13 ವರ್ಷಗಳ ಜೀವನ್ಮರಣ ಹೋರಾಟಕ್ಕೆ ಕೊನೆ ; ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿ ಹರೀಶ್ ರಾಣಾ, ದೆಹಲಿ ಏಮ್ಸ್‌ ಆಸ್ಪತ್ರೆಯಲ್ಲಿ ಸಾವು

25-03-26 03:25 pm       HK News Staffer   ಕರ್ನಾಟಕ

ಹದಿಮೂರು ವರ್ಷಗಳ ಕಾಲ ಕೋಮಾದಲ್ಲಿದ್ದು ಜೀವನ್ಮರಣ ಹೋರಾಡುತ್ತಿದ್ದ ಹರೀಶ್ ರಾಣಾ ಅವರ ಜೀವನ ಯಾನ ಕೊನೆಗೊಂಡಿದೆ. ನಿಷ್ಕ್ರಿಯ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿಯಾಗಿ ರಾಣಾ, ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಮಾರ್ಚ್‌ 24ರಂದು ಸಂಜೆ 4:10ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ನವದೆಹಲಿ, ಮಾರ್ಚ್ 25 : ಹದಿಮೂರು ವರ್ಷಗಳ ಕಾಲ ಕೋಮಾದಲ್ಲಿದ್ದು ಜೀವನ್ಮರಣ ಹೋರಾಡುತ್ತಿದ್ದ ಹರೀಶ್ ರಾಣಾ ಅವರ ಜೀವನ ಯಾನ ಕೊನೆಗೊಂಡಿದೆ. ನಿಷ್ಕ್ರಿಯ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿಯಾಗಿ ರಾಣಾ, ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಮಾರ್ಚ್‌ 24ರಂದು ಸಂಜೆ  4:10ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

31 ವರ್ಷದ ಹರೀಶ್ ರಾಣಾ ಅವರು 2013ರಿಂದಲೇ ಕೋಮಾ ಸ್ಥಿತಿಯಲ್ಲಿ ಜೀವಿಸುತ್ತಿದ್ದರು. ಗಾಜಿಯಾಬಾದ್‌ನ ತಮ್ಮ ನಿವಾಸದಿಂದ ಮಾರ್ಚ್ 14ರಂದು ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)ಗೆ ಸ್ಥಳಾಂತರಿಸಲಾಗಿತ್ತು. ಆಮ್ಲಜನಕದ ನೆರವಿನಿಂದ ಅವರು ಉಸಿರಾಟ ಮಾತ್ರ ನಡೆಸುತ್ತಿದ್ದರು.

ಹರೀಶ್ ರಾಣಾ ಅವರು ಪಂಜಾಬ್ ವಿಶ್ವವಿದ್ಯಾಲಯದ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ ವೇಳೆ, 2013ರಲ್ಲಿ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗೊಂಡಿದ್ದರು. ಈ ಅಪಘಾತವೇ ಅವರ ಬದುಕನ್ನು ಶಾಶ್ವತವಾಗಿ ಬದಲಿಸಿತ್ತು. ಮಾರ್ಚ್ 11ರಂದು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ರಾಣಾಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಲಾಗಿತ್ತು. ದೀರ್ಘ ಕಾಲದ ಯಾತನೆ ಮತ್ತು ಯಾವುದೇ ಚೇತರಿಕೆ ಸಾಧ್ಯತೆಯಿಲ್ಲದ ಹಿನ್ನೆಲೆಯಲ್ಲಿ, ಜೀವ ರಕ್ಷಕ ವ್ಯವಸ್ಥೆಗಳನ್ನು ಹಿಂಪಡೆಯಲು ನ್ಯಾಯಾಲಯ ಅನುಮೋದಿಸಿತ್ತು.

ನಿಷ್ಕ್ರಿಯ ದಯಾಮರಣವೆಂದರೆ, ರೋಗಿಯ ಜೀವಕ್ಕಿರುವ ವೈದ್ಯಕೀಯ ಬೆಂಬಲವನ್ನು ಹಿಂಪಡೆಯುವ ಮೂಲಕ ನೈಸರ್ಗಿಕ ಮರಣಕ್ಕೆ ಅವಕಾಶ ಕಲ್ಪಿಸುವ ವಿಧಾನವಾಗಿದೆ. ಇದು ರೋಗಿಯ ದೀರ್ಘ ಕಾಲದ ನೋವು ಮತ್ತು ನಿರಾಶದಾಯಕ ಸ್ಥಿತಿಯಿಂದ ಮುಕ್ತಿಗೊಳಿಸುವ ಕ್ರಮವೆಂದು ಪರಿಗಣಿಸಲಾಗುತ್ತದೆ.

2024ರಲ್ಲಿ ಇವರ ಕುಟುಂಬವು ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿ ಜೀವ ರಕ್ಷಕ ಚಿಕಿತ್ಸೆ ಹಿಂಪಡೆಯಲು ಅನುಮತಿ ಕೋರಿತ್ತು. ಆದರೆ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕುಟುಂಬದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು, ವೈದ್ಯಕೀಯ ವರದಿಗಳ ಸಮಗ್ರ ಪರಿಶೀಲನೆಯ ಬಳಿಕ ದಯಾಮರಣಕ್ಕೆ ಅನುಮತಿ ನೀಡಿತು. ಈ ತೀರ್ಪಿನೊಂದಿಗೆ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ನಿಷ್ಕ್ರಿಯ ದಯಾಮರಣ ಕುರಿತಂತೆ ಸಮಗ್ರ ಕಾನೂನು ರೂಪಿಸುವ ಅಗತ್ಯವಿದೆ ಎಂದು ಸೂಚಿಸಿದೆ. ಹರೀಶ್ ರಾಣಾ ಅವರ ನಿಧನವು ಕೇವಲ ಒಂದು ಕುಟುಂಬದ ನೋವಲ್ಲ, ದೇಶದ ಕಾನೂನು ಮತ್ತು ನೈತಿಕ ಚರ್ಚೆಗಳಲ್ಲಿ ಮಹತ್ವದ ತಿರುವು ತಂದುಕೊಟ್ಟ ಘಟನೆ ಎಂದು ಪರಿಗಣಿಸಲಾಗುತ್ತಿದೆ.