ಬೆಳಗಾವಿಯಲ್ಲಿ ಅಮಾನವೀಯ ಘಟನೆ ; 15 ದಿನದ ಹೆಣ್ಣು ಮಗು ಅನುಮಾನಾಸ್ಪದ ಸಾವು, ಹಸುಗೂಸಿಗೆ ವಿಷ ಹಾಕಿದ್ನಾ ಪಾಪಿ ತಂದೆ ? ಯಮರಾಯನಂತೆ ಬಂದ ಭೀಮರಾಯ !

18-03-26 11:38 am       HK News Staffer   ಕರ್ನಾಟಕ

ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣುಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ನಡೆದಿದೆ. ಮಗು ಪ್ರಿಯಾಂಕಾ ಸಾವಿನ ಹಿಂದೆ ತಂದೆಯೇ ವಿಷಪ್ರಾಶನ ಮಾಡಿರುವ ಸಾಧ್ಯತೆ ಇದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ.

ಬೆಳಗಾವಿ, ಮಾರ್ಚ್ 18: ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣುಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ನಡೆದಿದೆ. ಮಗು ಪ್ರಿಯಾಂಕಾ ಸಾವಿನ ಹಿಂದೆ ತಂದೆಯೇ ವಿಷಪ್ರಾಶನ ಮಾಡಿರುವ ಸಾಧ್ಯತೆ ಇದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ.

ಹೆರಿಗೆ ಹಿನ್ನೆಲೆಯಲ್ಲಿ ತಾಯಿ ಶೀಲಾ ತವರು ಮನೆಯಲ್ಲಿ ವಾಸವಾಗಿದ್ದರು. ಮಾರ್ಚ್ 17ರಂದು ಮಧ್ಯಾಹ್ನ ಮಗು ಮತ್ತು ಪತ್ನಿಯನ್ನು ಭೇಟಿ ಮಾಡಲು ತಂದೆ ಭೀಮರಾಯ ಬಂದಿದ್ದಾನೆ. ಸ್ವಲ್ಪ ಸಮಯ ಪತ್ನಿ ಹಾಗೂ ಮಗುವಿನೊಂದಿಗೆ ಸಮಯ ಕಳೆದು ಬಳಿಕ ತನ್ನ ಊರಿಗೆ ಮರಳಿದ್ದಾನೆ. ಆದರೆ ಆತ ಹೋದ ಕೆಲವೇ ಹೊತ್ತಿನಲ್ಲಿ ಮಗು ಏಕಾಏಕಿ ಸಾವನ್ನಪ್ಪಿರುವುದು ಕುಟುಂಬವನ್ನು ಬೆಚ್ಚಿಬೀಳಿಸಿದೆ.

ಮಗು ಆರೋಗ್ಯವಾಗಿದ್ದರೂ, ದಿಢೀರ್ ಸಾವಿಗೆ ಕಾರಣ ಏನು ಎಂಬ ಪ್ರಶ್ನೆ ಉದ್ಭವಿಸಿದ ಬೆನ್ನಲ್ಲೇ ತಂದೆಯ ವರ್ತನೆ ಅನುಮಾನಕ್ಕೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಭೀಮರಾಯ ಸಣ್ಣ ಮಾತ್ರೆ ತಂದು ಅದರಿಂದ ಮಗುವಿಗೆ ಏನೋ ಕುಡಿಸಿದ್ದಾನೆ ಎಂಬ ಆರೋಪವನ್ನು ಪತ್ನಿ ಶೀಲಾ ಹಾಗೂ ಆಕೆಯ ಕುಟುಂಬಸ್ಥರು ಮಾಡಿದ್ದಾರೆ.

ಘಟನೆಯ ನಂತರ ಭೀಮರಾಯ ನಾಪತ್ತೆಯಾಗಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಮೃತ ಮಗುವಿನ ಶವವನ್ನು ಬಿಮ್ಸ್ ಆಸ್ಪತ್ರೆ ಮುಂದೆ ಇಟ್ಟು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ನಾರಾಯಣ್ ಬರಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಬಳಿಕ ನಿಜಾಂಶ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ. ಸದ್ಯ ಆರೋಪಿ ಭೀಮರಾಯ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.