ರಾಜ್ಯದಲ್ಲಿ ಮತ್ತೊಮ್ಮೆ ಜಾತಿ ಗಣತಿ ; ಪ್ರಬಲ ಸಮುದಾಯಗಳ ಒತ್ತಡಕ್ಕೆ ಮಣೆ, ಕಾಲ ಮಿತಿಯಲ್ಲಿ ಮರು ಸರ್ವೇಗೆ ಹೈಕಮಾಂಡ್ ಸೂಚನೆ, ಆನ್ಲೈನಲ್ಲೂ ದಾಖಲಾತಿಗೆ ಅವಕಾಶ, ಕಾಲ್ತುಳಿತ ಘಟನೆ ನೇಪಥ್ಯಕ್ಕೆ ಸರಿಸಲು ಪ್ಲಾನ್ !

10-06-25 09:24 pm       Bangalore Correspondent   ಕರ್ನಾಟಕ

ಹೈಕಮಾಂಡ್ ಬುಲಾವ್ ಪಡೆದು ದೆಹಲಿ ತೆರಳಿದ್ದ ಸಿಎಂ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆ ನಡೆಸುವ ಸುಳಿವು ನೀಡಿದ್ದಾರೆ. ಮರು ಸಮೀಕ್ಷೆಗೆ ದೆಹಲಿ ನಾಯಕರ ಸೂಚನೆ ಹಿನ್ನೆಲೆಯಲ್ಲಿ ಜಾತಿ ಗಣತಿ ಬಗ್ಗೆ ಮರು ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಬೆಂಗಳೂರು, ಜೂ.10 : ಹೈಕಮಾಂಡ್ ಬುಲಾವ್ ಪಡೆದು ದೆಹಲಿ ತೆರಳಿದ್ದ ಸಿಎಂ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆ ನಡೆಸುವ ಸುಳಿವು ನೀಡಿದ್ದಾರೆ. ಮರು ಸಮೀಕ್ಷೆಗೆ ದೆಹಲಿ ನಾಯಕರ ಸೂಚನೆ ಹಿನ್ನೆಲೆಯಲ್ಲಿ ಜಾತಿ ಗಣತಿ ಬಗ್ಗೆ ಮರು ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಈ ಹಿಂದಿನ ಜಾತಿ ಗಣತಿ ವರದಿಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಪ್ರಬಲ ವಿರೋಧ ವ್ಯಕ್ತವಾಗಿತ್ತು. 

ಹೈಕಮಾಂಡ್ ನಾಯಕರ ಸಭೆಯ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಅವರು, ಈ ಹಿಂದೆ ನಡೆಸಲಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ(ಜಾತಿ ಗಣತಿ) ವರದಿಗೆ ವಿರೋಧ ವ್ಯಕ್ತವಾಗಿದ್ದರಿಂದ ಸಮಗ್ರವಾಗಿ ಮತ್ತೊಮ್ಮೆ ಜಾತಿ ಗಣತಿ ಸಮೀಕ್ಷೆ ನಡೆಸಲಾಗುವುದು‌. 

ಪ್ರಸ್ತುತ ಜಾತಿ ಗಣತಿ ವರದಿ 10 ವರ್ಷ ಹಳೆಯದಾಗಿರುವ ಕಾರಣ ನಿರ್ದಿಷ್ಟ ಕಾಲ ಮಿತಿಯಲ್ಲಿ ಮರು ಸಮೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಇಂದಿನ ಸಭೆಯಲ್ಲಿ ಜಾತಿ ಗಣತಿ ಬಗ್ಗೆ ಚರ್ಚೆ ಮಾಡಿದ್ದೇವೆ. ನಿರ್ದಿಷ್ಟ ಕಾಲ ಮಿತಿಯಲ್ಲಿ ಮರು ಸರ್ವೇ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬಗ್ಗೆ ಜೂನ್ 12 ರಂದು ಸಚಿವ ಸಂಪುಟ ಸಭೆಯಲ್ಲಿ ಕಾಲ ಮಿತಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮರು ಸಮೀಕ್ಷೆ ಬಗ್ಗೆ ಡಿಸಿಎಂ ಹೇಳಿದ್ದೇನು? 

"ನಾನು ಜಾತಿ ಗಣತಿಯನ್ನು ಎಂದಿಗೂ ವಿರೋಧಿಸಿಲ್ಲ. ಆದರೆ, ಈ ಸಮೀಕ್ಷೆ ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಯಬೇಕು ಎಂದು ಒತ್ತಾಯಿಸಿದ್ದೇನೆ. ಕೆಲವು ಶಾಸಕರು ಸಮೀಕ್ಷೆ ಮನೆ ಮನೆಗೆ ತೆರಳಿ ಸರಿಯಾಗಿ ನಡೆದಿಲ್ಲ ಎಂದು ಆಕ್ಷೇಪಿಸಿದ್ದಾರೆ. ಕೆಲವರಿಂದ ಅಪಸ್ವರ ಕೇಳಿಬಂದ ಕಾರಣ, ಹೈಕಮಾಂಡ್ ಸೂಚನೆಯಂತೆ ಮತ್ತೊಮ್ಮೆ ಜಾತಿ ಗಣತಿಯನ್ನು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೊಸ ಜಾತಿ ಗಣತಿಯು ಪ್ರತಿ ಮನೆಗೂ ಭೇಟಿ ನೀಡಿ, ಸಮಗ್ರ ಮತ್ತು ವೈಜ್ಞಾನಿಕ ರೀತಿಯಲ್ಲಿ ನಡೆಯಲಿದೆ. ಇದರ ಜೊತೆಗೆ, ಆನ್‌ಲೈನ್‌ನಲ್ಲಿ ದಾಖಲಾತಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. "ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಸಮಾನ ಅವಕಾಶ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜಾತಿ ಗಣತಿಯ ಉದ್ದೇಶವು ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರುವುದಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ. 

ಕಾಲ್ತುಳಿತ ಘಟನೆಗೆ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಕಾರಣ ಎನ್ನುವ ವಿಚಾರ ಚರ್ಚೆಯಾಗ್ತಿರುವ ಹೊತ್ತಲ್ಲಿ ಸಾಮಾಜಿಕ ಸಮೀಕ್ಷೆಯನ್ನು ದಿಢೀರ್ ಮುನ್ನೆಲೆಗೆ ತರಲಾಗಿದೆ. ಆಮೂಲಕ ಇಡೀ ರಾಜ್ಯದಲ್ಲಿ ಜಾತಿ ಸಮೀಕ್ಷೆ ವಿಚಾರ ಮತ್ತೆ ಚರ್ಚೆಗೆ ಬರುವಂತೆ ಹಾಗೂ ಕಾಂಗ್ರೆಸ್ ಸರ್ಕಾರ ಮತ್ತೆ ಜನ ಬೆಂಬಲ ಪಡೆಯುವುದಕ್ಕೆ ವೇದಿಕೆ ಸೃಷ್ಟಿಯಾಗುವಂತೆ ಹೊಸ ಪ್ಲಾನ್ ಹೆಣೆಯಲಾಗಿದೆ.

The Congress party's central leadership has instructed Karnataka government to undertake a fresh re-enumeration process for the state's caste census, acknowledging concerns from various sections about its accuracy and inclusiveness.