ನಡುರಸ್ತೆಯಲ್ಲೇ ಪತ್ನಿಯ ಕತ್ತು ಕತ್ತರಿಸಿ ಭೀಕರ ಕೊಲೆ, ಹೆಣದ ಮೇಲೆ ಕಾರು ಹತ್ತಿಸಿ ವಿಕೃತಿ, ವಿಡಿಯೋ ಮಾಡುತ್ತ ನಿಂತ ಕಲಬುರಗಿ ಮಂದಿ, ಪೊಲೀಸರ ಬಲೆಗೆ ಬಿದ್ದ ನರರಾಕ್ಷಸ ಪತಿ !

27-03-26 03:52 pm       HK News Staffer   ಕರ್ನಾಟಕ

ನಗರದಲ್ಲಿ ಹಾಡುಹಗಲೇ ನಡೆದ ಭೀಕರ ಕೊಲೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಅಫಜಲಪುರ ತಾಲ್ಲೂಕಿನ ಬಳುರಗಿ ಬಳಿ ಪತಿಯೊಬ್ಬ ತನ್ನ ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ದಾರಿ ಮಧ್ಯೆ ಕೊಲೆ ಮಾಡಿ ಬಳಿಕ ಶವದ ಮೇಲೆ ಕಾರು ಹತ್ತಿಸಿ ಭೀಕರತೆ ಮೆರೆದಿದ್ದಾನೆ.

ಕಲಬುರಗಿ, ಮಾರ್ಚ್ 27: ನಗರದಲ್ಲಿ ಹಾಡುಹಗಲೇ ನಡೆದ ಭೀಕರ ಕೊಲೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಅಫಜಲಪುರ ತಾಲ್ಲೂಕಿನ ಬಳುರಗಿ ಬಳಿ ಪತಿಯೊಬ್ಬ ತನ್ನ ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ದಾರಿ ಮಧ್ಯೆ ಕೊಲೆ ಮಾಡಿ ಬಳಿಕ ಶವದ ಮೇಲೆ ಕಾರು ಹತ್ತಿಸಿ ಭೀಕರತೆ ಮೆರೆದಿದ್ದಾನೆ.

ಪತ್ನಿಯನ್ನು ಕಾರಿನಿಂದ ಹೊರಗೆಳೆದ ಪತಿ ನಡುರಸ್ತೆಯಲ್ಲೇ ಆಕೆಯನ್ನು ಭಾರೀವಾಗಿ ಹತ್ಯೆ ಮಾಡಿದ್ದಾನೆ. ರಸ್ತೆಯಲ್ಲಿ ಹೋಗುವವರೆಲ್ಲಾ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರೂ ಆತ ಯಾವುದೇ ಅಳುಕಿಲ್ಲದೆ ತನ್ನ ಕ್ರೂರ ಅಟ್ಟಹಾಸ ಮೆರೆದಿದ್ದಾನೆ. ನೋಡುಗರು ಮೊಬೈಲ್ ನಲ್ಲಿ ಈ ಕೃತ್ಯ ಚಿತ್ರೀಕರಿಸಿಕೊಂಡಿದ್ದಾರೆಯೇ ಹೊರತು ಯಾರೊಬ್ಬರೂ ಮಹಿಳೆಯ ರಕ್ಷಣೆಗೆ ಧಾವಿಸಿಲ್ಲ ಎಂಬುದು ವಿಪರ್ಯಾಸ.

ಕುಡುಗೋಲಿನಿಂದ ಕತ್ತು ಕತ್ತರಿಸಿದ ಭೂಪ!

ಪತ್ನಿಯನ್ನು ಕಾರಿನಿಂದ ಹೊರಗೆಳೆದ ಪತಿ ಆಕೆಯ ತಲೆಗೂದಲು ಹಿಡಿದು ಕುಡುಗೋಲಿನಿಂದ ಕತ್ತನ್ನು ಕತ್ತರಿಸಿದ್ದಾನೆ. ನೆಲಕ್ಕೆ ಬಿದ್ದು ಆತನಿಂದ ಬಿಡಿಸಿಕೊಳ್ಳಲು ಯತ್ನಿಸಿದ ಮಹಿಳೆ ನೋಡ ನೋಡುತ್ತಲೇ ಪ್ರಾಣಿ ಬಿಟ್ಟಿದ್ದಾಳೆ. ಈ ಭೀಕರ ಹತ್ಯೆ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಳುರಗಿ ಗ್ರಾಮದ ಬಳಿ ಮಾರ್ಚ್ 26ರ ಮಧ್ಯಾಹ್ನ ಸುಮಾರು 11:30 ರ ಸುಮಾರಿಗೆ ನಡೆದಿದೆ.
ಪತ್ನಿಯನ್ನು ಕೊಂದ ಬಳಿಕವೂ ಸುಮ್ಮನಾಗದ ಕಿರಾತಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಮೇಲೆ ತನ್ನ ಕಾರು ಹತ್ತಿಸಿ ವಿಕೃತಿ ಮೆರೆದಿದ್ದಾನೆ.

ಕಾರಲ್ಲಿ ಸಂಬಂಧಿಕರಿದ್ದರೂ ಸುಮ್ಮನೆ ಕುಳಿತಿದ್ದರು!

ಮಹಾರಾಷ್ಟ್ರದ ಬಾರಾಮತಿಯಿಂದ ಕಲಬುರಗಿಯ ಗಾಣಗಾಪೂರಕ್ಕೆ ಬಂದಿದ್ದರು. ಪತ್ನಿಯನ್ನು ದತ್ತನ ದರ್ಶನಕ್ಕೆ ಹೋಗೋಣ ಅಂತ ಕರೆತಂದಿದ್ದನಂತೆ, ಆದರೆ ಅಫಜಲಪುರ ಹೊರವಲಯದ ಬಳುರಗಿ ಬಳಿ ಏಕಾಏಕಿ ಕಾರು ನಿಲ್ಲಿಸಿದ ಪತಿ ಅಕ್ಷಯ್ ಜಾಧವ್, ಪತ್ನಿಯ ಕೂದಲನ್ನು ಹಿಡಿದು ನೆಲಕ್ಕೆ ಬೀಳಿಸಿದ್ದಾನೆ. ಬಳಿಕ ತನ್ನ ಬಳಿಯಿದ್ದ ಕುಡುಗೋಲಿನಿಂದ ಆಕೆಯ ಕತ್ತನ್ನು ಸೀಳಿ ಭಾರೀವಾಗಿ ಹತ್ಯೆ ಮಾಡಿದ್ದಾನೆ.
ಘಟನೆ ನಡೆದ ವೇಳೆ ಕಾರಿನಲ್ಲಿ ಅಕ್ಷಯ್‌ ತಂದೆ ತಾಯಿ ಸಂಬಂಧಿಕರು ಸೇರಿ ಐವರು ಇದ್ದರು, ಯಾರು ಕೂಡ ಮೃತ ಶೈಲಾ ಸಹಾಯಕ್ಕೆ ಧಾವಿಸಿಲ್ಲ ಅನ್ನೋದು ವಿಪರ್ಯಾಸ. ಘಟನೆ ನಡೆದ ಸ್ಥಳಕ್ಕೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿ ಅಕ್ಷಯ್ ಜಾಧವನನ್ನು ಅಫಜಲಪುರ ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ.
ಸದ್ಯ ಕೊಲೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆದರೆ ಹಾಡುಹಗಲೇ ಹತ್ಯೆ ನಡೆಯುತ್ತಿದ್ದರೂ ಸ್ಥಳೀಯರು ಮಾತ್ರ ಕಂಡು ಕಾಣದಂತೆ ವರ್ತಿಸಿದ್ದು ನಿಜಕ್ಕೂ ವಿಪರ್ಯಾಸ.