ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ ; ಜಿಗಣಿ ಡಿಪೋದಲ್ಲಿ ಸಿಬಂದಿ ದಿಢೀರ್ ಪ್ರತಿಭಟನೆ, ಪರಿಹಾರ ಘೋಷಣೆಗೆ ಒತ್ತಾಯ

25-04-26 10:56 pm       HK Staffer   ಕರ್ನಾಟಕ

ಬಿಎಂಟಿಸಿ ಬಸ್ ಚಾಲನೆ ಮಾಡುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದು ಪರಿಹಾರ ನೀಡಬೇಕೆಂದು ಬಸ್ ಸಿಬಂದಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಜಿಗಣಿ ಡಿಪೋದಲ್ಲಿ ನಡೆದಿದೆ.

ಬೆಂಗಳೂರು, ಎಪ್ರಿಲ್ 25: ಬಿಎಂಟಿಸಿ ಬಸ್ ಚಾಲನೆ ಮಾಡುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದು ಪರಿಹಾರ ನೀಡಬೇಕೆಂದು ಬಸ್ ಸಿಬಂದಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಜಿಗಣಿ ಡಿಪೋದಲ್ಲಿ ನಡೆದಿದೆ. 

32 ವರ್ಷದ ರಮೇಶ್ ಸಾವನ್ನಪ್ಪಿದ ಬಿಎಂಟಿಸಿ ಬಸ್ ಚಾಲಕನಾಗಿದ್ದು ಎದೆ ನೋವು ಬರುತ್ತಿದ್ದಾಗಲೇ ಬಸ್ಸನ್ನು ನಿಲ್ಲಿಸಿ ಕುಸಿದು ಬಿದ್ದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಬಸ್ ಜಿಗಣಿಯಿಂದ ಬೊಮ್ಮಸಂದ್ರಕ್ಕೆ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. 

ಘಟನೆಯಿಂದ ಬೇಸತ್ತ ಬಿಎಂಟಿಸಿ ಜಿಗಣಿ ಡಿಪೋದ ಸಹೋದ್ಯೋಗಿಗಳು ಸಂಜೆಯಾಗುತ್ತಲೇ ಬಸ್ ಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ.‌ ಮೃತನ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ರಾತ್ರಿ ವರೆಗೂ ಧರಣಿ ನಡೆಸಿದ್ದಾರೆ. ಈ ಹಿಂದೆ ಒಬ್ಬ ಚಾಲಕ ಇದೇ ರೀತಿ ಮೃತಪಟ್ಟಿದ್ದು ಬಿಎಂಟಿಸಿ ಪರಿಹಾರ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಡಿಪೋ ಮ್ಯಾನೇಜರ್ ಕೌಸರ್ ಬಾನು ಮೇಲೆ‌ ಆಕ್ರೋಶ ತಿರುಗಿದ್ದು ಕಳೆದ ಬಾರಿ ಇದೇ ರೀತಿ ಮಲ್ಲಿಕಾರ್ಜುನ ಎಂಬಾತ ಸಾವನ್ನಪ್ಪಿದ್ದರು. ಆದರೆ ಅವರ ಕುಟುಂಬಕ್ಕೆ ಕನಿಷ್ಠ ಇನ್ಶುರೆನ್ಸ್ ಸಹ ಬಂದಿಲ್ಲ. ಇದೀಗ ರಮೇಶ್ ಕುಟುಂಬಕ್ಕು ಅದೇ ರೀತಿ ಅನ್ಯಾಯವಾಗುವ ಸಾಧ್ಯತೆ ಇದೆ. ಕೂಡಲೇ ಪರಿಹಾರ ಘೋಷಣೆ ಮಾಡಿ ಅವರಿಗೆ ನ್ಯಾಯ ಕೊಡಿಸುವಂತೆ ಸಿಬಂದಿ ಒತ್ತಾಯಿಸಿದ್ದಾರೆ. ಆದರೆ ಪ್ರತಿಭಟನೆ ನಡೆಸಿ ನ್ಯಾಯ ಕೇಳಿದ್ದಕ್ಕೆ ಸಿಬ್ಬಂದಿಗೆ ಗೇಸ್ ಪಾಸ್ ನೀಡಲು ಕೌಸರ್ ಬಾನು ಪ್ಲಾನ್ ಮಾಡಿದ್ದಾರೆಂಬ ಭಾವನೆಯಲ್ಲಿ ರಾತ್ರಿ ವರೆಗೂ ಧಿಕ್ಕಾರ ಕೂಗುತ್ತಾ ಧರಣಿ ನಡೆಸಿದ್ದಾರೆ. ‌