ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲು ತೆಗೆದು ಹಾಕುತ್ತೇನೆ‌, ಯೋಗಿ ರೀತಿ ಆಡಳಿತ ಕೊಡುತ್ತೇನೆ; ಶಾಸಕ ಯತ್ನಾಳ

02-04-26 08:07 pm       HK News Staffer   ಕರ್ನಾಟಕ

ನಾನು ಮುಖ್ಯಮಂತ್ರಿಯಾಗಿ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರ ಹಾಕುತ್ತೇನೆ. ಇವರ ಬದಲಾಗಿ ಮರಾಠರು, ಬ್ರಾಹ್ಮಣರು, ಕ್ಷತ್ರಿಯರು ಸೇರಿದಂತೆ ಅನೇಕರು ಅಲ್ಪಸಂಖ್ಯಾತರು ಇದ್ದಾರೆ. ಅವರಿಗೆಲ್ಲ ಅಲ್ಪಸಂಖ್ಯಾತ ಸ್ಥಾನಮಾನ ಕೊಡುತ್ತೇನೆ ಎಂದು ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರ, ಎಪ್ರಿಲ್ 2: ನಾನು ಮುಖ್ಯಮಂತ್ರಿಯಾಗಿ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರ ಹಾಕುತ್ತೇನೆ. ಇವರ ಬದಲಾಗಿ ಮರಾಠರು, ಬ್ರಾಹ್ಮಣರು, ಕ್ಷತ್ರಿಯರು ಸೇರಿದಂತೆ ಅನೇಕರು ಅಲ್ಪಸಂಖ್ಯಾತರು ಇದ್ದಾರೆ. ಅವರಿಗೆಲ್ಲ ಅಲ್ಪಸಂಖ್ಯಾತ ಸ್ಥಾನಮಾನ ಕೊಡುತ್ತೇನೆ ಎಂದು ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಇಂದು ಹನುಮ ಜಯಂತಿ. ಹನುಮಂತನ ಸನ್ನಿಧಾನದಲ್ಲಿ ನಿಂತು ಹೇಳುತ್ತೇನೆ. ನಾನು ಯಾವುದೇ ಕಾರಣಕ್ಕೂ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಿ ಅಂತಾ ಹೇಳಲ್ಲ. ಅಪ್ಪ-ಮಗನನ್ನು ಕೈಬಿಟ್ಟು ಅವರಾಗಿಯೇ ನನ್ನನ್ನು ಬಿಜೆಪಿಗೆ ಬರುವಂತೆ ಆಹ್ವಾನಿಸುತ್ತಾರೆ. ಬಳಿಕ ಸಿಎಂ ಆಗಿ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ರೀತಿ ರಾಜ್ಯಭಾರ ಮಾಡುತ್ತೇನೆ. ರಾಜ್ಯದಲ್ಲಿ ಯೋಗಿ ರೀತಿ ಆಡಳಿತ ಕೊಡುತ್ತೇನೆ ಎಂದು ಹೇಳುವ ಧೈರ್ಯ ಬಿಜೆಪಿಯಲ್ಲಿ ಯಾರಿಗಾದ್ರೂ ಇದೆಯಾ.. ಅದನ್ನು ನಾನು ಮಾತ್ರ ಹೇಳಬಲ್ಲೆ ಎಂದು ಹೇಳಿದರು.

ಬಾಗಲಕೋಟೆಯ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ನನ್ನ ಆತ್ಮೀಯರು. ಅವರ ಪರ ಪ್ರಚಾರ ಮಾಡುವಂತೆ ಬಿಜೆಪಿ ಕಾರ್ಯಕರ್ತರು ನನ್ನನ್ನು ಕರೆದಿದ್ದಾರೆ. ಅದಕ್ಕಾಗಿ ನಾನು ಚರಂತಿಮಠ ಅವರ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು. 

2028 ರಲ್ಲಿ ಹಿಂದೂ ಸರ್ಕಾರ ಜಾರಿಗೆ ಬಂದೇ ಬರತ್ತೆ ಎಂದು ಹೇಳಿದ ಪಾಟೀಲ, ಮುಸ್ಲಿಂ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಗಾಗಿ ಸರ್ಕಾರದಿಂದ ಟ್ರೇನಿಂಗ್ ಕೊಡುತ್ತಾರೆ. ಮುಸ್ಲಿಂ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಣ ಕೊಡುತ್ತಾರೆ. ಹಿಂದುಗಳಿಗೇನು ಕೊಡುತ್ತಾರೆ.‌ ಹೀಗಾಗಿ ಈ ಚುನಾವಣೆಯಲ್ಲಿ ಹಿಂದುಗಳು ಒಗ್ಗಟ್ಟಾಗುತ್ತಾರೆ. ಕಾಂಗ್ರೆಸಿಗೆ ಬುದ್ಧಿ ಕಲಿಸುತ್ತಾರೆ. ಹಿಂದೆ ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲಿ ಪೊಲೀಸರ ಮೇಲೆ ಹಲ್ಲೆ ಆದಾಗ ಎನ್ ಕೌಂಟರ್ ಮಾಡಬೇಕಿತ್ತು. ಮುಸ್ಲಿಮರು ಮೂರು ಕಡೆ ಮೀಸಲಾತಿ ಲಾಭ ಪಡೆದುಕೊಳ್ಳುತ್ತಾರೆ. ಧರ್ಮಾಧಾರಿತ ಮೀಸಲಾತಿ ನಮ್ಮ ದೇಶದಲ್ಲಿ ಇಲ್ಲ. ಯಾವ ಜಾತಿ ಆರ್ಥಿಕವಾಗಿ, ಸಾಮಾಜಿಕ ಹಿಂದುಳಿದಿದೆ, ಅಂಥವರಿಗೆ ಸವಲತ್ತು ಕೊಡಬೇಕೆಂದು ಸಂವಿಧಾನದಲ್ಲಿ ಇದೆ ಎಂದು ಶಾಸಕ ಯತ್ನಾಳ ಹೇಳಿದರು.