ಆಟವಾಡುತ್ತಿದ್ದ ಮಗು ನೀರಿನ ಬಕೆಟ್‌ಗೆ ಬಿದ್ದು ಸಾವು; ನೊಂದುಕೊಂಡ ಸಾಫ್ಟ್‌ವೇರ್ ಉದ್ಯೋಗಿ ತಾಯಿ ಆತ್ಮಹತ್ಯೆಗೆ ಶರಣು

02-04-26 03:56 pm       HK News Staffer   ಕರ್ನಾಟಕ

ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರಿನ ಬಕೆಟ್‌ಗೆ ಬಿದ್ದು ಸಾವನ್ನಪ್ಪಿದ ಘಟನೆಯಿಂದ ಮನನೊಂದ ತಾಯಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.

ಬೆಂಗಳೂರು, ಎಪ್ರಿಲ್ 2: ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರಿನ ಬಕೆಟ್‌ಗೆ ಬಿದ್ದು ಸಾವನ್ನಪ್ಪಿದ ಘಟನೆಯಿಂದ ಮನನೊಂದ ತಾಯಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ. 

ಪ್ರತಿಭಾ (29) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಮಹಿಳೆ. ಅಗಸ್ತ್ಯ ಮೃತಪಟ್ಟ ಎರಡು ವರ್ಷದ ಮಗು. ಪ್ರತಿಭಾ ಮತ್ತು ಅವರ ಪತಿ ಮಹಂತೇಶ್ ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದು, ಪ್ರತಿಭಾ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. 

ಏಪ್ರಿಲ್ 1ರಂದು ಮನೆಯಲ್ಲಿ ತಾಯಿ ಮತ್ತು ಮಗು ಇಬ್ಬರೇ ಇದ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಪ್ರತಿಭಾ ಅವರು ಒಣಹಾಕಿದ್ದ ಬಟ್ಟೆಗಳನ್ನು ತರಲು ಟೆರೇಸ್‌ಗೆ ಹೋಗಿದ್ದ ವೇಳೆ, ಆಟವಾಡುತ್ತಿದ್ದ ಮಗು ಅಗಸ್ತ್ಯ ಬಚ್ಚಲು ಮನೆಗೆ ಹೋಗಿದ್ದು ನೀರು ತುಂಬಿದ್ದ ಬಕೆಟ್‌ಗೆ ಬಿದ್ದಿದೆ. ಉಸಿರುಗಟ್ಟಿ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಟೆರೇಸ್‌ನಿಂದ ವಾಪಸ್ ಬಂದ ತಾಯಿಗೆ ಮಗುವಿನ ಸ್ಥಿತಿ ಕಂಡು ತೀವ್ರ ಆಘಾತವಾಗಿದೆ. ತನ್ನ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂಬ ಅಪರಾಧ ಪ್ರಜ್ಞೆಯಿಂದ ಪ್ರತಿಭಾ ಅವರು ತೀವ್ರವಾಗಿ ನೊಂದಿದ್ದಾರೆ.

ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳಿದ ಪತಿ ಮಹಂತೇಶ್, ಪತ್ನಿ ಬಾಗಿಲು ತೆಗೆಯದಿದ್ದಾಗ ಪರ್ಯಾಯ ಕೀ ಬಳಸಿ ಒಳಬಂದಿದ್ದಾರೆ. ಈ ವೇಳೆ ಪ್ರತಿಭಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗುವನ್ನು ಹಾಸಿಗೆಯ ಮೇಲೆ ಮಲಗಿಸಲಾಗಿತ್ತು. ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ, “ನನ್ನ ಮಗುವನ್ನು ಉಳಿಸಿಕೊಳ್ಳಲು ನನಗಾಗಲಿಲ್ಲ, ಮಗುವಿನ ಸಾವಿಗೆ ನಾನೇ ಕಾರಣ” ಎಂದು ಬರೆದಿರುವುದು ತಿಳಿದುಬಂದಿದೆ. ಮಗುವಿನ ಸಾವಿನ ನಂತರ ಪ್ರತಿಭಾ ಅವರು ಮೊದಲು 15ಕ್ಕೂ ಹೆಚ್ಚು ಮಾತ್ರೆಗಳನ್ನು ಸೇವಿಸಿ ಹಾಗೂ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಕೊನೆಗೆ ರಕ್ತ ಬಾರದಿದ್ದಾಗ ನೇಣಿಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಚಂದ್ರಾಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.