಬದಲಾವಣೆ ಅಸ್ತ್ರದ ಹಿಂದಿದ್ದರೆ, ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು. ಆದರೆ ಖರ್ಗೆಯವರು ಇದ್ಯಾವುದಕ್ಕೂ ಆಸ್ಪದ ಕೊಡದೆ ಎಲ್ಲ ವದಂತಿ, ಲಾಬಿಗಳಿಗೂ ಫುಲ್ ಸ್ಟಾಪ್ ಕೊಟ್ಟಿದ್ದಾರೆ.
18-06-26 09:57 pm
HK News Staffer
ಪರಿಷತ್ ಚುನಾವಣೆ; ಮೈತ್ರಿ ಪಕ್ಷಕ್ಕೆ ತೀವ್ರ ಮುಖಭಂಗ,...
18-06-26 07:15 pm
ಆರೆಸ್ಸೆಸ್ ನೋಂದಣಿ ; ಪ್ರಿಯಾಂಕ ಖರ್ಗೆ ಪತ್ರಕ್ಕೆ ಸಾ...
18-06-26 01:25 pm
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
19-06-26 12:24 pm
HK News Staffer
Bejai, Kadri Water Issue: ಬಿಜೈ, ಕದ್ರಿಗೆ ಕಲುಷಿ...
18-06-26 12:33 pm
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm